ಗುರುವಾರ, ನವೆಂಬರ್ 1

ಒಡ್ಡೋಲಗ

ಬಲ್ಲಿರೇನಯ್ಯ.........?

ಈ ಬ್ಲಾಗ್ ಸಂಸ್ಥಾನಕ್ಕೆ ಯಾರೆಂದು ಬಲ್ಲಿರೀ.......

ಶಾನಿ ಎಂದು ಕೇಳಿಬಲ್ಲೆವು...........!

ಹಾಗೆಂದುಕೊಳ್ಳಬಹುದು...... ಹಾಗೆಂದುಕೊಳ್ಳಬಹುದು......

ಇರುವಂತಹ ಸ್ಥಳ.......?

ಶಾನಿಯ ಡೆಸ್ಕೆಂಬ ಸಂಸ್ಥಾನ........

ಬಂದಂತಹ ಕಾರ್ಯ.........?ಅಂತರ್ರ್ ರ್ರ್ ರ್ರ್......ಜಾಲ ಕುತೂಹಲ........, ಬ್ಲಾಗುಗಳ ವೀಕ್ಷಣೆ, ಹೊಸತುಗಳ ಹುಡುಕಾಟ...... ಲೋಕೋಪಚಾರ ಕುತೂಹಲ..... ಒಂದೇ......, ಎರಡೇ...., ಅನೇಕವಿದೆ, ಅನೇಕವಿದೆ......

ಮುಂಜಾನೆಯ ಚುಮುಚುಮು ಮಂಜನ್ನು ತೊರೆದು ಸೂರ್ಯರಶ್ಮಿ ಭೂದೇವಿಯನ್ನು ತಲುಪುವ ಮುನ್ನವೇ ನಮ್ಮ ತಲ್ಪರಹಿತ ತುಕ್ಕುಹಿಡಿದ ಕಬ್ಬಿಣದ ಮಂಚದಿಂದ ದಢಬಡಾಯಿಸೆದ್ದು, ಬಕೆಟನ್ನು ಹಿಡಿದು ಹಾಸ್ಟೇಲಿನ ಕೊಳಕು ಬಚ್ಚಲು ಮನೆಗೆ ತೆರಳಿದರೆ ಹನುಮನ ಬಾಲದಂತಹ ಸರತಿ. ನಿಂತು, ಕುಳಿತೆದ್ದು, ಮತ್ತೆ ಪವಡಿಸಿ ನಮ್ಮ ಸರದಿ ಬರುತ್ತಲೇ ಶೌಚ ಸ್ನಾನಾದಿ ಕಾರ್ಯಗಳನ್ನು ಮುಗಿಸೀ....... ದೇವರಿಗೆ ವಂದಿಸಿ, ತಟ್ಟೆ ಹಿಡಿದು ಭೋಜನಶಾಲೆಯತ್ತ ಓಡಿದೆವು.

ಕನಕನ ಕಿಂಡಿಯಂತಹ ಕಿಂಡಿಯೊಂದರಲ್ಲಿ ಒಡ್ಡಿದ ತಟ್ಟೆಗೆ ಸಿಡುಕು ಮುಖವೊಂದು ಉದುರಿಸಿದ ವೆಣ್ ಪೊಂಗಲನ್ನು ಕಾಣುತ್ತಲೇ ಶತ್ರುಸೇನೆ ದಂಡೆತ್ತಿ ಬಂದಂತಹ ಅನುಭವವಾಗಿ ಜಂಘಾಬಲವವೇ ಉಡುಗಿದಂತಾಯಿತು. ಅದನ್ನೇ ಒಂದಿಷ್ಟು ಮೆದ್ದು, ಅರ್ಧದಲ್ಲೇ ಎದ್ದು, ಸಹವಾಸಿಯ ಹಣ್ಣುಗಳನ್ನು ಕದ್ದು ತಿಂದದ್ದಾಯಿತು.

