ಬುಧವಾರ, ಡಿಸೆಂಬರ್ 31

ಆಪರೇಶನ್ ಮಾಡಿದ ಮೇಲೆ ಡಾಕ್ಟರಾದೆವು

ಬಲ್ಲಿರೇನಯ್ಯಾ............?

ಭಳಿರೇ ಪರಾಕ್ರಮ ಕಂಠೀರವಾ....

ಈ ಅಖಂಡ ನರ್ಕಾಟಕ್ಕೆ ಯಾರೆಂದು ಕೇಳಿ ಬಲ್ಲಿರೀ.....?

ಶ್ರೀ.....ಶ್ರೀ.......ಶ್ರೀ.....ಶ್ರೀ....... ರಾಡಿಯೂರಪ್ಪ ಎಂದು ಕೇಳಿಬಲ್ಲೆವೂ.....

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು........

ಆಹಾ.... ಜಗತ್ತು ಅದೆಷ್ಟು ಸುಂದರವಾಗಿದೆ। ಚುಮುಚುಮು ಚಳಿಯ, ಇಬ್ಬನಿ ಚೆಲ್ಲುವ, ತಂಪುಗಾಳಿಯ ಈ ಉದ್ಯಾನ ನಗರಿಯ ವಾತಾವರಣವಿಂದು ಅತ್ಯಾಹ್ಲಾದಕರವಾಗಿದೆ. ಸೂರ್ಯನ ಹೊಂಗಿರಣಗಳು ಚಿತ್ತಾರಬರೆಯುತ್ತಾ ಭುವಿಯನ್ನು ಚುಂಬಿಸುತ್ತಿರುವಂತೆ, ನಿದಿರಾ ದೇವಿಯ ಮಡಿಲಲ್ಲಿ ಬೆಚ್ಚನೆಯ ಕನಸಿನಲ್ಲಿ ಓಲಾಡುತ್ತಿದ್ದ ನಾವು ಹಂಸತೂಲಿಕಾ ತಲ್ಪದಿಂದ ಎದ್ದು ನಿತ್ಯವಿಧಿಗಳನ್ನು ಪೂರೈಸಿ, ಇಷ್ಟದೈವಗಳನ್ನು ಪ್ರಾರ್ಥಿಸಿ, ಉಪಾಹಾರವನ್ನು ಸೇವಿಸಿಕೊಂಡದ್ದಾಯ್ತು. ಶ್ವೇತ ಉಡುಪನ್ನು ಧರಿಸಿ, ಹಣೆಗೆ ತಿಲಕವನ್ನಿರಿಸಿಕೊಂಡು ಒಡ್ಡೋಲಗಕ್ಕೆ ಅಣಿಯಾಗಿದ್ದೇವೆ. ಸಭೆಗೆ ಬಂದು ಸಿಂಹಾಸನವನ್ನು ವಂದಿಸಿ, ಏರಿ ಕುಳಿತು ಸಭೆಯತ್ತ ನೋಟ ಹರಿಸುತ್ತೇವೇ..... ಏನಾಶ್ಚರ್ಯ....? ಇದೇನಾಶ್ಚರ್ಯ, ಇದೇನಾಶ್ಚರ್ಯ......? ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಕಿಟಿಕಿ ಬಾಗಿಲುಗಳಲ್ಲಿ ಒಬ್ಬರಮೇಲೊಬ್ಬರು ಬಿದ್ದು ಇಣುಕುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ನಮ್ಮ ಸಿಬ್ಬಂದಿಗಳು ಹೆಣಗಾಡುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದಾರೆ. ವಂದಿ ಮಾಗಧರಿದ್ದಾರೆ. ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ಆಸೀನರಾಗಿದ್ದಾರೆ, ಆಹಾ... ಸಭೆಗೆ ಏನು ಕಳೆ, ಅದೇನು ಶೋಭೆ.... ಇಂದು ನಮ್ಮ ಜನ್ಮ ಸಾರ್ಥಕವಾದಂತೆ. ಸಂತೋಷದಿಂದ ನಮಗೆ ಮಾತೇ ಹೊರಡುತ್ತಿಲ್ಲ. ಆದರೂ ನಾವು ಮಾತಾಡಬೇಕಿದೆ. ಯಾರಲ್ಲೀ.......?

ಸ್ವಾಮಿ ರಾಡಿಯೂರಪ್ಪನವರೇ, ನಿಮಗೆ ನೆನಪಿದೆಯೋ ಗೊತ್ತಿಲ್ಲ। ಈ ಹಿಂದೆ ನಾವೊಮ್ಮೆ ಒಡ್ಡೋಲಗದಲ್ಲಿ ಭೇಟಿಯಾಗಿದ್ದೆವು. ಆಗ ತಾವು ಮಿತ್ರ ದ್ರೋಹದ ವ್ಯಾಧಿಯ ವ್ಯಸನದಿಂದ ಬಳಲಿ ಬೆಂಡಾಗಿದ್ದೀರಿ. ದೈವಾನುಗ್ರಹವಿದ್ದರೆ ಇದೇ ವೇದಿಕೆಯಲ್ಲಿ ಇನ್ನೊಮ್ಮೆ ಭೇಟಿಯಾಗೋಣ ಅಂದಿದ್ದೆವು. ಬಹುಶಃ ದೈವಾನುಗ್ರಹ ನಿಮಗೊಲಿದಿದ್ದು ಇಂದು ಕಾಲಕೂಡಿ ಬಂದಿದೆ ಎನ್ನಬಹುದೂ.... ಇದೀಗ ನಿಮ್ಮ ಸಾಮ್ರಾಜ್ಯ ಅಲ್ಲಾಡದಂತೆ ಅಡಿಗಟ್ಟಿಮಾಡಿಕೊಂಡಿದ್ದೀರಿ.....

ಭಾಗವತರೇ....... ನಾವು ತುಂಬಾ ಸಂತಸಗೊಂಡಿದ್ದೇವೆ। ನಮಗೆ ಈ ಸಂತೋಷ ನೀಡಿದ ಪ್ರಜೆಗಳಿಗೆ ನಾವು ಆಭಾರಿಗಳಾಗಿದ್ದೇವೆ. ಅವರಿಗೆ ನಾವು ಅಡ್ಡಡ್ಡ ಬಿದ್ದು ವಂದಿಸುತ್ತಿದ್ದೇವೆ. ನಮ್ಮ ವೈರಿಗಳ ತಂತ್ರಕ್ಕೆ ಪ್ರತಿತಂತ್ರ ಎಂಬಂತೆ ನಾವೂ ವ್ಯೂಹ ರಚಿಸಿದೆವು. ಈ ವ್ಯೂಹದಲ್ಲೀ......, ವಿಜಯಲಕ್ಷ್ಮಿಯನ್ನು ನಾವು ಲಕ್ಷ್ಮಿಯ ದಯೆಯಿಂದ, ಮದಿರೆಯ ಕರುಣೆಯಿಂದ, ವಸ್ತ್ರದ ಸಹಾಯದಿಂದ ವಶಪಡಿಸಿಕೊಂಡಿದ್ದೇವೆ. ರಾಡಿಕೀಯದಲ್ಲಿ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಯಶಸ್ವಿಯಾಗಿ ಮಾಡಿದ್ದೇವೆ. ಆದರೂ ಎಂಟು ಸಂಸ್ಥಾನಗಳಲ್ಲಿ ಮೂರು ನಮಗೆ ಧಕ್ಕಲಿಲ್ಲ. ಇರಲಿ ಬಿಡಿ. ನಮ್ಮ ಬಗ್ಗೆ ತುಂಬ ಹಗುರವಾಗಿ ಮಾತನಾಡಿ ಸೊನ್ನೆಸುತ್ತಿರುವ ನಮ್ಮ ವಿರೋಧಿಗಳೀಗ ಸಿಕ್ಕಸಿಕ್ಕ ವಸ್ತ್ರದಿಂದ ಮುಖಮುಚ್ಚಿಕೊಳ್ಳುತ್ತಿದ್ದಾರೆ. ಒಂದೂ ಸ್ಥಾನ ಧಕ್ಕದಿದ್ದಲ್ಲಿ ಕೆಲವರು ದಂಡ ಹಿಡಿದು ಹೊರಡುತ್ತೇವೆ ಅಂದಿದ್ದರು.... ಏನು ಮಾಡುತ್ತಾರೋ ಕಾದು ನೋಡೋಣ....

ಅದರೆ, ರಾಡಿಯೂರರೇ....., ಆರು ತಿಂಗಳ ನಿಮ್ಮ ಈ ಹಸುಗೂಸು ಸರ್ಕಾರ ಹೆಜ್ಜೆ ಇಡುವ ದಿಸೆಯೇ ಸರಿಇಲ್ಲ ಎಂಬ ಆರೋಪಗಳಿವೆ. ರೈತರಮೇಲೆ ಗುಂಡುಹೊಡೆದಿರೆಂಬ ದೂರಿದೆ. ಈ ಉಪ್ಪುಚುನಾವಣೆಯನ್ನು ಹೇರಿ ರಾಜ್ಯದ ಬೊಕ್ಕಸಕ್ಕೆ ಭಾರವಾದಿರೆಂಬ ತಕರಾರಿದೆ.

ಸ್ವಾಮೀ ಭಾಗವತರೇ... ದೂರು, ತಕರಾರು, ಆರೋಪಗಳು ಯಾರಿಗಿಲ್ಲ? ನಮ್ಮ ಆ ಭಗವಾನ್ ಶ್ರೀರಾಮಚಂದ್ರನೂ ಇದಕ್ಕೆ ಹೊರತಾಗಿಲ್ಲ. ನಾವೇನು ಕೋವಿ ಹಿಡಿದು ರೈತರ ಮೇಲೆ ಗುಂಡು ಹಾರಿಸಿದ್ದೇವಾ...? ಇದುವರೆಗೆ ಯಾರೂ ಮಾಡದ ರೀತಿಯಲ್ಲಿ ನಾವು ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣಮಾಡಿದೆವು. ಇದನ್ನು ನೋಡಿ ನಮ್ಮ ವೈರಿಗಳ ಕಣ್ಣಿಗೆ ಮುಳ್ಳಾಣಿ ಬಡಿದಂತಾಯಿತು. ಅವರಿದನ್ನು ಸಹಿಸಿಕೊಂಡಾರಾದರೂ ಹೇಗೆ....? ಅದಕ್ಕಾಗೇ ನಮ್ಮ ಹೆಸರಿಗೆ ಮಸಿಬಳಿಯಲು ಇದು ವಿರೋಧಿಗಳು ಹೂಡಿರುವ ಷಡ್ಯಂತ್ರ. ನಮ್ಮ ರೈತರು ಪ್ರತಿಭಟನೆಯ ಹೆಸರಿನಲ್ಲಿ ಗೂಂಡಾಗಿರಿ ನಡೆಸಿಯಾರೇ....? ರಸಗೊಬ್ಬರ ಸಮಸ್ಯೆಗೆ ನಿನ್ನೆಮೊನ್ನೆ ಅಧಿಕಾರಕ್ಕೇರಿದ ಈ ಸರ್ಕಾರ ಕಾರಣವಲ್ಲ ಎಂಬುದು ಅವರಿಗೆ ಗೊತ್ತಿಲ್ಲವೇ...? ರೈತರ ಹೆಸರಿನಲ್ಲಿ ಗೂಂಡಾಗಳು, ಪೋಲಿಗಳು ಪೊಲೀಸರನ್ನು ರೊಚ್ಚಿಗೆಬ್ಬಿಸಿ ಅವರು ಗುಂಡು ಹಾರಿಸುವಂತೆ ಮಾಡಿದ್ದಾರೆಯೇ ವಿನಹ, ಸರ್ಕಾರವೇನೂ ರೈತರನ್ನು ಕೊಂದಿಲ್ಲಾ...... ಕೊಂದಿಲ್ಲಾ.... ಕೊಂದಿಲ್ಲಾ...

ಇನ್ನುಳಿದಂತೆ ಉಪ್ಪುಚುನಾವಣೆಯನ್ನು ಪ್ರಸ್ತಾಪಿಸಿದ್ದೀರಿ ನೀವು. ಬೆಳಗಾತ ಎದ್ದರೆ, ನಮ್ಮ ವಿರೋಧಿಗಳು ಉತ್ತಮ ಆಡಳಿತ ನೀಡಲು ನಮಗೆ ಸಹಕಾರ ನೀಡುವುದರ ಬದಲಿಗೆ ನಮ್ಮನ್ನು ದುರ್ಬಲಗೊಳಿಸುವತ್ತಲೇ ಆಲೋಚಿಸಿದ್ದರು. ಹಾಗಾಗಿ ನಮ್ಮ ಯಾವ ಅಭಿವೃದ್ಧಿಯತ್ತಲೂ ಗಮನ ಹರಿಸಲಾಗುತ್ತಿರಲಿಲ್ಲ. ಪುಣ್ಯ. ಆ ಶ್ರೀಲಕ್ಷ್ಮಿಯ ದಯೆಯಲ್ಲಿ ನಮ್ಮ ಮಂತ್ರಿಮಂಡಲದಲ್ಲಿ ಗಟ್ಟಿಮುಟ್ಟಾದ ಮಂತ್ರಿಗಳಿದ್ದಾರೆ. ಐದು ವರ್ಷದಲ್ಲಿ ಇನ್ನಷ್ಟು ಉತ್ತಮ ಅಭಿವೃದ್ಧಿ ಸಾಧಿಸಿಕೊಳ್ಳಬೇಕೆಂಬ ಹುರುಪು-ಹುಮ್ಮಸ್ಸಿದೆ ಅವರಲ್ಲಿ. ಅವರ ಯೋಜನೆಯ ಪ್ರಕಾರ ನಾವು ಆಪರೇಶನ್ ಮಾಡಿದೆವು. ನಮ್ಮ ರಕುಣಾರಕ ರೆಡ್ಡಿಯಂತಹ ಯುವನಾಯಕರು ಅದಿರು ಸಾಗಿಸುವಂದದಿ ನಾಯಕರನ್ನು ಲೋಡುಗಟ್ಟಲೆ ತಂದು ನಮ್ಮ ಪಕ್ಷದಲ್ಲಿ ಸುರಿದರು. ಅವರು ನಮ್ಮ ನೀತಿ-ನಿಯಮ, ಸಿದ್ಧಾಂತಗಳನ್ನು ಒಪ್ಪಿಕೊಂಡರು. ತತ್ಪರಿಣಾಮ ಅವರಿದ್ದ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ನಮ್ಮ ಪಕ್ಷದಿಂದ ಮತ್ತೆ ಚುನಾವಣೆಗೆ ಇಳಿಸಿದೆವು. ಮತದಾರ ಕೈ ಬಿಡಲಿಲ್ಲ. ಮತದಾರರಿಗೂ ಸ್ಥಿರಸರ್ಕಾರ ಬೇಡವೇ...? ಅಲ್ಪಮತೀಯರಾಗಿದ್ದ ನಮ್ಮನ್ನು ಬಹು ಮತೀಯರಾಗಿಸಿದ್ದಾನೆ. ಮತ್ತೆ ಬೊಕ್ಕಸಕ್ಕೆ ಭಾರ ಅನ್ನುತೀರೀ!! ರಾಡಿಕೀಯ ಅಂದಾಗ ಇದೆಲ್ಲ ಸಹಜವಲ್ಲವೇ...? ಕಾದು ನೋಡುತ್ತಿರಿ. ನಾವು ಬೊಕ್ಕಸವನ್ನು ಎಕ್ಕಸಕ್ಕ ತುಂಬಿಸುತ್ತೇವೆ....

ಅಂದಹಾಗೆ ಡಾಕ್ಟರ್ ರಾಡಿಯೂರರೇ..... ನೀವು ಡಾಕ್ಟರರಾದಾಗ ಅದಕ್ಕೂ ಸಾಕಷ್ಟು ಟೀಕೆಗಳು ವ್ಯಕ್ತವಾದವು। ಇದಕ್ಕೆ ಪ್ರತಿಯೆಂಬಂತೆ ತಮ್ಮ ಸಚಿವ ಮಾರಚಂದ್ರ ಎಂಬವರೊಬ್ಬರು ಅಪೂರ್ವವಾದ ಆರ್ಥಿಕ ವಿಶ್ಲೇಷಣೆಯನ್ನೂ ಮಾಡಿದರು. ಅದು ಒತ್ತಟ್ಟಿಗಿರಲಿ. ಆದರೆ ನೀವು ಆಪರೇಶನ್ ಮಾಡಿದ ಬಳಿಕ ಡಾಕ್ಟರರಾದಿರಿ... ಅಂದರೆ, ನಿಮ್ಮ ಆಪರೇಶನ್ ನೈಪುಣ್ಯದಿಂದಾಗಿ ಡಾಕ್ಟರ್ ಪದವಿ ಗಿಟ್ಟಿಸಿಕೊಂಡಿರೋ....?

ವೋಯ್ ಭಾಗವತರೇ....., ಅರಶಿನ ಖಾಯಿಲೆ ಬಂದವರಿಗೆ ಲೋಕವೆಲ್ಲ ಹಳದಿಯಾಗಿ ಕಾಣುತ್ತದೆ ಎಂಬ ಗಾದೆ ಮಾತೊಂದಿದೆ. ಹಾಗೆಯೇ ಟೀಕೆಯೇ ನಮ್ಮಗುರಿ ಎಂದಿರುವವರು ಇನ್ನೇನು ಹೇಳಲು ಸಾಧ್ಯ? ಅವರವರ ಸಂಸ್ಕೃತಿಗೆ ತಕ್ಕಂತೆ ಮಾತಾಡಿಕೊಂಡು ಚಪಲ ತೀರಿಸಿಕೊಂಡರು. ಸಮಾಧಾನ ಪಟ್ಟುಕೊಳ್ಳಲಿ ಬಿಡಿ. ಆದರೆ ನಿಜವನ್ನು ಅರಿತುಕೊಂಡದ್ದು ನಮ್ಮೋರ್ವ ಸಚಿವರು! ನಾವ್ಯಾಕೆ ಡಾಕ್ಟರಾಗಲು ಸೂಕ್ತ ಎಂದು ಅವರು ವಿವರಿಸಿದ್ದಾರೆ. ನಮ್ಮ ನೀತಿ ಸಿದ್ಧಾಂತವೇ ಹಾಗೇ. ಪಾಸಾದ ಮೇಲೆ ಪರೀಕ್ಷೆ ಬರೆಯುವುದು. ಈಗ ನೋಡಿ, ನಾವೀಗ ಅಧಿಕಾರ ಪಡೆದಬಳಿಕ ಬಹುಮತಕ್ಕಾಗಿ ಚುನಾವಣೆ ಎದುರಿಸಲಿಲ್ಲವೇ? ಅಂತೆಯೇ ಆಪರೇಶನ್ ಮಾಡಿದ ಮೇಲೆ ಡಾಕ್ಟರಾದೆವು. ಸರ್ಕಾರಕ್ಕಾರು ತಿಂಗಳಾದಮೇಲೆ ನಮ್ಮ ಪಕ್ಷದ್ದೇ ಬಹುಮತ ಮಾಡಿಕೊಂಡಿದ್ದೇವೆ. ಹಾಗಂತ ಕಷ್ಟಕಾಲದಲ್ಲಿ ಸಹಾಯ ಮಾಡಿದ ಆಪತ್ಭಾಂದವರನ್ನೇನೂ ನಾವು ಕೈಬಿಡಲಾರೆವು... ಇನ್ನು ನಮ್ಮದೇನಿದ್ದರೂ ಒಂದೇ ಮಂತ್ರ; ಒಂದೇ ಗುರಿ ಅದು ಅಭಿವೃದ್ಧಿ.... ಅಭಿವೃದ್ಧಿ.... ಅಭಿವೃದ್ಧಿ....

ಹಾಗೇ ಆಗಲಿ ಸಾಮ್ರಾಟರೇ..... ಯಾರ ಅಭಿವೃದ್ಧಿಯಾಗುತ್ತದೆ ಎಂದು ಕಾದು ನೋಡೋಣವಂತೆ।

ನಿಮ್ಮ ಸುಭದ್ರ(?!) ಸರ್ಕಾರಕ್ಕೆ ಶುಭವನ್ನು ಕೋರುತ್ತಾ, ನಾಡಿನೆಲ್ಲ ಜನತೆಗೆ ಹೊಸವರ್ಷದ ಶುಭಾಶಯಗಳನ್ನು ಹೇಳುತ್ತಾ.... ಮುಂದಿನ ವರ್ಷದಲ್ಲಿ ಸರ್ವರಿಗೂ ಶಾಂತಿ, ನೆಮ್ಮದಿ ಆರೋಗ್ಯವನ್ನು ಬಯಸುತ್ತಾ ನಮ್ಮ ಈ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ।

ಸರ್ವೇಜನ ಸುಖಿನೋಭವಂತು.... ಮಂಗಳಂ!

ಗುರುವಾರ, ಡಿಸೆಂಬರ್ 11

ಕಾಲ ಕೃಷ್ಣ ಅಡ್ಡವಾಣಿಯ ಒಡ್ಡೊಡ್ಡೋಲಗ

ಬಲ್ಲಿರೇನಯ್ಯಾ......

ಭಳಿರೇ ಪರಾಕ್ರಮ ಕಂಠೀರವಾ.......

ಹ್ಹೋ.....ಹ್ಹೋ........ಹ್ಹೋ.....ಹ್ಹೋ........ಹ್ಹೋ.....ಹ್ಹೋ........ಈ......ಅಖ್ಹಂಡ್ಹ ಭರತಖಂಡದ ಭಾವೀ ಸಾಮ್ರಾಟರಾರೆಂದು ಕೇಳಿ ಬಲ್ಲಿರೀ....

ಕಾಲ ಕೃಷ್ಣ ಅಡ್ಡವಾಣಿ ಎಂದು ಬಾ ರತಿಯ ಜನ ತಾ ಪಕ್ಷದವರು ಹೇಳಿಕೊಳ್ಳುತ್ತಿದ್ದಾರೆ....

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು.... ಹಾಗೆಂದುಕೊಳ್ಳಬಹುದು....

ಇರುವಂತಹಾ ಸ್ಥಳ.....?

ನವದೆಹಲಿ ಎಂದುಕೊಳ್ಳಬಹುದೂ...

ಬಂದಂತಹಾ ಕಾರ್ಯ....?

ಮೊನ್ನೆ ನಡೆದ ಚ್ಹುನ್ಹಾವಣಾ.....ಯುದ್ಧದಲ್ಲಿ ಬಾ ರತಿಯ ಪಕ್ಷಕ್ಕೆ ಮತದ್ಹಾ....ರ ಮಹಾಪ್ರಭು ನೀಡಿರುವ ಟಾಂಗಿನ ವಿಮರ್ಷೆ.... ಎಲ್ಲಿತಪ್ಪಿದ್ದೇವೆಂಬ ಆತ್ಮ ನಿವೇದನೆ, ಮುಂದಿನ ಮಹಾಕದನದ ರಣತಂತ್ರ.... ಒಂದೇ....? ಎರಡೇ.....? ಅನ್ಹೇಕವಿದೆ..... ಅನ್ಹೇಕವಿದೆ..... ಅನ್ಹೇಕವಿದೆ.....

ಹಯ್ಯೋ ಶ್ರೀ ರಾಮಚಂದ್ರಾ.... ಇದೇನಾಗಿ ಹೋಯಿತು ತಂದೇ..... ನಿನ್ನ ಹೆಸರನ್ನು ಮುಂದಿಟ್ಟು ನಾವು ಅದೆಷ್ಟೇ ಕಾರ್ಯತಂತ್ರಗಳನ್ನು ಹಣೆದರೂ, ಸಾಧ್ಯವಿರುವಲ್ಲೆಲ್ಲ ಬೆಂಕಿಯನ್ನೇ ಹಚ್ಟಿದರೂ ನಮ್ಮ ಕಾರ್ಯವೇಕೆ ಸಫಲವಾಗಲಿಲ್ಲ. ನಮಗ್ಯಾಕೆ ನಿನ್ನ ಸಂಪೂರ್ಣ ಯಶಸ್ಸಿಲ್ಲಾ....? ಹೀಗಾದರೇ ನಾವು ಹೇಗೆ ಸುಲಭವಾಗಿ ಭರತಖಂಡದ ಸಾಮ್ರಾಟರಾಗುವುದೂ....? ಆ ಗದ್ದುಗೆಯನ್ನು ಏರುವುದಾದರೂ ಹೇಗೆ...? ಇದೇ ಚಿಂತೆ ನಮ್ಮನ್ನು ಹಗಲಿರುಳೂ ಕಾಡುತ್ತಿದೆ. ಈ ನಮ್ಮ ದೆಹಲಿಯ ಕೊರೆಯುವ ಚಳಿಯಲ್ಲೂ ಮೈಯೊಳು ಬೆವರೊಡೆವಂತೆ ಮಾಡಿದ್ದಾರೆ ನಮ್ಮ ಪ್ರಜೆ ಎಂಬ ಪ್ರಭುಗಳು. ಚಳಿಯನ್ನು ಹೊಡೆದೊಡಿಸಿ ಮೈಗೆ ಮುದನೀಡುವ ದಪ್ಪದಪ್ಪದ ಕಂಬಳಿಗಳನ್ನು ಹೊದ್ದು ಸುರುಟಿ ಮುರುಟಿ ಮಲಗಿದರೂ ನಿದಿರಾ ದೇವಿ ನಮ್ಮತ್ತ ಸುಳಿಯುತ್ತಲೇ ಇಲ್ಲವಲ್ಲಾ.....? ಆ ಅಸತ್ಯ ಅನ್ವೇಷಿಗಳು ಹೇಳುವಂತೆ ತಲೆಯನ್ನು ಪರಪರನೆಯೂ, ಬಳಿಕ ರಪರಪನೆಯೂ ಕೆರೆದುಕೊಂಡರೂ ಪ್ರಯೋಜನವಾಗುತ್ತಿಲ್ಲವಲ್ಲಾ..... ರಾಮಾ.... ಕೃಷ್ಣಾ..... ಡಂಗೂರದವರಿಗೆ ಯಾವ ಮುಖವನ್ನು ತೋರಿಸಲೀ...... ಅವರ ಬಾಯಿಬೇಧಿಗೆ ಯಾವ ಮದ್ದನ್ನು ಬಳಸಲೀ....ಒಡ್ಡೋಲಗವನ್ನೇ ಮಾಡದೆ ಕೆಲವು ದಿವಸಗಳಾದವ್ಹೂ..... ಎಷ್ಟುದಿನ ತಲೆಮರೆಸಿಕೊಳ್ಳಬಹುದೂ.... ಇನ್ನಿನ್ನೂ ಹೀಗೆ ಇರಲಾಗುವುದಿಲ್ಲ. ಅದೇನಾಗುತ್ತದೆಯೋ ನೋಡೇ ಬಿಡೋಣಾ.....

ಯಾರಲ್ಲೀ......?

ಸ್ವಾಮೀ ಕಾಲ ಕೃಷ್ಣರೇ........ ನಮನಗಳು.... ಕುಶಲವೇ....ಕ್ಷೇಮವೇ...

ಪ್ರತಿ ನಮನಗಳು.... ನಮ್ಮಪರಿಸ್ಥಿತಿಯನ್ನು ತಿಳಿದೂತಿಳಿದೂ ಕುಶಲವೇ... ಕ್ಷೇಮವೇ ಎಂದೆನ್ನುತ್ತಾ ಉರಿಯುವ ಬೆಂಕಿಗೆ ತುಪ್ಪ ಸುರಿಯದಿರೀ ಭಾಗವತರೇ.... ಅದೇನು ಪ್ರಶ್ನೆಗಳನ್ನು ಹೊತ್ತು ತಂದಿರುವಿರೋ ನೇರವಾಗಿ ಕೇಳುವಂತವರಾಗಿ......

ಕಾಲ ಕೃಷ್ಣರೇ..... ಮೊನ್ನೆ ನಡೆದ ಕದನದಲ್ಲಿ ನಿಮ್ಮ ಎದುರಾಳಿಗಳು ನಿಮ್ಮ ಮೇಲೆ ಸವಾರಿ ಮಾಡಿದ್ದಾರೆ ಎಂದೆನ್ನಬಹುದು. ನಿಮ್ಮ ಕೈಯೊಳಗಿದ್ದ 'ರಾಜೇ' ಸ್ಥಾನ ಮತ್ತು ಬಹಳ ನಿರೀಕ್ಷೆ ಇಟ್ಟಿದ್ದ ದೆಹಲಿ ಪ್ರಾಂತ್ಯಗಳು ನಿಮ್ಮ ಎದುರಾಳಿಗಳ ಸುಪರ್ದಿಗೆ ಬಂದಿದೆ. ಮಧ್ಯಪ್ರದೇಶವೆಂಬ ಪ್ರಾಂತ್ಯ ನಿಮ್ಮ್ ಕೈಜಾರದಿದ್ದರೂ, ಹಿಡಿತದ ಬಿಗಿ ಸಡಿಲಗೊಂಡಿದೆಯಲ್ಲಾ ಪ್ರಭುಗಳೇ....? ಛತ್ತೀಸ್‌ಗಢವೆಂಬ ಪ್ರಾಂತ್ಯದಲ್ಲೂ ಹೀಗೇ ಆಗಿದೆ..... ಯಾಕೇ...? ಏನಾಯಿತೂ....? ಎಲ್ಲಿ ತಪ್ಪೀದ್ದೀರೀ.....?

ಆಹಾ... ಭಾಗವತರೇ...... ಏನಾಗಿ ಹೋಯಿತೆಂಬುದೂ ನಮಗೂ ಸರಿಯಾಗಿ ಗೊತ್ತಿಲ್ಲ. ಕೈ ತಪ್ಪಿದ 'ರಾಜೇ' ಸ್ಥಾನದಲ್ಲಿ ರಾಣಿಯವರ ದರ್ಬಾರಿನ ಅಬ್ಬರ ನಮ್ಮ ಸಾಮಂತರುಗಳಿಗೇ ಸಹಿಸಲು ಒಂದಿಷ್ಟು ಕಷ್ಟಕರವಾಗಿತ್ತಂತೆ. ಅದೂ ಅಲ್ಲದೇ.... ಅಲ್ಲಿನ ಆಂತರಿಕ ವಿಚಾರಗಳು, ಜಾತೀ ರಾಜಕೀಯಗಳು, ರಾಣಿಯರ ದುರಹಂಕಾರಗಳು...... ಕಾರಣವಿರಬಹುದು. ಆದರೇ..... ಇಲ್ಲಿ ಕೇಳಿ ಭಾಗವತರೆ, ಆ ಸೀತಾಮಾತೆ ನಮ್ಮ ಕೈಬಿಡಲಿಲ್ಲ. ಛತ್ತೀಸ್‌ಗಡ ಶ್ರೀರಾಮಚಂದ್ರನ ಸತಿ ಸೀತಾಮಾತೆ ಮೆಟ್ಟಿದ, ಓಡಾಡಿದ ನೆಲ. ರಾಮಭಕ್ತರಾದ ನಮ್ಮನ್ನು ಆ ತಾಯಿಯೇ ಕಾಪಾಡಿ ಮರಳಿ ಅಧಿಕಾರ ಧಕ್ಕುವಂತೆ ಮಾಡಿದ್ದಾಳೆ.

ಅರ್ಥವಾಯಿತು, ಅರ್ಥವಾಯಿತು ಅಡ್ಡವಾಣಿಯವರೇ......, ಮಧ್ಯಪ್ರದೇಶಕ್ಕೆ ಬರೋಣವಂತೆ. ನಿಮ್ಮ ಶಿಷ್ಯೆ ಆಗಿದ್ದು ನಿಮ್ಮ ಮೇಲೆ ಮುನಿಸಿಕೊಂಡು ಎದ್ದು ನಡೆದು, ತನ್ನದೆ ಸಂಸ್ಥಾನ ಕಟ್ಟುವ ದಿಸೆಯತ್ತ ಹೆಜ್ಜೆ ಹಾಕಿ, ನಿಮಗೆ ಮಗ್ಗುಲ ಮುಳ್ಳಾಗಿದ್ದ ಉರಿಭಾರತಿಯವರು ತಮ್ಮ ತವರೂರಿನಲ್ಲೇ ನೆಗೆದು ಬೀಳುವಂತೆ ಮತದಾರ ಪ್ರಭು ತೀರ್ಪು ನೀಡಿದ್ದಾನೆ. ತಾಕತ್ತಿದ್ದರೆ ನನ್ನೆದುರು ಕಾಲ ಕೃಷ್ಣ ಸ್ಫರ್ಧಿಸಲಿ ಎಂದು ತೋಳೇರಿಸಿದ್ದ ಉರಿಭಾರತಿಯವರನ್ನು ಸೂಟೆಕಟ್ಟಿ(ದೊಂದಿ) ಹುಡುಕಿದರೂ ಅವರೀಗ ಸಿಕ್ಕುತ್ತಿಲ್ಲ. ಇದಕ್ಕೇನನ್ನುತ್ತೀರೀ ಸ್ವಾಮ್ಹೀ.....?

ಭಾಗವತರೇ......, ತುಳುವಿನಲ್ಲೊಂದು ಗಾದೆ ಮಾತಿದೆ. 'ಮಗಳ್ ಮುಂಡೆ ಮುಚ್ಚ್‌ಂಡಲಾ ಮಲ್ಲೆಜ್ಜಿ, ಮರ್ಮಯೆ ಸಯ್ಯೋಡು', ಅಂದರೇ...... ಮಗಳು ವಿಧವೆಯಾದರೂ ಪರ್ವಾಗಿಲ್ಲ, ಅಳಿಯ ಸಾಯಬೇಕು ಎಂಬುದು ಇದರರ್ಥ. ಹಾಗೆಯೇ ಆ ಉರಿಭಾರತಿ "ನನ್ನ ಗೆಲುವಿಗಿಂತಲೂ ಬಾ ರತಿಯ ಜನ ತಾ ಪಕ್ಷದ ಸೋಲೇ ನನ್ನ ಗುರಿ" ಎಂದು ದಿಗಿಣ ಹೊಡೆದಿದ್ದರು. ಆದರೆ ಭಾಗವತರೇ......., ವ್ಯಕ್ತಿಗಿಂತಲೂ ಪಕ್ಷದೊಡ್ಡದು..... ಪಕ್ಷದೊಡ್ಡದೂ.... ಇದು ಈಗ ಆ ಮಹಾತಾಯಿಗೆ ಅರ್ಥವಾಗಿರಬಹುದು.

ಅಯ್ಯಾ ಕೃಷ್ಣರೇ......, ಪಕ್ಷದೊಡ್ಡದು ಅನ್ನುತ್ತೀರೀ....., ಆದರೆ ಜನರ ಭಾವನೆಗಳ ಮೇಲೆ ಸುಲಭವಾಗಿ ಸವಾರಿ ಮಾಡಬಹುದು ಎಂಬುದಾಗಿ ನಿಮ್ಮ ಪಕ್ಷ ಭಾವಿಸಿಕೊಂಡಿತ್ತು ಎಂಬುದು ಸಾರ್ವತ್ರಿಕ ಭಾವನೆ. ಭಗವಾನ್ ಶ್ರೀರಾಮಚಂದ್ರನನ್ನು ಜಗ್ಗಾಡಿ ಹಿಂದೆ ಪಟ್ಟಕ್ಕೇರಿದ್ದೀರಿ ಎಂಬ ಮಾತಿದೆ; ಮತ್ತೆ ಆತನನ್ನು ಮರೆತಿರುವಿರೀ ಎಂಬ ದೂರೂ ಇದೆ. ಮುಂಬೈ ಎಂಬ ಮಾಯಾ ನಗರಿಯಲ್ಲಿ ದುರುಳರು ನಡೆಸಿದ ಅಟ್ಟಹಾಸ ನಿಮ್ಮ ಯುದ್ಧತಂತ್ರಕ್ಕೆ ಸಹಾಯವಾಗಲೇ ಇಲ್ಲವಲ್ಲಾ...? ಯಾಕೇ.... ಪ್ರಜೆಗಳಲ್ಲಿ ನಿಮ್ಮ ಪಕ್ಷದ ಕುರಿತೇ ಭಯದ ಉತ್ಪಾದನೆಯಾಗುತ್ತಿದೆಯೇ.....?

ಬಾಯಿಮುಚ್ಚಿ ಭಾಗವತರೇ..... ನಮ್ಮ ಪಕ್ಷದ ಮೇಲೆ ಬಹು ಸಂಖ್ಯಾತರಿಗೆ ಪ್ರೀತಿ ಇದ್ದೇ ಇರುತ್ತದೆ. ಸಣ್ಣಸಣ್ಣ ಲೋಪಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಮೊನ್ನೆ ನಡೆದ ಸಣ್ಣಪುಟ್ಟ ಕದನಗಳ ಸೋಲಿಗೆ ಪ್ರಾಂತೀಯ ಸಮಸ್ಯೆಗಳು ಕಾರಣವಾಗಿಬಹುದು. ಆದರೆ ನಿಮ್ಮಂತಹ ತುತ್ತೂರಿಯವರು ಇದನ್ನೇ ವೈಭವೀಕರಿಸಬೇಕಾದ ಅಗತ್ಯವಿಲ್ಲ......... ಮಹಾಯುದ್ಧಕ್ಕೆ ಸಾಕಷ್ಟು ಸಮಯವಿದೆ. ಶ್ರೀ ರಾಮಚಂದ್ರನಿದ್ದಾನೆ. ಎಲ್ಲಿಬೇಕೋ ಅಲ್ಲೆಲ್ಲ ಬೆಂಕಿ ಇಕ್ಕಲು ನಮ್ಮ ಸೇನಾನಿಗಳು ಸೊಂಟ ಕಟ್ಟಿದ್ದಾರೆ. ಏನಾಗುವುದೋ ಎಂಬುದನ್ನು ಕಾದು ನೋಡಿ. ಏಳು ತಿಂಗಳಿಗೇ ಜನಿಸಿದಂತೆ ಅವಸರದ ತೀರ್ಮಾನಕ್ಕೆ ಬರಬೇಡಿ..... ಎಚ್ಚರಿಕೆ...!

ಸರಿ, ಕಾಲ್ ಕೃಷ್ಣರೆ ನಿಮ್ಮ ಕೋಪ ಅರ್ಥವಾಗುವಂತಾದ್ದು. ಆದರೂ ಬರಿಯ ರಾಜಕೀಯವನ್ನೇ ಮಾಡಿದರೆ, ಅದನ್ನು ಅರಿತುಕೊಳ್ಳುವಷ್ಚು ಪ್ರಜೆಗಳೂ ಬುದ್ದಿವಂತರಾಗುತ್ತಿದ್ದಾರೆ ಎಂಬುದಕ್ಕೆ ಇದೀಗ ಅಂತ್ಯಗೊಂಡ ಕಾಳಗವೇ ಸಾಕ್ಷಿ! ಪ್ರಜೆಗಳಿಗೆ ಒಳಿತಾಗುವ ಕಾರ್ಯವನ್ನು ಮಾಡುವಂತೆ ಶ್ರೀರಾಮಚಂದ್ರ ನಿಮಗೆ ಮನಸ್ಸು ಕೊಡಲೀ.... ಹಾಗಾದಾಗಾ... ಖಂಡಿತಕ್ಕೂ ಪ್ರಜೆ ಎಂಬ ಪ್ರಭು ನಿಮ್ಮನ್ನು ಮರೆಯಲಾರ; ಮತ್ತು ಶ್ರೀರಾಮನ ಆಶೀರ್ವಾದ ಇಲ್ಲದೆಯೇ ಗದ್ದುಗೆ ಏರಬಲ್ಲಿರೀ ಎಂಬುದು ಸತ್ಯಸ್ಯ ಸತ್ಯ ಅಧ್ವಾನರೇ.... ಮಾತು ಮುಂದುವರಿಸುವ ಇಚ್ಚೆ ನಿಮಗಿದ್ದಂತಿಲ್ಲ. ಇನ್ಯಾವಾಗಲಾದರೂ ಒಡ್ಡೋಲಗದಲ್ಲಿ ಭೇಟಿಯಾಗೋಣವಂತೆ...

ಇಂದಿಗೆ ಮಂಗಳ ಹಾಡೋಣ.... ಸರ್ವರಿಗೂ ಒಳಿತಾಗಲೀ....
||ಮಂಗಳಂ||

ಮಂಗಳವಾರ, ಡಿಸೆಂಬರ್ 2

ಸೂಟುಗಳಿಗೆಲ್ಲ ಇಸ್ತ್ರಿ ಹಾಕುತ್ತೇವೆ...

ಭಳಿರೇ ಪರಾಕ್ರಮ ಕಂಠೀರವಾ..........!

ಬಲ್ಲಿರೇನಯ್ಯಾ.........?

ಅಖಂಡಭರತ ಖಂಡದ ಗೃಹಖಾತೆಗೆ ಸಾಮಂತರು ಯಾರೆಂದು ಕೇಳಿಬಲ್ಲಿರೀ.....?

ಶ್ರೀ.... ಶ್ರೀ......ಶ್ರೀ..... ವಶೀಲಿರಾಜ್ ಟಪೇಲ್ ಅಲ್ಲವೆಂದು ಹೇಳಬಲ್ಲೆವೂ....

ಹಾಂ.. ಇದೇನು, ನಾವೀಗ ಮಂತ್ರಿಯಲ್ಲವೇ...? ಓಹ್.....!!! ಹೌದು ಖಾಲಿ ಸಚಿವರೂ ಅಲ್ಲಾ... ಅಮ್ಮಾ... ತಾಯಿ..... ಏನು ನಿನ್ನ ಲೀಲೆ?
ಬಂದಂತಹ ಕಾರ್ಯ......?

ಎಂತಹ ಕಾರ್ಯ.....? ಕಾರ್ಯವಿಲ್ಲದ ನಾವೀಗ ಖಾಲಿಖಾಲಿ...... ! ಕಾರ್ಯವಿದ್ದಾಗಲೂ ನಾವು ಖಾಲಿಯಾಗೇ ಇದ್ದೆವೆಂಬುದು ಬೇರೆವಿಚಾರ. ಇರಲಿ ನೋಡೋಣ....

ಮುಂಜಾನೆ ಎದ್ದು ಲಘುಪಹಾರ (ಫಿಗರ್ ಮೆಂಟೇನ್ ಮಾಡಬೇಕಲ್ಲವೇ....?) ಸೇವಿಸಿ, ಸಹಾಯಕರು ನೀಟಾಗಿ ಇಸ್ತ್ರಿ ಮಾಡಿರುವ ಸೂಟು, ಅದಕ್ಕೊಪ್ಪುವ ಬೂಟು ತೊಟ್ಟು, ಬೆಳ್ಳಿಮಿಶ್ರಿತ ತಲೆಗೂದಲಿಗೆ ಜೆಲ್ಲಿ ಬಳಿದು, ನಮ್ಮ ದುಬಾರಿ ವಿದೇಶಿ ಬಾಚಣಿಗೆಯಿಂದ ಒತ್ತಿಒತ್ತಿಒತ್ತಿ ಬಾಚಿ, ಕೂದಲೊಂದೂ ಕೊಂಕದಂತೆ ಒಪ್ಪವಾಗಿಸಿ, ಮುಖಕ್ಕೆ ತೆಳುವಾದ ಪೌಡರ್ ಲೇಪನವನ್ನು ಬಳಿದು, ಸುಗಂಧ ದ್ರವ್ಯವನ್ನು ಪೂಸಿ ತಯ್ಯಾರಿ ಆಗಿಯೇನೋ ಆಯಿತು. ಆದರೆ ಈಗ ಮಾಡುವುದಾದರೂ ಏನನ್ನು....?

ಅಭ್ಯಾಸ ಬಲದಂತೆ ಒಡ್ಡೋಲಕ್ಕೆ ಬಂದಿದ್ದೂ ಆಯಿತು. ಆದರೆ ಏನಾಶ್ಚರ್ಯ.....? ಇದೇನಾಶ್ಚರ್ಯ....? ಸಭಾಂಗಣದಲ್ಲಿ ಒಂದು ನರಹುಳು ಬಿಡಿ; ನಿಜಹುಳುವು ಕಾಣುತ್ತಿಲ್ಲವಲ್ಲಾ...? ಅಮ್ಮಾ ನಿನ್ನ ಲೀಲೆಯೇ....? ಎಲ್ಲಿ...? ಎಲ್ಲಿದ್ದಾರೆ...? ವಂಧಿಮಾಗಧರೆಲ್ಲಿ...? ಭಟ್ಟಂಗಿಗಳೆಲ್ಲಿ....? ಹಾರಗಳೆಲ್ಲಿ....? ತುರಾಯಿಗಳೆಲ್ಲಿ.....?

ಆಡಳಿತದುದ್ದಕ್ಕೂ ಅಸಾಮರ್ಥ್ಯ ತೋರಿರುವುದನ್ನು ಮೆಲುಕು ಹಾಕಲೇ, ನಮ್ಮ ದುರ್ಬಲತೆಯಿಂದ ಅಮಾಯಕರು ಉಗ್ರರ ಆರ್ಭಟಕ್ಕೆ ಬಲಿಯಾಗಿರುವ ಸಂಖ್ಯೆಯನ್ನು ಲೆಕ್ಕಹಾಕಲೇ, ಏನು ಮಾಡಲೀ....?

ಓಹ್ ಅದ್ಯಾರಲ್ಲೀ.....? ಯಾರೂ ಇಲ್ಲದಿದ್ದರೂ ಭಾಗವತರು ಮಾತ್ರ ತಪ್ಪುವುದಿಲ್ಲವಲ್ಲಾ.....ನಿಮಗಿನ್ನೂ ಇಲ್ಲಿ ಕೆಲಸವೇನು....? ನಿಮ್ಮ ಬಳಿ ಮಾತನಾಡಲು ನಮಗಿಚ್ಚೆಯಿಲ್ಲ.

ಅದು ಸರಿ, ವಶೀಲಿಬಾಜಿ ಟಪೇಲರೇ ಒಬ್ಬರೇ ಗೊಣಗುಟ್ಟುವ ಬದಲು ನಮ್ಮಬಳಿ ಮಾತನಾಡಬಹುದಲ್ಲವೇ....?

ಅದೂ ಸರಿ ಎನ್ನಿ ಭಾಗವತರೇ..... ಅದೇನು ನಿಮ್ಮ ವರಾತ? ಕೇಳುವಂತವರಾಗಿ...?

ಟಪೇಲರೇ.... ಈ ಹಿಂದೆ ಆತಂಕವಾದಿಗಳು ಭಯವನ್ನು ಉತ್ಪಾದಿಸಿದ್ದ ವೇಳೆಗೆ ನೀವು ಸ್ಥಾನ ಕಳಕೊಳ್ಳುವ ಆತಂಕವೆದುರಿಸಿದ್ದೀರಿ. ಭಯದ ಉತ್ಪಾದನೆಯನ್ನು ನಿಗ್ರಹಿಸುವುದು ನಿಮ್ಮಿಂದಾಗದ ಮಾತೆಂದು ಈ ನೆಲದ ಚಳ್ಳೆಪಿಳ್ಳೆಗಳೂ ಮಾತಾಡಲಾರಂಭಿಸಿವೆ. ನಿಗ್ರಹ ದೂರದ ಮಾತು; ಅದನ್ನು ಖಂಡಿಸಲೂ ನೀವು ಮೀನಮೇಷ ಎಣಿಸಿದ್ದವರು. ಬಾಯಿಗೆ ಬಂತಂತೆ ಹೇಳಿಕೆ ನೀಡಿ ಛೀ.. ಥೂ ಎಂದು ಉಗಿಸಿಕೊಂಡವರು... ಇದಾದ ಬಳಿಕ ನಿಮ್ಮ ಸ್ಥಾನಕ್ಕೆ ಕುತ್ತಿದೆಯಾ ಎಂಬುದಾಗಿ ಡಂಗೂರದವರು ಕೇಳಿರುವ ಪ್ರಶ್ನೆಗೆ, "ನಮ್ಮ ಆಶ್ರಯದಾತೆ ಅಮ್ಮನ ಆಶೀರ್ವಾದ ಇರುವ ತನಕ ನಮಗೇನೂ ಭಯವಿಲ್ಲ" ಎಂದಿದ್ದೀರಿ. ಆಗ ಕೂದಲೆಳೆಯಲ್ಲಿ ಬಚಾವಾದ ನೀವು ಗಡದ್ದು ನಿದ್ದೆಗೆ ಜಾರಿದವರು, ಮತ್ತೆ ಎಚ್ಚರವಾದದ್ದು ಮೊನ್ನೆ ಹಂತಕರು ಎಕೆ47 ರೈಫಲಿನಲ್ಲಿ ಹಾರಿಸಿದ ಗುಂಡಿನ ಸದ್ದು ಕೇಳಿದ ಯಾರೋ ನಿಮ್ಮನ್ನು ಅಲ್ಲಾಡಿಸಿ ಅಲ್ಲಾಡಿಸಿ ಎಬ್ಬಿಸಿದಾಗಲಂತೆ ಹೌದಾ....?

ಇದೇನು ಭಾಗವತರೇ....? ನಿಮಗೆ ಬಾಯಿತೆರೆಯಲು ಬಿಟ್ಟಿದ್ದೇ, ಎತ್ತು ಮೂತ್ರಮಾಡಿದಂತೆ ಊದ್ದಕ್ಕೆ ವಟಗುಟ್ಟುತ್ತಿದ್ದೀರೀ.....? ಹೇಳುವವರ ನಾಲಿಗೆ ಇಳಿದು ಹೋಗಲಿ... ನೋಡಿದವರ ಕಣ್ಣು ಕುರುಡಾಗಲಿ. ನಾವು ಕಳೆದ ನಾಲ್ಕೂವರೆ ವರ್ಷದಿಂದ ನಮ್ಮ ಕರ್ತವ್ಯವನ್ನು ಸೂಕ್ತವಾಗಿಯೇ ಪಾಲಿಸಿಕೊಂಡು ಬಂದಿದ್ದೇವೆ. ನಮ್ಮ ಪ್ಯಾಂಟು, ಇಲ್ಲವೇ ಕೋಟಿನ ಇಸ್ತ್ರಿಯ ಒಂದು ಗೀರೂ ಈ ನಮ್ಮ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕೊಂಕಿದ್ದು ಏನಾದರೂ ಕಂಡಿದ್ದರೆ ಹೇಳಿ.....! ಯಾರು ಹೇಳಿದ್ದು ಕಳೆದ ಸಾರಿಯ ಭಯದ ಉತ್ಪಾದನೆಯ ವೇಳೆಗೆ ನಾವೇನು ಮಾಡಿಲ್ಲವೆಂದು? ನಾವು ಒಂದೇ ದಿನದಲ್ಲಿ ನಾಲ್ಕು ಬಾರಿ ಉಡುಪು ಬದಲಿಸಿ ಪ್ರಜೆಗಳ ಮುಂದೆ ಕಾಣಿಸಿಕೊಂಡಿಲ್ಲವೇ?

ಇರಲಿ ವಶೀಲಿಬಾಜಿಯವರೇ..... ನೀವಾಗೆ ಪಡೆದಿರುವ ವಿಶ್ರಾಂತಿ ಕಾಲದಲ್ಲಿ ಏನು ಮಾಡಬೇಕೆಂದಿರುವಿರಿ.....?

ನಿಮ್ಮ ಅಧಿಕಪ್ರಸಂಗಕ್ಕೆ ಒಂದಿಷ್ಟು ವಿಶ್ರಾಂತಿ ಇರಬೇಕಿತ್ತು ಭಾಗವತರೇ....? ಮಾಡುವುದೇನು ನಿಮ್ಮ ಕರ್ಮ...? ನಾವು ನಮ್ಮ ಹಳೆಯ ಕೋಟು ಸೂಟುಗಳನ್ನೆಲ್ಲ ಕಪಾಟಿನಿಂದ ಈಚೆ ತೆಗೆದು - ಚೆನ್ನಾಗಿ ಒಗೆದು, ಬಿಸಿಲಲ್ಲಿ ಒಣಗಿಸಿ ಬಳಿಕ ಇಸ್ತ್ರಿ ಮಾಡುತ್ತೇವೆ. ನಮ್ಮ ಅಷ್ಟೂ ಕೋಟು ಸೂಟುಗಳನ್ನು ಒಗೆದು, ಒಣಗಿಸುವ ವೇಳೆಗೆ ಮುಂದಿನ ಚುನಾವಣೆ ಬರುತ್ತದೆ. ಮತ್ತೆ ಚುನಾವಣೆಯಲ್ಲಿ ಗೆದ್ದೋ, ಇಲ್ಲವೇ ಸೋತೋ, ಅಧಿಕಾರ ಸಿಕ್ಕರೆ ಮೆದ್ದು, ಮತ್ತೆ ಎಂದಿನಂತೆ ಮುಂದುವರಿಯುತ್ತೇವೆ....

ಸರಿ ಟಪೇಲರೇ... ನಿಮ್ಮ ಈ ಆಪರೇಶನ್‌ಗೆ ಯಾರನ್ನಾದರೂ ಸೇರಿಸಿಕೊಳ್ಳುವಿರೋ...?

ಯಾರು ಸಿಗುತ್ತಾರೆ ಇಂಥಾ ಅಧಿಕಾರವಿಲ್ಲದ ಸಮಯದಲ್ಲೀ... ಪೆದ್ದರಂತೆ ಪ್ರಶ್ನೆ ಕೇಳುತ್ತೀರಲ್ಲ ನೀವು...? ಆದರೂ ರಾರಾ ಟಪೇಲರು ಮತ್ತು ಲವೀಸ್‌ರಾವ್ ಮುಖ್‌ದೇಶರವರು ಮತ್ತು ಇನ್ನೂ ನಮ್ಮ ಸಾಲಿಗೆ ಸೇರಲಿರುವ ಇತರ ಸಾಮಂತರು ಬರುತ್ತಾರೋ ಕೇಳಿನೋಡಬೇಕು!

ಆಗಲಿ ಟಪೇಲರೇ... ಆ 'ತಾಯಿ' ನಿಮ್ಮನ್ನು ಮತ್ತೆ ಹರಸುತ್ತಾರೋ ಕಾದು ನೋಡೋಣವಂತೆ... ಈಗ ಈ ಒಡ್ಡೋಲಗಗಕ್ಕೆ ಮಂಗಳ ಹಾಡೋಣ.

ಸರ್ವೇಜನ ಸುಖಿನೋಭವಂತು...... ಮಂಗಳಂ

ಬುಧವಾರ, ಸೆಪ್ಟೆಂಬರ್ 3

ಹೇಗೆ ತಲೆ ಅಲ್ಲಾಡಿಸಬೇಕೆಂಬುದೂ ಗೊತ್ತಿಲ್ಲದ....

ವೇದಿಕೆಯ ಮೇಲೆ ಅವರು "ಭವ, ಭಯ, ದುಃಖವ ಬಿಡಿಸೋ....." ಎಂದು ತನ್ಮಯತೆಯಿಂದ ಹಾಡುತ್ತಲೇ ಇದ್ದರು. ಆದರೆ ನಾನು ಮಧ್ಯದಲ್ಲಿ ಎದ್ದು ಹೋಗಬೇಕಲ್ಲವೇ ಎಂಬ ದುಃಖದಿಂದ, ರಾತ್ರಿ ಲೇಟಾಗಿ ಹೋದರೆ ಅಪಾಯಕ್ಕೊಡ್ಡಿಕ್ಕೊಳ್ಳಬೇಕಾದೀತು ಎಂಬ ಭಯದಿಂದ, ಮನಸ್ಸಿಲ್ಲದ ಮನಸ್ಸಿನಿಂದ ಸಂಗೀತ ಕಛೇರಿ ಎಂಬ ಭವಬಂಧನದಿಂದ ಮುಕ್ತಿಹೊಂದಲೇಬೇಕಾಗಿತ್ತು.

ಮೊನ್ನೆ ಭಾನುವಾರ ಶ್ರೀ ವಿದ್ಯಾಭೂಷಣ ಸ್ವಾಮೀಜಿ(ಮಾಜಿ)ಯವರ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದಾಗ ನಾನು ಅನುಭವಿಸಿದ್ದ ಸಂಕಟಗಳಿವು. ನಿಮ್ಮ ಬಳಿ ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ. ಇಲ್ಲೀಗ ನಾನು ಹೇಳುತ್ತಿರುವುದೆಲ್ಲ ಸತ್ಯ. ನನಗೆ ಮಧುರವಾದ ಸಂಗೀತವನ್ನು ಕೇಳಲಷ್ಟೆ ಗೊತ್ತು. ಮಿಕ್ಕಂತೆ ಅದರ ಆಳ, ತಾಳ ಒಂದೂ ಗೊತ್ತಿಲ್ಲ. ಆದರೆ ಇಂಪಾದ ಸಂಗೀತ ಕೇಳಿ ಮನಸ್ಸು ಹಗುರ ಮಾಡಿಕೊಳ್ಳುವುದು, ಆಗೀಗ ಯಾವಾಗಲಾದರೂ ಅವಕಾಶ, ಸಂದರ್ಭ ಒದಗಿದಾಗ ಸಂಗೀತ ಕಾರ್ಯಕ್ರಮಗಳಿಗೆ ಹೋಗುವ ಖಯಾಲಿ ಇತ್ತಾದರೂ, ಈಚಿನ ಎರಡು ವರ್ಷಗಳಿಂದ ಅದೂ ಕಮ್ಮಿಯಾಗಿದೆ.

ನಂಗೆ ವಿದ್ಯಾ(ಸಂಗೀತ)ಭೂಷಣರ ಹಾಡು ಕೇಳುವುದೆಂದರೆ ಆವರ್ಚನೀಯ ಆನಂದ. ಒಂಟಿ ಭೂತದಂತೆ ಜೀವಿಸುತ್ತಿರುವ ನಾನು ಅವರ ಹಾಡುಗಳನ್ನು ಕೇಳುತ್ತಿರುತ್ತೇನೆ. ಇಂತಿಪ್ಪ ನನಗೆ ಮೊನ್ನೆ ಅವರ ಕಾರ್ಯಕ್ರಮ ಇದೆ ಎಂದಾಗ ಹೋಗಲೇಬೇಕೆಂಬ ತುಡಿತ ಉಂಟಾಗಿತ್ತು. ನಾವೆಲ್ಲ ಸಹೋದ್ಯೋಗಿಗಳು ಗಂಟೆ ಮುಂಚಿತವಾಗೇ ಹೋಗಿ, ಕಾರ್ಯಕ್ರಮ ಆಯೋಜಕರು ಒದಗಿಸಿದ್ದ ಲಘುಉಪಹಾರ ಮೆದ್ದು, ಆಯಕಟ್ಟಿನ ಜಾಗವನ್ನು ಗಟ್ಟಿಮಾಡಿ ಕುಳಿತಿದ್ದೆವು. ಆದರೆ ನಿಗದಿತ ಸಮಯಕ್ಕಿಂತ ಸಾಯಂಕಾಲ ಕೊಂಚ ಲೇಟಾಗೇ ಕಾರ್ಯಕ್ರಮ ಆರಂಭವಾಯಿತು. ಛೇ ಅರ್ಧದಿಂದಲೇ ಎದ್ದು ಹೋಗಬೇಕು ಎಂಬ ಚಡಪಡಿಕೆಗೆ ಬಿದ್ದಿದ್ದೆ. ಕಾರ್ಯಕ್ರಮ ರಂಗೇರುತ್ತಿರುವಂತೆ ಇದು ಮುಗಿಯುತ್ತದಲ್ವೇ ಎಂಬ ಉದ್ವೇಗ. ಸ್ವಾಮೀಜಿ, ಸಾನು ರಾಗದಿಂದ ಹರಿಯಾ... ಎಂದು ಏರುದನಿಯಲ್ಲೇ ಆರಂಭಿಸಿದಾಗ, ಡಂಗೂರಾವಾ ಸಾರಿರಯ್ಯಾ ಹಾಡುವಾಗ ಮನಸ್ಸಿಗೆ ಕುಣಿಯುವ ತುಡಿತ. ದಾಸನಾಗುವುದಕ್ಕೆ ಏಸು ಜನ್ಮದ ಸುಕೃತ...., ದಾಸನ ಮಾಡಿಕೋ ನನ್ನಾ...., ಹಕ್ಕಿಯ ಹೆಗಲೇರಿ ಬಂದಾವಗೆ...., ಎಲ್ಯಾಡಿ ಬಂದ್ಯೂ ರಂಗಯ್ಯ...., ಯಾರೇ ರಂಗನ ಕರೆಯ ಬಂದವರೂ... ಎಂದು ಅವರು ಮೈಮರೆತು ಹಾಡುತ್ತಿದ್ದಾಗ ಮಂತ್ರಮುಗ್ಧಳಂತೆ ಕೇಳುತ್ತಿದ್ದ ನನ್ನ ಕಣ್ಣಂಚಿನಲ್ಲಿ ನೀರು ಬಿಂದುಗಟ್ಟಿತ್ತು.

ಸಭಾಂಗಣ ತುಂಬಿತ್ತು. ಪ್ರತಿಯೊಬ್ಬರು ಹರಿದು ಬರುತ್ತಿದ್ದ ಗಾನುಸುಧೆಯನ್ನು ಕಿವಿಯೊಳಗೆ ತುಂಬಿ ಮನದೊಳಗೆ ಇಳಿಸುತ್ತಾ ರಸಸ್ವಾದ ಮಾಡುತ್ತಿದ್ದರು. ಮೃದಂಗ ಮತ್ತು ಘಟಂ ವಾದಕರು ಪರಸ್ಪರ ಸವಾಲೊಡ್ಡಿಕೊಂಡು ಸಂಗೀತ ರಸಿಕರಿಗೆ ಔತಣ ನೀಡುತ್ತಿದ್ದರೆ, 76ರ ಹರೆಯದ ಮೃದಂಗ ವಿದ್ವಾನ್ ಶ್ರೀಮಾನ್ ಗೋಪಾಲಕೃಷ್ಣ ಅವರ ಚಾತುರ್ಯ ಕಂಡು ಬೆರಗಾದ ನನಗೆ, ಸಿಟ್ಟಿನಿಂದ ಕಂಪೋಸ್ ಮಾಡುವಾಗ ನನ್ನ ಬೆರಳುಗಳು ಕೀಬೋರ್ಡ್ ಮೇಲೆ ಮಾತ್ರ ಈ ವೇಗದಲ್ಲಿ ಚಲಿಸಲು ಸಾಧ್ಯ ಎಂಬ ಯೋಚನೆ ಸುಳಿಯದಿರಲಿಲ್ಲ. ಇದಲ್ಲದೆ, ಮೃದಂಗ, ಘಟಂ, ವಯೋಲಿನ್‌ಗಳ ಪರಸ್ಪರ ಸವಾಲು ಚಿಕ್ಕಂದಿನಲ್ಲಿ ಅಕ್ಕಗಳೊಂದಿಗೆ ಜಗಳ ಗೆಲ್ಲುವ ರೀತಿಯನ್ನು ನೆನಪಿಸುತ್ತಿತ್ತು. ಯಾಕೆಂದರೆ ಎದುರಾಳಿಯನ್ನು ಗೆಲ್ಲಲು ಅವರಿಗಿಂತ ನಮ್ಮದೇ (ಮಾತಿರಲಿ, ಹೊಡೆದಾಟವಿರಲಿ) ನಮ್ಮದೇ ಒಂದು ಕೈ ಮೇಲಾಗಬೇಕಿತ್ತಲ್ಲವೇ?

ನಮ್ಮ ಹಿಂದಿನ ಸಾಲಿನಲ್ಲಿ ಕುಳಿತಿದ್ದ, ತ್ರಾಸಿ, ಘಟಂ ವಾದಕರ ಆವೇಶ ಕಂಡು, "ಅಯ್ಯೋ ಮಡಿಕೆ ಒಡೆದೇ ಹೋದರೆ ಏನು ಮಾಡೋದು; ಮತ್ತೆ ಚೆಂಬೇ ಗತಿ..." ಎಂಬ ಅವರ ಹಾಸ್ಯಪ್ರಜ್ಞೆ ಮೆರೆಯುತ್ತಿದ್ದರು. ಹಾಗೆ ನಾನು ಹಿಂದೆ ತಿರುಗಿ ನೋಡಿದಾಗ ಅವರ ಪಕ್ಕದ ಆಸನದಲ್ಲಿ ಕುಳಿತಿದ್ದವರು ನನ್ನನ್ನು ನೋಡಿ ನಕ್ಕಂತಾಯಿತು. ಅರೆ, ಇವರನ್ನು ನಾನೆಲ್ಲಿ ನೋಡಿದ್ದು ಎಂದು ಚಿಂತೆಗೆ ಬಿದ್ದಾಗ, ಶಾಭಾಸ್.... ಎಂಬ ಉದ್ಗಾರ ಅವರ ಬಾಯಿಂದ! ನಿಜವಿಚಾರ ಏನೆಂದರೆ, ವಿದ್ಯಾಭೂಷಣರ ಸಂಗೀತದಿಂದ ಭಾವಪರವಶರಾಗಿದ್ದ ಅವರ ಮುಖ ಸಂತಸದಿಂದ ಆ ಭಾವ ವ್ಯಕ್ತ ಪಡಿಸುತ್ತಿತ್ತು. ಆದರೆ, ಅವರು ನನ್ನ ಕಂಡು ಪರಿಚಿತ ನಗುಬೀರುತ್ತಿದ್ದಾರೆ ಎಂಬ ಭ್ರಮೆಗೆ ಬಿದ್ದ ನಾನು, ಅವರಿಗೆ ನನ್ನ ಪ್ರತಿಮುಗುಳ್ನಗು ಹಾಯಿಸಿದ್ದೆ! ಅವರ ವೇಷಭೂಷಣ-ಹಾವಭಾವಗಳು, ತಾಳಹಾಕುವ ಪರಿ, ಇನ್ವಾಲ್ವ್‌ಮೆಂಟ್ ಎಲ್ಲವೂ ಅವರೂ ಸಂಗೀತ ಪಂಡಿತರೆಂದೇ ಹೇಳುತ್ತಿದ್ದರೂ, ಆಮೇಲೆ ತ್ರಾಸಿ ಸಂಗ್ರಹಿಸಿದ್ದ ಮಾಹಿತಿ ಪ್ರಕಾರ ಅವರು ದೂರದರ್ಶನದಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡುವ ಬಹು ದೊಡ್ಡ ಕಲಾವಿರು ಎಂಬ ವಿಚಾರ ಗೊತ್ತಾಗಿತ್ತು.

ಈ ಹಿಂದೊಮ್ಮೆ ಮೂಡಬಿದ್ರೆಯಲ್ಲಿ ಆಳ್ವಾಸ್ ವಿರಾಸತ್‌ ವೇಳೆ ಪರ್ವೀನ್ ಸುಲ್ತಾನ್ ಅವರ ಗಾಯನ ಕಾರ್ಯಕ್ರಮಕ್ಕೆ ಹೋಗಿದ್ದೆವು. ಹೋಗಿದ್ದೆವು ಅಂದರೆ ಜತೆಯಲ್ಲಿ ಶಿಮ್ಲಡ್ಕ ಸಹೋದರಿಯರಾದ ಪುಷ್ಪ ಮತ್ತು ಆಕೆಯ ತಂಗಿ ನೃತ್ಯಗಾತಿ ವಿದ್ಯಾ ಇದ್ದರು. ನಂಗೆ ಸಂಗೀತದ ಗಂಧ ಗಾಳಿ ಒಂದೂ ಇಲ್ಲದಿದ್ದರೂ, ಲಘು ಸಂಗೀತ ಕಲಿತಿರುವ, ಕಲಿಯುತ್ತಲೇ ಇರುವ ಪುಷ್ಪಳಿಗೆ ಒಂಚೂರು ಗಾಳಿ ಇದೆ. ಅವಳ ತಂಗಿಗೆ ಗಾಳಿಯೊಂದಿಗೆ ಸೊಲೂಪ ಗಂಧವೂ ಇದೆ. ಎಲ್ಲಿ ಚಪ್ಪಾಳೆ ಹೊಡೆಯಬೇಕು ಎಂಬುದಕ್ಕಾಗದರೂ ಕನಿಷ್ಠ ಸಂಗೀತ ಜ್ಞಾನವಿರಬೇಕು ಎಂದು ನನ್ನನ್ನೇ ಬಯ್ದುಕೊಂಡ (ಆದರೂ, ಒಂದಾನೊಂದು ಕಾಲದಲ್ಲಿ ಯಕ್ಷಗಾನದಲ್ಲಿ ಒಂದಿಷ್ಟು ಕಾಲಾಡಿಸಿರುವ ನನಗೆ 'ಧದೀಂ ಗಿಣತೋಂ....' ಸ್ವಲ್ಪ ಗೊತ್ತಾಗುತ್ತದೆ) ನಾನು, ಈ ಸಹೋದರಿಯರ ಎದುರು ನನ್ನ ಸಮಸ್ಯೆ ತೆರೆದಿಟ್ಟಿದ್ದೆ. ಅಲ್ಲ ಕಣೇ, ಸಂಗೀತ ಕಾರ್ಯಕ್ರಮದಲ್ಲಿ ಎಲ್ಲರೂ ತಲೆ ಅಲ್ಲಾಡಿಸುತ್ತಾ ಇರುತ್ತಾರೆ. ನಂಗೆ ಹೇಗೆ ತಲೆ ಅಲ್ಲಾಡಿಸಬೇಕು ಎಂಬುದೂ ಗೊತ್ತಿಲ್ಲ ಎಂದು ನನ್ನ ಅಜ್ಞಾನವನ್ನು ಮುಲಾಜಿಲ್ಲದೆ ತೋಡಿಕೊಂಡೆ. ನಿನ್ನ ತಲೆ ಹೇಗೆ ಅಲ್ಲಾಡುತ್ತದೆಯೋ, ಹಾಗೇ ಅಲ್ಲಾಡಿಸು ಅದಕ್ಕೆ ವಿಶೇಷ ಜ್ಞಾನ ಬೇಕಿಲ್ಲ ಎಂದಿದ್ದಳು ವಿದ್ಯ. ಇಂಪಾದ ಸಂಗೀತ ಕಿವಿಗೆ ಬೀಳುತ್ತಲೆ, ತಲೆ (ಒಳಗೆ ಖಾಲಿ ಇದ್ದರೂ) ಸ್ವಯಂಚಾಲಿತವಾಗಿ ಚಲಿಸುವ ಕಾರಣ ಅದನ್ನು ಸುಮ್ಮಿನಿರಿಸಲು ಆಗುವುದೇ ಇಲ್ಲ. ಕೈಯಿಯೂ ತಾನೇನು ಕಮ್ಮಿ ಇಲ್ಲ ಎಂದು ತಾಳ ಹಾಕುತ್ತದೆ.

ಮೊನ್ನೆ ಹೀಗೆ ಕಾರ್ಯಕ್ರಮ ಪೂರ್ತಿ ಕೂರಲಾಗಲಿಲ್ಲ ಎಂಬ ಅತೃಪ್ತಿಯಿಂದಲೂ, ಸುಮಾರು ಎರಡು ಗಂಟೆ ಸಂಗೀತ ಕೇಳಿದ ಸಂತೃಪ್ತಿಯಿಂದಲೂ ಎದ್ದು ಬರುವಾಗ ಲಘು ಸಂಗೀತ ಕ್ಲಾಸಿಗೆ ಸೇರಬೇಕು ಎಂದು ನೂರಾ ಐವತ್ತಮೂರನೆ ಬಾರಿಗೆ ಯೋಚಿಸಿದೆ. ಈ ಹಿಂದೆ ಸಂಗೀತ ಕ್ಲಾಸಿಗೆ ಸೇರಲು ಒಂದೆರಡು ಬಾರಿ ಯತ್ನಿಸಿ, ಅದೇನೋ ವಿಘ್ನಗಳು ಬಂದು ಸೋತಿದ್ದೇನೆ. ಬಾಯ್ಬಿಟ್ಟರೆ ನನ್ನದು ಗಾರ್ದಭ ಗಾಯನ. ಹೇಗಾದರೂ, ಗೀತೆಗಳನ್ನು ಹಾಡುವಷ್ಟಾದರೂ ಕಲಿತುಕೊಳ್ಳಬೇಕು ಎಂಬ ನನ್ನ ಆಸೆ, ಜಾರಿಯಾಗದೆ ನನೆಗುದಿಗೆ ಬಿದ್ದಿರುವ ಇತರ ಎಷ್ಟೋ ಇಂತಹ ಯೋಜನೆಗಳ ಪಟ್ಟಿಗೆ ಸೇರಿದೆ.

ಗುರುವಾರ, ಆಗಸ್ಟ್ 21

ಪತ್ರೊಡೆಯ ಘಮಕ್ಕೆ ಒಸರುವ ಜೊಲ್ಲು

ಆಟಿ ತಿಂಗಳೆಂದರೆ, ಮಳೆಗಾಲದ ಉತ್ತುಂಗದ ಕಾಲ. ಆಟಿಗೆ ಆಟಿಯದ್ದೇ ವೈಶಿಷ್ಠ್ಯಗಳಿವೆ. ಆಟಿ ಕಷಾಯ, ಪತ್ರೊಡೆ, ಮದುರಂಗಿ ಇವುಗಳಲ್ಲಿ ಪ್ರಮುಖವಾಗಿದ್ದವು ನಂಗಂದು.