ಅರಾಜಕತೆಯ ಪ್ರಜೆಗಳಂತೆ ಹಾರಾಡುತ್ತಾ ಇನ್ನೂ ಉದುರದೇ ಇರುವ ಮೂರು ತಲೆಗೂದಲನ್ನು ಓರಣಗೊಳಿಸಿ, ರಬ್ಬರ್ ಬ್ಯಾಂಡೊದನ್ನು ಬಿಗಿದೂ..... ಮುಖಕ್ಕೊಂದಿಷ್ಟು ಸೌಂದರ್ಯ ಮುಲಾಮುಗಳನ್ನು ಬಳಿದು, ಓಡೋಡಿ ರೈಲೇರಿ ಕಚೇರಿಗೆ ಓಡೋಡುತ್ತಲೇ ಬಂದೆವು. ಅದೇ ವೇಗದಲ್ಲಿ ಕಚೇರಿಯ ಕನ್ನಡಿಯ ಬಳಿಗೋಡಿ, ಕೂದಲೇನಾದರೂ ಕೊಂಕಿದೆಯೇ, ತುಟಿಯ ರಂಗೇನಾದರೂ ಬಿಂಕಿದೆಯೇ ಎಂದು ನೋಡಿ, ನಮ್ಮ ಪ್ರತಿಬಿಂಬಕ್ಕೆ ನಾವೇ ಬೆಚ್ಚಿ, ಮತ್ತೋಡಿ ಬಂದು, ಸಿಂಹಾಸನಕ್ಕೆ ವಂದಿಸಿ, ಅದನ್ನೇರಿ ಕರ್ತವ್ಯಕ್ಕೆ ಹಾಜರಾದ ಸಂದೇಶವನ್ನು ರವಾನಿಸಿ ಇನ್ನೇನಾದರೂ ಪ್ರಮುಖ ಸಂದೇಶಗಳಿವೆಯೇ ಎಂಬ ಪರಿಶೀಲನೆಯ ಬಳಿಕ ಒಂದಿಷ್ಟು ವಿರಮಿಸಿ ಬ್ಲಾಗು ಲೋಕದತ್ತ ಕಣ್ಣು ಹಾಯಿಸಿದಾಗಾ........!

ಇದೇನಾಶ್ಚರ್ಯ........... ಪರಮಾಶ್ಚರ್ಯ........ ಬ್ಲಾಗುಗಳು ತುಂಬಿತುಳುಕುತ್ತಿವೆ...... ಒಂದೆರಡೇ.... ನೂರಾರು........... ಅಬ್ಬಬ್ಬಬ್ಬಬ್ಬಬ್ಬಬ್ಬಾಬ್ಬಾಬ್ಬಾ........ ಎಷ್ಟೊಂದಿವೆ, ಎಷ್ಟೊಂದಿವೆ....ಎಷ್ಟೊಂದಿವೆ.

ಕನಸುಗಳ ಬೆಂಬತ್ತಿ ನಡೆಯುತ್ತಿರುವ ಅವಧಿ ಇದೆ. ಅತ್ತ ನೋಡಿದರೆ, ಅಂತರಂಗದ ಬಹಿರಂಗವಿದೆ..... ಕನ್ನಡ ಸಾಹಿತ್ಯ ಲೋಕದ ಹಿರಿಯರ, ಅತ್ಯುನ್ನತ ಪುರಸ್ಕಾರಕ್ಕೆ ಭಾಜನರಾಗಿರುವವರ ಋಜುವಾತಿದೆ. ಅssssಲ್ಲೀ.... ಅಲ್ಲಿ ನೋಡಿದರೆ ಕುಂಟೀನೀ ಎಂಬ ಒಳ್ಳೆ ಹುಡುಗ ಕಾಣುತ್ತಿದ್ದಾರೆ. ಮತ್ತಾಚೆಗೆ ಕಣ್ಣು ಹಾಸಿದರೆ, ಜೋಗಿಮನೆಯೊಳಗೆ ಎಷ್ಟೊಂದು ಸಿಹಿ...!