ಆಟಿ ತಿಂಗಳಲ್ಲಿ ಮರದಲ್ಲಿ ಮೊಳೆಯುವ ಮರಕೆಸುವಿನಲ್ಲಿ ಔಷಧೀಯ ಗುಣಗಳಿರುತ್ತವೆಯಂತೆ. ಅದನ್ನ ಪತ್ರೊಡೆ ಮಾಡಿ ತಿಂದರೆ ಆರೋಗ್ಯಕ್ಕೊಳ್ಳೆಯದು ಎಂಬುದು ನಂಬುಗೆ. ಆದರೆ ನಾನೇನೂ ಅಂತಹ ಹೆಲ್ತ್‌ಕಾನ್ಷಿಯಸ್‌ನಿಂದಾಗಿ ಪತ್ರೊಡೆ ಬಯಸುತ್ತಿದ್ದುದಲ್ಲ. ಖಂಡಿತಕ್ಕೂ ಅಮ್ಮ ಮಾಡುತ್ತಿದ್ದ ಪತ್ರೊಡೆಯ ರುಚಿಯೇ ನನ್ನನ್ನು ಆತುರಗಾರಳಾಗಿ ಮಾಡುತ್ತಿತ್ತು. ಬೆಟ್ಟದಿಂದ ಪತ್ರೊಡೆಯ ಸೊಪ್ಪು ತರುವಲ್ಲಿಂದ ಹಿಡಿದು ಅದನ್ನು ತಿನ್ನುವ ತನಕದ ಚಡಪಡಿಕೆ ಯಾರಿಗೆ ಬೇಕು. ಮಿಕ್ಸಿಪಿಕ್ಸಿ - ಗ್ರೈಂಡರ್‌ಗಳೆಲ್ಲ ಆಗ ಇರಲಿಲ್ಲ. ಏನಿದ್ದರೂ ಅದರ ತಯ್ಯಾರಿಗಿರುವ ನೂರೆಂಟು ರಾಮಾಯಣಗಳನ್ನು ದಾಟಿಯೇ ಅದು ತಯ್ಯಾರಾಗಬೇಕು. ನಾಳೆ ಬೆಳಗ್ಗಿನ ತಿಂಡಿ ಪತ್ರೊಡೆ ಎಂಬುದೇ ನಮ್ಮ ನಿದ್ರೆಗೆಡಿಸುತ್ತಿತ್ತು. ಬೆಳಗಾದ ಮೇಲಂತೂ, ಆಯ್ತಾಹೋಯ್ತಾ ಅನ್ನುತ್ತಾ ಅಮ್ಮನನ್ನು ಅದೆಷ್ಟು ಪೀಡಿಸುತ್ತಿದ್ದೆನೋ, ಅದೆಷ್ಟು ಬಾರಿ ಒಳಗೆ ಹೊರಗೆ ಹೋಗುತ್ತಿದ್ದೇನೋ... ಪತ್ರೊಡೆ ತಯಾರಿ ಕೊನೆಯ ಹಂತಕ್ಕೆ ತಲುಪುತ್ತಿರುವಂತೆ ಅದು ಸೂಸುತ್ತಿದ್ದ ಘಮಕ್ಕೆ ಬಾಯೊಳಕ್ಕೆ ಉತ್ಪತ್ತಿಯಾಗುತ್ತಿದ್ದ ಜೊಲ್ಲನ್ನು ನುಂಗಿದಷ್ಟೂ ಮತ್ತೂಮತ್ತೂ ಒಸರುತ್ತಿತ್ತು!

ತಟ್ಟೆಯಲ್ಲಿಯೋ ಅಥವಾ ಬಾಳೆ ಎಲೆಯಲ್ಲಿಯೂ ಹಾಕಿದ ಪತ್ರೊಡೆಯೊಮ್ಮೆ ಕೈಗೆ ಸಿಗುವತನಕದ ಹಪಾಪಪಿ, ಅಯ್ಯೋ ರಾಮಾ.... ಬಿಸಿ ಆರುವಷ್ಟೂ ಕಾಯುವ ವ್ಯವಧಾನ ಇರುತ್ತಿರಲಿಲ್ಲ. ಗಬಗಬ ತಿಂದು ಮುಗಿಸಿ ಇನ್ನೊಂದು ಸುತ್ತಿನ ಪತ್ರೊಡೆಗಾಗುವ ವೇಳೆ ಆತುರ ಕೊಂಚ ಕಡಿಮೆಯಾಗುತ್ತಿತ್ತು. ಇದು ನನಗೀಗ ಅರ್ಥಶಾಸ್ತ್ರದ ತುಷ್ಟೀಗುಣವನ್ನು ನೆನಪಿಸುತ್ತದೆ. ಪತ್ರೊಡೆಯ ಆಸೆಯೆಂಬುದು ಬೇಡಿಕೆ. ಅದರ ಗಬಗಬ ತಿನ್ನಾಟ ಪೂರೈಕೆ. ಹೀಗೆ ಪೂರೈಕೆಯಾದಾಗ ಗಬಗಬವೆಂಬ ಆತುರದ ತುಷ್ಟೀಗುಣ ಕಡಿಮೆಯಾಗುತ್ತಿತ್ತು(when supply increases utility decreases).

ಹೀಗೆಯೇ ಆತುರ ಹುಟ್ಟಿಸುತ್ತಿದ್ದದು, ಆಟಿತಿಂಗಳಲ್ಲಿ ಕೈಗೆ ಮದುರಂಗಿ ಇಡಬೇಕು ಎಂಬ ಇನ್ನೊಂದು ರೂಲ್ಸು. ಮದುರಂಗಿ ಗಿಡದಲ್ಲಿಯೂ ಆಟಿತಿಂಗಳಲ್ಲಿ ಔಷಧೀಯ ಗುಣಗಳು ಸಂಗ್ರಹವಾಗುತ್ತದಂತೆ. ಹಾಗಾಗಿ ಆಟಿ ತಿಂಗಳಲ್ಲಿ ಮದುರಂಗಿ ಇರಿಸಿಕೊಂಡರೆ ದೇಹಕ್ಕೆ ತಂಪು. ಆಟಿಯಲ್ಲಿ ಒಟ್ಟು ಮೂರು ಬಾರಿ ಮದರಂಗಿ ಇಡಬೇಕು. ಕೃಷ್ಣಾಷ್ಟಮಿಯ ದಿನವಂತೂ ಇದು ಕಂಪಲ್ಸರಿ. ನಮ್ಮ ಮನೆಯಲ್ಲಿ ಮದುರಂಗಿ ಇಲ್ಲದ ಕಾಲದಲ್ಲಿ ನಮ್ಮ ನೆರೆಮನೆಯವರಾದ (ನಮ್ಮೂರಲ್ಲಿ ನೆರೆಮನೆಯೆಂದರೆ ಪಕ್ಕದ ಕಾಂಪೋಂಡು ಅಲ್ಲ; ಕನಿಷ್ಠ ಒಂದು ಫರ್ಲಾಂಗು ನಡೆಯಬೇಕು) ತ್ಯಾಪಂಣ್ಣತ್ತೆಯ ಮನೆಗೆ ಹೋಗಿ ಅಲ್ಲಿಂದ ಮದುರಂಗಿ ಸೊಪ್ಪು ಸಂಗ್ರಹಿಸಬೇಕು. ನಮ್ಮಪ್ಪನಿಗೆ ಇದೆಲ್ಲ ತುಂಬ ರೇಜಿಗೆ ಹುಟ್ಟಿಸುವ ಸಂಗತಿಗಳು. ಹಾಗಾಗಿ ನಮ್ಮದೇನಿದ್ದರೂ ಕದ್ದುಕದ್ದು ಈ ವಹಿವಾಟು.

ಅಲ್ಲಿ ತ್ಯಾಂಪಣ್ಣತ್ತೆ (ಅವರ ಹೆಸರೇನೆಂದು ನಂಗೆ ಗೊತ್ತಿಲ್ಲ. ಅವರು ತ್ಯಾಂಪಣ್ಣ ಮಾವನ ಪತ್ನಿಯಾದ ಕಾರಣ ತ್ಯಾಂಪಣ್ಣತ್ತೆ) ಮನೆಗೆ ಹೋದರೆ ನಂಗೆ ಇನ್ನೊಂದು ಟೆನ್ಷನ್. ನಾಲ್ಕೈದರ ಹರೆಯದ ಗುಬ್ಬಚ್ಚಿ ಮರಿಯಂತಿದ್ದ ನನ್ನನ್ನು ಅವರು, ತನ್ನ ಇಪ್ಪತ್ತು - ಇಪ್ಪತ್ತೈದರ ಹರೆಯದ ಮಗನಿಗೆ ಹೆಣ್ತಿ ಎಂದೆನ್ನುತ್ತಾ ತಮಾಷೆ ಮಾಡುತ್ತಿದ್ದರು. "ಹಾಂ, ಶಾನಿ ಮದುರಂಗಿಗೆ ಬಂದಿದ್ದಾಳೆ. ಇಂದು ನನ್ನ ಮಗನ ದಿಬ್ಬಣ.. ನಾಳೆ ಮದುವೆ..." ಹೀಗೆ ಸಾಗುತ್ತಿತ್ತು ಅವರ ಮಾತುಗಳು. ಆತನೂ ಅಲ್ಲೇ ಪಕ್ಕದಲ್ಲಿ ನಿಂತು ಅಮ್ಮನಿಗೆ ಸಾಥ್ ನೀಡುತ್ತಿದ್ದ. ಅವರೆಲ್ಲ ಸೇರಿ ನನ್ನನ್ನು ಮದುವೆ ಮಾಡಿಯೇ ಬಿಟ್ಟರೆನೋ ಎಂಬ ಭಯ ನನ್ನನ್ನು ಕಾಡುತ್ತಿತ್ತು. ಹೀಗಾಗಿ ಆ ಮನೆಗೆ ತೆರಳಲು ಒಂದು ನಮೂನೆಯ ಅಂಜಿಕೆ ಕಾಡುತ್ತಿತ್ತಾದರೂ, ಅಂಗೈಯಲ್ಲಿ ಮೂಡಲಿರುವ ಚಿತ್ತಾರದ ಭ್ರಮೆಯ ಹೊಳಪು ನನ್ನೊಳಗೆ ಭಂಡ ಧೈರ್ಯ ತುಂಬುತ್ತಿತ್ತು. ಪುಟ್ಟ ಹುಡುಗಿಯಾಗಿದ್ದ ನನಗೆ ತಿಂಡಿಕೊಟ್ಟು, ನನ್ನ ಎತ್ತರಕ್ಕೆ ನಿಲುಕದ ಗಿಡದಿಂದ ಮದುರಂಗಿ ಎಲೆ ಸಂಗ್ರಹಿಸಲೂ ಆ ಅತ್ತೆ ತಮಾಷೆಯ ಮಾತಿನೊಂದಿಗೆ ಸಹಾಯ ಮಾಡುತ್ತಿದ್ದರು.

ಎಲೆ ತಂದನಂತರದ್ದು ಅಕ್ಕನವರ ಜವಾಬ್ದಾರಿ. ಅದು ಕೆಂಪಾಗಲು ಎಲೆಗೆ ಏನೇನೋ ಮಿಶ್ರಮಾಡುತ್ತಿದ್ದರು. ನನಗೆ ನೆನಪಿರುವಂತೆ, ವೀಳ್ಯದೆಲೆ, ಎಳೆಯ ಅಡಿಕೆ, ಸ್ವಲ್ಪ ಸುಣ್ಣ, ಕೆಂಪಿರುವೆ ಎಲ್ಲವನ್ನೂ ಸೇರಿಸಿ ರುಬ್ಬಿ ತಯಾರಿಸಿದ ಪೇಸ್ಟನ್ನು ಇದಕ್ಕೆಂದೇ ವಿಶೇಷವಾಗಿ ತಯಾರಿಸಿದ (ಅದು ಅಣ್ಣನ ಕೆಲಸವಾಗಿತ್ತು) ತೆಂಗಿನ ಗರಿಯ ಕಡ್ಡಿಯ ಸಹಾಯದಿಂದ ಬೇಕಷ್ಟೆ ಪ್ರಮಾಣವನ್ನು ಬಳಸಿಕೊಳ್ಳುತ್ತಾ ಚಿತ್ರ ಬಿಡಿಸಲಾಗುತ್ತಿತ್ತು.

ರಾತ್ರಿ ಊಟದ ಬಳಿಕ ಅಂಗೈಗೆ ಮದುರಂಗಿ ಹಚ್ಚುವ ಪ್ರೋಗ್ರಾಂ. ಅಕ್ಕನವರೆಲ್ಲ ಚಿತ್ತಾರ ಬಿಡಿಸಿಕೊಳ್ಳುವ ವಿಚಾರದಲ್ಲಿ ಸ್ವಾಲಂಬಿಗಳು. ಆದರೆ ನನಗಾತ್ತಿರಲಿಲ್ಲವೇ. ಹಾಗಾಗಿ ನಾನೇನಿದ್ದರೂ ಅವರ ಮರ್ಜಿಗೆ ಒಳಗಾಗಬೇಕಿತ್ತು. "ಹುಂ. ಕೈ ಹಾಗಿಡು, ಹೀಗಿಡು, ಮುದ್ದೆ ಮಾಡಬೇಡ" ಎಂಬೆಲ್ಲ ದರ್ಪದ ಆದೇಶಗಳನ್ನು ಕುರಿಯಂತೆ ಪಾಲಿಸುತ್ತಿದ್ದೆ. ಈ ಯಾವ ಕಿರಿಕ್ ಇಲ್ಲದೆ ಅಮ್ಮ ನನ್ನ ಪುಟ್ಟ ಅಂಗೈಗೆ ಮದುರಂಗಿ ಇಡಲು ಸಿದ್ಧವಾಗಿಯೇ ಇರುತ್ತಿದ್ದರು. ಆದರೆ ಅವರದ್ದು ಹಳೆಯ ಕಾಲದ ಫೇಶನ್. ಬರಿ ಚುಕ್ಕೆಚುಕ್ಕೆ ಮಾತ್ರ. ಹಾಗಾಗಿ ನಂಗದು ಒಗ್ಗುತ್ತಿರಲಿಲ್ಲ. ಉಳಿದ ಟೈಮಲ್ಲಿ ಕೊನೆಯವಳೆಂಬ ಕಾರಣದಿಂದ ನಂಗೆ ಇದ್ದ ವಿಶೇಷ ಸವಲತ್ತನ್ನು ಬಳಸಿಕೊಂಡು ಅಕ್ಕಗಳಿಗೆ ರೋಪ್ ಹಾಕುತ್ತಿದ್ದರೂ, ಇಂಥಹ ಸಂದರ್ಭದಲ್ಲಿ ಮಾತ್ರ ಬಹಳ ವಿಧೇಯ ತಂಗಿಯಾಗಿರುತ್ತಿದ್ದೆ.

ಅಣ್ಣನದ್ದು ಏನಿದ್ದರೂ ಅತ್ತೋಸು ಎಲೆ(ಅಶ್ವತ್ತದೆಲೆ) ಆಕಾರದ ಪರ್ಮನೆಂಟ್ ಡಿಸೈನ್. ಅದಕ್ಕೆ ಹಾರ್ಟ್‌ಶೇಪ್ ಅನ್ನಬೇಕು ಎಂಬುದು ಆಗ ತಿಳಿದಿರಲಿಲ್ಲ. ಮಿಕ್ಕಂತೆ ಅಕ್ಕನವರ ಕೈಗಳಲ್ಲಿ ತರಾವರಿ ಹೂವಿನ ಚಿತ್ರಗಳು ಮೂಡಿಬರುತ್ತಿದ್ದವು.

ಮದುರಂಗಿ ಹೆಚ್ಚುಹೊತ್ತು ಕೈಲಿರಿಸಿಕೊಂಡು ಅಂಗೈಯನ್ನು ಸಾಧ್ಯವಾದಷ್ಟು ಕೆಂಪಾಗಿಸಿಕೊಳ್ಳಬೇಕು ಎಂಬುದು ನನ್ನ ಪ್ರಯತ್ನ. ಆದರೆ ಎಳಸು ಕೈಯಲ್ಲಿ ಗುಳ್ಳೆಗಿಳ್ಳೆ ಎದ್ದೀತು ಎಂಬದು ಅಮ್ಮನ ಕಾಳಜಿ. ಹಾಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಬೇಗ ಕೈ ತೊಳೆದು ಸ್ವಲ್ಪ ಕೆಂಪಿಗೆ ತೃಪ್ತಿಪಟ್ಟುಕೊಳ್ಳಬೇಕಿತ್ತು ನಾನು. ಆದರೆ ಇದಕ್ಕೆ ಅಕ್ಕನವರ ವ್ಯಾಖ್ಯಾನ ಬೇರೇಯೇ. ನಂಜು ಸ್ವಭಾವದ ಕೈಗೆ ಕೆಂಪು ಹತ್ತುವುದಿಲ್ಲ ಎಂದು ನನ್ನನ್ನು ಹಂಗಿಸುತ್ತಾ ಹೊಸ ಆವಿಷ್ಕಾರ ಮಾಡಿದವರಂತೆ ಮೆರೆಯುತ್ತಿದ್ದರು.

ಅದೇನಿದ್ದರೂ ದೇಹದ ಉಷ್ಣತೆಯನ್ನು ಅವಲಂಬಿಸಿದೆ ಎಂದು ಗೊತ್ತಿದ್ದಿರದ ನಾನು ಸ್ವಾಮಿ ದೇವರೇ(ಯಾವ ದೇವರೆಂದು ನೆನಪಾಗುತ್ತಿಲ್ಲ ಈಗ) ನನ್ನನ್ನು ನಂಜಿನ ಹುಡುಗಿಯಾಗಿ ಮಾಡಬೇಡ ಎಂದು ಆಟಿಯ ಮದುರಂಗಿ ಪ್ರೋಗ್ರಾಮ್ ದಿವಸ ಅದೆಷ್ಟು ಬಾರಿ ದೇವರನ್ನು ಬೇಡಿಕೊಳ್ಳುತ್ತಿದ್ದೆನೋ.... ಆ ದೇವರಿಗೇ ಗೊತ್ತು!

ಬುಧವಾರ, ಆಗಸ್ಟ್ 20

ಸ್ವರ್ಗಕ್ಕೇ ಕಿಚ್ಚುಬಿದ್ದರೂ ನಮಗೇನಂತೆ ಚಿಂತೆ?

ಜಡಿಮಳೆ ಸುರಿದಿರಲು,
ಬೆಚ್ಚನೆ ಕಂಬಳಿ ಇರಲು,
ಕಚೇರಿಗೆ ರಜೆ ಇರಲು,
ಸ್ವರ್ಗಕ್ಕೇ ಕಿಚ್ಚುಬಿದ್ದರೂ
ನನಗೇನಂತೆ ಚಿಂತೆ?

ಹೀಗಂತ ನಾನೊಮ್ಮೆ ಹಿಂದೆ ಹೇಳಿದ್ದೆ ಮತ್ತು ಬರೆದಿದ್ದೆ. ಆಗ ನನ್ನ ಸಹದ್ಯೋಗಿ ಮಿತ್ರನೊಬ್ಬ ಹೌ ಈಸ್ ಮಾನ್ಸೂನ್ ಎಂದು ಕೇಳಿದ್ದ. ಇದಕ್ಕೆ ಈ ಮೇಲಿನಂತೆ ತುಂಟ ಉತ್ತರ ನೀಡಿದ್ದೆ. ಈಗ ನಾನೂರಿರುವ ಊರಲ್ಲಿ ನಮ್ಮೂರಿನಂತಹ ಮಳೆ ಇಲ್ಲದ ಕಾರಣ ಮನಸ್ಸು ನನ್ನೂರಿಗೆ ಹೋಗಿ ಮಳೆಯಲ್ಲಿ ತೋಯಬೇಕೆಂಬ ಹಠ ಹಿಡಿದರೂ, ಪರಿಸ್ಥಿತಿ ಅನುಕೂಲ ಕಲ್ಪಿಸುತ್ತಿಲ್ಲ. ಊರಿಂದ ಫೋನ್ ಬಂದಾಗೆಲ್ಲ ಮಳೆಮಳೆಮಳೆಮಳೆ ಶಬ್ದ ಕೇಳಿಕೇಳಿ ಆಟಿತಿಂಗಳ(ಆಷಾಡ ಮಾಸದ) ಮಳೆಯಾಸೆ ದಿಮಿಗುಟ್ಟುತ್ತಿದೆ.

ಮಳೆಗಾಲ ಬಂದಾಗೆಲ್ಲ, ನಮ್ಮೊಡನೆ ಯಾವತ್ತೂ ಅವಿನಾಭಾವ ಸಂಬಂಧ ಕಟ್ಟಿಕೊಂಡೇ ಇರುವ ಬಾಲ್ಯವೇ ಬಂದು ಧುತ್ತೆಂದು ನಿಲ್ಲುತ್ತದೆ. ಚಿಕ್ಕಂದಿನ ಮಳೆ ದಿನಗಳಲ್ಲಿ ಅಮ್ಮನ ಕಣ್ಣು ತಪ್ಪಿಸಿ ನೀರಲ್ಲಿ ಆಟವಾಡಿದ ದಿನಗಳ ಆ ಸವಿಸವಿ ನೆನಪನ್ನು ಮರೆಯಲುಂಟೇ. ಹಳ್ಳಿ ಶಾಲೆಗಳಲ್ಲಿ ಓದಿದ ನಾವುಗಳು ಸುರಿವ ಮಳೆಗೆ ಹೆಗಲಿಗೆ ಆತಿರಿಸಿದ ಕೊಡೆಯನ್ನು ತಿರುವುತ್ತಾ ರಸ್ತೆ ಬದಿಯಲ್ಲಿ ಹರಿವ ನೀರಿಗೆ ಅಭಿಮುಖವಾಗಿ ನಡೆಯುತ್ತ, ಚಪ್ಪಲಿಲ್ಲದ ಪುಟ್ಟ ಕಾಲುಗಳಲ್ಲಿ ನೀರು ಚಿಮುಕಿಸುತ್ತಾ, ಮಾಸ್ಟ್ರ ಭಯದ ನಡುವೆಯೂ ನೋಟ್ಸ್ ಪುಸ್ತಕ ಹರಿದು ದೋಣಿಕಟ್ಟಿ ತೇಲಿಬಿಡುತ್ತಾ ಮನಗೆ ಮರಳಲು ಮರೆಯುತ್ತಿದ್ದ ನೆನಪುಗಳು ಒದೆಯುತ್ತಾ ಪುಟಿಯುವಾಗ, ಮರಳಿ ಬಾ ಬಾಲ್ಯವೇ ಎಂಬ ತುಡಿತದೊಂದಿಗೆ; ಆಗಿನಂತೆ ಸುರಿವ ಜಡಿಮಳೆಗಳು ಅಪರೂಪವಾಗುತ್ತಿರುವ ಈ ವರ್ಷಗಳಲ್ಲಿ ಮರಳಿ ಬಾ ಓ ಮಳೆಯೇ ಎಂಬ ಕರೆಯೂ ತೀರಾ ಉತ್ಪ್ರೇಕ್ಷೆಯಾಗದು.

ಆ ದಿನಗಳಲ್ಲಿ ಮಳೆಗಾಲವೆಂದರೆ ಖುಷಿ. ಮಳೆ ನೀರಿನಲ್ಲಿ ನೆನೆಯುವುದೆಂದರೆ ಇನ್ನೂ ಖುಷಿ. ಕೊಡೆ ಮುರಿದು ಹೋಗಿದೆ ಎಂದರೆ ಇನ್ನಷ್ಟು ಖುಷಿ. ಮಳೆ ನೀರಿನಿಂದ ಹಾವಸೆಗಟ್ಟಿ ಪಾಚಿ ಹಿಡಿದು ಜಾರುವ ಜಾಗದಲ್ಲಿ ಕಾಲಿರಿಸಿ ಉದ್ದೇಶಪೂರ್ವಕವಾಗಿ ಬಿದ್ದು, ಬಿದ್ದಲ್ಲಿಗೇ ಅಮ್ಮನ ಕೈಯಿಂದ ಗುದ್ದಿಸಿಕೊಳ್ಳುವುದೆಂದರಂತೂ ಪರಮ ಖುಷಿ!

ಯಾಕೊತ್ತಾ, ಮಳೆನೀರಿಗೆ ನೆಂದು, ಬಿದ್ದು ಒದ್ದೆ ಮುದ್ದೆಯದ ನಂತರ, ಕಟ್ಟಿಗೆಯಬೆಂಕಿಯಿಂದ ಧಗಧಗಿಸುವ ಒಲೆಯಬುಡದಲ್ಲಿ ಕುಕ್ಕರು ಕಾಲಲ್ಲಿ ಕುಳಿತು ಅಂಗೈಯನ್ನು ಬೆಂಕಿಗೆ ಹಿಡಿದು ಕಾಯಿಸಿ ಮುಖ ತಲೆಗೆಲ್ಲಾ ಒತ್ತಿಕೊಳ್ಳುತ್ತಾ, ಅಮ್ಮ ಕೊಡುವ ಕರಿಕಾಫಿ ಕುಡಿಯುತ್ತಾ (ಕೆಲವೊಮ್ಮೆ ಸುಟ್ಟ ಗೇರುಬೀಜ, ಹಪ್ಪಳ, ಹಲಸಿನ ಬೀಜ ತಿನ್ನುತ್ತಾ) ಮೈಬೆಚ್ಚಾಗಾಗಿಸಿಕೊಳ್ಳುವ ಸಂಭ್ರಮ ಉಂಟಲ್ಲಾ; ಇದರ ಎದುರು ನೀವು ಸಾವಿರಾರು ರೂಪಾಯಿ ವಿನಿಯೋಗಿಸಿ ನೀಡುವ ಪಾರ್ಟಿಯೂ ವೇಸ್ಟೇ. ಸುಡುವ ಗೇರುಬೀಜ, ಹಲಸಿನ ಬೀಜಗಳಿಂದ ಹೊರಡುವ ಠಸ್‌ಪುಸ್ ಶಬ್ದ ದೊಡ್ಡ ಕೌತುಕ. ಇದರ ಸೊನೆ ನಮ್ಮ ಮುಖಕ್ಕೇನಾದರೂ ಹಾರೀತು ಎಂಬ ಅಮ್ಮನ ಆತಂಕ. ದೂರ ಹೋಗೆಂದರೂ ಮತ್ತೆಮತ್ತೆ ಅಲ್ಲಿಯೇ ಅಡರಿಕೊಳ್ಳುವುದಕ್ಕೆ ಮತ್ತೊಂದಷ್ಟು ಎಕ್ಸ್‌ಟ್ರಾ ಬಯ್ಗಳು.

ಮಲೆನಾಡ ಹಳ್ಳಿಗಳಲ್ಲಿ ಮಳೆಗಾಲದ ಕಥೆಯೇ ಬೇರೆ. ಮಳೆಗಾಲಕ್ಕೆಂದೇ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸುವುದು, ಹಪ್ಪಳ ಮಾಡಿಡುವುದು. ಮಳೆಗಾಲಕ್ಕೆ ಆಗುವಷ್ಟು ಅಷ್ಟೂ ಕಟ್ಟಿಗೆಯನ್ನು ಒಟ್ಟುಮಾಡುವುದು.. ಒಂದೇ.... ಎರಡೇ.. ಈಗೆಲ್ಲಿದೆ ಆ ಸಂಭ್ರಮ. ಹಳ್ಳಿಗಳೂ ಪೇಟೀಕರಣಗೊಂಡಿದೆ. ಸೂರ್ಯನ ಮುಖವೇ ಕಾಣದಂತೆ ನಿರಂತರ ಎರಡ್ಮೂರು ದಿನಗಳ ಕಾಲ ಸುರಿಯುತ್ತಿದ್ದ ಜಡಿಮಳೆಯೂ ಕಾಣೆಯಾಗುತ್ತಿದೆ.

ಇಂಥ ಮಳೆಗಳ ವೇಳೆ ಖಂಡಿತವಾಗಿ ಶಾಲೆಗೆ ರಜೆ ಸಿಕ್ಕುತ್ತಿತ್ತು. ಆಕಾಶಕ್ಕೆ ತೂತು ಬಿದ್ದಿದೆ ಎಂದು ನಾವೆಲ್ಲ ಅಂಗಿ ಕುಣಿಸಿಕೊಂಡು, ಮನೆದಾರಿ ಹಿಡಿಯುತ್ತಿದ್ದೆವು. ಶಾಲೆ ಬಿಟ್ಟಮೇಲೆ ಮಳೆಗಾಗಿ ರಜೆ ಸಿಕ್ಕುತ್ತಿರಲಿಲ್ವೇ. ಅದಕ್ಕಾಗಿ ಚೆನ್ನಾಗಿ ಸುರಿವ ಮಳೆಯಂದು ನಾನೇ ರಜೆಹಾಕಿ ದಪ್ಪಕಂಬಳಿ ಹೊದ್ದು ಗಡದ್ದಾಗಿ ನಿದ್ರಿಸುತ್ತಿದ್ದೆ. ನನ್ನ ಈ ಪ್ರೋಗ್ರಾಮು ನನ್ನ ಸ್ನೇಹಿತೆಯರಿಗೆ ವಿಚಿತ್ರವಾಗಿರುತ್ತಿತ್ತು. ಮಳೆಯ ಸವಿ ಅನುಭವಿಸಲು ತಿಳಿಯದ ದ್ರಾಬೆಗಳಾ, ನೀವೇ ಮೂರ್ಖೆತಿಗಳು ಎಂದು ನಾನವರನ್ನು ದಬಾಯಿಸುತ್ತಿದ್ದೆ.

ಮಳೆಯನಾಡಿನಲ್ಲಿ ಹುಟ್ಟಿ ಬೆಳೆದವರು, ಮಳೆಯ ಸೊಬಗನ್ನು ಉಂಡವರು, ಸವಿಯುವ ಮನಉಳ್ಳವರು, ವರುಣರಾಗದ ವೈಭವವನ್ನು ಸವಿಯದಿರಲಾರರು. ಸಿಡಿಲು ಮಿಂಚು ಬೇಡ, ರಭಸದ ಗಾಳಿ ದೂರವಿರಲಿ, ಬರಿಯ ಧೋ ಮಳೆಮಾತ್ರ ಸುರಿಯಲಿ ಎಂದು ಹಾರೈಸುವವರ ಸಂಖ್ಯೆ ದೊಡ್ಡದಿದೆ. ನೀವೇನಂತೀರಿ...?

(ಬರಹ ಊದ್ದವಾಗುತ್ತದೆಂದು ಆಟಿ ವಿಶೇಷವನ್ನು ಪ್ರತ್ಯೇಕವಾಗಿ ಬರೆದಿರುವೆ)

ಭಾನುವಾರ, ಜುಲೈ 13

ಕಪಾಳಕ್ಕೆ ಬಿಗಿಸ್ಕೊಂಡು ಹಲ್ಲುದುರಿಸ್ಕೋ

ಡೆಂಟಿಸ್ಟ್ ಬಳಿ ಹೋಗಬೇಕು ಎನ್ನುತ್ತಾ ಒಂದು ಗಂಟೆ ಪರ್ಮಿಷನ್ ಕೇಳ್ತಿದ್ದೆ. ಅದಕ್ಯಾಕೆ ಡೆಂಟಿಸ್ಟ್ ಬಳಿ ಹೋಗ್ತಿಯಾ, ಹೇಗಿದ್ದ್ರೂ ಜಗಳಗಂಟಿ, ಯಾರ ಬಳಿಯಾದರೂ ಚೆನ್ನಾಗಿ ಜಗಳಮಾಡಿ ಕಪಾಳಕ್ಕೆ ಬಿಗಿಸ್ಕೊಂಡು ಹಲ್ಲುದುರಿಸ್ಕೋ ಅಂತ ಸಲಹೆ ಕೊಟ್ಟರು ನನ್ನ ಸಹೋದ್ಯೋಗಿ ಮಿತ್ರ. ಅವರ ಸಲಹೆ ಚೆನ್ನಾಗೇ ಇತ್ತಾದರೂ, ಹಲ್ಲೂ, ದವಡೆಯೂ ನನ್ನದಾದ ಕಾರಣ ನೋವನ್ನು(ಹಲ್ಲು) ಒಳಗಿರಿಸಿಕೊಂಡು, ನಗುವನ್ನು ಮಾತ್ರ ಹೊರಸೂಸಿದೆ.


ಎತ್ತ ಕಡೆಯಿಂದ ಎಣಿಸಿದರೂ ನನ್ನ ಬಾಯೊಳಗೆ 32 ಹಲ್ಲುಗಳು ಲೆಕ್ಕಕ್ಕೇ ಸಿಗುವುದಿಲ್ಲ. ಹೀಗಿರುವಾಗ ಇರೋ ಹಲ್ಲುಗಳನ್ನು ಉದುರಿಸಿಕೊಳ್ಳೋ ಬದಲಿಗೆ, ಹೇಗಾದರೂ ಮಾಡಿ ಉಳಿಸಿಕೊಳ್ಳೋ ಅನಿವಾರ್ಯತೆಗೆ ಬಿದ್ದಿದ್ದೇನೆ. ಇಷ್ಟಕ್ಕೂ, ನಾನೊಮ್ಮೆ ಬಾಯ್ಬಿಟ್ಟರೆ ಸಾಕು. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಲವು ಮಾಹಿತಿ ಸಿಕ್ಕೀತು. ಒಂಥರಾ ಡೆಂಟಲ್ ಎಕ್ಸಿಬಿಷನ್ ಇದ್ದಂತೆ. ಸಿಮೆಂಟ್ ಫಿಲ್ಲಿಂಗು, ಸಿಲ್ವರ್ ಫಿಲ್ಲಿಂಗು, ಕಾಂಪೊಸಿಟ್ ಫಿಲ್ಲಿಂಗ್, ರೂಟ್ ಕೆನಾಲ್, ಬ್ರಿಜ್ಜು, ಕ್ರೌನ್, ಕ್ಯಾಪ್ ಮುಂತಾದ ವೈವಿಧ್ಯತೆಯಿಂದ ಕೂಡಿದ್ದು ಏಕ ಬಾಯೊಳಗೆ ಅನೇಕ ವಿಷಯಗಳು ಪ್ರತಿಷ್ಠಾಪಿಸಲ್ಪಟ್ಟಿವೆ.


ಇಷ್ಟೆಲ್ಲ ಇದ್ದರೂ, ದಿನಕ್ಕೊಂದು ಕ್ಲೋವು ಜಗಿಯುತ್ತಿದ್ದರೂ, ನಿರಂತರ ಇಪ್ಪತ್ತನಾಲ್ಕುಗಂಟೆ ಕೀಟಾಣುಗಳ ಜತೆಗೆ ಹೋರಾಡುವ ಟೂಥ್ ಪೇಸ್ಟ್ ಬಳಸುತ್ತಿದ್ದರೂ ನಾನು ದಂತಕ್ಷಯದಿಂದ ಸಂಪೂರ್ಣ ಮುಕ್ತಳಾಗಲಿಲ್ಲ!


ನನಗೆ ತಿಳುವಳಿಕೆ ಮೂಡಿದಂದಿನಿಂದ ಈ ಹಲ್ಲುಗಳು ನೀಡಿದಷ್ಟು ತೊಂದರೆ ಇನ್ಯಾರೂ ಕೊಟ್ಟಿರಲಿಕ್ಕಿಲ್ಲ. ತುಂಬ ಚಿಕ್ಕವಳಿದ್ದಾಗ, ಅಂಗಿಯ ಕಿಸೆಯಲ್ಲಿದ್ದ ಪುಳಿಂಕಟೆ(ಹುರಿದ ಹುಣಸೆ ಬೀಜ)ಯನ್ನು ಬಲಹಾಕಿ ಜಗಿದು ಇಬ್ಭಾಗವಾಗಿಸಲು ಯತ್ನಿಸಿದ್ದೆ. ಪುಳಿಂಕಟೆ ಹುಡಿಯಾಗಲಿಲ್ಲ, ಬದಲಿಗೆ ಅಲ್ಲಾಡುತ್ತಿದ್ದ ಹಲ್ಲು ಕಿತ್ತು ಕೈಗೆ ಬಂದಿತ್ತು. ಹಾಲುಹಲ್ಲುಗಳೆಲ್ಲ ಉದುರಿದಾಗ ನಾವೆಲ್ಲ ನಮ್ಮಮ್ಮನ ಡೈರೆಕ್ಷನ್‌ನಂತೆ, ಉದುರಿದ ಹಲ್ಲಿಗೆ ಸೆಗಣಿ ಮೆತ್ತಿ, 'ಅಜ್ಜಿಜ್ಜ್ಯೇ.... ನನ್ನ ಹಳೆ ಹಲ್ಲು ತಕೋ; ನಿನ್ನ ಹೊಸ ಹಲ್ಲುಕೊಡು' ಎಂದು ಕಾಣದ ಅಜ್ಜಿಯನ್ನು ರಿಕ್ವೆಸ್ಟ್ ಮಾಡುತ್ತಾ, ಕಿತ್ತ ಹಲ್ಲುಗಳನ್ನು ಕಲ್ಲಿನಡಿಗೋ ಅಥವಾ ಮನೆಯ ಮಾಡಿಗೋ ಎಸೆಯುತ್ತಿದ್ದೆವು. ನಮ್ಮ ಈ ವಿನಂತಿಯನ್ನು ಮನ್ನಿಸಿದ ಮಾಯಗಾತಿ ಅಜ್ಜಿಯೇ ನಮಗೆ ಹೊಸ ಹಲ್ಲುಗಳನ್ನು ದಯಪಾಲಿಸುತ್ತಾಳೆ ಎಂದು ನಂಬಿದ್ದೆವು ಕೂಡಾ.


ಆಮೇಲೆ ನಾನು ದುಡಿಯಲು ಆರಂಭಿಸಿದ ಬಳಿಕ ನನ್ನ ದುಡಿಮೆಯಲ್ಲಿ ಬಾಯಿಗೆ(ಹಲ್ಲಿಗೆ) ದೊಡ್ಡ ಮೊತ್ತವನ್ನೇ ಹಾಕಿದ್ದೇನೆ. ಡೆಂಟಿಸ್ಟ್‌ ಬಳಿಗೆ ತೆರಳಿ ಆ..... ಎಂಬುದಾಗಿ ಬಾಯ್ದೆರೆದು ಗಂಟೆಗಟ್ಟಲೆ ಕುಳಿತು, ಮರುದಿನ ಈ... ಎನ್ನಾಲಾಗದೆ ಒದ್ದಾಡಿದ್ದು ಉಂಟು. ಕಿರುಕುಳ ಕೊಡುವ ಒಂದು ಹಲ್ಲಿಗೆ ಸೇವೆ ನೀಡಿ ನೆಮ್ಮದಿಯ ಉಸಿರು ಬಿಡಬೇಕೆನ್ನುವಾಗಲೇ ಇನ್ನೊಂದು ಹಲ್ಲು ತನ್ನ ಇರವನ್ನು ಹೇಳಲಾರಂಭಿಸುತ್ತದೆ.


ಸುಮಾರು ಐದಾರು ವರ್ಷದ ಹಿಂದಿನ ಮಾತು. ಒಂದು ಹಲ್ಲಂತೂ ಭಾರೀ ತೊಂದರೆ ನೀಡುತ್ತಿತ್ತು. ಪದೇಪದೇ ಫಿಲ್ ಮಾಡ್ಸಿದ್ದರೂ, ಹೊರಟುಹೋಗುತ್ತಿತ್ತು. ಲಾಸ್ಟ್ ಹಲ್ಲಿಗೆ ಫಿಲ್ಲಿಂಗ್ ನಿಲ್ಲುವುದಿಲ್ಲ ಎಂದು ವೈದ್ಯರು ಹೇಳಿದಂತೆ ಮತ್ತೆಮತ್ತೆ ಎದ್ದು ಬರುತ್ತಿರುವ ಫಿಲ್ಲಿಂಗ್‌ನಿಂದ ಶಾಶ್ವತ ಮುಕ್ತಿಹೊಂದಲೆಂಬಂತೆ ಆ ಹಲ್ಲನ್ನು ಮುಗಿಸಿಯೇ ಬಿಡೋಣವೆಂದು ನಿರ್ಧರಿಸಿ ಕಣ್ಣಿಗೆ ಕಂಡ ಡೆಂಟಲ್ ಕ್ಲಿನಿಕ್ ಒಂದರೊಳಗೆ ನುಗ್ಗಿದೆ. ಕ್ಲಿನಿಕ್ ಹೆಸರು, ನನ್ನ ಫೇವರಿಟ್ ದೇವರಾದ ತಿರುಪತಿ ತಿಮ್ಮಪ್ಪನ ಇನ್ನೊಂದು ಹೆಸರು.


ವೈದ್ಯ ಮಹಾಶಯರು ಖಾಲಿ ಕುಳಿತಿದ್ದರು. ನನ್ನನ್ನು ಕಂಡವರೇ ದಡಬಡಿಸಿ ಎದ್ದು ಬಂದು ದಂತ ಛೇರೊಳಗೆ ಹುದುಗಿಸಿ, ಬಿಬ್ ಕಟ್ಟಿ ಬಾಯೊಳಗೆ ಲೈಟ್ ಬೀರುವಂತೆ ಅಡ್ಜಸ್ಟ್ ಮಾಡಿ ಆ... ಅನ್ನಲು ಹೇಳಿದರು, ನಾನು ಆ ಅಂದಿದ್ದೇ, ಅವರ ಬಳಿಯಿರುವ ಸಣ್ಣಸಣ್ಣ ಚಿಮುಟಗಳಂತಹ ಉಪಕರಣಗಳಿಂದ ಎಲ್ಲ ಹಲ್ಲುಗಳನ್ನು ಕುಟ್ಟಿ, ಒಕ್ಕಿ ನೋಡಿ ಎಕ್ಸೈಟ್ ಆದವರಂತೆ ಕ್ಯಾವಿಟಿ ಅಂದರು. ಅದಿರಲಿ, ನಂಗೆ ಕಡೆ ಹಲ್ಲು ತೆಗಿಸಬೇಕಿದೆ ಎಂದೆ. ಆದರೆ, ವೈದ್ಯರು ನನ್ನ ಕಡೆ ಹಲ್ಲಿನ ಮಾತನ್ನು ಕಡೆಗಣಿಸಿ, ನಂಗೆ ಅದುವರೆಗೆ ತಿಳಿದಿರದಿದ್ದ ಕಾಂಪೋಸಿಟ್ ಫಿಲ್ಲಿಂಗನ್ನು ವರ್ಣಿಸಿಯೇ ವರ್ಣಿಸಿದರು. ನಾಲ್ಕೈದು ಸಂದುಗೊಂದುಗಳಲ್ಲಿ ಕ್ಯಾವಿಟಿ ಇದ್ದುದರಿಂದ ಇದನ್ನೆಲ್ಲ ಫಿಲ್ ಮಾಡೋಣ. ಫಿಲ್ಲಿಂಗ್ ಗೊತ್ತೇ ಆಗೋದಿಲ್ಲ ಅಂತ ಬ್ರೇನ್‌ವಾಷ್ ಮಾಡಿದರು. ಒಂದು ಹಲ್ಲಿಗೆ ರೂ.350/- ದರ ನಿಗದಿಯೂ ಆಯಿತು.


ಸರಿ. ಆದ್ರೆ ಫಸ್ಟ್ ಕಡೇ ಹಲ್ಲು ತೆಗೀರಿ ಅಂತ ನಾನು; ಅದು ಕೊನೆಗೆ ತೆಗೆಯೋಣ, ಫಸ್ಟ್ ಫಿಲ್ಲಿಂಗ್ ಮಾಡೋಣ ಅಂತ ಅವರು. ಹಲ್ಲಿನದ್ದೇ ಬಣ್ಣದ ಕಾಂಪೋಸಿಟ್ಟನ್ನು ಹಲ್ಲುಗಳಿಗೆಲ್ಲ ಮೆತ್ತಿ ನನ್ನ ದವಡೆ ಹಲ್ಲುಗಳು ಕೊಂಚ ಉಬ್ಬಿ ಬಸಿರು ಹೊತ್ತು ನಿಂತಂತೆ ಕಾಣಲಾರಂಭಿಸಿತು. ಪ್ರತೀ ಸಿಟ್ಟಿಂಗಲ್ಲೂ ನಾನು ಕಡೇ ಹಲ್ಲೂ... ಅಂತ ರಾಗ ತೆಗೆದರೆ, ಆಯ್ತು ಮೇಡಂ, ಎಲ್ಲ ಫಿಲ್ಲಿಂಗ್ ಆಗಲಿ, ಕೊನೆಗೆ ತೆಗೆಯೋಣ, ನಿಮ್ಗೆ ಪೇಯ್ನ್ ಇದ್ದರೆ ಕಷ್ಟ ಅಂತ ಸಮಜಾಯಿಷಿ ನೀಡಿದರು. ಕೊನೆಗೂ ಇಷ್ಟು ಹಲ್ಲುಗಳಿಗೆ ಕಾಂಪೊಸಿಟ್ ಮೆತ್ತಿಸಿಕೊಂಡಿದ್ದಕ್ಕೆ, ಅದೊಂದು ಹಲ್ಲನ್ನು ಫ್ರೀಯಾಗೆ ಕಿತ್ತರು. (ಫೀಸ್ ಚುಕ್ತಾ ಮಾಡಿದಾಗ ತಿರುಪತಿಗೆ ಹೋಗಿ ಬಂದ ಅನುಭವವಾಯ್ತು) ಇದು ಲೈಫ್ ಟೈಮ್ ಗ್ಯಾರಂಟಿ. ಇನ್ನು ನೀವಿರುವ ತನಕ ಹಲ್ಲಿನ ಸಮಸ್ಯೆ ಇರದು ಎಂಬ ಭರವಸೆಯೊಂದಿಗೆ ಬೀಳ್ಕೋಟ್ಟರು.


ನನಗಿನ್ನು ಹಲ್ಲು ನೋವಿನ ಬಾಧೆ ಇಲ್ಲವೆಂದು ಹಲ್ಲುಕಿತ್ತ ನೋವನ್ನೂ ಮರೆತು ಮನೆಗೆ ತೆರಳಿದೆ. ಆದರೆ ಎರಡ್ಮೂರು ದಿನ ಕಳೆದರೂ ಹಲ್ಲು ಕಿತ್ತ ನೋವು ಮುಗಿಯಲೇ ಇಲ್ಲ. ಪುನಃ ವೈದ್ಯರನ್ನು ಕಂಡರೂ, "ಒಂದೆರಡು ದಿನ ಪೇಯ್ನ್ ಇರುತ್ತೆ. ಫಸ್ ಆಗೋದು ಕಾಮನ್" ಅಂದು ಸಾಗಹಾಕಿದರು. ನಾಲ್ಕೈದು ದಿನದ ಬಳಿಕ ನಾನೇ ಮಾಡಿದ ಕ್ಯಾಬೇಜ್ ಪಲ್ಯದೊಂದಿಗೆ ಊಟಮಾಡುತ್ತಿದ್ದೆ. ಎಲುಬಿನ ತುಣುಕೊಂದು ಸಿಕ್ಕಂತಾಯಿತು. ಅರೆ, ಕ್ಯಾಬೇಜಿನಲ್ಲಿ ಎಲುಬಾಂತ ಪರೀಕ್ಷಿಸಿದರೆ, ಹಲ್ಲಿನ ತುಂಡು! ಕಿತ್ತ ಹಲ್ಲಿನ ಪಳಿಯುಳಿಕೆಯದು.


ಅದು ಹ್ಯಾಗೆ ಫಿಲ್ಲಿಂಗ್ ಮಾಡಿದ್ದರೋ, ಒಂದೇ ವರ್ಷಕ್ಕೆ ಅಷ್ಟೂ ಹಲ್ಲುಗಳಲ್ಲಿ ಯಾವುದೋ ಒಂದು ನೋಯಲಾರಂಭಿಸಿತು. ಮುಖವಿಡೀ ಸಿಡಿಯುತ್ತದೆಯೇ ವಿನಹ ಯಾವ ಹಲ್ಲೆಂದು ಗೊತ್ತಾಗುತ್ತಿಲ್ಲ. ಇನ್ನೊಂದು ದಂತವೈದ್ಯರ ಬಳಿ ಹೋಗಿ ಆಂ....... ಅಂದೆ. ಎಕ್ಸರೇ ಮಾಡಿದ ಬಳಿಕ ಕಾಂಪೊಸಿಟ್ ಫಿಲ್ಲಿಂಗ್ ಒಳಗೆ ಫಸ್ ಆಗಿದೆ, 'ಅವನೆಂಥಾ ವೈದ್ಯ' ಅಂತ ಮೊದಲಿನ ವೈದ್ಯರಿಗೆ ಬೈಯ್ದರು. ಆಂ... ಎಂದು ಬಿಟ್ಟಿದ್ದ ಬಾಯಿ ಅಲ್ಲಾಡಿಸಲಾಗದ ಪರಿಸ್ಥಿತಿಯದ್ದ ಕಾರಣ ಪ್ರತಿಕ್ರಿಯಿಸಲು ನನಗಾಗಲಿಲ್ಲ. ಅದೇ ಹಲ್ಲನ್ನು ಓಪನ್ ಮಾಡಿ, ರೂಟ್ ಕೆನಾಲ್ ಮಾಡಿ ಕ್ರೌನ್ ತೊಡಿಸಿ ಚಂದ ಮಾಡಿ ಕಳುಹಿಸಿದರು.

ಈಗ ಇನ್ಯಾವುದೊ ಒಂದು ಕಾಂಪೊಸಿಟ್ ನೋಯಲಾರಂಭಿಸಿದೆ. ಅಂತೂ ಈ 'ಹುಳುಕಿ'ನಿಂದ ಸಂಪೂರ್ಣ ಮುಕ್ತಿ ಎಂಬುದು ಇಲ್ಲ ಅನಿಸುತ್ತೆ!!!

ಶುಕ್ರವಾರ, ಜುಲೈ 11

ನಾನು ಕಿಡ್ನಾಪ್ ಆಗಿಲ್ವಂತೆ

ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ......... ನಾನು ಅಪಹರಣಕ್ಕೀಡಾಗಿದ್ದೇನೆ ಎಂದು ತಿಳ್ಕೊಂಡಿದ್ದ. ಹಾಗಾಗಿ ಬ್ಲಾಗ್ಲೋಕಕ್ಕೆ ಭೇಟಿ ನೀಡಲು ಆಗಲೇಇಲ್ಲ. ನಿನ್ನೆ ನನ್ನ ಸ್ನೇಹಿತೆ, ಅಪಹರಣವೂ ಇಲ್ಲ ಮಣ್ಣಾಂಗಟ್ಟಿಯೂ ಇಲ್ಲ, ಗುಂಡುಕಲ್ಲಿನ ಹಾಗಿದ್ದೀಯಾ ಸೋಂಬೇರಿ ಎಂದೊಂದು ಒದ್ದಾಗ ಭ್ರಮೆಯಿಂದ ಹೊರಬಿದ್ದೆ. ನನ್ನ ಈ ಹಿಂದಿನ ಪೋಸ್ಟ್‌ಗೆ ನಿಮ್ಮೆಲ್ಲರ ಪ್ರೀತಿಯ ಕಮೆಂಟಿಗೆ ಪ್ರತಿಕ್ರಿಯಿಸದಷ್ಟು ಸೂಕ್ಕು ಅಂತ ಮಾತ್ರ ತಿಳ್ಕೋಬೇಡಿ. ಪ್ಲೀಸ್.

ಸಹ ಬ್ಲಾಗಿಗರಾಗಿರುವ ಸುನಾಥ ಅವರು ಹೀಗೆ ಕಮೆಂಟಿದ್ದರು. "ಹೋಗೀ ಹೋಗೀ ಆ ಅನ್ವೇಷಿಗಳ ಕಡೆಯಿಂದ ಕಲ್ತುಕೊಂಡಿರೇನ್ರಿ?ಅಂದ ಮ್ಯಾಲ, ನೀವು ಎಷ್ಟು ಖರೇ ಬರೀತೀರಿ ತಿಳಧಂಗಾತು. (ನನಗೂ ಅವರೇ ಗುರುಗಳು)"

ಯಾಕ್ರೀ ಸುನಾಥರೇ, ಹೋಗೀ ಹೋಗಿ ಆ ಆನ್ವೇಷಿಗಳ ಕಡೆಯಿಂದ ಕಲ್ತುಕೊಂಡ್ರಾ ಅಂತ ಕೇಳ್ತೀರಾ? ಅವರು ಎಷ್ಟು ದೋಡ್ಡ ಅಜ್ಞಾನಿಗಳು ಅಂತ ಗೊತ್ತೇನ್ರಿ? 'ಬೋರು ಹೊಡೆಸದ ಬೋರ' ಎಂಬ ಬಿದಿರನ್ನು ಅವರಿಗೆ ನೀಡಬೇಕು ಎಂಬುಗಾಗಿ ಅವರ ಅಭಿನಾಮಿಗಳ ಏಕ ಸದಸ್ಯಾ ಸಂಘದ ಸರ್ವ ಸದಸ್ಯರೂ ನಿರ್ನಾಮ ಮಾಡಿದ್ದೇವೆ. ನಿಮಗೂ ಅವರೇ ಗುರುಗಳು ಅಂದ ಮೇಲೆ ನೀವೂ ಬುರುಡೆ ಮಾಸ್ಟ್ರೇ ಇರಬೇಕು. ಏನಂತೀರಿ?

ಆಮೆಲೆ ನನ್ನ ಪ್ರಥಮ ಬ್ಲಾಗೆಳತಿ ನೀಲಗಿರಿಯವರು, ಹೀಗಂದಿದ್ದರು. "1000 ಹಿಟ್ಟು ತಿಂದಿದ್ದಕ್ಕೆ ಅಭಿನಂದನೆಗಳು ಶಾನಿಯವರೇ. ನಾನೂ ದಟ್ಸ್ ಕನ್ನಡದಿಂದ ನಿಮ್ಮ ಬ್ಲಾಗು ಹುಡುಕಿದವಳೇ! ಆದರೆ ನಿಮ್ಮ ಗುರುಗಳು ಅನ್ವೇಷಿಗಳು ಅಂತ ಇವತ್ತೇ ಗೊತ್ತಾಗಿದ್ದು. ನನಗೂ ಬ್ಲಾಗಿಗರ ಪರಿಚಯವಾದದ್ದು ಬೊ-ರ ದಿಂದಲೇ. ಆದರೆ ಗುರುಗಳು ಮಾತ್ರ 3ಶ್ರೀಗಳು :)"

ನೀಲಗಿರಿಯವರೇ ನಿಮಗೊಂದು ಗುಟ್ಟು ಗೊತ್ತಾ? ನೀವೇ ನನ್ನ ಮೊದಲ ಬ್ಲಾಗೆಳತಿ! ನನ್ನ ಗುರುಗಳು ಅನ್ವೇಷಿಗಳು ಅಂತ ಹೇಳಿಕೊಳ್ಳಲು ನಂಗಂತೂ ಹೆಮ್ಮೆ. ಆದರೆ ನಾನವರಿಗೆ ಎಮ್ಮೆಯೋ ಗೊತ್ತಿಲ್ಲ :)

ಇನ್ನು ನನ್ನ ಮೇಸ್ಟ್ರು ಅಸತ್ಯ ಅನ್ವೇಷಿಯವರ ಪ್ರತಿಕ್ರಿಯೆ ಈ ಕೆಳಗಿನಂತಿತ್ತು.(ಅವಮಾನ ನಷ್ಟ ಕ್ಲೇಮು ಮಾಡಲು ಎಲ್ಲಿ ಅವಕಾಶ ಸಿಗುತ್ತೆ ಅಂತ ಕಾಯ್ತಾ ಕೂತಿರೋವಾಗ ನಿಮ್ಮ ಈ ಪೋಸ್ಟ್ ಸಿಕ್ಕಿತು.

ನೀವು ಹೀಗೆಲ್ಲಾ ಸುಖಾಸುಮ್ಮನೆ ನಮಗೆ ಕ್ರೆಡಿಟ್ಟು ಕಾರ್ಡು ಕೊಟ್ಟು ಕಳುಹಿಸುವುದು ನೋಡುತ್ತಿದ್ದರೆ, ಚೆನ್ನಾಗಿಯೇ ನಿದ್ದೆ ಮಾಡುತ್ತಿರುವ ನಮ್ಮ ನಿದ್ದೆಗೆಡಿಸಲು ಈ ಕ್ರೆಡಿಟ್ಟುಕಾರ್ಡಿನ ಸಾಲವನ್ನೇ ಬಳಸುತ್ತೀರೆಂಬುದು ಪತ್ತೆಯಾಗಿದೆ.

ಹೀಗಾಗಿ ಖಂಡಿತಾ ನಮ್ಮ ಕ್ರೆಡಿಟ್ಟುಕಾರ್ಡು ಸಾಲ ತೀರಿಸುವ ನಿಟ್ಟಿನಲ್ಲಿ ನಮಗೆ ಈ ಅವಮಾನ ನಷ್ಟ ಮೊಕದ್ದಮೆ ಪೂರಕವಾಗುತ್ತದೆ. ಎಷ್ಟು ಬೇಕಾದರೂ ಅವಮಾನ ನಷ್ಟ ಮಾಡಿಕೊಳ್ಳಲು ಸಿದ್ಧ. ಆದರೆ ಕ್ರೆಡಿಟ್ ಕಾರ್ಡು ಸಾಲ ಮಾತ್ರ ತೀರಲೇ ಬೇಕು...)

ಅಲ್ಲ ಗುರುಗಳೇ,ನಾವೆಲ್ಲ ನಿದ್ದೆ ಬರದೇ ಹೊರಳಾಡುತ್ತಾ, ಮಂಚದಿಂದ ಉರುಳುರುಳಿ ಬೀಳುತ್ತಿರುವಾಗ, ನೀವು ಗಡದ್ದಾಗಿ ನಿದ್ದೆ ಹೊಡೆದರೆ ನಮ್ಮ ಹೊಟ್ಟೆ ಉರಿಯದಿರುತ್ತಾ? ಅದಕ್ಕೆ ಕ್ರೆಡಿಟ್ಟು ಕಾರ್ಡು ಸಾಲ. ನಿಮ್ಮ ಅವಮಾನ ನಷ್ಟಭರ್ತಿ ಮಾಡಲೂ ನೀವು ನಿಮ್ಮ ಕ್ರೆಡಿಟ್ ಕಾರ್ಡನ್ನೇ ನಮಗೆ ಧಾರೆ ಎರೆಯುತ್ತೀರೆಂದು ತಿಳಿದು ಸಂತೋಷಗೊಂಡಿದ್ದೇವೆ.

ಯಾವಾಗಲೂ ಪ್ರೋತ್ಸಾಹ ನೀಡುವ ಪ್ರಶಾಂತ್ ಏನಾದರೂ ಕಾರಣ ಹುಡುಕಿ ನಿಮ್ಮ ಬ್ಲಾಗ್ಮನೆಗೆ ಬರುವಂತೆ ಮಾಡ್ತೀರಾ ಅಂದಿದ್ರು. ಏನ್ಮಾಡ್ಲೀರೀ... ಏನಾದರೂ ಮಾಡುತಿರು ತ(ತಿ)ಮ್ಮಾ ಅಂತ ತಿಳಿದೋರು ಹೇಳಿದ್ದಾರಂತೆ. ಹಾಗಾಗಿ ಬರೆಯುತ್ತಾ ಇರಬೇಕು ಎಂಬ ತುಡಿತ. ಆದರೆ, ನಾವು ಬಯಸಿದಂಗೆ ಸಮಯ ಸಂದರ್ಭಗಳು ಒದಗಿ ಬರುತ್ತಿಲ್ಲ. ಮಧ್ಯೆ ಒಂದಿಷ್ಟು ಉದಾಶೀನದ ಮಿಳಿತ. ಹೀಗೆ ನಿಮ್ಗೆಲ್ಲಾ ಮತ್ತೆ ಮಿಕ್ಕೆಲ್ಲ ಭೇಟಿಗರಿಗೆ ಥ್ಯಾಂಕ್ಸ್ ಹೇಳಿ ಹೋಗೋಣ ಅಂತ ಬಂದೆ. ಹಲ್ಲುನೋವಿನ ಕಥೆ ಹೇಳ್ಕೋಬೇಕು. ಸದ್ಯವೇ ಸಿಗೋಣ.

ಇನ್ನೊಂದು ವಿಷ್ಯಾ, ಮತ್ತೊಮ್ಮೆ ಇಲ್ಲಿ ದಟ್ಸ್ ಕನ್ನಡ ಪ್ರಸ್ತಾಪಿಸಬೇಕು. ದಟ್ಸ್ ಕನ್ನಡದವರು ನನ್ನ ಬ್ಲಾಗಿನ ಕೊಂಡಿಯನ್ನು ವನ್ ಇಂಡಿಯಾ ಬ್ಲಾಗುಗಳ ಪಟ್ಟಿಗೆ ಸೇರಿಸಿದ್ದಾರೆ. ಹಾಗಾಗಿ ಈಗ ಅಲ್ಲಿಂದಲೂ ವಿಸಿಟಿಗರು ಬರುತ್ತಿದ್ದಾರೆ. ಅವ್ರಿಗೂ ನಾನು ಆಭಾರಿ.

ಗುರುವಾರ, ಜೂನ್ 12

ಬ್ಲಾಗ್ತಾಯಿಗೆ ಬ್ಲಾಗ್ಮುದ್ದು!

ಮೊನ್ನೆ ಮೊನ್ನೆ ನನ್ನ ಬ್ಲಾಗುರು ಅಸತ್ಯ ಅನ್ವೇಷಿಯವರು 50 ಸಾವಿರ ಹಿಟ್ಟುತಿಂದ ಕುರಿತು ವರದಿಯಾಗಿತ್ತಲ್ಲಾ... ಹಾಗೇ... ನಾನು ನನ್ನ ಹಿಟ್ಟುಗಳ ಮೇಲೆ ಕಣ್ಣಾಡಿಸುತ್ತಿದ್ದರೆ ಏನಾಶ್ಚರ್ಯ....? 50 ಸಾವಿರ ಹಿಟ್ಟುಗಳಿಲ್ಲ। ಆದರೆ ಸಾವಿರ ಹಿಟ್ಟುಗಳು ದಾಟಿವೆ! ಸಂಭ್ರಮಾಚರಣೆಗೆ ಯೋಗ್ಯತಾನೆ.

ಒಂದು ರೀತಿಯ ಜಡಹಿಡಿದಂತೆಯೇ ಇರುವ ನಂಗೆ ಉದಾಸೀನ ಸ್ವಲ್ಪ ಹೆಚ್ಚು। ಹುಟ್ಟಾ 'ಉದಾಸೀನಿ' ಎಂದರೂ ತಪ್ಪಾಗಲಾರದು. ಹಾಗಾಗಿ ಅಫ್‌ಡೇಶನ್ ಡಿಸೀಪ್ಲೀನ್ ಇಟ್ಟುಕೊಂಡಿಲ್ಲ. ಇದಕ್ಕೆ ಪುರ್ಸೋತ್ತಿಲ್ಲ ಎಂಬ ಕಾರಣವೂ ಇದೆ. ಆಚೆ(2006) ನವೆಂಬರಿನಿಂದಲೂ ಬ್ಲಾಗೊಂದನ್ನು ಸೃಷ್ಟಿಸಬೇಕೆಂಬ ಇರಾದೆ ಹುಟ್ಟಿಕೊಂಡಿತ್ತಾದರೂ, ಅದು ಕಾರ್ಯರೂಪಕ್ಕೆ ಬಂದಿದ್ದು ಕಳೆದ(2007) ನವೆಂಬರಿನಲ್ಲಿ.

ಕಂಪ್ಯೂಟರ್ ಇಲ್ಲಿಟ್ರೇಟ್ ಆಗಿರುವ ನಾನೂ ಥೇಟ್ ಕಂಪ್ಯೂಟರಿನಂತೆ(ಹೇಳಿದಷ್ಟೆ ಮಾಡೋ ಜಾಯಮಾನ)। (ಅ)ಮಾನ್ಯ ಅಸತ್ಯ ಅನ್ವೇಷಿಯವರ ಬೆನ್ನು ಬಿದ್ದು, ನಂಗೂ ಬ್ಲಾಗ್ ಬೇಕೆಂದು ರಚ್ಚೆ ಹಿಡಿಯುತ್ತಾ, ಅದು ಹ್ಯಾಗೆಂದು ಹೇಳಿಕೊಡಿ ಎಂದು ಅವರ (ಇಲ್ಲದ) ತಲೆಯನ್ನು ತಿಂದಿದ್ದೆ. ಅದಕ್ಕೇನು ಆನೆ-ಕುದುರೆ ಬೇಕಿಲ್ಲ ಎಂದ ಅವರು, ಕಳೆದ ನವೆಂಬರ್‌ನ ಒಂದಿನ ಗೋಧೂಳಿ ಸಮಯದಲ್ಲಿ ಕರೆದು ಬ್ಲಾಗ್ ಸೃಷ್ಟಿಯ ಮಂತ್ರ ಪಠಿಸಿದರು.

ಜೀ ಮೇಲ್ ಅಕೌಂಟ್ ಆರಂಭದಿಂದ ಹಿಡಿದು ಬ್ಲಾಗೀಗ ಯಾವ ರೂಪದಲ್ಲಿ ಬಿತ್ತರವಾಗುತ್ತಿದೆಯೋ ಅಲ್ಲಿತಂಕ ಅವರದ್ದೇ ಬಾಯ್ವಾಡ। ಕಂಪ್ಯೂಟರ್ ಮುಂದೆ ಕುಳಿತಿದ್ದ ನಾನು ಥೇಟ್ ಕಂಪ್ಯೂಟರ್ ಥರಾನೆ ಅವರು ಹೇಳಿದಂತೆಯೇ ಗುಂಡಿಗಳನ್ನು ಅದುಮುತ್ತಾ, ಕೀಲಿಗಳನ್ನು ಕುಟ್ಟುತ್ತಾ ನನ್ನ ಬ್ಲಾಗ್ ಕಟ್ಟಿ ಒಡ್ಡೋಲಗ ಮಾಡಿದ್ದೆ. ಬಳಿಕ ಬರಹಕ್ಕೆ, ಪ್ಲಾನೆಟ್ ಕನ್ನಡಕ್ಕೆ ಲಿಂಕಿಸುವ ಕುರಿತೂ ಅವರೇ ಹೇಳಿಕೊಟ್ಟಿದ್ದರು. ಅದು ಬಿಡಿ, ಈ ಬ್ಲಾಗ್ ಭೇಟಿಗರ ಸಂಖ್ಯೆಯ ಲೆಕ್ಕ ಹಾಗುವ ಕುರಿತೂ ಅವರೇ ಹೇಳಿದ್ದು. ಇದೆಲ್ಲ ನಂಗೆ ಗೊತ್ತೇ ಇರಲಿಲ್ಲ. ಹಾಗೀಗ ನಾನು ಸಂಪೂರ್ಣ ಅವರ ಬ್ಲಾಗ್ರುಣದಲ್ಲೇ ಇರುವುದು ಅಂತ ಯಾವ ಮುಲಾಜೂ ಇಲ್ಲದೆ ಹೇಳಿಕೊಳ್ಳುವೆ.

ಏನು ಬರೆಯಲೀ ಎಂಬ ಸಮಸ್ಯೆ ನನ್ನನ್ನು ಕಾಡುವುದಿಲ್ಲವಾದರೂ, ಪಿರ್ಕಿಪಿರ್ಕಿ ಬರೆಯಬೇಕೆಂಬುದೇ ಆಸೆ। ಮೊನ್ನೆ ಮಾರ್ಚಿ ತಿಂಗಳಲ್ಲಿ ನಡೆದ ಕನ್ನಡ ಬ್ಲಾಗಿರ ಪ್ರಥಮ ಸಮ್ಮೇಳನ ಚೆನ್ನಾಗಾಯ್ತಂತೆ ಎಂಬುದಾಗಿ, ಸಮ್ಮೇಳನಕ್ಕೆ ಹೋಗದೆ ಇಲ್ಲೇ ಕುಳಿತು ಬರೆದಿದ್ದೆನಲ್ಲಾ, ಅದನ್ನು ದಟ್ಸ್ ಕನ್ನಡದವರು ಲಿಂಕಿಸಿದ್ದರು. ಆವಾಗ ಶಾನಿಯ ಡೆಸ್ಕಿಗೆ ತುಂಬ ವೀಕ್ಷಕರು ಬಂದಿದ್ದರು. ಹಿಟ್ಟುಗಳ ಸಂಖ್ಯೆ ನಂಗೇ ಅಚ್ಚರಿ ಅನ್ನೋ ರೀತಿ ಏರಿತ್ತು. ಆ ಬಳಿಕ ಕೆಂಡಸಂಪಿಗೆಯ ದಿನದ ಬ್ಲಾಗಂಗಳದಲ್ಲಿ ಪರಿಚಯಿಸುತ್ತಾ ಕಥೆ, ಕವನ ಎಲ್ಲಾ ಬರೆಯುತ್ತೇನೆಂದು ಆರೋಪಿಸಿದ್ದರು. ಆದಾದ ಬಳಿಕ ಹಿಟ್ಟಿಗರ ಸಂಖ್ಯೆಯಲ್ಲಿ ಮತ್ತೂ ಹೆಚ್ಚಳವಾಯಿತು. ಅಂದ ಹಾಗೆ ಅದೊಮ್ಮೆ ಹಿರಿಯ ಮಿತ್ರರೊಬ್ಬರು ಹಿಟ್ ಶಬ್ದ ಬಳಸಬೇಡ, ಅದು ಸೂಕ್ತಪದ ಅಲ್ಲ ಅಂತ ಬಯ್ದಿದ್ದರು. ಮತ್ತೇ...? ಅಂತ ತಿರುಗಿ ಪ್ರಶ್ನಿಸಿದ್ದಕ್ಕೆ, ವೀಕ್ಷಕರು ಅಂತ ಹೇಳಬಹುದು ಎಂಬ ಸಲಹೆ ಕೊಟ್ಟಿದ್ದಾರೆ. ಆದರೆ, ಬ್ಲಾಗ್ ಲೋಕದಲ್ಲಿ ಹರಿದಾಡುವ ಶಬ್ದಗಳಲ್ಲಿ 'ಹಿಟ್‌' ಎಂಬ ಶಬ್ದವೇ ಹಿಟ್ ಆಗಿರುವ ಕಾರಣ ಸದ್ಯ ನಾನೂ ಇಲ್ಲಿ ಅದನ್ನೇ ಬಳಸುತ್ತಿದ್ದೇನೆ.

ನಂಗೊತ್ತು ನನ್ನ ಬ್ಲಾಗ್ ಅಂಥಾ ಚೆಂದದ್ದೇನೂ ಅಲ್ಲ। ತುಂಬ ಕೊಚ್ಚಿಕೊಳ್ಳುವಂತೆಯೂ ಇಲ್ಲ. ಆದರೂ 'ಬ್ಲಾಗ್ತಾಯಿಗೆ, ಬ್ಲಾಗ್ಮುದ್ದು' ತಾನೆ. ಅದಿರಲಿ, ಇದೀಗ ನಂಗೂ ಬ್ಲಾಗೆಳೆಯರು, ಬ್ಲಾಗೆಳೆತಿಯರು ಇದ್ದಾರೆ ಎಂಬುದು ಖುಷಿ, ಖುಷಿ. ಮತ್ತೆ ಸಹಸ್ರಕ್ಕೂ ಮಿಕ್ಕು ಭೇಟಿಗರೂ ಬಂದು ಹೋಗಿರುವುದೂ ಮತ್ತೂ ಖುಷ್! ಇದೆಲ್ಲದರ ಕ್ರೆಡಿಟ್ಟೂ... ನನ್ನ ಬ್ಲಾಗುರುವಿಗೆ.

ಕೆಲವು ಸಹಬ್ಲಾಗಿಗರು ಅವರ ಪಟ್ಟಿಯಲ್ಲಿ ನನ್ನ ಬ್ಲಾಗನ್ನು ಲಿಂಕಿಸಿಕೊಂಡಿದ್ದಾರೆ. ಮತ್ತೆ ಕೆಲವರು ಕಮೆಂಟಿಸುತ್ತಾ, ಮೇಲ್ ಮಾಡುತ್ತಾ ಪ್ರೋತ್ಸಾಹಿಸಿದ್ದಾರೆ; ಪ್ರೋತ್ಸಾಹಿಸುತ್ತಿದ್ದಾರೆ. ಇವೆಲ್ಲವೂ ನಂಗೊಂದು ಬ್ಲಾಖುಷಿ ತಂದಿಟ್ಟಿದೆ. ಬಂದ, ಬಂದು ಹೋದ, ಮತ್ತೆ ಬರುತ್ತಿರುವ, ಮತ್ತು ಇನ್ನು ಬರಲಿರುವ ಎಲ್ಲರಿಗೂ ನಮೋಃ ನಮಃ

ಸೋಮವಾರ, ಜೂನ್ 2

ಮಾಟಮಾಡಿಯಾದರೂ ಅಧಿಕಾರ ದಕ್ಕಿಸಿ ಕೊಟ್ಟೇನು

ಬಲ್ಲಿರೇನಯ್ಯಾ.........?

ಈ ಹರಿದ ಹಳ್ಳಿಗೆ ಯಾರೆಂದು ಕೇಳಿಬಲ್ಲಿರೀ......

ವೇದೇ ಡೌಗರೆಂದು ಕೇಳಿಬಲ್ಲೆವೂ........

ಬಂದಂತಹ ಕಾರ್ಯ......?