ಬೊಗಳೂರ ಮಂದಿಯ ಹಿತವಾದ ರಗಳೆ, ಉಕ್ಕಿಬರುವ ನಗು ತಡೆಯಲಾಗುತ್ತಿಲ್ಲ. ಮಜಾವಾಣಿಯವರ ಮಜಾವೇ ಬೇರೆ. ಬರೆವಬದುಕಿನ ತಲ್ಲಣವೂ ಇದೆ..... ಆssssಚೆ ನೋಡಿ, ಕಿವಿಗೊಟ್ಟು ನೋಡಿ, ಅಲ್ಲಿಂದ 'ನನ್ನ ಹಾಡು' ಕೇಳಿಸುತ್ತಿದೆ. ಅಲ್ಲೇ.... ಪಕ್ಕದಲ್ಲೇ ಮಳೆಹನಿಗಳು ಸುರಿಯುತ್ತಿವೆ. ಮಲೆನಾಡ ಮಳೆಗಾಲದಲ್ಲಿ ನುಸುಳುವ ಬಿಸಿಲಿನಂತೆ ಕನ್ನಡ ಸಾರಥಿಯವರು ಇಣುಕುತ್ತಿದ್ದಾರೆ. ಬ್ರಹ್ಮಾನಂದ ಓಂಕಾರವೂ ಮೊಳಗುತ್ತಿದೆ. ಕೇಳುತ್ತಿದೆ ಏನ್ಗುರು ಅವರ ಹೊರಾಟದ ಧಮ್ಕಿ....... ಹೇಳುತ್ತಾ
ಹೋದರೆ ಒಡ್ಡೋಲಗದ ಮೇಲೆ ಒಡ್ಡೋಲಗ ಬೇಕಾದೀತು. ಭಾಗವತರು ಜಾಗಟೆ ಹಿಡಿದು ಕಾಯುತ್ತಿದ್ದಾರೆ.....

ಶಾನಿಯವರೇ ಇದೇನು ಇಂದು ಇದ್ದಕ್ಕಿದ್ದಂತೆ ಒಡ್ಡೋಲಗ? ಕುಂಭಕರ್ಣ ಮೈಕೊಡವಿ ಎದ್ದಂತೆ ಬ್ಲಾಗುಗಳತ್ತ ನೋಟ ಹರಿಸುತ್ತಿದ್ದೀರಿ......... ಏನಿದರ ಒಳಮರ್ಮ........?

ಭಾಗವತರೇ... ಬ್ಲಾಗುಗಳತ್ತ ನಾವು ನಮ್ಮ ಗಾಢ ನಿದ್ರೆಯ ಮಧ್ಯೆಯೂ ಆಗೀಗ ನೋಟ ಹರಿಸುತ್ತಲೇ ಇರುತ್ತೇವೆ. ಈ ಸಾಮ್ರಾಜ್ಯದಲ್ಲಿ ನಮಗೂ ನಮ್ಮದೇ ಆದ ಪುಟ್ಟ ಸಂಸ್ಥಾನವೊಂದನ್ನು ಕಟ್ಟಿಕೊಳ್ಳಬೇಕೆಂಬ ಇರಾದೆ ಇತ್ತು. ಆದರೇ.......... ಯಾವುದೇ ಕಾರ್ಯವನ್ನು ನಾಳೆ ನಾಳೆ ಎಂದು ಮುಂದೂಡುವ ಪ್ರವೃತ್ತಿಯವರಾಗಿರುವ ನಾವು ಜಡಭರತ ವಂಶಸ್ಥರು. ಹಾಗಾಗಿ ಕಳೆದೊಂದು ವಸಂತದಿಂದಲೂ ಈ ಯೋಜನೆಯನ್ನು ನಾಳೆಗೆ ದೂಡುತ್ತಲೇ ಬಂದಿದ್ದೆವು. ಇಂ...

ಶಾನಿಯವರೇ..... ತಮ್ಮ ಯೋಜನೆಯನ್ನೂ ಮತ್ತೂ ನಾಳೆಗೆ ಮುಂದೂಡುವ ಬದಲಿಗೆ ಅಪರೂಪಕ್ಕೆ ಸರಕಾರ ಯೋಜನೆಗಳನ್ನು ಜಾರಿಗೆ ತರುವಂತೆ ಅದೇನು ಬ್ಲಾಗ್ ಲೋಕಕ್ಕೆ ಇಳಿದೇ ಬಿಟ್ಟಿದ್ದೀರೀ.......?