ಎಂತಹ ಕಾರ್ಯ.....? ನಮ್ಮಲ್ಲ ಕಾರ್ಯಗಳೂ ಬುಡಮೇಲಾದುವಲ್ಲವೇ.... ಯಾವ ಕಾರ್ಯ ಅನ್ನಲೀಗ....ಯಾವುದೇ ಕಾರ್ಯವೂ ಇಲ್ಲವೀಗ!!!!

ಎಂದಿನಂತೆ ಚುಮುಚುಮು ನಸುಕಿಗೆ ಎದ್ದು, ರಾಗಿಮುದ್ದೆ ಮೆದ್ದು, ಬೊಕ್ಕ ತಲೆಯನ್ನೊಮ್ಮೆ ಬಾಚಿ, ಬಿಳಿಯ ಉಡುಪನ್ನು ತೊಟ್ಟು, ಶಲ್ಯವನ್ನು ಮುಖ ಮುಚ್ಚುವಂತೆ ತಲೆಯ ಮೇಲೆ ಹೊದ್ದು, ಅದನ್ನು ಸ್ವಲ್ಪವೇ ಮೇಲೆತ್ತಿ ಇಣುಕಿ ನೋಡಿ ಯಾರಲ್ಲೀ..... ಎಂದು ಘರ್ಜಿಸಿದರು....

ಅಲ್ಲೇ ಸನಿಹದಲ್ಲಿ ಪೂಜೆ, ಹೋಮ, ಹವನ, ದೇವರ ಪ್ರಸಾದಗಳನ್ನು ಹಣೆ, ಕತ್ತು ಮತ್ತು ಸಂದುಸಂದುಗಳಿಗೆ ಜ್ಯೋತಿಷ್ಯರು ಹೇಳಿದಂತೆ ಮೆತ್ತಿಕೊಳ್ಳುವಲ್ಲಿ ನಿರತರಾಗಿದ್ದ ರಾವಣ್ಣ, ಯಾರೂ ಇಲ್ಲ ಪಿತಾಶ್ರೀ... ಎಂದು, ಎಂದಿನಂತೆ ಓಡಿ ಬರದೆ, ಅಲ್ಲಿಂದಲೇ ಅರುಹಿದರು।

ತನಯನೇ..... ಇದೇನಾಗಿ ಹೋಯ್ತು..... ನಮ್ಮ ಸಂಸಾರದ ರಾಜಕೀಯ.... ನಮ್ಮ ಪ್ರಜೆಗಳು ಹೀಗೂ ನಮಗೆ ಬುದ್ಧಿಕಲಿಸುವುದೇ.... ಛೇ...ಛೇ..... ನಮ್ಮ ಹಿಂಬಾಲಕರು, ಮುಂಬಾಲಕರು, ದೀವಟಿಗೆಯವರು... ಭಟ್ಟಂಗಿಗಳು ಎಲ್ಲ ಎಲ್ಲಿ... ಎಲ್ಲಿ ಹಾಳಾಗಿ ಹೋದರೂ... ಅದಿರಲಿ..... ನನ್ನ ಕುಮಾರ ಎಲ್ಲೀ.....?????

ಅಪ್ಪಾಜೀ..... ಕುಮಾರ ಆಚೆ ಮನೆಯಲ್ಲಿ ಕುಳಿತು ಹಿಡಿಹಿಡಿ ಶಾಪ ಹಾಕುತ್ತಿದ್ದಾನೆ..... "ಪಿತಾಶ್ರೀ ನನ್ನ ಮಾತುಕೇಳಲಿಲ್ಲ.... ಇಂದು ಮಿರಿಮಿರಿ ಮಿಂಚುತ್ತಿರುವ ಆ ರಾಡಿಯೂರಪ್ಪಗೆ, ಅಂದು ಛಾಪಾ ಕಾಗದದ ಶರಾಬತ್ತು ಕುಡಿಸಲು ಹೊರಡದಿರುತ್ತಿದ್ದರೆ, ಬೆನ್ನಿಗೆ ಚೂರಿ ಹಾಕದಿರುತ್ತಿದ್ದರೆ ಇಷ್ಟು ಬೇಗ ಚುನಾವಣೆಯೂ ಬರುತ್ತಿರಲಿಲ್ಲ॥ ನಾವು ಮಾಡಿದ ಕೆಲವು ಒಳ್ಳೆಕಾರ್ಯಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತಿರಲಿಲ್ಲ....." ಎಂದೆಲ್ಲಾ ಹಲುಬುತ್ತಾ... ಏಕಾಂಗಿಯಾಗಿ ವಟಗುಟ್ಟುತ್ತಿದ್ದಾನೆ ಅಪ್ಪಾಜೀ......

ಛೇ.....ಎಂಥಾ ಮೂರ್ಖನವನು. ಅವನ ಅದ್ದೂರಿಯ ಪಟ್ಟಾಭಿಷೇಕ ನೋಡದೆ ನಾನು ಸಾಯುವುದುಂಟೇ? ಕಳೆದ ಬಾರಿ ನಾನು ಕೋಪದ ನಾಟಕವಾಡಬೇಕಾಗಿ ಬಂದುದರಿಂದ ಆಕಾಶದೃಶ್ಯದ ಮೂಲಕವಷ್ಟೆ ಆತನ ಪಟ್ಟಾಭಿಷೇಕದ ಆ ಅದ್ಭುತ, ರಮಣೀಯ ಕ್ಷಣಗಳನ್ನು ನಮ್ಮ ಅಕ್ಷಿಗಳಲ್ಲಿ ತುಂಬಿಕೊಳ್ಳಬೇಕಾಯಿತು. ಕೊಂಚ ತಾಳ್ಮೆ ವಹಿಸಲೀ... ಕಂದಾ...... ನಾನಿಲ್ಲವೇ.... ಒಂದಿಷ್ಟು ಸಮಯ ಆತ ವಿಶ್ರಾಂತಿ ಪಡೆದು, ತನ್ನ ಇತರೇ ಕಾರ್ಯಗಳತ್ತ ಗಮನಹರಿಸಲೀ....... ಏನಿಲ್ಲವಾದರೆ ಮಾಟಮಾಡಿಯಾದರೂ ನಿಮಗಿಬ್ಬರಿಗೆ ಅಧಿಕಾರ ಧಕ್ಕಿಸಿ ಕೊಟ್ಟೇನು... ನಮ್ಮ ಪಟ್ಟದರಸಿ ಮಹಾರಾಣಿ ಚಿನ್ನಮ್ಮನನ್ನು ಬಲಬದಿಯಲ್ಲಿ ಕುಳ್ಳಿರಿಸಿಕೊಂಡು, ನನ್ನ ಕುಲಪುತ್ರನ ಪಟ್ಟಾಭಿಷೇಕವನ್ನು ಕಣ್ಣಲ್ಲಿ ತುಂಬಿಕೊಳ್ಳುವೆ. ಮಗನೇ... ಚಿಂತೆಬೇಡ.... ಚಿಂತೆ ಬೇಡ..... ಚಿಂತೆ ಬೇಡ.....
ಪುತ್ರನೇ..... ಯೂರೂ ಇತ್ತ ಕಡೆ ತಲೆಹಾಕಿಯೂ ಮಲಗಲು ಇಚ್ಛಿಸದ ಈ ಅಮಾವಾಸ್ಯೆಯ ಸಮಯದಲ್ಲೀ.... ಅದಾರು? ಅದಾರು ಅಲ್ಲಿ ಸುಳಿದಾಡುತ್ತಿರುವುದೂ...?

ಅಪ್ಪಾಜೀ...ಭಾಗವತರು। ಇಲ್ಲಿ ಬರಬೇಡಿ ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ನಮ್ಮ 'ಆಟ' ಸದ್ಯಕ್ಕಿಲ್ಲ ಅಂದರೂ ಹಲ್ಲುಕಿರಿಯುತ್ತಾ ಅಲ್ಲೇ ನಿಂತಿದ್ದಾರೆ....

ಏನೂ...? ಭಾಗವತರೇ...? ಅವರಿಗೆ ಇಲ್ಲೇನು ಕೆಲಸ? ತೊಲಗಲ್ಯಾಚೆ... ನಮಗೇನೂ ಈಗ ಒಡ್ಡೋಲಗದ ಇರಾದೆ ಇಲ್ಲ...
ಹೇಳಿದರೆ ಕೇಳುತ್ತಿಲ್ಲ ಪಿತಾಶ್ರೀ... ಒಂದಿಷ್ಟು ಅರ್ಥಗಾರಿಕೆಯೊಂದಿಗೆ ಸಾಗಹಾಕಿ...

ಹೂಂ... ಹೂಂ....

ಸ್ವಾಮೀ ವೇದೇ ಡೌಗರೇ..... ನಮ್ಮನ್ನು ಬಿಟ್ಟು ಅದ್ಯಾರು ಈ ಸಾಮ್ರಾಜ್ಯದ ಆಡಳಿತದ ಚುಕ್ಕಾಣಿಯನ್ನು, ಅದು ಹೇಗೆ ಹಿಡಿಯುತ್ತಾರೋ ನೋಡೇ ಬಿಡುತ್ತೇನೆ; ಈ ಬಾರಿಯೂ ಅರಸು ಆಯ್ಕೆಯ ಸೂತ್ರ ನಮ್ಮ ಕೈಯಲ್ಲೇ ಇರುತ್ತದೆ ಎಂದು ತೊಡೆತಟ್ಟಿ ಹೇಳಿದ ನೀವು ಮತ್ತು ನಿಮ್ಮ ಪಕ್ಷ ಮಣ್ಣುತಿಂದದ್ದಾದರೂ ಹೇಗೇ.....?

ಇಂಥಹ ಅಧಿಕ ಪ್ರಸಂಗದ ಮಾತುಗಳು ಬರುತ್ತವೆ ಎಂದೇ ನಿಮ್ಮಂತಹವರ ಬಳಿ ನಾವು ಮಾತಾಡಲಿಚ್ಚಿಸುವುದಿಲ್ಲ। ಮಣ್ಣುತಿಂದದ್ದು ಮಣ್ಣಾಂಗಟ್ಟಿ!! ಮಣ್ಣಿನ ಮಗನಾದ, ನಯವಿನಯವೇ ಮೂರ್ತಿವೆತ್ತಂತಿರುವ ನಮ್ಮ ಬಾಯಲ್ಲಿ ಅಂತಹ ಅಹಂಕಾರದ ಮಾತುಗಳು ಬರುವುದುಂಟೇ....? ಇದೆಲ್ಲವೂ ನಿಮ್ಮ ತುತ್ತೂರಿಯವರ ಅಪಪ್ರಚಾರದ ಫಲವಷ್ಟೆ. ನಿಮ್ಮಗಳ ಮುಸುಡಿಯನ್ನೂ ನೋಡಲು ನಾವು ಬಯಸುವುದಿಲ್ಲ....

ನಿಧಾನಾ.... ನಿಧಾನಾ.... ಡೌಗರೇ ನೀವು ಅಂದೊಮ್ಮೆ ಈ ಅಖಂಡ ಭರತಖಂಡದ ಸಾಮ್ರಾಟನಾಗಿ ಗದ್ದುಗೆ ಏರಿದಾಗ ಇದೇ ತುತ್ತೂರಿಯವರು ನಿಮ್ಮನ್ನು ವಾಚಾಮಗೋಚರ ಹೊಗಳಲಿಲ್ಲವೇ.....? ನಿಮ್ಮನ್ನು ಹೊಗಳುವ ಭರದಲ್ಲಿ 'ಡೌಗರ ಡೌಗ' ಎಂದೆಲ್ಲ ಬರೆದ ಕೈಗಳು, ಬಳಿಕದ ನಿಮ್ಮ ಗ್ರಾಮಪಂಚಾಯತ್ ಅಧ್ಯಕ್ಷ ಮಟ್ಟಕ್ಕಿಳಿದ ಕೊಳಕು ರಾಜಕೀಯ ನೋಡಿ ವಾಕರಿಸಿದ್ದಾರೆ....

ಭಾಗವತರೇ.... ಬಾಯಿಗೆ ಬಂದಂತೆ ವಟಗುಟ್ಟಬೇಡಿ.... ವಾಕರಿಗೆ ಬಂದವರು ವಾಂತಿ ಮಾಡಿಕೊಳ್ಳಲಿ ನಮಗೇನಿಲ್ಲ। ಆಗ ನಾವು ನೆರೆಯ ಬಾಂಗ್ಲಾದ ನದಿನೀರು ಸಮಸ್ಯೆಯನ್ನು ಸರಿಪಡಿಸಿದ್ದೆವು. ನಾವು ನರ್ಕಾಟಕದ ಸಾಮಂತರಾಗಿದ್ದವೇಳೆ ಇಂದು ಮೆರೆಯುತ್ತಿರುವ ಇದೇ ಕೋಮುವಾದಿಗಳು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಹುಟ್ಟುಹಾಕಿದ್ದ ಧ್ವಜಹಾರಿಸುವ ಸಮಸ್ಯೆಯನ್ನು ಪರಿಹರಿಸಿದ್ದೆವು.... ಇಂತೆಲ್ಲ ಒಳ್ಳೆ ಕೆಲಸಗಳನ್ನು ನಾವು ಮಾಡಿದ್ದೆವು.... ಅದನ್ನು ಹೇಳಿರುತ್ತೀರಿ ಅಷ್ಟೆ. ಅದರಲ್ಲಿ ಹೊಗಳಿಕೆ ಏನು ಬಂತು?

ಇರಲಿ.... ಹರದನ ಹಳ್ಳಿಯ ಸಾಮ್ರಾಟರೇ..... ಜಾತ್ಯತೀತವಾದಿಯಾಗಿರುವ ನೀವು, ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆದೆ ಎಂದು ಊರೀಡಿ ಸಾರುತ್ತಿದ್ದೀರಿ..... ಆದರೆ ರಾಜಕೀಯ ಬಲ್ಲವರು, ನಿಮ್ಮೆಲ್ಲ ನಡೆಗಳನ್ನು ಗಮನಿಸುವವರು ಬೇರೆಯದನ್ನೇ ಹೇಳುತ್ತಿದ್ದಾರಲ್ಲವೇ....?

ಏನು ಹೇಳತ್ತಿದ್ದಾರೆ ನಿಮ್ಮ ಕರ್ಮ....?

ಡೌಗರೇ... ಇದೇ, ಇದೇ, ನಿಮ್ಮ ಈ ದುರಹಂಕಾರ ಮತ್ತು ಅತಿ ಕೋಪ ಎಲ್ಲ ಕೆಡಿಸಿತು। ನಿಮ್ಮ ಸುಪುತ್ರ ಒಪ್ಪಿದಂತೆ ಆ ಕಮಲ ಮುಖಿಗಳಿಗೆ ಅಧಿಕಾರ ಬಿಟ್ಟುಕೊಡುತ್ತಿದ್ದರೆ ಇಂದು ಚುನಾವಣೆಯೂ ಬರುತ್ತಿರಲಿಲ್ಲ..... ಆ ಭಾಜಪಗೆ ಈ ನಮೂನೆಯ ಅನುಕಂಪ, ಬೆಂಬಲವೂ ಸಿಗುತ್ತಿರಲಿಲ್ಲ..... ಇದಕ್ಕೆಲ್ಲ ನೀವೇ ಕಾರಣ, ಕೋಮುವಾದಿಗಳೊಂದಿಗೆ ನಿಮ್ಮದು ಒಳಒಪ್ಪಂದ ಅನ್ನುತ್ತಾ ಕ್ಯಾಕರಿಸುತ್ತದ್ದಾರಲ್ಲಾ......

ಶಿವಶಿವಾ..... ಶಿವಶಿವಾ.... ಶಿವಶಿವಾ ನನ್ನ ಕಿವಿಗಳು ಇದೇನನ್ನು ಕೇಳುತ್ತಿವೆ.....? ಅದಕ್ಕೇ ಅನ್ನೋದು। ಉತ್ತಮರಿಗೆ ಇದು ಕಾಲವಲ್ಲ. ರಾಷ್ಟ್ರದ ಹಿತದೃಷ್ಟಿಯಿಂದ, ಪ್ರಜೆಗಳ ಹಿತದೃಷ್ಟಿಯಿಂದ ಮಾತ್ರ ನಾವು ಆ ಕೇಸರಿಯವರಿಗೆ ಅಧಿಕಾರ ನೀಡಲು ಒಪ್ಪಿರಲಿಲ್ಲ...... ನೋಡುತ್ತಿರಿ ಭಾಗವತರೆ...., ಫೀನಿಕ್ಸ್ ಎಂಬ ಹಕ್ಕಿಯ ಕಥೆ ಕೇಳಿರಬಹುದು ನೀವೂ.... ಬೂದಿಯಿಂದ ಮತ್ತೆ ಎದ್ದು ಬಂದ ಹಕ್ಕಿಯದು. ಆ ಹಕ್ಕಿಯಂತೆ ಮತ್ತೆ ಎದ್ದು ಬರಲು ನಾವು ಮತ್ತು ನಮ್ಮ ಮಕ್ಕಳು ಈಗ ಬೂದಿಯಲ್ಲಿ ಬಿದ್ದುಬಿದ್ದು ಹೊರಳಾಡುತ್ತಿದ್ದೇವೆ....

ಇರಲಿ ನಿಮಗೆ ಅಧಿಕಾರ ಸಿಗಲಿಲ್ಲವೆಂದು ಇಡಿಯ ರಾಜ್ಯಕ್ಕೆ ರಾಜ್ಯವೇ ಸಂತಸದಿಂದಿದೆ... ನೀವು ಎಲ್ಲೂ ಮೀಸೆ(ಇಲ್ಲದ) ತೂರಲಾಗದಂತೆ ಪ್ರಜೆ ಎಂಬ ಮಹಾಪ್ರಭು ತನ್ನ ಪರಮೋಚ್ಛ ಅಧಿಕಾರ ಚಲಾಯಿಸಿ ಷರಾ ಬರೆದಿದ್ದಾನೆ.....
ನೀವು ಮಣ್ಣು ಮುಕ್ಕಿಸಹೊರಟ ರಾಡಿಯೂರಪ್ಪರಿಗೆ ನ ಭೂತೋ... ಎಂಬಂತೆ ಅದ್ಧೂರಿಯ ಭಾರೀ ಸಭೆಯೊಂದಿಗೆ ಪಟ್ಟಾಭಿಷೇಕವಾಗಿದೆ.... ಇದನ್ನು ಕಂಡು ನಿಮಗೇನನ್ನಿಸಿತು.....?

ಇಂಥಾ ಪ್ರಶ್ನೆಗಳನ್ನು ಕೇಳುತ್ತಿರುವ ನಿಮ್ಮ ನಾಲಿಗೆ ಸೀದು ಹೋಗ...!!!! ನಮ್ಮ ಪುತ್ರ ಕುಮಾರಕಂಠೀರವನ ಪಟ್ಟಾಭಿಷೇಕವಾಗಬೇಕಿತ್ತು। ಅಂತಾದ್ದರಲ್ಲಿ ಆ ರಾಡಿಯೂರಪ್ಪನ ಮೆರೆದಾಟ ನೋಡಿದರೆ ಕರುಳು ಹಿಂಡಿದಂತಾಗುವುದಿಲ್ಲವೇ.... ಆ ದೃಶ್ಯವನ್ನು ನಮ್ಮ ಕಣ್ಣುಗಳು ನೋಡಿಯಾವಾದರೂ ಹ್ಯಾಗೆ....? ಅದಕ್ಕೇ ಅಲ್ಲವೇ ಮುಖಕಾಣದಂತೆ ತಲೆಮೇಲೆ ನಮ್ಮದೇ ಶಲ್ಯವನ್ನು ಹೊದ್ದು ಕುಳಿತಿರುವುದೂ..... ಅರ್ಥಗಾರಿಕೆ ಸಾಕೂ.... ಜಾಗಟೆ ಕೆಳಗಿಡಿ. ನನ್ನ ಮಕ್ಕಳಿಗೇ ಒಳಿತಾಗಲೀ... ಎನ್ನುತ್ತಾ ಒಡ್ಡೋಲಗಕ್ಕೆ ಮಂಗಳಹಾಡಿ....

ಅರ್ಥವಾಯಿತೂ..... ಅರ್ಥವಾಯಿತೂ..... ಮತ್ತೆಂದಾದರೂ ಒಡ್ಡೋಲಗ ಮಾಡೋಣವಂತೆ.... ಸರ್ವರಿಗೂ ಒಳಿತಾಗಲೀ...

ಮಂಗಳಂ!

ಶುಕ್ರವಾರ, ಮೇ 2

ಪತ್ರಬರಿ, ಪ್ಲೀಸ್

ಆಗಷ್ಟೆ ಸೈನ್‌ಇನ್‌ಆಗಿ ಗಡಿಬಿಡಿಯಲ್ಲಿ ಅದೇನೋ ಮಾಡುತ್ತಿದ್ದೆ. ನನ್ನ ಬಾಸ್, ಮಿತ್ರ, ಭ್ರಾತೃ, ಕೆಲವೊಮ್ಮೆ ಅಮ್ಮ, ಎಲ್ಲವೂ ಆಗಿರುವ ನನ್ನ ಊರಿಯನ್ ಸಹೋದ್ಯೋಗಿ, ವಿಜಯ ಕರ್ನಾಟಕದ ಪ್ರತಿಯೊಂದನ್ನು ತಂದು ನನ್ನ ಕೈಲಿಟ್ಟು, "ನೋಡಿ ನಿಮ್ಮ ಗೆಳತಿ ನಿಮ್ಮ ಬಗ್ಗೆ ಬರೆದಿದ್ದಾರೆ" ಎಂದರು. ದಿನದ ಹಿಂದೆ ಫೋನ್ ಮಾಡಿದ್ದಾಗ ಅವಳೂ ಸೂಚ್ಯವಾಗಿ ಇದನ್ನು ಹೇಳಿದ್ದಳು.

ಮಾಡುತ್ತಿದ್ದ ಕೆಲಸವನ್ನು ಅಲ್ಲಿಗೆ ಬಿಟ್ಟು, ಏನು ಬರೆದಿದ್ದಾಳೆಂಬ ಕುತೂಹಲದಿಂದ, ಗಬಕ್ಕನೆ ಪತ್ರಿಕೆಯನ್ನು ಬಿಡಿಸಿ ಅವಸರವಸರದಲ್ಲಿ ಎಲ್ಲಾ ಪುಟಗಳನ್ನು ಕೆದಕಿ, ಕೊನೆಗೂ ಆ ಬರಹದ ಮೇಲೆ ನನ್ನ ಕಣ್ಣು ಲ್ಯಾಂಡ್ ಆಯಿತು. ಹೀಗೆ ಬರೆದಿದ್ದಾಳೆ. ಪತ್ರಬರಿ, ಪ್ಲೀಸ್.... ಎಂಬುದು ತಲೆಬರಹ.

"ದೂರದಲ್ಲಿರುವ ಗೆಳತಿ ಇತ್ತೀಚೆಗೆ ಇದೊಂದು ವರಾತ ತೆಗೀತಾ ಇದ್ದಾಳೆ. ಮೊಬೈಲ್ ಮಾಡಿದಾಗೆಲ್ಲ, ಪತ್ರಬರೀ, ಪತ್ರಬರೀ ಅಂತ ಪ್ರಾಣ ತಿನ್ನುತ್ತಿರುತ್ತಾಳೆ. ಇ-ಮೇಲಾದರೂ ಮಾಡೋಣ ಎಂದರೆ, ಇ-ಮೇಲ್ ಬೇಡ. ಕಂಪ್ಯೂಟರ್ ನೋಡಿ ಸಾಕಾಗಿದೆ. ಪತ್ರ..... ಬಿಳಿಯ ಹಾಳೆಯಲ್ಲಿ ನಿನ್ನ ಉರುಟುರುಟು ಅಕ್ಷರ ನೋಡಬೇಕು ಅನ್ನಿಸುತ್ತಿದೆ ಅನ್ನುತ್ತಾಳೆ! ಈ ಬಾರಿ ಖಂಡಿತ ಬರಿತೇನೆ ಕಣೇ ಅನ್ನುತ್ತೇನೆ ನಾನು. ಎರಡು ವರ್ಷ ಆಯಿತು ಉದ್ಯೋಗಕ್ಕಾಗಿ ಅವಳು ಊರು ಬಿಟ್ಟು. ಅಲ್ಲಿಂದ ನಂತರ ಅವಳದ್ದು ಪ್ರತೀಬಾರಿ ಇದೇ ವರಾತ. ನನ್ನದು ಎಂದಿನ ಉತ್ತರ...." ಅಂತ ಶುರುವಿಕ್ಕಿಕೊಂಡ ಅವಳ ಬರಹ, ಪತ್ರ ಬರೆಯುವಾಗಿನ ಖುಷಿ, ಪತ್ರಕ್ಕಾಗಿ ಕಾತರ, ಕೈಸೇರುವಾಗಿನ ಬಿಸುಪು ಎಲ್ಲವನ್ನು ವಿವರಿಸಿ, ಪತ್ರಗಳ ಹಾರಾಟವನ್ನು ಮೊಬೈಲು, ಇ-ಮೇಲುಗಳು ತಿಂದು ಹಾಕಿವೆ ಎಂದು ಸಾಗಿತ್ತು.

ಅವಳು ಬರೆದದ್ದು ಸರಿ. ಪತ್ರಬರಿ ಎಂಬುದಾಗಿ ನಾನು ಹೇಳಿದ್ದು ಹೌದು. ನಾನು ಊರು ಬಿಡುವ ಮುನ್ನ ಅವಳು ಬೇಸರದಂತ ಮುಖ ಮಾಡಿದಾಗ, ಖಂಡಿತ ಪತ್ರ ಬರೀತೆನೆ; ನೀನೂ ಬರಿ ಅಂದಿದ್ದೆ. ನಾವೂ ಪತ್ರ ಸಂಕಲನವನ್ನು ಹೊರತರೋಣ ಎಂದು ಹೇಳಿ, ಕೃಷ್ಣಾನಂದ ಕಾಮತ್ ಹಾಗೂ ಜ್ಯೋತ್ಸ್ನಾ ಕಾಮತರ ನಡುವಿನ ಪತ್ರ ಸಂಕಲನವನ್ನು ನೆನಪಿಸಿಕೊಂಡೆವು. ಇಬ್ಬರೂ ಈ ಬಗ್ಗೆ ಒಪ್ಪಂದ ಮಾಡಿಕೊಂಡು, ಸಂಕಲನ ಬಿಡುಗಡೆಯಾದಂತೆ ಖುಷಿಯನ್ನೂ ಸಂಭ್ರಮಿಸಿದ್ದೆವು. ಇದಕ್ಕೆ ಜನತಾ ಡಿಲಕ್ಸ್ ಹೋಟೇಲಿನ ಗ್ಲಾಸು, ಪ್ಲೇಟುಗಳೇ ಸಾಕ್ಷಿ! ಏನೇ ಆದರೂ ಕೊಟ್ಟ ಮಾತಿಗೆ ತಪ್ಪಬಾರದು ಎಂಬ ದುರಭ್ಯಾ,ಸ ಇರುವ ನಾನು ಹೊಸ ಜಾಗ, ಹೊಸ ಪರಿಸರದಲ್ಲಿ ಕಾಡುವ ಹೋಮ್ ಸಿಕ್ಕನ್ನು ಸೇರಿಸಿ ತುಂಬ ರಸವತ್ತಾದ ಪತ್ರವನ್ನೇ ಅವಳು, ಸೀತಾ ಹಾಗೂ ಭಾರತಿ ಮೂವರಿಗೆ ಸೇರಿಸಿ ಬರೆದು ನನ್ನ ಹೊಸ ವಿಳಾಸವನ್ನೂ ನಮೂದಿಸಿ ಪೋಸ್ಟ್ ಮಾಡಿದ್ದೆ. ಇದಾಗಿ ಸರಿಸುಮಾರು ಎರಡು ವರ್ಷಗಳು ಆಗುತ್ತಾ ಬಂದರೂ, ಎಂದಿನ ದಿವ್ಯನಿರ್ಲಕ್ಷ್ಯದ ಸ್ವಭಾವದ ಅವಳಿಂದ, ಇಂದಿಗೂ ಇದಕ್ಕೆ ಉತ್ತರ ಬರಲಿಲ್ಲ.

ಮೊನ್ನೆ ಇವಳ ಬರಹ ನೋಡಿದಾಗ ನಂಗೇ ಸಿಟ್ಟೇ ಬಂದಿತ್ತು। ಮೊಬೈಲು ಮಾಡಿದಾಗೆಲ್ಲ...... ಎಂಬುದಾಗಿ ರಾಗಎಳೆದಿರುವ ಅವಳು, ಇದುವರೆಗೆ ಅವಳಾಗಿ ನಂಗೆ ಒಂದೇ ಒಂದು ಬಾರಿಯೂ ಫೋನ್ ಮಾಡಿದ ಉದಾಹರಣೆ ಮದ್ದಿಗೂ ಇಲ್ಲ। ಹೋಗಲಿ ನಾನು ಮಾಡಿದರೂ, ನನ್ನ ಕರೆನ್ಸಿ ಮುಗಿಯುತ್ತೆ ಎಂಬ ದಾವಂತ ಅವಳಿಗೆ। ಪೀನಾರಿ ಪಿಟ್ಟಾಸಿ ಎಂದು ಎಷ್ಟೋ ಬಾರಿ ಬಯ್ದಿದ್ದೆ. ನಾನು ಈಚಿನಿಂದ ಫೋನು ಮಾಡಿದಾಗೆಲ್ಲ (ಎಸ್ಟಿಡಿ) ಥೇಟ್ ಎದುರು ಸಿಗುವಾಗ ನಗುವಂತೆ, ಅದೇ ಟೋನಿನಲ್ಲಿ ಅಷ್ಟೇ ಹೊತ್ತು ಪ್ಹೋ.....ಹೋ.....ಹ್ಹೋ........ ಪ್ಹೋ.....ಹೋ.....ಹ್ಹೋ........ ಎಂದು ಕತ್ತು ಮುರಕೊಂಡಂತೆ ನಗುವ ಅವಳ ಮಾತಿಗಿಂತ ಹೆಚ್ಚು ನಗುವಿಗೇ ನನ್ನ ಕರೆನ್ಸಿ ಖರ್ಚಾಗಿದೆ. ಅವಳೊಡನೆ ಮಾತಾಡಬೇಕೆಂದು ನಾನೀಚಿಂದ ಪೋನು ಮಾಡಿದ್ದರೂ, ನಂಗೆ ಮಾತಿಗೆ ಎಡೆಗೊಡದಂತೆ, ಮತ್ತೇನು ಎನ್ನತ್ತಲೇ ವಟಗುಟ್ಟುವ ಅವಳೊಂದಿಗೆ ಮಾತೆಂದರೆ ಕಡ್ಲೆಕಾಯಿ ತಿಂದಂತೆ. ಕೆಲವೊಮ್ಮೆ ತಲೆ ಚಿಟ್ಟು ಹಿಡಿವಾಗ, ಸಮಸ್ಯೆಗೆ ಬಿದ್ದಾಗ, ಸಂದಿಗ್ಧತೆಗೆ ಸಿಲುಕಿದಾಗ, ನನ್ನ ಲೀಗಲ್ ಅಡ್ವೈಸರೂ ಆಗಿರುವ ಅವಳಿಗೆ ಫೋನ್ ಮಾಡೋದು ನಂಗೆ ನಿಜಕ್ಕೂ ಖುಷಿ. ಹಾಗೆಯೇ,ಅವಳಂತೆ ಉರುಟುರುಟಾಗಿರುವ ಅಕ್ಷರಗಳನ್ನು ಅವಳು ಬಿಳಿಯ ಹಾಳೆಯಲ್ಲಿ ಪೋಣಿಸಿದ ಪತ್ರವೂ ಖುಷಿಯೇ.

ಆದರೆ, ಫೋನ್ ರಿಂಗಾದಾಗ ಸ್ವೀಕರಿಸಲಾಗದಿದ್ದರೆ, ಬಳಿಕ ಕನಿಷ್ಠ ಒಂದು ಮಿಸ್ ಕಾಲ್ ಕೊಡೋ ಜಾಯಮಾನದವಳೂ ಅಲ್ಲ ಅವಳು. ಅಂತ ಸಂದರ್ಭದಲ್ಲೆಲ್ಲ ಇದಕ್ಕಾಗೆ ಅವಳನ್ನು ಬಯ್ಯಲು ನನ್ನ ಇನ್ನಷ್ಟು ಕರೆನ್ಸಿ ಮುಗಿಸಿಕೊಂಡಿದ್ದೇನೆ.

ಇಂಥಾ ಅವಳು, ಮೊಬೈಲು ಮಾಡಿದಾಗೆಲ್ಲ...... ಎಂದು ಕೊಚ್ಚಿಕೊಂಡಿರುವುದನ್ನು ಕಂಡು ಮೈಯೆಲ್ಲ ಉರಿದು ಹೋಗಿತ್ತು. ಖರ್ಚಾದರೆ ಅಷ್ಟೇ ಹೋಯ್ತು. ಈಗಿಂದೀಗಲೇ ಫ್ಲೈಟಲ್ಲೇ ಹೋಗಿ, ಅವಳ ಮುಸುಡಿಗೆರಡು ಗುದ್ದಿ ಬರಬೇಕು ಅನ್ನಿಸಿತ್ತು, ಆ ಕ್ಷಣಕ್ಕೆ. ಸಾಯಂಕಾಲವಾಗಲು ಕಾದು ಆಫೀಸಿಂದ ಹೊರಬರುತ್ತಲೇ ಅವಳಿಗೆ ಫೋನ್ ಮಾಡಿದೆ. ಜಡಭರತಿಯಾಗಿರುವ ಅವಳು ಬಡಪೆಟ್ಟಿಗೆ(ರಿಂಗಿಗೆ) ಪೋನ್ ತೆಗೆಯಲಿಲ್ಲ. ಅಡುಗೆ ಮನೆಯಲ್ಲಿದ್ದಳಂತೆ. ಸಿಟ್ಟನ್ನು ಕಕ್ಕದಿರಲಾಗುತ್ತದಾ? ಮರಳಿ ಯತ್ನವ ಮಾಡಿದೆ. ಏನೇ... ಎಂಬ ಮಾಮೂಲಿ ರಾಗದೊಡನೆ ಮಾತು ಆರಂಭಿಸಿದಳು. ನಿನ್ನ ಆರ್ಟಿಕಲ್ ನೋಡ್ದೆ ಅಂದೆ. ಹೇ.... ಅಲ್ಲಿ ನಿಂಗೆ ಹೇಗೆ ಸಿಗ್ತು ಎಂಬ ಕೌತುಕ ತೋರಿದಳು. ಅಲ್ವೇ, ಈ ಎರಡು ವರ್ಷದಲ್ಲಿ ನೀನೆಷ್ಟು ಬಾರಿ ನಂಗೆ ಮೊಬೈಲು ಮಾಡಿದ್ದೀ ಅನ್ನುತ್ತಾ ತಾರಾಮಾರ ಉಗ್ದೆ. ಪ್ಹೋ.....ಹೋ.....ಹ್ಹೋ........ ಪ್ಹೋ.....ಹೋ.....ಹ್ಹೋ........ ಎಂದು ಮತ್ತೆ ನಕ್ಕಳು. ಅಷ್ಟರಲ್ಲಿ ನನ್ನ ಕೋಪ ಏರಿದ್ದ ರಭಸದಲ್ಲೇ ಇಳಿಯಲಾರಂಭಿಸಿತ್ತು.

ಊರಿನಬಗ್ಗೆ, ಅಕಾಲಿಕವಾಗಿ ಸುರಿದ ಮಳೆಯ ಬಗ್ಗೆ ಮಾತಾಡಲಾರಂಭಿಸಿದೆವು. ಮಧ್ಯೆ ಎಚ್ಚೆತ್ತವಳಂತೆ ನಿನ್ನ ಕರೆನ್ಸಿ ಅಂತ ಜ್ಞಾಪಿಸಿದಳು. ಹೋಗ್ಲಿ ಬಿಡೆ, ದುಡಿಯೋದು ಯಾಕೆ? ನಿಂಗಿಂತಾ ಕರೆನ್ಸಿ ಹೆಚ್ಚಾ ಎಂಬ ಸೆಂಟಿಮೆಂಟಲ್ ಡಯಲಾಗ್ ಹೊಡ್ದೆ. ನಡುವೆಯೇ, ಈ ಜಗಳವನ್ನೂ ಬರೀ... ಎಂದಳು. ಒಪ್ಪಿಕೊಂಡೆ.

ಕೊನೆಯಲ್ಲಿ, ಹೋಗ್ಲಿ ನನ್ನ ಪತ್ರಕ್ಕೆ ಈಗಲಾದರೂ ಉತ್ತರ ಬರೆ- ಭಿನ್ನೈಸಿದೆ. ಯಾವ್ದು? ನೀನು ಪತ್ರ ಬರೆದಿದ್ದೆಯಾ ಅಂತ ಕೇಳಿದಳು. ಭೂಮಿಯೇ ಬಾಯ್ಬಿರಿಯಬಾರದಾ ಅನ್ನಿಸಿತು. ಅದಕ್ಕೆ ತಕ್ಕಂತೆ ಎದುರಲ್ಲಿ ಓಪನ್ ಮ್ಯಾನ್‌ಹೋಲ್ ಇತ್ತು. ಆದರೆ, ಅವಳಿಗೆ ಬಯ್ದು ಮುಗಿಸದೆ ಹಾರುವುದಾದರೂ ಹೇಗೆ? ಪುಣ್ಯಾತಿಗೆತ್ತಿಗೆ ನಾನು ಬರೆದ ಪತ್ರ ಮರೆತೇ ಹೋಗಿತ್ತು. ನೆನಪು ಮಾಡಿಕೊಂಡವಳು ಮತ್ತೆ ಪ್ಹೋ.....ಹೋ.....ಹ್ಹೋ........ ಪ್ಹೋ.....ಹೋ.....ಹ್ಹೋ.......
ಇಷ್ಟೆಲ್ಲಾ ಬರ್ದಿದ್ದಿಯಾ, ಸ್ವಾಭಿಮಾನ ಅಂತೇನಾದರೂ ನಿನ್ನಬಳಿ ಇದ್ದಲ್ಲಿ ಪತ್ರ ಬರೀ ಎಂದೆ. ಖಂಡಿತ ಕಣೆ ಅಂದಳು. ಬಹುಶಃ ಸ್ವಾಭಿಮಾನವನ್ನು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದಾಳೆ ಕಾಣಿಸುತ್ತೆ. ತಿಂಗಳಾಯಿತು. ಇನ್ನೂ ಪತ್ರವಿಲ್ಲ.

ಪತ್ರ ಸುಖದ ಆ ದಿನಗಳ ಬಗ್ಗೆ ಹೇಳಿಕೊಳ್ಳಲು ಬಹಳವಿದೆ. ಇನ್ನೆಂದಾದರೂ ಹೇಳಿಯೇನು.

ಶುಕ್ರವಾರ, ಏಪ್ರಿಲ್ 25

ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯೂ...

(ಇದೂ ಸೊಳ್ಳೆಗೆ ಸಂಬಂಧಿಸಿದ್ದು. ಇವ್ಳಿಗೆ ಸೊಳ್ಳೆ ಬಿಟ್ರೆ ಬೇರೆ ವಿಷ್ಯವೇ ಇಲ್ವಾಂತ ಗೊಣಗಬೇಡಿ. ಇದು ಮಲೇರಿಯಾ ದಿನಕ್ಕಾಗಿ ಸ್ಪೆಷಲ್!)

ಹಾಗೆ ನೋಡಿದರೆ, ಒಂದಾನೊಂದು ಕಾಲದಲ್ಲಿ ನಾನು ಹುಟ್ಟುವ ಮುಂಚೆ ನನ್ನೂರು ಮಲೇರಿಯಾ ಫೇಮಸ್ ಆಗಿತ್ತಂತೆ. ಇದು ನಂಗೆ ಗೊತ್ತಾದ್ದು ನಾನು ಹುಟ್ಟಿ ಎಷ್ಟೂ ವರ್ಷಗಳ ಬಳಿಕ, ಯಾವುದೋ ಪುಸ್ತಕ ಓದಿದಾಗ. ಎಲ್ಲೇ ಹೋದರೂ ಹೋಗಿ ಬೀಳುವುದು ಸೊಳ್ಳೆ ಕೊಂಪೆಗೆ ಎಂದು ಈ ಮೊದಲು ಹೇಳಿದ್ದೇನೆ. ನಾನು ಪಿ.ಜಿ ಮಾಡೋವಾಗ ಇದ್ದು ಊರು ಸೊಳ್ಳೆ ಖ್ಯಾತಿಯದ್ದು. ಸೊಳ್ಳೆ ಬಂದು ,ಕಿವಿಯಲ್ಲಿ ಗುಂಯ್‌ಗುಡುತ್ತಾ ಗುಡ್‌ನೈಟ್ ಹೇಳಿದರೆ ಮಾತ್ರ ನಿದ್ರೆ ಅನ್ನೊವಷ್ಟು ನಾನವುಗಳಿಗೆ ಎಡಿಕ್ಟ್ ಆಗಿದ್ದೆ. ಇಂಥ ಸೊಳ್ಳೆ ಸಂಭ್ರಮದಲ್ಲಿ ನಾನು ಗಡದ್ದಾಗಿ ನಿದ್ದೆ ಹೊಡೆಯುವುದನ್ನು ಕಂಡ ಸ್ನೇಹಿತೆಯರು ನನ್ನನ್ನು ಛೇಡಿಸುತ್ತಿದ್ದರು. ಸೊಳ್ಳೆಯೂ ನಿನ್ನ ಬಳಿ ಸುಳಿಯುವುದಿಲ್ಲ ಎಂದಾದರೆ, ನೀನು ಅದ್ಯಾವ ಪರಿ ಕೊಳಕಿ ಇರಬಹುದು ಎಂಬುದು ರುಕ್ಮಿಣಿಯ ಸ್ಟೇಟ್‌ಮೆಂಟ್.

ನನ್ನ ರೂಂಮೇಟ್ ಮಲೇರಿಯಾ ಬಂದು ಮಲಗಿದ್ದರೂ ನಾನು ಸೊಳ್ಳೆ ಪರದೆ ಉಪಯೋಗಿಸದೆ ಇರುವುದನ್ನು ಕಂಡ ಜ್ಯೋತಿ, ಅನಾಫಿಲೀಸ್ ಹೆಣ್ಣು ಸೊಳ್ಳೆಯಾದ ಕಾರಣ ಈಕೆ ಬಳಿ ಸುಳಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಳು.

ನನ್ನ ಗೆಳತಿಯೊಬ್ಬಳಿದ್ದಾಳೆ. ಅವ್ಳದ್ದು ಮಲೇರಿಯಾ ಫ್ಯಾಮಿಲಿ. ಅವಳ ಎರಡರ ಹರೆಯದ ಮಗುವನ್ನು ಬಿಡದೇ, ಅವರ ಮನೆಯಲ್ಲಿ ಎಲ್ಲರಿಗೂ, ತಿರುತಿರುಗಿ ಮಲೇರಿಯಾ ಅಟ್ಯಾಕ್ ಆಗಿತ್ತು. ಹೀಗೆ ಆಕೆಯ ತಂಗಿಗೊಂದು ಬಾರಿ ಮಲೇರಿಯಾ ಆಗಿದ್ದಾಗ ನಾನು ಆಸ್ಪತ್ರೆ ಡ್ಯೂಟಿ ಮಾಡಿದ್ದೆ. ಮಲೇರಿಯಾ ಪೇಶಂಟ್‌ಗೆ ನಾನು ವಾಚ್‌ವುಮನ್ ಅಗಿರುವ ಸುಳಿವು ಸಿಕ್ಕಿದ್ದ ನನ್ನ ಬಾಸ್ ಅದೊಮ್ಮೆ "ನೀವೂ ಒಂದು ಆಂಟಿ ಮಲೇರಿಯಾ ವ್ಯಾಕ್ಸೀನ್ ಮಾಡ್ಸಿಕೊಳ್ಳಿ" ಅಂದಿದ್ದರು. ಅದು ನನ್ನ ಮೇಲಿನ ಕಾಳಜಿಗೋ ಅಥವಾ ಈಕೆಗೆ ಮಲೇರಿಯಾ ತಗುಲಿಬಿಟ್ರೆ ರಜೆಕೊಡಬೇಕೆಂಬ ಅವರ ಚಿಂತೆಗೋ! ಬೇಕಿಲ್ಲ ಸಾರ್, ಎಷ್ಟೇ ಸೊಳ್ಳೆ ಕಡಿದರೂ ನನ್ನನ್ನು ಮಲೇರಿಯಾ ಬಾಧಿಸುವುದಿಲ್ಲ ಎಂಬ ಸಮಜಾಯಿಷಿ ನೀಡಿದ್ದೆ ಅವರಿಗಾಗ. ಮರುಮಾತಾಡದ ಅವರು ನಾನೇ ಒಂದು ಸೊಳ್ಳೆ ಎಂಬಂತಹ ಲುಕ್ ಕೊಟ್ಟಿದ್ದರು.

ಈ ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆ ನನ್ನನ್ನು ಇನ್ನೊಮ್ಮೆ ನಗೆಪಾಟಿಲಿಗೀಡಾಗಿಸಿತ್ತು. ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕರ ಹುದ್ದೆಗೆ ಅರ್ಜಿ ಕರೆದಿದ್ದರು. ಇದಕ್ಕೆ ಅರ್ಜಿ ಸಲ್ಲಿಸಿ ಕೆಲವು ತಿಂಗಳ ಬಳಿಕ ಲಿಖಿತ ಪರೀಕ್ಷೆಗೆ ಹಾಜರಾಗಲು ಆದೇಶ ಬಂದಿತ್ತು. ಒಂದು ಹುದ್ದೆಗೆ 80ಕ್ಕಿಂತಲೂ ಅಧಿಕ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನದ ಕುರಿತೇ ಹೆಚ್ಚು ಪ್ರಶ್ನೆಗಳು. ಅದರಲ್ಲೊಂದು ಪ್ರಶ್ನೆ ಮಲೇರಿಯಾ ರೋಗ ಹರಡುವ ಸೊಳ್ಳೆಯಾವುದು ಎಂಬುದಾಗಿ. ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಅಮಿತಾಭ್ ಬಚ್ಚನ್ ನೀಡಿದಂತೆ 'ಚಾರ್ ಆಪ್ಷನ್' ಇರಲಿಲ್ಲ, 'ಕಂಪ್ಯೂಟರ್ ಸಾಬೂ' ಇರಲಿಲ್ಲ.

ಪರೀಕ್ಷೆ ಮುಗಿಸಿ ನನ್ನೂರಿಗೆ ತಲುಪುವ ಧಾವಂತದಲ್ಲಿ ದೊಡ್ಡದೊಡ್ಡ ಹೆಜ್ಜೆ ಹಾಕುತ್ತಾ ಹೋಗುತ್ತಿದ್ದೆ. ದಾರಿಯಲ್ಲಿ ಸಿಕ್ಕ ಸಹ ಅಭ್ಯರ್ಥಿಯೊಬ್ಬಾತ, ಹಲೋ ಮೇಡಂ ಹೇಗೆ ಮಾಡಿದ್ದೀರಿ ಅಂತ ವಿಚಾರಿಸಿದ. ಪರವಾಗಿಲ್ಲ ಅಂದೆ. ಆತನ ಹೆಸರು ಶರತ್ಚಂದ್ರ ಎಂತಲೂ, ಕುಮುಟಾದಲ್ಲಿ ವಕೀಲನೆಂದೂ ಗೊತ್ತಾಯಿತು. ನನ್ನ ಜತೆ ಹೆಜ್ಜೆ ಹಾಕಿದ ಆತ ಪ್ರಶ್ನೆಗಳ ಬಗ್ಗೆ ಚರ್ಚಿಸಿದ. ಎಲ್ಲದಕ್ಕೂ ಸರಿಯುತ್ತರ ಬರೆದಿದ್ದೇನೆಂಬ ಹಂಡ್ರೆಡ್ ಪರ್ಸೆಂಟ್ ನಂಬುಗೆಯಲ್ಲಿದ್ದ ನಾನು ಎಲ್ಲ ಪ್ರಶ್ನೆಗಳಿಗೂ ಚಟಪಟ ಉತ್ತರ ಹೇಳುತ್ತಾ ಹೋದೆ. ಸೊಳ್ಳೆಯ ಪ್ರಶ್ನೆಗೂ ಉತ್ತರಿಸುತ್ತಾ, 'ಸಿಫಿಲೀಸ್' ಅಂದೆ. ಆತ ಒಮ್ಮೆಗೇ ಮುಖವನ್ನು ಒಂದಿಂಚು ಹಿಂದೆ ಸರಿಸಿದನಾದರೂ ಮತ್ತೆ ಸರಾಗವಾಗೇ ವರ್ತಿಸಿದ.

ಪರೀಕ್ಷೆ ಮುಗಿಸಿ ಹಾಸ್ಟೆಲ್‌ಗೆ ಮರಳಿದಾಗ, ಲೆಕ್ಚರರ್ ಆಗಿದ್ದ ಗೆಳತಿ ಅನಿತಾ ಪ್ರಶ್ನೆ ಪತ್ರಿಕೆ ಇಸಿದುಕೊಂಡಳು. ಅದರ ಕುರಿತು ದೊಡ್ಡ ಚರ್ಚೆಯೇ ಆಯಿತು. ಸೊಳ್ಳೆ ಪ್ರಶ್ನೆ ಬಂದಾಗ, ಹೇಳು ನೋಡೋಣ ಇದ್ಯಾವ ಸೊಳ್ಳೆ ಅಂತ ಪ್ರಶ್ನಿಸಿದಳು. ಅಷ್ಟೂ ಗೊತ್ತಿಲ್ವ ಸಿಫಿಲೀಸ್ ಅಂತ ಮತ್ತಷ್ಟು ದೃಢವಾಗಿ ಅಂದೆ. ಎಲ್ಲರೂ ಬಿದ್ದುಬಿದ್ದು ನಗಲಾರಂಭಿಸಿದರು. ಯೇ.... ಕತ್ತೆ ಇದು ಅನಾಫಿಲೀಸ್. ಸಿಫಿಲೀಸ್ ಅಂದರೆ ಲೈಂಗಿಕ ಕಾಯಿಲೆ ಅಂದಳು. ಶರತ್ಚಂದ್ರನೆಂಬ ಕುಮುಟಾದ ವಕೀಲ ನನ್ನ ಉತ್ತರ ಕೇಳಿ ಯಾಕೆ ಮುಖವನ್ನು ಒಂದಿಂಚು ಹಿಂದೆ ಸರಿಸಿದನೆಂದು ಆಗ ಹೊಳೆಯಿತು!

ಇದಾದ ಬಳಿಕ ನನ್ನ ಗೆಳತಿಯರಿಗೆ ಈ ಸಿಫಿಲೀಸ್ ವಿಚಾರ ಎತ್ತಿ ದಿನಕೊಮ್ಮೆಯಾದರೂ ನನ್ನನ್ನು ಲೇವಡಿಮಾಡದಿದ್ದರೆ ಸೂರ್ಯ ಮುಳುಗುತ್ತಿರಲಿಲ್ಲ. ವಿಷಯ ತಿಳಿದ ಜ್ಯೋತಿ ನಿಂಗಂತೂ ಆ ಕೆಲಸ ಖಂಡಿತ ಸಿಗುವುದಿಲ್ಲ ಎಂದು ಷರಾ ಬರೆದಿದ್ದಳು. ನಾಳೆ ನೀನು ಹೀಗೆ ಗಡಿಬಿಡಿಯಲ್ಲಿ ಒಂದರ ಬದಲು ಇನ್ನೊಂದರ ಪ್ರಕಟಣೆ ಮಾಡಿದರೆ ಗೋ......ವಿಂದ ಅಂತ ಟಿಪ್ಪಣಿಯನ್ನೂ ಸೇರಿಸಿದ್ದಳು.
ಕೊನೆಗೆ ನಾನೇ, ಹೋಗಲಿ ಕೊನೆಯ ಮೂರು ಅಕ್ಷರಗಳು ಸರಿ ಇವೆಯಲ್ವೇ, ಅರ್ಧ ಮಾರ್ಕಾದರೂ ಕೊಟ್ಟಾರು ಅಂತ ಹೇಳಿಕೊಂಡಿದ್ದೆ. ಇದಾದ ಬಳಿಕ ಕ್ರಮೇಣ ಆ ವಿಷಯವನ್ನೂ, ಆ ಪರೀಕ್ಷೆಯನ್ನೂ ನಾವೆಲ್ಲರೂ ಮರೆತಿದ್ದೆವು.

ಆದರೆ, ಒಂದು ದಿನ ನನಗೆ ಆಶ್ಚರ್ಯ ಹುಟ್ಟುವಂತೆ, ಲಿಖಿತ ಪರೀಕ್ಷೆಯಲ್ಲಿ ಪಾಸಾಗಿರುವ ನನ್ನನ್ನು ಆಡಿಯೋ ಟೆಸ್ಟ್‌ಗೆ ಕರೆದಿದ್ದರು. ನನ್ನ ಸ್ನೇಹಿತೆಯರಿಗೆ ಇದು ಇನ್ನೊಮ್ಮೆ ನಗುವಿನ ವಿಷಯವಾಗಿತ್ತು. 20 ಮಂದಿಯಲ್ಲಿ ಆಯ್ಕೆಗೊಂಡ ಐದು ಮಂದಿಯಲ್ಲಿ, ನನ್ನ ಹೆಸರಿದ್ದು ಅಂತಿಮ ಸುತ್ತಿನ ಸಂದರ್ಶನಕ್ಕೆ ಅರ್ಹತೆ ಗಳಿಸಿದ್ದೆ. ಅದೇದಿನ ಅಪರಾಹ್ನ ಸಂದರ್ಶನ. ಶರತ್ಚಂದ್ರನೂ ಬಂದಿದ್ದನಾದರೂ, voice testನಲ್ಲಿ ಫೇಲಾಗಿದ್ದ. ಹೀಗೆ ಮೌಖಿಕ ಸಂದರ್ಶನಕ್ಕೆ ಅವಕಾಶ ಸಿಗದ ಸಹ ಅಭ್ಯರ್ಥಿಗಳು ಶಾನಿಯೇ ಆಯ್ಕೆಯಾಗಲಿ ಅಂತ ಹಾರೈಸಿ ಹೋಗಿದ್ದರು. ಶರತ್ಚಂದ್ರ ಸ್ವಲ್ಪ ಹೆಚ್ಚೇ ಹಾರೈಸಿದ್ದ. ಮುಕ್ಕಾಲು ಗಂಟೆ ಸಂದರ್ಶನ ಮಾಡಿದ್ದರು. ಅದಾಗ ಓದು ಮುಗಿಸಿದ್ದೆ ಅಷ್ಟೆ ನೋಡಿ, ಉತ್ಸಾಹದ ಮೂಟೆಯಾಗಿದ್ದ ನಾನು ಅದಮ್ಯ ಆತ್ಮವಿಶ್ವಾಸದಲ್ಲಿ ಪ್ರಶ್ನೆಗಳನ್ನು ಎದುರಿಸಿ ಕಂಡಾಪಟ್ಟೆ ಉತ್ತರ ಕೊಟ್ಟಿದ್ದೆ.

ಸಂದರ್ಶನ ಮುಗಿಸಿ ತೆರಳುವ ವೇಳೆಗೆ ಅನಿತ ಮತ್ತು ಇತರ ಗೆಳತಿಯರು ನಗುವಿಗೇನಾದರೂ ಹೊಸ ಸರಕಿದೆಯಾ ಎಂಬಂತೆ ಕಾಯುತ್ತಿದ್ದರು. ಜ್ಯೋತಿ ಮಾತ್ರ ಗಂಭೀರವಾಗಿ, ನಿಂಗೆ ಅರ್ಹತೆ ಇತ್ತೂ ಅಂತ ನೀನು ಧ್ವನಿಪರೀಕ್ಷೆಯಲ್ಲಿ ಪಾಸಾಗಿಲ್ಲ. ಸ್ನೇಹಿತೆಯೆಂಬ ದಾಕ್ಷಿಣ್ಯಕ್ಕೆ ನಿನ್ನ ಗೊರಗೊರ ಧ್ವನಿಯನ್ನು ಸುಮಧುರ ಅಂತ ನಾವು ಸಹಿಸಿಕೊಳ್ಳುತ್ತೇವೆ. ಆದರೆ ಅನಾಫಿಲೀಸನ್ನು ಸಿಫಿಲೀಸ್ ಅಂತ ಬರೆದವರ್ಯಾರು ಎಂಬ ನಿನ್ನ ಮೂತಿ ನೋಡುವ ಒಂದೇ ಉದ್ದೇಶದಿಂದ ನಿನ್ನನ್ನು ಸಂದರ್ಶನಕ್ಕೆ ಆಯ್ಕೆ ಮಾಡಿದ್ದಾರೆಂದಳು!! (ಇರಬಹುದಾ?)

ಮಂಗಳವಾರ, ಏಪ್ರಿಲ್ 22

ಮೇಜು ಗುದ್ದಿಗುದ್ದಿ ಭಾಷಣ ಮಾಡಿದೆವು

ಬಿಜೆಪಿ ಅಧ್ಯಕ್ಷ ಡಿ.ವಿ. ಸದಾನಂದ ಗೌಡರ ಹುಟ್ಟೂರಿನಿಂದ ಸ್ಫರ್ಧಿಸಲು ನನಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದ್ದರು. ನಾನು ಚುನಾವಣೆಗೆ ಸ್ಫರ್ಧಿಸಬೇಕೆಂಬ ಇರಾದೆಯಿಂದ ಇದ್ದವಳೇ ಅಲ್ಲ. ಸದಾನಂದರ ಹುಟ್ಟೂರಿನಿಂದ ಹೆಚ್ಚೆಂದರೆ ಗ್ರಾಮಪಂಚಾಯತ್ ಚುನಾವಣೆಗೆ ಸ್ಥಾನ ಲಭಿಸೀತು. ಆದರೆ ನಂಗೆ ಆಹ್ವಾನ ದೊರೆತದ್ದು ವಿಧಾನ ಸಭೆಗೆ! ರಾಜ್ಯಪಾಲ ಹುದ್ದೆ ತೊರೆದು ಬಂದ ಎಸ್ಸೆಂ ಕೃಷ್ಣರಂತಹ ಘಟಾನುಘಟಿಗಳಿಗೇ ಟಿಕೆಟ್ ಸಿಗದಿದ್ದಾಗ ಸೀನಲ್ಲೇ ಇಲ್ಲದ ಶಾನಿಗೆ ಹೇಗೆ ಟಿಕೆಟ್ ಸಿಕ್ಕಿತು ಅಂತ ತಲೆಕೆರೆಯಬೇಡಿ. ಕಾಂಗ್ರೆಸ್ ನಂಗೆ ಟಿಕೆಟ್ ನೀಡಿದ್ದು, ನಂಗೆ ನಿನ್ನ ಬಿದ್ದ ಕನಸಿನ ಹೆಡ್‌ಲೈನ್!

ಹಗಲೆಲ್ಲ ಚುನಾವಣೆ ಸುದ್ದಿಗಳನ್ನೇ ಪೇಪರ್‌ನಲ್ಲಿ ಓದುವುದಕ್ಕೋ ಅಥವಾ ಊರಿಂದ ದೂರದಲ್ಲಿ ಕುಳಿತ ನಾವುಗಳೆಲ್ಲ ಚುನಾವಣೆ ಕುರಿತು ಡಿಸ್ಕಸ್ ಮಾಡುವುದಕ್ಕೋ, ಅಂತೂ ಇದು ಸುಪ್ತ ಮನಸ್ಸಿನಲ್ಲಿ ತಳ ಊರಿದೆ ಎಂಬುದಾಗಿ ನಂಗೆ 'ಸಿಕ್ಕಿದ' ಟಿಕೆಟ್‌ಗೆ ವೈಜ್ಞಾನಿಕ ವಿಶ್ಲೇಷಣೆ ನೀಡಿದ್ದೆ. ಆದರೂ, ಕಾಂಗ್ರೆಸ್ ಯಾಕೆ ನಂಗೆ ಕರೆದು ಟಿಕೆಟ್ ಕೊಟ್ಟಿತು ಅಂತ ಕನಸಿನುದ್ದಕ್ಕೂ ಯೋಚಿಸಿದ್ದು, ಎಚ್ಚರವಾದ ಮೇಲೂ ಮುಂದುವರಿದಿತ್ತು.

ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕನಸು ಕಾಣಿರಿ; ದೊಡ್ಡ ದೊಡ್ಡ ಕನಸು ಕಾಣಿರಿ ಎಂಬ ಕರೆನೀಡಿದ್ದಕ್ಕೇ ಇರಬೇಕು. ನಂಗೆ ರಾತ್ರಿ ನಿದ್ರೆಯಲ್ಲಿ ದೊಡ್ಡದೊಡ್ಡ ಕನಸುಗಳೇ ಬೀಳುವುದು. ಬಿಲ್ ಕ್ಲಿಂಟನ್ ಅಮೆರಿಕಾ ಅಧ್ಯಕ್ಷರಾಗಿದ್ದ ವೇಳೆ ಒಮ್ಮೆ ಭಾರತಕ್ಕೆ ಭೇಟಿ ನೀಡಿದ್ದರಲ್ಲಾ? ಆಗ ಅವರು ನಮ್ಮ ಮನೆಗೆ ಬಂದಂತೆ, ನಮ್ಮ ಅಂಗೈಯಗಲದ ತೋಟವೆಲ್ಲ ಸುತ್ತಾಡಿದಂತೆ, ಕೆಳಗಿನ ತೋಟದಲ್ಲಿ ಎಳನೀರು ಕುಡಿದಮೇಲೆ, ಅಲ್ಲಿಂದ ಅತ್ತಲೇ ಕಾಲ್ನಡಿಗೆಯಲ್ಲಿ ಕೊಡಗಿಗೆ ತೆರಳಿದಂತೆ (ನಮ್ಮ ಮನೆಯಿಂದ ಒಂದು ದಿಕ್ಕಿಗೆ ನಡೆದರೆ ಕೊಡಗೂ, ಇನ್ನೊಂದು ದಿಕ್ಕಿಗೆ ನಡೆದರೆ ಕೇರಳವೂ ಸಿಗುತ್ತದೆ) ಕನಸು ಬಿದ್ದಿತ್ತು. ಇನ್ನೊಮ್ಮೆ ವಾಯಪೇಯಿಯವರು ಪ್ರಧಾನಿಯಾಗಿದ್ದಾಗ ಅವರು ನಮ್ಮ ಹಟ್ಟಿಯಲ್ಲಿ ದನಗಳಿಗೆ ಹುಲ್ಲುಹಾಕಿದಂತೆ ಕನಸು. ಹೀಗೆ ಆಗೀಗ ನಾನು ದೊಡ್ಡದೊಡ್ಡ ವ್ಯಕ್ತಿಗಳನ್ನು ಭೇಟಿಯಾಗುತ್ತಿರುತ್ತೇನೆ, ಕನಸಿನಲ್ಲಿ.

ಚುನಾವಣೆ ದಿನಾಂಕ ಘೋಷಣೆಯಾಗುತ್ತಲೆ ಫೋನು ಮಾಡಿದ್ದ ಅಣ್ಣ, "ವೋಟಿಗೆ ಬಾ" ಅಂತ ಗದರುವ ದನಿಯಲ್ಲೇ ಹೇಳಿದ. ನನ್ನ ಪರಮೋಚ್ಚ ಹಕ್ಕಿನ ಚಲಾವಣೆಗೆ ಹೆಚ್ಚಾಗಿ ಹೋಗದಿರುವುದು, ಸದರೀ ಗದರಿಕೆಗೆ ಕಾರಣ. ಸರಿ, ಟ್ರೇನ್ ಟಿಕೆಟ್ ಕೊಡುಸ್ತಿಯಾ ಅಂದರೆ ಅದಕ್ಕೂ ಧನಾತ್ಮಕ ಉತ್ತರವನ್ನೇ ನೀಡಿದ. ಹೇಗಿದ್ದಾರೆ (ಮಾಜಿ)ಶಾಸಕರು, ಮಾತಿಗೆ ಸಿಗುತ್ತಾರಾ ಅಂತ ಕೇಳಿದೆ. ಇದಕ್ಕೇ ಕಾದವನಂತೆ, ಈಗ ಅವರ ಮೊಬೈಲ್ ಆಕ್ಸೆಸೇಬಲ್, ಇಲ್ಲವಾದರೆ ಯಾವಾಗಲೂ ಸ್ವಿಚ್‌ಆಫ್ ಆಗಿರುತ್ತಿತ್ತು ಅನ್ನುತ್ತಾ ನಕ್ಕ. ಆತನೂ ನಮ್ಮ ಎಮ್ಮೆಲ್ಯೆಯೂ ಒಂದು ಕಾಲದಲ್ಲಿ ಜತೆಗಿದ್ದವರು. ಆವರೀಗ ದೊಡ್ಡ ಲೀಡರಾಗಿದ್ದಾರೆ.

ನಾನೂ ಲೀಡರಾಗಿದ್ದವಳೇ.... ಮಾತ್ರ, ನಾಲ್ಕನೆ ಕ್ಲಾಸಿನಲ್ಲಿ ಕಲಿಯುತ್ತಿದ್ದಾಗ. ಮಾತನಾಡಿದವರ ಹೆಸರು ಬರೆಯುವುದು, (ಮಾಸ್ಟರ ಬಳಿ ಚಾಡಿ ಹೇಳುವುದು) ತರಗತಿಯಲ್ಲಿ ಎಲ್ಲರ ಕೋಪಿ ಪುಸ್ತಕ; ಯಾ; ಲೆಕ್ಕ ಪುಸ್ತಕ ಸಂಗ್ರಹಿಸಿ ಮೇಜಿನ ಮೇಲಿಡುವುದು ಮುಂತಾದುವುಗಳೆಲ್ಲ ನಾಯಕ/ಕಿಯರ ಜವಾಬ್ದಾರಿಗಳಾಗಿರುತ್ತಿದ್ದವು. ಮತ್ತೂ ಒಮ್ಮೆ ನಾಯಕಿಯಾಗ ಹೊರಟಿದ್ದೆ. ಇದು ಮಾತ್ರ ಕಾಲೇಜು ಮೆಟ್ಟಿಲೇರಿದ ಮೇಲೆ.

ಶಾನಿಗೆ ಬಿಟ್ಟ ಅಭ್ಯರ್ಥಿ ಯಾರು? ಆಕೆಯೇ ಅಭ್ಯರ್ಥಿ ಎಂಬ ಒಕ್ಕೊರಲ ಅಭಿಪ್ರಾಯವನ್ನು ನಮ್ಮ ಕ್ಲಾಸು ಹೊರಹಾಕಿದ್ದಾಗ, ಉತ್ಸಾಹ ಪುಟಿಯುವ ಆ ವಯಸ್ಸಿನಲ್ಲಿ ಸುಮ್ಮನಿರಲಾಗುತ್ತದಾ? ಅಣ್ಣನ ಕಿಸೆಯಿಂದ ಹಾರಿಸಿದ ನೋಟುಗಳನ್ನು ಒಟ್ಟುಮಾಡಿ ಠೇವಣಿ ಇರಿಸಿ ಸೆನೆಟ್ ಎಲೆಕ್ಷನ್‌ಗೆ ನಾಮಪತ್ರ ಸಲ್ಲಿಸಿಯಾಯಿತು. ಕಾಲೇಜಿನ ಪ್ರತೀ ವಿದ್ಯಾರ್ಥಿಗೂ ಮತಹಾಕುವ ಅವಕಾಶ ಇರುವ ಕಾರಣ, ಮತ್ತು ನಾನೋರ್ವ ಜನಪ್ರಿಯ ವಿದ್ಯಾರ್ಥಿನಿಯಾಗಿದ್ದ ಕಾರಣ ಗೆಲುವು ನನ್ನದೇ ಎಂದು ನನ್ನ ದೋಸ್ತಿಗಳು ಮತ್ತು ಕೆಲವು ಲೆಕ್ಚರರ್ಸ್‌ಗಳೂ ಲೆಕ್ಕಹಾಕಿದ್ದರು.

ನನ್ನ ಎದುರಾಳಿ ಅಭ್ಯರ್ಥಿನಿ ವರಸೆಯಲ್ಲಿ ನಂಗೆ ನೆಂಟತಿಯೇ. ಆಕೆ ಅಂತಿಮ ಬಿ.ಎ. ನಾನು ಅಂತಿಮ ಬಿ.ಕಾಂ. ಕನ್ನಡ ಮೇಜರ್ ವಿದ್ಯಾರ್ಥಿನಿಯಾಗಿದ್ದ ಅವಳಿಗೆ ನೆಟ್ಟಗೆ ಕನ್ನಡ ಮಾತಾಡಲು ಬರುತ್ತಿರಲಿಲ್ಲ. ಒಂದು ವಾಕ್ಯದಲ್ಲಿ ಕನಿಷ್ಠ ಎರಡಾದರೂ ಮಾತೃ‌ಭಾಷಾ ಪದಗಳು ಮಿಳಿತಗೊಂಡಿರುತ್ತಿದ್ದವು. ಭಾಷಣ ಮಾಡಲು ಬರುತ್ತಿರಲಿಲ್ಲ. ಬರೆದು ತಂದು ಓದುತ್ತಿದ್ದಳು. ಆಕೆ ಯಾವ ಚಟುವಟಿಕೆಯಲ್ಲಿ ಇದ್ದವಳಲ್ಲ. ನಾನಾದರೋ, ಎನ್ಎಸ್ಎಸ್ ನಂದೇ. ಡ್ರಾಮಾದಲ್ಲೂ ನಾನೇ, ಸಾಂಸ್ಕೃತಿಕ ಸಂಘಟನೆಯಲ್ಲೂ ನಾನೇ. ಕಾಲೇಜಿನ ಕಂಬಕಂಬಕ್ಕೂ ಶಾನಿಯಾರೆಂದು ಗೊತ್ತು. ಹೀಗಿರುವಾಗ ಗೆಲುವು ನಮ್ಮದೇ ಎಂಬ ಗ್ಯಾರಂಟಿ.

ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯೊಂದು ಆಕೆಯ ಬೆಂಬಲಕ್ಕಿದೆ ಎಂದು ಗೊತ್ತಿದ್ದರೂ, ಹೆಚ್ಚಿನ ವಿದ್ಯಾರ್ಥಿಗಳು ಶಾನಿಯ ಫೇವರ್ ಅಂತ, ನನ್ನ ಗೆಳತಿಯರ ಬಳಗದ ಸಮೀಕ್ಷೆ ಹೇಳಿತ್ತು. ಹಾಗಾಗಿ ನಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿಯೂ ಇದನ್ನು ಪ್ರಸ್ತಾಪಿಸಿ, ಯಾರದ್ದೇ ಬೆಂಬಲದ ಹಂಗಿಲ್ಲದ, ಸ್ವಂತ ಸಾಮರ್ಥ್ಯದ ಮೇಲೆ ಸ್ಫರ್ಧಿಸುತ್ತಿರುವ ಚುರಕಿನ, ಸ್ವತಂತ್ರ, ಅರ್ಹ ಅಭ್ಯರ್ಥಿ ಎಂದೆಲ್ಲ ಹೇಳುತ್ತಾ, ಮೇಜು ಗುದ್ದಿಗುದ್ದಿ, ಆಕೆಯ ಕ್ಲಾಸಿನಿಂದಲೇ ಭಾಷಣ ಆರಂಭಿಸಿದ್ದೆವು.
ಸಿಕ್ಕಸಿಕ್ಕವರ ಬಳಿ ಹಲ್ಲುಕಿರಿಯುತ್ತಾ ಮತಯಾಚನೆ ಮಾಡುವ ಕಾರಣ ನಮಗೆ ಬಾಯ್ಮುಚ್ಚುವುದೇ ಮರೆತುಹೋಗಿತ್ತು. ಚುನಾವಣೆಗೆ ಎರಡು ದಿನವಿರಬೇಕಿದ್ದರೆ ನನ್ನ ಹತ್ತಿರದ ಸಂಬಂಧಿಯೊಬ್ಬ ಕಾಲೇಜಿನ ಹೊರಗೆ ಸಿಕ್ಕಿದ. "ನಂಗೇ ವೋಟ್ ಹಾಕ್ತೀಯಲ್ಲಾ, ನಿನ್ನಬಳಿಯೂ ನಾನು ಕೇಳ್ಬೇಕಾ" ಅಂದೆ. ಬೇರೆಯೇ ಮಾತನ್ನಾಡಿದ ಆತ "ಒಂದು ಮಾತು. ನೀವು ಸೋತರೆ ಬೇಸರ ಮಾಡಬಾರದು" ಅಂದ. ಎಂಥಾ ಮಾತಾಡ್ತೀಯಾ? ನಾನೇ ಗೆಲ್ಲೋದು ಅಂತ ಕಾಲೇಜಿಗೆ ಕಾಲೇಜೇ ಮಾತಾಡ್ತಿದೆ, ನಿಂಗೆಲ್ಲೋ ಭ್ರಾಂತು ಅಂದೆ.