ಇದೇನಿದು ಮಾತಿನ ಮಧ್ಯೆ ಬಾಯಿ ಹಾಕುವ ಚಾಳಿ ನಿಮ್ಮದು. ಇರಲಿ...... ಭಾಗವತರೇ.... ಯಾವುದಕ್ಕೂ ಒಂದು ಸಮಯ ಸಂದರ್ಭ ಎಂದೆಂಬುದಿರುತ್ತದೆ. ಕಾಲನ ಮಹಿಮೆಯನ್ನು ಯಾರು ತಾನೆ ಬಲ್ಲರು........? ಇದನ್ನು ಯಾರಾದರೂ ಪ್ರಶ್ನಿಸಲುಂಟೇ.........? ಹಾಗೇ ಈ ತಾಣ ದೈವದ ಮಹಿಮೆಯಿಂದ ನಮ್ಮ ಸಂಸ್ಥಾನಾರಂಭದ ಕಾಲಕೂಡಿ ಬಂದಿದೆ ಅಂತ ನಾವು ಹೇಳಬಹುದು.......

ಶಾನಿಯವರೇ.... ನಮ್ಮ ಇನ್ನೊಂದು ಪ್ರಶ್ನೆ ಇದೆ...... ನಿಮ್ಮ ಆಸ್ಥಾನದಲ್ಲಿ ಇಂತಹ ಒಡ್ಡೋಲಗಗಳು ಹೀಗೆಯೇ ನಿಯಮಿತವಾಗಿ ಮುಂದುವರಿಯುವುದೇ....ಇಲ್ಲ ಹುಟ್ಟಿದಂತೆಯೇ ಸಾಯುತ್ತಿರುವ ಅನೇಕ ಸಂಸ್ಥಾನಗಳ ಪಟ್ಟಿಗೆ ಇದೂ ಸೇರ.......

ಮುಚ್ಚಿಬಾಯಿ ಭಾಗವತರೇ...... ಶುಭಶುಭ ಅನ್ನಬೇಕಿರುವಲ್ಲಿ ನಿಮ್ಮದೇನಿದು ಅಪಶಕುನದ ರಗಳೆ......? ನಿಮ್ಮ ಒಟ್ಟೆ ಬಾಯಲ್ಲಿ ಯಾಕಿಂತಹ ಮಾತೂ..... ಕಾದು ನೋಡುವ ತಾಳ್ಮೆ ಇಲ್ಲವೇ ನಿಮಗೇsssssss

ನಿಧಾನ........ ನಿಧಾನ...... ಶಾನಿಯವರೇ.... ಇದೇನಿದು....? ಇದ್ದುದನ್ನು ಇದ್ದಂತೆ ಹೇಳಿದರೆ ಎದ್ದುಬಂದು ಎದೆಗೆ ಒದ್ದರು ಎಂಬ ನಾಣ್ನುಡಿಯನ್ನು ಬಲ್ಲವರು ಹುಟ್ಟುಹಾಕಿದ್ದಾರೆ..... ಹಾಗಾಯಿತು ನಿಮ್ಮ ಕತೆ! ನಮ್ಮಲ್ಲಿ ಮೂಡಿದ ಸಂಶಯವನ್ನು ನಿಮ್ಮಮುಂದಿಟ್ಟೆವು ಅಷ್ಟೆ. ಅಷ್ಟಕ್ಕೇ ಇಷ್ಟೇಕೆ ದಿಗಿಣ ಹೊಡೆಯುತ್ತೀರಿ.....? ನಿಮ್ಮ ಸಂಸ್ಥಾನವನ್ನು ನೀವೇ ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗಿ...... ಇದೀಗ ಇವತ್ತಿಗೆ ಮಂಗಳ ಹಾಡೋಣವೇ.....?

ಮಂಗಳಂ..... ಎಲ್ಲರಿಗೂ ಒಳಿತಾಗಲಿ..... ಸರ್ವೇ ಜನ ಸುಖಿನೋ ಭವಂತು......