ಚುನಾವಣೆ ದಿನ ಬಂದೇ ಬಿಡ್ತು. (ಶಾಂತಿಯುತ) ಮತದಾನವಾಯ್ತು. ಮತಎಣಿಕೆ ದಿನದಂದು ಮಾತ್ರ ಆತ್ಮವಿಶ್ವಾಸದ ಜಾಗದಲ್ಲಿ ಸ್ವಲ್ಪ ಜ್ವರಬಂದಂತೆ ಭಾಸವಾಗುತ್ತಿತ್ತು. ಎಣಿಕೆ ಆರಂಭವಾಯ್ತು. ಆರಂಭದ 50 ವೋಟುಗಳ ತನಕ ನನ್ನ ಎದುರಾಳಿಯ ಅಕೌಂಟ್ ಓಪನ್ ಆಗಿರಲೇ ಇಲ್ಲ. ಬಳಿಕವೂ ಒಂದು ಹಂತದ ತನಕ ಶಾನಿಯೇ ಮುಂದಿದ್ದಳು. ಕೊನೆಕೊನೆಗೆ ಆಕೆಯ ಮತಗಳ ಸಂಖ್ಯೆ ಹೆಚ್ಚುತ್ತಿತ್ತು. ಒಮ್ಮೆ ಹಿನ್ನಡೆ, ಮತ್ತೊಮ್ಮೆ ಮುನ್ನಡೆ ಹೀಗೆ ಸಾಗಿತು. ಅಂತಿಮವಾಗಿ ಶಾನಿ 40 ವೋಟಿಗೆ ಸೋತಳು! ಸೋಲಿನ ಬಗ್ಗೆ ತಪ್ಪಿಯೂ ಆಲೋಚಿಸಿಯೇ ಇರದಿದ್ದ ನಾನು ಸೋತಾಗ ಹೇಗಾಗಬೇಕು? ಇಂಗು ತಿಂದ ಮಂಗಿಯಂತಾಗಿದ್ದ ನನಗೆ ಆಕೆಯನ್ನು ಅಭಿನಂದಿಸಬೇಕು ಎಂದೂ ಹೊಳೆಯಲಿಲ್ಲ. ಪ್ರಿನ್ಸಿಪಾಲರು ಹೇಳಿದಾದ ಎಚ್ಚರಗೊಂಡವಳಂತೆ ಶೇಕ್‌ಹ್ಯಾಂಡ್ ಮಾಡಿ, ನನಗಾಗಿ ನನ್ನ ಬಳಗ ತಂದಿದ್ದ ಹೂವಿನ ಹಾರವನ್ನು ಆಕೆಗೆ ಹಾಕಿ, ರಾಕೆಟ್‌ನಂತೆ ಸ್ನೇಹಿತೆ ಶಾಂತಿಯೊಂದಿಗೆ ಕಾಲೇಜು ಆವರಣದಿಂದ ಹೊರಬಿದ್ದೆ.

ನನ್ನ ಅಹಂಕಾರಕ್ಕೆ ಎಷ್ಟು ದೊಡ್ಡ ಏಟು ಬಿದ್ದಿತ್ತೆಂದರೆ ಅಲ್ಲಿಂದ ಬಸ್ ನಿಲ್ದಾಣಕ್ಕೆ ತೆರಳಲೂ ಅವಮಾನವಾದಂತಾಗುತ್ತಿತ್ತು. ಕಂಡವರೆಲ್ಲ ನನ್ನನ್ನೇ ನೋಡುತ್ತಿದ್ದಾರೆ, ಸೋತವಳೆಂದು ಹೀಯಾಳಿಸುತ್ತಾರೆ, ನಾನು ಸೋತೆ, ನಾನು ಸೋತೆ ಎಂಬುದೇ ತಲೆಯೊಳಗೆ ಗಿರಿಗಿಟ್ಲೆ ಹೊಡೆಯುತ್ತಿತ್ತು. ಹೇಗೋ ಅಂದು ಮನೆ ಸೇರಿದವಳು ಒಂದು ವಾರ ಮನೆಯಿಂದ ಹೊರಡಲೇ ಇಲ್ಲ. ಈಗ ನಗು ಬರುತ್ತದೆ.

ಒಂದು ವಾರ ನನ್ನ ಪತ್ತೆ ಇಲ್ಲದ್ದು ಕಂಡ ನಮ್ಮ ಅಕೌಂಟೆನ್ಸಿ ಸರ್ ಫೋನ್ ಮಾಡಿ, ಬಾಯ್ಮುಚ್ಚಿ ಕಾಲೇಜಿಗೆ ಬಾ ಅಂದರು. ಸ್ಫರ್ಧೆ ಅಂದರೆ ಸೋಲು, ಗೆಲುವು ಸಹಜ. ಇಷ್ಟಕ್ಕೂ ನೀನು ಸೋತಿದ್ದು ಬರಿಯ ನಲ್ವತ್ತು ವೋಟಿಗೆ. ಯಾವುದೇ ಹಂಗಿಲ್ಲದೆ ಅಷ್ಟು ವೋಟ್ ಪಡೆದದ್ದು ಗ್ರೇಟ್ ಅಂದಾಗ ನನ್ನ ಅವಮಾನ ಇಳಿಮುಖವಾಯಿತು.

ಸೋಮವಾರ, ಏಪ್ರಿಲ್ 14

ಸೊಳ್ಳೆಯ ಬಂಧ

ಸೊಳ್ಳೆಗಳು ಮತ್ತು ನನ್ನದು ಒಂಥರಾ ಬಿಡಿಸಲಾರದ(ಓಡಿಸಲಾರದ) ಸಂಬಂಧ. ಸೊಳ್ಳೆಯ (ಸು)ಸಂಸ್ಕೃತ ಹೆಸರು ಮಶಕ ಎಂದಂತೆ. ಅದಕ್ಕೇ ಇರಬೇಕು ಈ ಮಶಕಗಳು ಧಾಂಗುಡಿ ಇಡುವ ಪರಿಗೆ ಕೆಲವೊಮ್ಮೆ ಮಸ್ತಕವೇ ಬ್ಲಾಂಕ್ ಆಗಿಬಿಡುತ್ತೆ.

ನಾನು ವಿದ್ಯಾರ್ಥಿನಿಯಾಗಿದ್ದ ಹಂತದಲ್ಲೂ, ಆ ಬಳಿಕ ದುಡಿಯುವ ಮಹಿಳೆಯಾಗಿ ಪರಿವರ್ತನೆಗೊಂಡ ಬಳಿಕವೂ, ಎಲ್ಲೇ ಹೋದರೂ ನಂಗೆ ಊಟ ಮತ್ತಿತರ ಸೌಲಭ್ಯಗಳಿಗೆ ಒಂದಿಷ್ಚು ಕೊರತೆಯಾದರೂ, ಸೊಳ್ಳೆಗಳಿಗೆ ಮಾತ್ರಬರವೆಂಬುದು ಬಂದುದೇ ಇಲ್ಲ. ಈಗ ಇರುವಲ್ಲೂ ಸಹ. ಹಾಗಂತ, ಇವುಗಳಿಂದ ಇತರರು ಅನುಭವಿಷ್ಟು ಹಿಂಸೆ ನಾನು ಅನುಭವಿಸಿದ್ದೇನೆ ಎಂದೇನಾದರೂ ಹೇಳಿದರೆ ಸೊಳ್ಳೆಗೆ ಅನ್ಯಾಯವಾದೀತು. ಅವೇನಿದ್ದರೂ, ನನ್ನ ಸುತ್ತಮುತ್ತ ಡಂಯೀ... ಡುಂಯೀ.. ಎಂಬ ಹಾಡು ಹಾಡುತ್ತಾ, ಹಾರಾಡುತ್ತವೆಯೇ ವಿನಹ ಅಂಥ ಪರಿ ಕಚ್ಚುವುದಿಲ್ಲ. ಫ್ಯಾನಿಲ್ಲದೆ, ಸೊಳ್ಳೆ ಪರದೆ ಇಲ್ಲದೆ, ಕಾಯಿಲಿಲ್ಲದೆ, ಮ್ಯಾಟಿಲ್ಲದೆ, ಗುಡ್ ನೈಟೂ ಇಲ್ಲದೆ ಸೊಳ್ಳೆಗಳ ಸಂಗೀತ ಮಾತ್ರ ಕೇಳಿ ನಿದ್ರಿಸುತ್ತೇನೆ ನಾನು. ಇತರರೆಲ್ಲ ನನ್ನ ಈ ಸಿದ್ಧಿಗೆ ಬೆರಗಾಗಿ ಹೋಗುತ್ತಾರೆ. ಒಂದೊಮ್ಮೆ ಒಂದೆರಡು ಕಡಿದರೂ ಮರುದಿನ ಅದರ ಕುರುಹೇನೂ ಇರುವುದಿಲ್ಲ.

ಸೊಳ್ಳೆ ಕಡಿತವಾದರೂ ಸಹಿಸಿಕೊಳ್ಳಬಹುದು. ಅದರೆ ಅದು ಹಾರಾಡುತ್ತಾ ಹೊರಡಿಸುವ ಸಂಗೀತ ಯಾರಿಗಾದೀತು. ಅವುಗಳು ಕಿವಿಬಳಿಬಂದು ಅದೇನು ಹೇಳುತ್ತವೆ ಎಂಬುದು ನನ್ನ ಕುತೂಹಲ. ಮೂರ್ನಾಲ್ಕು ಭಾಷೆಗಳನ್ನು ಅರ್ಧಂಬರ್ಧ ಕಲಿತಿರುವ ನಾನು ಸೊಳ್ಳೆ ಭಾಷೆಯನ್ನೂ ಕಲಿಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಮತ್ತು ಪ್ರಾಮಾಣಿಕವಾಗಿ ಸೋತಿದ್ದೇನೆ. ಹಾಗಾಗಿ ಅವುಗಳು ಬಹುಶಃ "ನಿನ್ನ ರಕ್ತ ಇಷ್ಟ್ಯಾಕೆ ಕಹಿ ಅಂತ ಕೇಳ್ತಿರಬಹುದು" ಅಂತ ಅಂದುಕೊಂಡಿದ್ದೇನೆ.

ತಾಳ್ಮೆ ಮತ್ತು ನಾನು ಪರಸ್ಪರ ವಿರೋಧಾಭಾಸಗಳೇ.ಒಂದು ಸರ್ತಿ, ಎರಡು ಸರ್ತಿ, ಹೆಚ್ಚೆಂದರೆ ಮೂರು ಸರ್ತಿ. ಈ ಸೊಳ್ಳೆಗಳು ಡುಂಯ್‌ಡುಂಯ್ ಅನ್ನುತ್ತಾ ಕಿವಿ ಬಳಿ ಸುಳಿದಾಡುವಾಗ ಒಂಥರಾ ಕಿರಿಕಿರಿ. ಈ ಕಿರಿಕಿರಿ ಸ್ವಲ್ಪಹೊತ್ತಲ್ಲೇ ಮೈಯಿಡೀ ವ್ಯಾಪಿಸಿಕೊಂಡು ಉರಿಉರಿ ಅನ್ನತೊಡಗುತ್ತದೆ. ತಾಳ್ಮೆ ತಪ್ಪಿದರೆ, ಅದು ನನ್ನ ಹತ್ತಿರದವರಿರಲಿ, ದೂರದವರಿರಲಿ, ಗೆಳತಿಯರಿರಲಿ, ಉದ್ಯೋಗದಾತರಿರಲಿ, ಅಷ್ಟೆಲ್ಲ ಏಕೆ, ಇಂದಿಗೂ ನನ್ನನ್ನು ಕೂಸು... ಕೂಸು ಅನ್ನುತ್ತಾ ಜೋಪಾನ ಮಾಡುವ ಅಮ್ಮನೆ ಆಗಲಿ, ಯಾರೆಂದು ನೋಡದೆ, ನನ್ನೊಳಗಿನ ಕಿರಿಕಿರಿಯನ್ನು ಹೊರಗೆಡಹಿ ಬಿಡುತ್ತೇನೆ. ಇದರಿಂದ ಎಷ್ಟೋ ಅನಾಹುತಗಳು ಆಗಿವೆ. ಸ್ನೇಹಿತರು ವೈರಿಗಳಾಗಿದ್ದಾರೆ. ಹತ್ತಿರದವರು ದೂರಹೋಗಿದ್ದಾರೆ. ಕೆಲಸ ಕಳ್ಕೊಂಡಿದ್ದೇನೆ. ಅಹಂಕಾರಿ ಅನ್ನಿಸಿಕೊಂಡಿದ್ದೇನೆ. ಅದು ಹೌದೆಂದು ಗೋಚರವಾದರೂ, ಒಪ್ಪಿಕೊಳ್ಳಲು ಅಹಂಕಾರ ಅಡ್ಡಬರುವುದಿಲ್ಲವೇ... ಹಾಗಾಗಿ ಅದು ಅಹಂಕಾರವಲ್ಲ, ಅಲಂಕಾರ ಅಂತ ಸಮಾಧಾನಿಸಿಕೊಳ್ಳುತ್ತೇನೆ. ಹುಟ್ಟುಗುಣ ಹೋಗುತ್ತಾ...?

ಹೀಗಿರುವಾಗ ನಾನು ಈ ಯಕಶ್ಚಿತ್ ಸೊಳ್ಳೆಯ ಬಳಿ ತಾಳ್ಮೆಯಿಂದ ವರ್ತಿಸಲಾಗುತ್ತಾ? ಅದ್ಕೇ, ಅದೊಂದು ಸರ್ತಿ ನನ್ನ ಬಲಗಿವಿಯ ಬಳಿ ಓಡಿಸಿದಷ್ಟೂ, ಮತ್ತೆಮತ್ತೆ ವಕ್ಕರಿಸಿ ಕರ್ಣಕಠೋರ ಸಂಗೀತ ಹಾಡುತ್ತಿದ್ದ ಸೊಳ್ಳೆಯೊಂದಕ್ಕೆ ಕಲಿಸಬೇಕೆಂದು, ಎಷ್ಟು ಸಾಧ್ಯವೋ ಅಷ್ಟು ಶಕ್ತಿಹಾಕಿ, ಬಲವಾಗಿ ಅಪ್ಪಳಿಸಿದೆ. ಸೊಳ್ಳೆ ಸತ್ತಿತೋ, ಓಡಿತೋ ಯಾರಿಗೆ ಗೊತ್ತು. ಆದರೆ, ಆ ಬಲವಾದ ಏಟು ಆಯಕಟ್ಟಿನ ಜಾಗಕ್ಕೆ ಬಿದ್ದು ಶ್ರವಣ ಸಮಸ್ಯೆಯುಂಟಾಯಿತು. ಬಲಗಿವಿಯ ಕತೆ ಹೀಗಾದರೆ; ಎಡಗಿವಿಯ ಕತೆ ಬೇರೆಯೇ ಇದೆ. ಚಿಕ್ಕಂದಿನಲ್ಲಿ ಲಾಗಹಾಕುವ ವೇಳೆ ಬಿದ್ದು ಎಡ ಕಿವಿ ಮೊದಲೇ ಸಮಸ್ಯೆಯಲ್ಲಿತ್ತು. ಇದೀಗ ಎರಡೂ ಕಿವಿಯ ಶ್ರವಣ ಶಕ್ತಿ ಒಂದೇ ನಮೂನೆಯಾಗಿ ಹೋಗಿದೆ. ಹಾಗಾಗಿ ಈ ಸೊಳ್ಳೆಯ ದೆಸೆಯಿಂದಾಗಿ ಮೊದಲೇ ಕುರುಡುತನ ಅನುಭವಿಸುತ್ತಿದ್ದ ನನ್ನೊಂದಿಗೆ ಕಿವುಡುತನವೂ ಸೇರಿಕೊಂಡಿದೆ. ಹಾಗಂತ ನಂಗೇನು ಚಿಂತೆ ಇಲ್ಲ. ಇದರಿಂದ ನಂಗೆ ಅನುಕೂಲವೇ ಆಗಿದೆ. ಬೇಕಿರುವುದನ್ನು ಮಾತ್ರ ಕೇಳಿಸಿಕೊಂಡು, ಬೇಡದಿರುವುದನ್ನು ಕೇಳದಂತೆ ನಟಿಸುತ್ತೇನೆ. (ಹೆಚ್ಚಾಗಿ ಬಾಸ್ ಬಯ್ಯುವ ವೇಳೆ). ಸ್ನೇಹಿತೆಯ ಬಳಿ ಕೈಸಾಲವೇನಾದರೂ ಪಡೆದರೆ, ಫೋನ್ ಮೂಲಕ ಅವಳಾಚೆಯಿಂದ, ದುಡ್ಯಾವಾಗ ಹಿಂತಿರುಗಿಸುತ್ಯಾ... ಅಂತ ಕೇಳಿದರೆ, ಎಂಥಾ.... ಎಂಥಾ ಅನ್ನುತ್ತಾ ಅವಳಿಗೇ ದಾಕ್ಷಿಣ್ಯವಾಗಿ ವಿಷಯ ಮಾಚುವಂತೆ ನೋಡಿಕೊಳ್ಳುತ್ತೇನೆ.

ಆದರೆ ಇದನ್ನೇ ನೆಪವಾಗಿಟ್ಟು ಸರ್ಕಾರಿ ಕೆಲಸ ಗಿಟ್ಟಿಸಿ ದೂರುಗಳ ವಿಭಾಗಕ್ಕೇನಾದರೂ ಸೇರೋಣವೆಂದರೆ, ಅತ್ತ ಅಂಗವಿಕಲ ಕೋಟಾದಡಿಗೂ ಬರುವುದಿಲ್ಲ. ಏಕೆಂದರೆ ಈಚೆ ಪೂರ್ತಿ ಕುರುಡಿಯೂ ಅಲ್ಲ; ಆಚೆ ಪೂರ್ತಿ ಕೆಪ್ಪಿಯೂ ಅಲ್ಲವಲ್ಲ!

ಊಟ-ತಿಂಡಿ, ನಿದ್ರೆಯ ವಿಚಾರದಲ್ಲಿ ಅಂತಾ ಶಿಸ್ತಿನವಳಲ್ಲದ ನಂಗೆ ಅದೊಮ್ಮೆ ಮಧ್ಯರಾತ್ರಿ ಪೂರಿ ಮಾಡಬೇಕೆಂಬ ತುಡಿತ ಉಂಟಾಗಿತ್ತು. ಕಾರಣ ಮತ್ತೇನಿಲ್ಲ, ಹೊಟ್ಟೆಹಸಿವು. ಈ ಹಸಿವು ನನ್ನನ್ನು ಬೆಡ್‌ರೂಮಿನಿಂದ ಕಿಚನ್‌ಗೆ ತಂದು ನಿಲ್ಲಿಸಿತ್ತು. ಕಿಚನ್ನಲ್ಲಿ ಲೈಟ್ ಕಂಡದ್ದೇ, ಅಲ್ಲಿಗೆ ಬಂದ ಸೊಳ್ಳೆಗಳು, ನಾನು ಪೂರಿ ಲಟ್ಟಿಸುತ್ತಿರಬೇಕಿದ್ದರೆ ಸುತ್ತುಮುತ್ತು ಹಾರ(ಡ)ಲಾರಂಭಿಸಿದವು. ಕೈಯಲ್ಲಿ ಲಟ್ಟಣಿಗೆ ಇತ್ತಾದರೂ ಇದರಲ್ಲಿ ಸೊಳ್ಳಗೆ ಹೊಡೆದರೆ, ಸೊಳ್ಳೆಗಿಂತ ನಂಗೇ ಡೇಂಜರೆಂದು, ಬೇಕಾದ್ದು ಮಾಡಿಕೊಳ್ಳಲಿ ಅಂತ ನನ್ನಪಾಡಿಗೆ ನಾನಿದ್ದೆ. ಅಷ್ಟರಲ್ಲಿ ಸೊಳ್ಳೆಯೊಂದು ಹಾರುಹಾರುತ್ತಲೆ ಒಲೆ ಮೇಲೆ ಎಣ್ಣೆ ಮಳಲುತ್ತಿದ್ದ ಬಣಲೆಯೊಳಗೆ ಬಿತ್ತು. ಪೂರಿಯೊಂದು ಅದೇ ಎಣ್ಣೆಯಲ್ಲಿ ಕಾಯುತ್ತಿತ್ತು. ಯಾವುದನ್ನು ಬಿಸಾಕಲೀ.... ಎಣ್ಣೆಯನ್ನೋ? ಪೂರಿಯನ್ನೋ? ಬಿದ್ದು ಮರಗಟ್ಟಿದ ಸೊಳ್ಳೆಯನ್ನೋ....? ಹೊಟ್ಟೆಯೊಳಗಿನ ಹಸಿವು ಮತ್ತೊಮ್ಮೆ ಕುದಿಯಿತು. ಸೊಳ್ಳೆಯನ್ನು ತೆಗೆದೆಸೆದು, ಉಬ್ಬಿದ ಪೂರಿಯನ್ನು ಎಣ್ಣೆಯಿಂದ ತೆಗೆದು ಅದೇ ಎಣ್ಣೆಯಲ್ಲಿ ಇನ್ನೊಂದು ಪೂರಿ ಬಿಟ್ಟೆ...!!!

ಶುಕ್ರವಾರ, ಏಪ್ರಿಲ್ 11

ಕಂಕುಳಡಿಯಲಿ ಇಟ್ಟು ನಡೆದಳು...

ಗಜಮೂಖದವಗೇ..... ಗಣಪಗೇ.... ಶುರುವಾದರೂ ಅವ್ವನ ಹೊರಡಾಟ ಮುಗಿಯುತ್ತಿರಲೇ ಇಲ್ಲ। ಜಯಂತ್ಯಕ್ಕ ಬೆಳಿಗ್ಗೆಯಿಂದಲೇ ಗಿಡದಿಂದ ಕೊಯ್ದು ಕಟ್ಟಿದ ಅಬ್ಬಲ್ಲಿಗೆ(ಕನಕಾಂಬರ) ಹೂವಿನ ಮಾಲೆಯನ್ನು ಒಂದಿನಿತು ಹೆಚ್ಚು ಕಮ್ಮಿಯಾಗದಂತೆ ಹೊರಟು ರೆಡಿಯಾಗುತ್ತಿರುವ ಎಲ್ಲಾ ಹೆಣ್ಣು ತಲೆಗಳಿಗೂ ಸಮನಾಗಿ ಹಂಚುತ್ತಿದ್ದರೆ, ಗಾಯತ್ರಕ್ಕ ಇದ್ದುದರಲ್ಲಿ ಒಳ್ಳೆಯ ಚಾಪೆಯ ಆಯ್ಕೆ ಮಾಡುತ್ತಿದ್ದಳು. ದೊಡ್ಡಕ್ಕನಿಗೆ ನಮ್ಮ ವೇಷ - ಭೂಷಣಗಳ ಮೇಲ್ವಿಚಾರಣೆ....


ಇದು ನಮ್ಮೂರಲ್ಲಿ ಯಾವುದಾದರೂ ಮೇಳದವರು ವರ್ಷಕ್ಕೊಮ್ಮೆ ಹಾಕ್ಕೊಳ್ಳುತ್ತಿದ್ದ ಯಕ್ಷಗಾನ ಕಾರ್ಯಕ್ರಮದಂದು ನಮ್ಮ ಮನೆಯೊಳಗೆ ನಡೆಯುತ್ತಿದ್ದ ಕಾರ್ಯಕ್ರಮ। ವರ್ಷಕ್ಕೊಂದಾವರ್ತಿಯ ನಮ್ಮೂರ ಏಕೈಕ ಮನರಂಜನೆಯಾದ ಯಕ್ಷಗಾನ ಇದೆ ಎಂದರೆ ನಮ್ಮಪ್ಪನ ಮುಖದಲ್ಲಿ ಕೋಪ ದಿಗಿಣಗುಟ್ಟುತ್ತಿತ್ತು. ನಾಟಕ, ಯಕ್ಷಗಾನ ಮುಂತಾದುವುಗಳಲ್ಲಿ ಆಸಕ್ತಿಯೇ ಇಲ್ಲದ ಅವರಿಗೆ "ಇವರೆಲ್ಲ(ಯಕ್ಷಗಾನದವರು) ಜನರೆಲ್ಲ ಮರುಳು ಮಾಡಲು ಬರುವವರು" ಎಂಬ ತಾತ್ಸಾರ. ಯಕ್ಷಗಾನವಿದ್ದರೆ ನಾವೆಲ್ಲ ಕಾಲಿಗೆ ಗೆಜ್ಜೆಕಟ್ಟಿಯೇ ಸಿದ್ಧ ಎಂದು ಗೊತ್ತಿರುವ ಅವರು, ಬೆಳಗ್ಗಿನಿಂದಲೇ ವಿನಾಕಾರಣ ಸಿಡಿಮಿಡಿಗುಟ್ಟಲಾರಂಭಿಸುತ್ತಾರೆ. ಅತ್ತ ಗಂಡನ ಕೋಪ, ಇತ್ತ ಮಕ್ಕಳ ಹಠದ ನಡುನೆ ಸಿಲುಕಿದ ಅವ್ವ, ಹೆದರಿಹೆದರಿ ಬೆದರಿ, ಅಪ್ಪನ ಬಳಿ, ಮಕ್ಕಳು ಆಟಕ್ಕೋಗಬೇಕೆನ್ನುತ್ತಾರೆ (ಯಕ್ಷಗಾನಕ್ಕೆ ಆಟ ಅನ್ನುವುದು ರೂಢಿ) ಎನ್ನುತ್ತಾ ಪರ್ಮಿಶನ್ ಕೇಳುತ್ತಾರೆ. ಇದಕ್ಕೆಂದೇ ಕಾಯುತ್ತಿದ್ದ ಅಪ್ಪ, ತನ್ನ ಉದ್ದ ಮೂಗನ್ನು ಇನ್ನಷ್ಟು ನೇತಾಡಿಸಿ, ನಮಗೂ, ಯಕ್ಷಗಾನ ಮೇಳಕ್ಕೂ ಇನ್ನಿಲ್ಲದಂತೆ ಚೆನ್ನಾಗಿ ಬಯ್ದು, ಹೋಗಿ ಸಾಯಿರಿ ಅನ್ನುತ್ತಾ ದುಡ್ಡು ಕೊಡದೆ ಪರ್ಮಿಶನ್ ಕೊಡುತ್ತಾರೆ. ನಾವಾದರೋ, ಗೇರುಬೀಜ, ಬಿದ್ದಆಡಿಕೆ, ಅಂಟುವಾಳಕಾಯಿ ಮುಂತಾದುವುಗಳನ್ನು ಸಂಗ್ರಹಿಸಿ ಮಾರಿದ ದುಡ್ಡನ್ನು ಒಟ್ಟುಗೂಡಿಸಿ ಯಕ್ಷಗಾನ ನೋಡಲು ಹೊರಟೇ ಹೊರಡುತ್ತೇವೆ.


ಬೆಳಿಗ್ಗೆಯೇ ಯಕ್ಷಗಾನದ ಪೀಠೋಪಕರಣ, ದಿರಿಸು, ಸಾಮಾನು-ಸರಾಂಜಾಮು ಹೇರಿಕೊಂಡು ಬರುವ ಲಾರಿ ಮೈಕ್ ಕಟ್ಟಿಕೊಂಡೇ ಬರುತ್ತದೆ। ಆ ಶಬ್ದ ಕೇಳಿದ ತಕ್ಷಣ ಊರಿಗೆ ಊರೇ ಪುಳಕಗೊಳ್ಳುತ್ತಿತ್ತು. ಯಾವಾಗೊಮ್ಮೆ ರಾತ್ರಿಯಾಗಲಿಲ್ಲ ಎಂಬ ಕಾತರ ನನ್ನಂತೂ ಕಾಡುತ್ತಿತ್ತು. ಮೂರುಗಂಟೆಗೆ ಬಿಸಿನೀರಿಗೆ(ನೀರೊಲೆಗೆ) ಬೆಂಕಿಹಾಕುವಲ್ಲಿಂದ ಯಕ್ಷಗಾನಕ್ಕೆ ಹೊರಡಲಾರಂಭ. (ನಮ್ಮ ಹಳ್ಳಿಗಳಲ್ಲೆಲ್ಲ ಸಂಜೆವೇಳೆ ಸ್ನಾನ) ದೊಡ್ಡಕ್ಕ ಅಡಗಿಸಿಡುತ್ತಿದ್ದ ಚಂದ್ರಿಕಾ ಸೋಪನ್ನು ಕದ್ದು, ಎರಡೆರಡು ಬಾರಿ ತಿಕ್ಕಿ ಸ್ನಾನಮಾಡಿ ಹೊರಡುವುದೆಂದರೆ ಖುಷಿಯೋ ಖುಷಿ. ಸಾಯಂಕಾಲವಾಗುತ್ತಲೇ ಮೈಕ್ ಜೋರುಜೋರಾಗುತ್ತದೆ. ಅಂದು ಅಡುಗೆ, ಊಟ ಎಲ್ಲ ಬೇಗಬೇಗ. ಏಳುಗಂಟೆಯ ವೇಳೆಗೆ ಕೇಳಿ ಹೊಡೆಯಲು ಆರಂಭಿಸಿ ಚೆಂಡೆಗೆ ಪೆಟ್ಟು ಬಿತ್ತೆಂದರೆ ನನ್ನ ಕಾಲು ನೆಲದಮೇಲೆ ನಿಲ್ಲುತ್ತಿರಲಿಲ್ಲ.


ಈ ಅವ್ವಂದು ಎಷ್ಟು ಹೊರಟರೂ ಮುಗಿಯುತ್ತಿರಲಿಲ್ಲ। ಅಪರೂಪಕ್ಕೆ ಮನೆಯಿಂದ ಹೊರಡುವ ಅವರಿಗೆ ತಲೆ ಬಾಚಿದಷ್ಟೂ ಸಮಾಧಾನವಿಲ್ಲ. ತಲೆಕಟ್ಟಕ್ಕೆ ಹೇಗೇಗೆ ಹುದುರಿ ಹಾಕಿದರೂ, ಮುಳ್ಳು ಚುಚ್ಚಿದರೂ ಅದು ಸೊಟ್ಟವೇ ಆಗುತ್ತದೆ ಎಂಬುದು ಅವರ ಅನಿಸಿಕೆ. ಈ ಮಧ್ಯೆ ನಾಯಿ ಅನ್ನತಿನ್ನದಿದ್ದರೆ, ಬೆಕ್ಕು ಬರದೇ ಇದ್ದರೆ, ರಾತ್ರಿಯ ಊಟದ ಬಳಿಕ ಉಳಿಯುವ ಸಾರು ಪದಾರ್ಥಗಳನ್ನು ಚೆನ್ನಾಗಿ ಕುದಿಸದೇ ಇದ್ದರೆ ಅವರ ತಲೆಬಿಸಿಯೇ ಬೇರೆ. ಮುಖಕ್ಕೆ ಢಾಳಾಗಿ ಮೆತ್ತುವ ಕುಟ್ಟಿಕೂರ ಪೌಡರನ್ನು ಬಟ್ಟೆಯಲ್ಲಿ ತಿಕ್ಕಿತಿಕ್ಕಿ ಮುಖ ನೋಯಿಸಿಕೊಳ್ಳುತ್ತಿದ್ದರು ಪಾಪ. (ಇಲ್ಲವಾದರೆ ದೊಡ್ಡಕ್ಕ ಇದೆಂತದು, ಬೂದಿ ಮೆತ್ತಿದಾಂಗೆ ಅಂತ ಬಯ್ತಾಳಲ್ಲ)


ಚೆಂಡೆಸದ್ದು ಕೇಳಿದ ತಕ್ಷಣ ಯಕ್ಷಗಾನ ಆರಂಭವಾಗೇ ಹೋಯಿತೆನ್ನುವ ನನಗೆ ಅವರ ಮೇಲೆ ಕೆಟ್ಟ ಸಿಟ್ಟು ಬರುತ್ತಿತ್ತು॥ ಕೇಳಿಹೊಡೆದಾಗಿ, ಗಜಮೂಖದವಗೇ...... ಆಗಿ, ಚಿಕ್ಕಪ್ರಾಯದ ಬಾಲೆ.... ಶುರುವಾದರೂ ಹೊರಟಾಗುತ್ತಿರಲಿಲ್ಲ। ಮನೆಯ ಸಮೀಪವೇ ಇರುವ ಶಾಲೆಯ ಮೈದಾನದಲ್ಲೇ ಆಟ. ಗಾಯತ್ರಕ್ಕನೂ ಅವ್ವನ ಮೇಲೆ ಸಿಡಿಮಿಡಿಗುಟ್ಟುತ್ತಿದ್ದಳು. ಯಾಕೆಂದರೆ ನಮ್ಮ ಬಜೆಟ್ಟಿಗೆ ನಿಲುಕುವುದು ಎರಡು ರೂಪಾಯಿ ಟಿಕೆಟ್ಟು. ಈ ಟಿಕೆಟಿಗೆ ಯಾವುದೇ ಆಸನಗಳಿಲ್ಲ. ನೆಲದ ಮೇಲೇ ಕುಳಿತುಕೊಳ್ಳಬೇಕು. ರಾತ್ರಿಯಿಡೀ ಬರಿಯ ನೆಲದ ಮೇಲೆ ಕುಳಿತು (ಮಲಗಿ) ಆಟ ನೋಡುವಾಗ ಕಲ್ಲೊತ್ತುತ್ತದೆಯೆಂದು ಚಾಪೆ ಒಯ್ಯುತ್ತಿದ್ದೆವು. ಅದನ್ನು ಹಾಸಿ ಕುಳಿತುಕೊಳ್ಳಲು, ತಡವಾದರೆ ಆಯಕಟ್ಟಿನ ಜಾಗ ದೊರೆಯದು ಎಂಬುದು ಅವಳ ಕಳವಳ.


"ಚಿಕ್ಕ ಪ್ರಾಯದ ಬಾಲೆ ಚದುರೇ......" ಅಂತ ಭಾಗವತರು ಶುರುವಿಟ್ಟುದು ಮೈಕ್‌ನಲ್ಲಿ ಕೇಳಿದ ತಕ್ಷಣ, ಚಿಕ್ಕ ಪ್ರಾಯದ ಬಾಲೆಯಾದ ನನ್ನ ಮೇಲೆಯೇ ನನಗೆ ಕೋಪವುಕ್ಕುತ್ತಿತ್ತು। ಸ್ವಲ್ಪ ದೊಡ್ಡ ಪ್ರಾಯದ ಬಾಲಕ ನಾನಾಗುತ್ತಿದ್ದರೆ, ಇವರ್ಯಾರ ಹಂಗಿಲ್ಲದೇ ನನ್ನಷ್ಟಕೇ ನಾನು ಆಟ ನೋಡಲು ಹೋಗುತ್ತಿದ್ದೆ. ಛೇ.... ಅವ್ವ ಒಂದು, ಹೀಗೆ ಸಿಟ್ಟು ಮಾಡಿಕೊಂಡು ಅತ್ತು, ಜಗಳವಾಡಿ, ಹಾಗೂಹೀಗೂ ಕೊನೆಯ ಬಾರಿಗೊಮ್ಮೆ ಸೀರೆಯ ನೆರಿಗೆಯನ್ನು ಬಗ್ಗಿ ನೋಡಿ, 'ಹುಂ ಹೊರಡುವಾ' ಅಂತ ಸೂಟೆಗೆ ಬೆಂಕಿ ಇಕ್ಕುವಾಗ ಆತುರ, ಕಾತುರ, ನಿರಾಶೆ, ಕೋಪ, ದುಃಖದಿಂದ ಹೈರಾಣಾಗಿರುತ್ತಿದ್ದೆ.


ಆದರೂ, ಅವ್ವ ನಮಗೆಲ್ಲ ದಾರಿ ಕಾಣಲಿ ಎಂಬುದಾಗಿ ಹಿಡಿಯುತ್ತಿದ್ದ ಮಡಲಿನ ಸೂಟೆ(ತೆಂಗಿನ ಗರಿಯದೊಂದಿ)ಯ ಬೆಳಕಿನಲ್ಲಿ, ಪೆಟ್ಟಿಗೆಯೊಳಗಿಡುವ ಕರ್ಪೂರದ ಘಮಬೀರುವ ಅಂಗಿಯ ನೆರಿಗೆಯಾಡಿಸಿಕೊಂಡು, ನನ್ನ ಮುಂದಕ್ಕೆ, ಒಮ್ಮೊಮ್ಮೆ ಉದ್ದವಾಗಿ, ಗಿಡ್ಡವಾಗಿ ನನ್ನೊಂದಿಗೆ ಸ್ಫರ್ಧಿಸುತ್ತಿದ್ದ, ನನ್ನದೇ ನೆರಳನ್ನು ಓಡಿಸುವಂತೆ ನಡೆಯುತ್ತಿದ್ದೆ। ಗಾಯತ್ರಕ್ಕ ಕಂಕುಳಡಿಯಲ್ಲಿ ಚಾಪೆ ಇರಿಸಿಕೊಂಡು ಯಾವಾಗ ಜಾಗ ಸೆಲೆಕ್ಟ್ ಮಾಡಿ ಇದನ್ನು ಹಾಸಿಯೇನೂ ಎಂಬ ಧಾವಂತದಲ್ಲಿ ನಡೆಯುತ್ತಿದ್ದಳು. ಅವಳು ಚಾಪೆ ಹಿಡಿದು ನಡೆವ ಆ ಭಂಗಿ ನೆನಪಿಸಿಕೊಂಡರೆ, ಈಗ ನನಗೆ ಕೈಲಿ ಜಾಗಟೆ ಹಿಡಿದು ಭಾಗವತಿಯಾಗಿ "ಕಂಕುಳಡಿಯಲಿ ಇಟ್ಟು ನಡೆದಳು ಸುರುಳಿ ಸುತ್ತಿದ ಒಲಿಯ ಚ್ಹಾಪೆಯ್ಹಾ....." ಎಂಬುದಾಗಿ ಹಾಡಬೇಕೆಂದು ಟೆಮ್ಟ್ ಆಗುತ್ತದೆ. ಸಾಧು ಸ್ವಭಾವದ ಜಯಂತ್ಯಕ್ಕ, ಅವಸರದಲ್ಲಿ ಓಡುವ ನನ್ನ ಕೈ ಹಿಡಿದುಕೊಳ್ಳಲು ಬರುತ್ತಿದ್ದಳು. ದೊಡ್ಡಕ್ಕ ಮಾತ್ರ ನಮ್ಮೆಲ್ಲರ ಮೇಸ್ತ್ರಿಯಂತೆ, ಘನಗಾಂಭೀರ್ಯದಲ್ಲಿ, ಕೈಯಲ್ಲಿ ಪರ್ಸು ಹಿಡಿದು ಹದಾ ಗತ್ತಿನಲ್ಲಿ ಹೆಜ್ಜೆ ಹಾಕುತ್ತಿದ್ದಳು.


ಜನ್ರೇಟರ್ ಸಹಾಯದಿಂದ ಉರಿವ ಸಾಲಾಗಿ ಕಟ್ಟಿದ ಟ್ಯೂಬುಲೈಟುಗಳ ಬೆಳಕು ಕಾಣುತ್ತಲೇ ಬೆಂಕಿ ನಂದಿಸಿ ಸೂಟೆ ಬಿಸಾಡುತ್ತಿದ್ದೆವು। ಆ ಲೈಟುಗಳ ಬೆಳಕು ಮೈಮೇಲೆ ಬೀಳುತ್ತಲೇ ಅನಿವರ್ಚನೀಯ ಆನಂದ ಉಂಟಾಗುತ್ತಿತ್ತು. ಒಂದು ಸ್ವಲ್ಪ ನಾಚಿಕೆ, ಮುಜುಗರ, ಸಂಕೋಚ ಎಲ್ಲ ಏಕಕಾಲಕ್ಕೆ ಮಿಳಿತಗೊಂಡು ಎಲ್ಲರೆದುರು ಹೆಜ್ಜೆ ಹಾಕಲೇ ಕಷ್ಟವೆನ್ನುವ ಪರಿಸ್ಥಿತಿ. ಅಂತೂ ಡೇರೆಯ ಒಳಗೆ ಹೋಗಿ ಕುಳಿತು ರಂಗಸ್ಥಳ ನೋಡಿದಾಗಲೇ ಸಮಾಧಾನ.


ರಂಗಸ್ಥಳದಲ್ಲಿ ಕೋಡಂಗಿ ಕುಣಿತ, ಸ್ತ್ರೀ ವೇಷ ಕುಣಿತಗಳೆಲ್ಲ ಮುಗಿದು, ಒಡ್ಡೋಲಗದ ಹೊತ್ತಿಗೆ ನಾನು ಮೆಲ್ಲ ನಿದ್ರೆಗೆ ಜಾರುತ್ತಿದ್ದೆ। ಇದು ಎಚ್ಚರಾವಾಗುವುದು ಒಂದೋ ರಾವಣನ(ಎಲ್ಲ ಬಣ್ಣದ ವೇಷವೂ ನನಗಾಗ ರಾವಣನೇ) ಪ್ರವೇಶದ ಸಂದರ್ಭದಲ್ಲಿ. ಯಾಕೆಂದರೆ, ಬಿರುಸಿನ ಚೆಂಡೆ, ಅವಸರದ ಮದ್ದಳೆ, ಇದಕ್ಕೆ ಸರಿಹೊಂದುವ ಚಕ್ರತಾಳ, ಭಾಗವತರ ಜಾಗಟೆಯ ಜೋರಿನೊಂದಿಗೆ ರಾವಣನ ಅಟ್ಟಹಾಸಕ್ಕೆ ಆಗಷ್ಟೆ ಎಚ್ಚರಗೊಂಡು ನಿದ್ದೆಯ ಮಂಪರಿನಲ್ಲೇ ಇರುತ್ತಿದ್ದ ನನ್ನಂಥವರಿಗೆ ಒಂದು ರೀತಿಯ ಕುತೂಹಲ ಮಿಶ್ರಿತ ಭಯವಾಗುತ್ತಿತ್ತು. ರಾವಣನ ಕಿರುಚಾಟಕ್ಕೆ ಮೈಯೀಡೀ ಕಂಪನ. ಅದು ದೇವಿಮಹಾತ್ಮೆ ಆಟವಾದರೆ ಮುಗಿಯಿತು. ಮಹಿಷಾಸುರ ಆರ್ಭಟಿಸುತ್ತಾ, ಸಭೆಯಲ್ಲಿ ಬೆಂಕಿಯೊಂದಿಗೆ ಆಟವಾಡುತ್ತಾ ಬರುವಾಗ ಕುಳಿತಲ್ಲಿಂದ ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಿದ್ದೆವು. ಜಯಂತ್ಯಕ್ಕ ನನ್ನನ್ನು ಅವಚಿ ಹಿಡಿದುಕೊಂಡರೆ, ಗಾಯತ್ರಕ್ಕನಿಗೆ ಎಲ್ಲರೂ ತುಳಿದು ಚಾಪೆ ಹಾಳಾದೀತ ಎಂಬ ಚಿಂತೆ.


ನಿದ್ದೆಯಿಂದ ಎಚ್ಚರವಾಗುವ ಇನ್ನೊಂದು ಸಂದರ್ಭವೆಂದರೆ ಆಯಿಸಗಾರನ (ಹಾಸ್ಯಗಾರನಿಗೆ ನಮ್ಮ ವರ್ಷನ್!) ಪ್ರವೇಶ. ಜಯಂತ್ಯಕ್ಕ ಆಯಿಸಗಾರ ಬಂದ, ಏಳುಏಳು ಅಂತ ಎಬ್ಬಿಸುತ್ತಿದ್ದಳು. ಇಲ್ಲವಾದರೆ, ಮರುದಿನ ಅವರೆಲ್ಲ, ಹಾಸ್ಯಗಾರನ ಡಯಲಾಗ್‌ಗಳನ್ನು ಹೇಳುತ್ತಾ ರಸಸ್ವಾದ ಮಾಡುವಾಗ ನನ್ನ್ಯಾಕೆ ಎಬ್ಬಿಸಿಲ್ಲಾಂತ ಕಿರಿಕಿರಿ ಮಾಡುತ್ತೇನಲ್ಲಾ....
ಯಕ್ಷಗಾನಕ್ಕೆ ಹೊರಡುವುದೇ ಗೌಜಿ. ಅಲ್ಲಿ ತಲುಪಿದ ಬಳಿಕ ರಾತ್ರಿಯಿಡೀ ಎಷ್ಟು ಯಕ್ಷಗಾನ ನೋಡುತ್ತೇನೆ ಬಿಡುತ್ತೇನೆ ಎಂಬುದು ಬೇರೆ ವಿಚಾರ. ಮುಕ್ಕಾಲು ಪಾಲು ನಿದ್ರೆ. ಬೆಳಗಿನ ಜಾವ 'ಮಂಗಳಂ' ಆದಬಳಿಕ ಯಕ್ಷಗಾನ ಸ್ಪೆಷಲ್ ಕೃಷ್ಣ ಬಂಟ್ರ ಹೊಟೇಲಿನಿಂದ ಗರಿಗರಿ ಈರುಳ್ಳಿ ಬಜ್ಜಿ ಕಟ್ಟಿಸಿಕೊಂಡು ಹೋಗಿ ಮನೆಯಲ್ಲಿ ಅಪ್ಪನಿಗೆ ಕೊಟ್ಟು, ನಾವು ಹಂಚಿ ತಿನ್ನುವಲ್ಲಿಗೆ ಆ ವರ್ಷದ ಯಕ್ಷಗಾನ ಸಂಭ್ರಮ ಮುಗಿದು ಕಣ್ಣುರಿಯ ಸಂಭ್ರಮ ಆರಂಭಗೊಳ್ಳುತ್ತದೆ.

ಭಾನುವಾರ, ಏಪ್ರಿಲ್ 6

ನಮ್ಮ ಪ್ರಜೆಗಳಿಗೆ ನಾವೇ ನೀರು ಕುಡಿಸಬೇಕು

ಭಳಿರೇ ಪರಾಕ್ರಮ ಕಂಠೀರವ.........!!

ಬಲ್ಲಿರೇನಯ್ಯ..........?

ಈ ದ್ರಾವಿಡ ಸಂಸ್ಥಾನಕ್ಕೆ ಯಾರೆಂದು ಕೇಳಿ ಬಲ್ಲಿರೀ.........?

ರಕುಣಾಧಿನಿ ಎಂದು ಕೇಳಿ ಬಲ್ಲೆವೂ.......

ಹಾಗೆಂದುಕೊಳ್ಳಬಹುದು... ಹಾಗೆಂದುಕೊಳ್ಳಬಹುದು।

ಇರುವಂತಹಾ ಸ್ಥಳ.......?

ಮುದಿರಾಸು ಎಂಬ ಮಹಾನರಕವೆಂದು ತಿಳಿದುಕೊಂಡಿದ್ದೇವೆ।

ಬಂದಂತಹಾ ಕಾರ್ಯ.......?

ಅನೇಕವಿದೆ....... ಅನೇಕವಿದೆ....... ಅನೇಕವಿದೆ........

ನಮ್ಮಪಟ್ಟಣದ ಉರಿಉರಿಶೆಖೆಯೊಂದಿಗೆ, ಹಗೆಕಲ್ಲು ಬೆಂಕಿಯ ದಾವಿನ ಕಾವನ್ನೂ ತಂಪಾಗಿಸಿಕೊಳ್ಳುವ ನಿಟ್ಟಿನಿಂದ ಹವಾನಿಯಂತ್ರಿತ ಕೊಠಡಿಯಲ್ಲಿ ಪವಡಿಸಿದ್ದ ನಾವುಗಳು ಮುಂಜಾನೆಯಾಗುತ್ತಲೇ ಮೈಲಾಗದಿದ್ದರೂ ದಡಬಡಿಸಿ ಎದ್ದು, ಶೌಚ, ಸ್ನಾನಾಧಿ ಕಾರ್ಯಗಳನ್ನು ಮುಗಿಸಿ, ಉಪಾಹಾರವನ್ನು ಸ್ವೀಕರಿಸಿದ್ದಾಯಿತು। ಒಡ್ಡೋಲಗಕ್ಕೆ ತೆರಳುವ ಮುನ್ನ ಶ್ವೇತ ವರ್ಣದ, ಉತ್ಕೃಷ್ಟ ಗುಣಮಟ್ಟದ ಹತ್ತಿಯ ಧೋತರವನ್ನು ಉಟ್ಟು, ಅದೇಬಣ್ಣದ ಶರಟನ್ನೂ ತೊಟ್ಟು, ಹಳದಿ ಬಣ್ಣದ ಮೇಲ್ವವಸ್ತ್ರವನ್ನು ಹೊದ್ದುಕೊಂಡಿದ್ದಾಯಿತು. ನಮ್ಮ ಟ್ರೇಡ್ ಮಾರ್ಕ್ ಆಗಿರುವಂತಹ ಅಂಗೈಯಗಲದ ಕಪ್ಪು ಕನ್ನಡಕವನ್ನು ಕಣ್ಣಿಗೆ ಅಡ್ಡವಾಗುವಂತೆ ಮೂಗಿನ ಮೇಲೆ ಏರಿಸಿಕೊಂಡು, ನಮ್ಮ ಬೋಡು ಮಂಡೆಯಲ್ಲಿ ಇಲ್ಲದ ಕೂದಲುಗಳನ್ನು ಒಪ್ಪವಾಗಿ ಬಾಚಿದ್ದಾಯಿತು. ಸೇವಕ ತಂದಿಟ್ಟ ಕಾಲಿನ ಎಕ್ಕಡವನ್ನು ಮೆಟ್ಟಿ ಸಭೆಗೆ ಆಗಮಿಸಿ ಸಿಂಹಾಸನಕ್ಕೆ ವಂದಿಸಿ, ಸಿಂಹಾಸದ ಕೈಯನ್ನು ಆಧರಿಸಿಕೊಂಡು ನಿಧಾನವಾಗಿ ಆಸೀನರಾಗಿ, ನಮ್ಮನ್ನು ಇಡೀಯಾಗಿ ಆಸನದಲ್ಲಿ ಹುದುಗಿಸಿಕೊಂಡು, ಸಭೆಯನ್ನೊಮ್ಮೆ ನೋಡುತ್ತೇವೆ........! ಇದೇನಾಶ್ಚರ್ಯ........? ಇದೇನಾಶ್ಚರ್ಯ........?

ಸಭೆ ಎಂದಿಗಿಂತಲೂ ಇಂದು ತುಂಬಿ ತುಳುಕುತ್ತಿದೆ। ವಂದಿಮಾಗಧರಿದ್ದಾರೆ. ಮಾಗಣೆಯವರೂ ಬಂದಿದ್ದಾರೆ. ಮಂತ್ರಿಮಹೋದಯರು ಎದುರಿನ ಸಾಲಿನಲ್ಲಿ ರಾರಾಜಿಸುತ್ತಿದ್ದಾರೆ. ಯುವರಾಜರಾದ ರಕಟಕ ಮದನಕರೂ ತಮ್ಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತುತ್ತೂರಿಯವರ ಪಡೆಯೇ ಬೀಡುಬಿಟ್ಟಿದ್ದು, ನಾವು ಬಾಯಿಬಿಡುವುದನ್ನೇ ಅವಸರದಿಂದ ಕಾಯುತ್ತಿರುವಂತಿದೆ.... ಆದರೂ ಯಾಕೋ ಎಲ್ಲರ ಮುಖದಲ್ಲಿ ಒಂದು ನಮೂಊಊಊಊನೆಯ ಅಸಮಾಧಾನ ಮಡುಗಟ್ಟಿದಂತಿದೆಯಲ್ಲಾ......? ಇರಲಿ ನೋಡೋಣ. ಸಭೆ ಆರಂಭಿಸೋಣವಂತೆ..... ಯಾರಲ್ಲೀ.......?

ಸ್ವಾಮೀ ರಕುಣಾ ಧಿನಿಯವರೇ........ ನಿಗಿಗುಟ್ಟುತ್ತಿದ್ದ ಹಗೆಕಲ್ಲು ಎಂಬ ಕೆಂಡಕ್ಕೆ ನೀವು, ಈ ಮಾಸದ ಆದಿಯ ದಿನದಂದು ಮೇಲ್ಸೇತುವೆಯೊಂದರ ಉದ್ಘಾಟನೆ ಮಾಡುತ್ತಾ 'ಲೂಸುಲೂಸಾಗಿ' ಮಾತಾಡಿ ಪೆಟ್ರೋಲು ಸುರಿದಿರಂತೆ। ಏನೇ ಆದರೂ ಹಗೆಕಲ್ಲನ್ನು ಹೊಡಿಯದೆ 'ಬಿಡಮಾಟೇ.....' ಅನ್ನುತ್ತಾ ಅತ್ತ ನಿಮ್ಮ ನೆರೆಯ ಸಾಮ್ರಾಜ್ಯದ ನರ್ಕಾಟಕದವರನ್ನು ರೊಚ್ಚಿಗೆಬ್ಬಿಸಿದ್ದೀರಂತೆ.... ನರ್ಕಾಟಕದವರು ಬೆನ್ನುಮೂಳೆ ಮುರಿದರೂ ಬಿಡೆ ಎನ್ನುತ್ತಾ ಪಂಥಾಹ್ವಾನವನ್ನೇ ನೀಡಿದಿರಂತೆ.......

ಅರೇ... ಇದೇನಿದು ಭಾಗವತರೇ.... ನಮ್ಮ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಚಾರಕ್ಕೆ ನಾವಲ್ಲದೇ ಇನ್ಯಾರು ಮಾತನಾಡಲಾಗುತ್ತದೆ। ಈ ಸಂಸ್ಥಾನದ ಅಧಿಪತಿಯಾಗಿದ್ದುಕೊಂಡು ನಮ್ಮ ಪ್ರಜೆಗಳ ಹಿತಕಾಯುವುದು ನಮ್ಮ ಕರ್ತವ್ಯವಲ್ಲವೇ......? ನಮ್ಮ ಪ್ರಜೆಗಳಿಗೆ ನಾವು ನೀರುಕುಡಿಸದೇ ಇನ್ಯಾರು ನೀರು ಕುಡಿಸಲು ಸಾಧ್ಯ.....?

ಸ್ವಾಮಿ.... ದ್ರಾವಿಡ ಸಂಸ್ಥಾನದ ಅಧಿಪತಿಗಳೇ.... ನಿಮ್ಮ ಪ್ರಜೆಗಳಿಗೆ ನೀವು ನೀರುಕುಡಿಸಬೇಕಿರುವುದು ಉಚಿತವೇ ಆಗಿದ್ದರೂ, ಒಬ್ಬ ಆಸ್ಥಾನಪತಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅಂತಹ ಪ್ರಚೋನಾಕಾರಿಯಾದಂತಹ ಮಾತುಗಳನ್ನಾಡುವುದು ಸಾಧುವೇ.....?

ಭಾಗವತರೇ......, ಒಂದು ಸಂಸ್ಥಾನದ ಅಧಿಪತಿಯಾಗಿರುವ ನಾವು, ನಮ್ಮ ಜನತೆಗಾಗಿ.... ಅವರ ಹಿತರಕ್ಷಣೆಗಾಗಿ..... ಅವರ ಹಿತರಕ್ಷಣೆಯ ಅವಕಾಶಕ್ಕೆ ಅಗತ್ಯವಿರುವ ವೋಟುಗಳಿಗಾಗಿ ಏನೂ ಮಾಡಲು ಸಿದ್ಧ, ಮತ್ತು ಎಂತಹ ಮಾತುಗಳನ್ನು ಹೇಳಲೂ, ಯಾರನ್ನು ಬೇಕಿದ್ದರೂ ಪ್ರಚೋದಿಸಲು ಸಿದ್ಧರಾಗಿರಬೇಕಾಗುತ್ತದೆ। ಇದನ್ನು ಸರಿಯೋ ತಪ್ಪೂ ಎಂದು ಅಳೆಯುವ, ಅಧಿಕ ಪ್ರಸಂಗಿತನದ ಮಾತುಗಳು ನಿಮಗೆ ಬೇಡ.

ಕರಿಯ ಚಾಳೀಸಿನ ಒಡೆಯರೇ...... ನಿಮ್ಮ ಸಾಮ್ರಾಜ್ಯದ ರಾಜಧಾನಿ ಹಾಗೂ ನಿಮ್ಮ ನೆರೆಯ ಸಾಮ್ರಾಜ್ಯದ ರಾಜಧಾನಿಗಳಲ್ಲಿ ಉಗ್ರರೂಪ ತಾಳಿದ, ಕಿಚ್ಚುಹತ್ತಿಕೊಳ್ಳಲು ಇಂಧನ ಸುರಿದಂತೆ ನೀವು ಆಡಿದ ಮಾತುಗಳಿಗೆ, ನಿಮ್ಮ ವಿರೋಧಿ ಲಯಜಲಿತಾ ತಾಯಿ, ನೀವು ನಿಮ್ಮ ಪ್ರಜೆಗಳ ರಕ್ಷಣೆಗೆ ಬದ್ಧರಾಗಿಲ್ಲ ಎಂದು ನಿಮ್ಮನ್ನು ಕೆರಳಸಿದ್ದು ಕಾರಣವ.....

ಮುಚ್ಚಿಬಾಯಿ ಭಾಗವತರೇ..... ನಮ್ಮ ಪ್ರಜೆಗಳ ಹಿತಕಾಯಲು ನಮಗೆ ಗೊತ್ತಿಲ್ಲವೇ.....? ಇಷ್ಟು ವಯಸ್ಸಿನ, ಇಷ್ಟೊಂದು ಸುದೀರ್ಘ ರಾಜ್ಯಾಡಳಿತದ ಅನುಭವ ಇರುವ ನಾವು ಆಯಮ್ಮನಿಂದ ಏನನ್ನೂ ಕಲಿಯಬೇಕಾಗಿಲ್ಲ.... ಇಂತಹ ಪ್ರಶ್ನೆಗಳನ್ನು ಎಸೆದರೆ ನಿಮ್ಮ ಗತಿ ನೆಟ್ಟಗಿರದೂ..... ಜಾಗ್ರತೆ!

ಸಮಾಧಾನ...... ಸಮಾಧಾನ...... ಉದ್ವೇಗಗೊಳ್ಳದಿರಿ..... ಪ್ರಜೆಗಳಿಗೆ ನೀರುಕುಡಿಸಲು ಕಂಕಣತೊಟ್ಟಿದ್ದ ತಾವುಗಳು, ನಿಮ್ಮ ನೆರೆರಾಜ್ಯದವರನ್ನು ಭಾಷಾ'ಕುರುಡರು' ಎಂದೆಲ್ಲ ಹೇಳುತ್ತಾ ಮತ್ತಷ್ಟು ತೈಲ ಸುರಿದವರು.... ನಿಮ್ಮ ದರ್ಬಾರಿನಲ್ಲಿ ನೆರೆರಾಜ್ಯದವರ ವಿರುದ್ಧ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದವರು, ಒಂದು ಹಂತದಲ್ಲಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ವಿರೋಧಿಗಳೆಲ್ಲ ಒಂದಾಗಲು ಕಾರಣವಾದ ಭಾಷಾಕುರುಡರಿಗೆ ವಂದನೆಗಳನ್ನೂ ಸಲ್ಲಿಸಿದ್ದ ನೀವು, ಇದ್ದಕ್ಕಿದ್ದಂತೆ ನಿಮ್ಮ ನೀರು ಕುಡಿಸುವ ಯೋಜನೆಯನ್ನು ತಡೆಹಿಡಿಯಲು ಕಾರಣವೇನು? ನರ್ಕಾಟಕದಲ್ಲಿ ಶಾಂತಿ ಕೆಡುತ್ತದೆಂಬ ವಿಚಾರ ನಿಮಗೆ ಮೊದಲೇ ಹೊಳೆಯಲಿಲ್ಲವೇ.....? ದೆಹಲಿ ಸಾಮ್ರಾಜ್ಯದಿಂದ ಅಖಂಡ ಭರತ ಖಂಡವನ್ನು ಆಳುತ್ತಿರುವ ನಿಮ್ಮ ಮೈತ್ರಿಕೂಟದ ಕಾಂಗೊರಸಿನ ಒತ್ತಡ ಕಾರಣವೇ? ನಿಸೋಯಾ ಮೇಡಮ್ಮರ ತಂತ್ರವೇ....ಇಲ್ಲ ಛೂ ಮಂತ್ರವೇ?

ಛೇ...... ಛೇ...... ಛೇ.....ಛೇ..... ಛೇ.... ಎಲ್ಲಿಂದೆಲ್ಲಿ ತಳುಕು ಹಾಕುತ್ತೀರಿ ನೀವು? ನಮಗೂ ಕೆಲವೊಮ್ಮ ಪ್ರಜ್ಞೆ ಎಂಬುದು ಇರುತ್ತದೆ। ನಮ್ಮ ಸಾಮ್ರಾಜ್ಯದ ಹಾಗೂ ನೆರೆಯ ಸಾಮ್ರಾಜ್ಯದ ಪ್ರಜೆಗಳು ಪರಸ್ಪರ ದ್ವೇಷ ಕಾರಿಕೊಳ್ಳುವುದನ್ನು ತಡೆಯಲು, ಇಂತಹ ಕ್ರಮಕ್ಕೆ ಮುಂದಾಗುವಂತೆ ನಮ್ಮ ಅಂತಪ್ರಜ್ಞೆ ನಮಗೆ ಕರೆ ನೀಡಿತು; ವಿನಹ ಗೋವರ್ಧನ ಗಿರಿಧಾರಿಯ ವಶೀಲಿ-ಭಾಜಿ ಅಥವಾ ಅಧಿಪತಿಗಳಿಲ್ಲದ ನೆರೆ ರಾಜ್ಯದ ಚುನಾವಣೆ ಇದ್ಯಾವುದೂ ಕಾರಣವಲ್ಲ.... ಭಾಗವತರೇ... ಸಾಕು ನಿಲ್ಲಿಸಿ ನಿಮ್ಮ ವ್ಯರ್ಥ ಪ್ರಲಾಪ.......

ರಕುಣಾ ಧಿನಿಯವರೇ.... ಅರ್ಥವಾಯಿತು..... ಅರ್ಥವಾಯಿತು.... ಸಭೆಗೆ ಮಂಗಳ ಹಾಡೋಣವಂತೆ.ಎರಡೂ ಸಾಮ್ರಾಜ್ಯಕ್ಕೂ ಒಳಿತಾಗಲೀ..... ಸರ್ವರೂ ನೀರು ಕುಡಿದು ಸುಃಖವಾಗಿರಲಿ.... ಮಂಗಳಂ.

ಮಂಗಳವಾರ, ಏಪ್ರಿಲ್ 1

ಅಮ್ಮಾ ನಾ ಫೂಲಾದೇ.......

ಅಲ್ಲಾ, ಈ ಥರಾನೂ ನೀವು ಒಬ್ಬ ಫೂಲನ್ನು ಫೂಲ್ ಮಾಡೋದಾ? ನನ್ನ ದಿನವಾದ ಇಂದು ನಂಗೆ ಶುಭಾಶಯ ಕೋರ್ತೀರಾಂತ ಬೆಳಬೆಳಗ್ಗೇನೇ ಬೇಗನೆದ್ದು ಕೂತಿದ್ದೆ। ನಾಟ್ ಈವನ್ ಒನ್ ಎಸ್ಸೆಮ್ಮೆಸ್. ಹೋಗಲಿ ಒಂದು ಮೇಲ್? ಮೇಲೂ ಇಲ್ಲ; ಫೀಮೇಲೂ ಇಲ್ಲ! ನೀವೂ ಫೂಲ್ ಮಾಡಿದ್ರಿ ಬಿಡ್ರಿ. ಆದರೆ, ನೀವೆಂದಿಗೂ ಮೂರ್ಖರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.

ನಂಬುಗೆ, ಸಂಬಂಧ, ಹಣಕಾಸು ಮುಂತಾದ ಮಿಕ್ಕೆಲ್ಲ ಹಾಳೂಮೂಳೂ ವಿಚಾರದಲ್ಲಿ ಇತರರು ನನ್ನನ್ನು ಮೂರ್ಖಳನ್ನಾಗಿಸಿದ್ದರೆ, ಹುಟ್ಟಿದ ದಿನಾಂಕದ ಈ ವಿಚಾರದಲ್ಲಿ ನನ್ನ ಅಮ್ಮನೇ ನನ್ನನ್ನು ಯಾಮಾರಿಸಲು ಯತ್ನಿಸುತ್ತಾರೆ।

ಏಪ್ರಿಲ್ ಒಂದನೇ ತಾರೀಕೇ ನಾನು ಹುಟ್ಟಿದ ದಿನ ಅಂತ ನನ್ನ ಸ್ವಭಾವ, ವ್ಯಕ್ತಿತ್ವ ಹೇಳುತ್ತೆ। ಆದರೆ ನಿರಕ್ಷರಿಯಾದ ನನ್ನಮ್ಮ, ಬರೆದಿಟ್ಟ ದಿನಾಂಕದ್ದೋ; ಇಲ್ಲ ಜಾತಕದ್ದೋ ಪುರಾವೆಯನ್ನು ಒದಗಿಸಲಾಗದ ಕಾರಣ, ಅವರದ್ದೇ ಆದ ವಾದ ಮಂಡಿಸುತ್ತಾರೆ. ಅವರು ಹೇಳುವ ಪ್ರಕಾರ, ನಾನು ಜೋರು ಜಡಿಮಳೆ ಸುರಿಯೋ ದಿನ ಹುಟ್ಟಿದ್ದಂತೆ. ಕಾರ್ತಿಂಗಳ(ಕಾರ್ತೆಲ್) ಆ ದಿನ ಆಗಸಕ್ಕೇ ತೂತು ಬಿದ್ದಂತೆ, ದಿನ ಪೂರ್ತಿ ಧಿಸಿಲ್ಲನೆ ಮಳೆ ಸುರಿಯುತ್ತಲೇ ಇತ್ತಂತೆ. ಅಲ್ಲದೆ ಅಂದು ಕರ್ಕೂಟಿ(ಗಾಢ) ಕತ್ತಲೆ ಇತ್ತಂತೆ. ನನ್ನೂರಿನಲ್ಲಿ ಏಪ್ರಿಲ್ ತಿಂಗಳಲ್ಲಂತೂ ಈ ಪರಿ ಮಳೆ ಸುರಿಯಲು ಸಾಧ್ಯವೇ ಇಲ್ಲ. ಹಾಗಾಗಿ ನೀನು ಏಪ್ರಿಲ್‌ನಲ್ಲಿ ಹುಟ್ಟಿದ್ದಲ್ಲಂತ ಅವರ ವಾದ. ಹಾಗೂ ಹೀಗೂ ಆಗಸ್ಟ್ ತಿಂಗಳಿಗೆ ಅವರು ಇದನ್ನು ಥಳುಕು ಹಾಕುತ್ತಾರೆ.

ನನ್ನ ಅಸ್ತಿತ್ವದ ಬಹಳ ಸ್ಟ್ರಾಂಗ್ ಆದ ಪುರಾವೆಯಾಗಿರುವ ನನ್ನ ಎಸ್ಸೆಲ್ಸಿ ಸರ್ಟಿಫಿಕೇಟ್ ಹೇಳೋ ಮಾತೇ ಬೇರೆ। ಅದರ ಪ್ರಕಾರ ನಾನು ಹುಟ್ಟಿದ್ದು ಜೂನ್ ತಿಂಗಳಲ್ಲಿ. (ಈ ಮಧ್ಯೆ ರೇಶನ್ ಕಾರ್ಡ್ ಮತ್ತು ಶೇಷನ್ ಕಾರ್ಡ್‌ನಲ್ಲಿರುವ ಹುಟ್ಟಿದ ದಿನಾಂಕದ ವಿವರಗಳು ಇನ್ನೂ ಬೇರೆಬೇರೆ ಹೇಳುತ್ತೆ) ಆದರೆ, ಯಾರೇ- ಏನೇ ಹೇಳಲಿ, ನನ್ನ ನೇಚರೂ, ಫೀಚರೂ ಹೇಳುವಂತೆ ಅದು ಖಂಡಿತ ಏಪ್ರಿಲ್ ಫಸ್ಟೇ ಅಂತ ನಾನು ಗಟ್ಟಿ ಮಾಡಿಕೊಂಡಿದ್ದೇನೆ.

ಈ ದಿನವಂತೂ, ಹುಟ್ಟಾ ಮೂರ್ಖಳಾಗಿರುವ ಖಂಡಿತ ನಂದೇ, ಮತ್ತು ನೇರವಾಗೆ ನಂಗೆ ಸಂಬಂಧಿಸಿದ್ದು। ನಾನು ಮೂರ್ಖಳು ಅಂತ ಎಗ್ಗಿಲ್ಲದೆ ಒಪ್ಪಿಕೊಳ್ಳುವುದಕ್ಕೂ ನನ್ನ ಬಳಗದ ಕೆಲವರ ಆಕ್ಷೇಪ. ನೀನು ಹಾಗೆಲ್ಲ ಯಾಕೆ ಹೇಳ್ಕೋತಿಯಾ ಅಂತ ಸಿಡಿಮಿಡಿಗುಟ್ಟುತ್ತಾ ನನ್ನ ಸಂತೋಷಕ್ಕೇ ಅಡ್ಡಿ ಬರುತ್ತಾರವರುಗಳು. ಅವರಿಗೇನು ಗೊತ್ತು ಸದಾ ಮೂರ್ಖಳಾಗೇ ಇರೋದಲ್ಲಿರೋ ಸುಖ?

ಮೊದಮೊದಲೆಲ್ಲ ನಾನೂ ಈ ವಿಚಾರದಲ್ಲಿ ಒಂದು ನಮೂನೆಯ ಕನ್‌ಫ್ಯೂಶನ್‌ಗೆ ಬಿದ್ದಿದ್ದೆ। ಆದರೆ ಒಂದು ದಿನ ನಂಗೆ ಥಟ್ ಅಂತ ಜ್ಞಾನೋದಯವಾಯಿತು. ಆಗ ಬುದ್ಧನಷ್ಟೇ ವಯಸ್ಸಾಗಿತ್ತು. ಅದು ಮಧ್ಯರಾತ್ರಿಯಲ್ಲ. ನಟ್ಟ ನಡು ಹಗಲು. ಆದರೆ ನಾನು ಯಾವ ವೃಕ್ಷದಡಿಯೂ ಕುಳಿತಿರಲಿಲ್ಲ. ಬದಲಿಗೆ ಕೈಯಲ್ಲಿ ಹಾಯ್ ಬೆಂಗಳೂರು ಪತ್ರಿಕೆ ಇತ್ತು. "ಈ ಮಧ್ಯೆ ನಡೆಯುವಾಗೆಲ್ಲ ನಾನು ಹೆಚ್ಚೆಚ್ಚು ಎಡವುತ್ತೇನೆ" ಎಂಬ ಪ್ರಶ್ನೆಯನ್ನು 'ಕೇಳಿ' ಅಂಕಣದಲ್ಲಿ ಯಾರೋ ಕೇಳಿದ್ದರು. ಅದಕ್ಕೆ ಉತ್ತರಿಸಿದ ರವಿಬೆಳಗೆರೆಯವರು "ಎಡವುದನ್ನೇ ಅಭ್ಯಾಸ ಮಾಡ್ಕೋ, ನಡೆಯೋದು ತಪ್ಪುತ್ತೆ" ಎಂಬ ಉತ್ತರ ಕೊಟ್ಟಿದ್ದರು.

ಇದನ್ನು ಓದುತ್ತಲೇ ಚಕ್ಕನೆ ನನ್ನ (ಇಲ್ಲದ)ಮೆದುಳೊಳಗೆ ಏನೋ ಸಂಚಾರವಾದಂತಾಗಿ, ಮಿಂಚು ಮೂಡಿತು। ಪದೇಪದೇ ಮೂರ್ಖಳಾದೆ, ಮೂರ್ಖಳಾದೆ ಅಂತ ಕೊರಗುವುದಕ್ಕಿಂತ ಪರ್ಮನೆಂಟ್ ಮೂರ್ಖಳೇ ಆಗಿ ಬಿಟ್ಟರೆ, ಮತ್ತೆ ಮತ್ತೆ ಯಾರು ಮೂರ್ಖಳಾಗಿಸಲು ಸಾಧ್ಯ? ಇದನ್ನೇ ಅಭ್ಯಾಸ ಮಾಡ್ಕೊಂಡಂದಿನಿಂದ ಜೀವನದಲ್ಲಿ ಹಾಸುಹೊಕ್ಕಾಗಿರುವ ಮೂರ್ಖತನದೊಂದಿಗೆ ಸುಖ ಸಂತೋಷದಿಂದ ಬಾಳಿ ಬದುಕುತ್ತಿದ್ದೇನೆ.

ಈ ವರ್ಷವಂತೂ ನನ್ನ ಪಾಲಿಗೆ ಶುಭಾರಂಭವೇ। ಕರೆಕ್ಟಾಗಿ ಜನವರಿ ಒಂದರಂದು ನನ್ನ ಜಂಗಮವಾಣಿಯನ್ನು ಆಕ್ರಮಿಸಿಕೊಂಡಿದ್ದ ನಂಬರೊಂದು "ನೀನೊಂದು ಈಡಿಯೆಟ್, ಆದ್ರೆ ಸ್ವೀಟ್ ಈಡಿಯೆಟ್" ಅಂತ ಸ್ವೀಟಾದ ಎಸ್ಸೆಮ್ಮೆಸ್ಸೂ ಕಳಿಸಿತ್ತು. ಹೀಗೆ ಕಾಲಕಾಲಕ್ಕೆ ಸಾದ್ಯಂತವಾಗಿ ಸಂತಸದಿರುವಂತೆ, ನನಗೇ ತಿಳಿಯದಂತೆ ಘಟನೆಗಳು ಘಟಿಸಿಬಿಡುತ್ತವೆ. ಹಾಗಾಗೀ-


ಗಗನವೇ ಉರುಳಲಿ, ಭೂಮಿಯೇ ನಡುಗಲಿ, ಸುನಾಮಿ ಉಕ್ಕಲಿ, ಯಾರೇ ಸೊಕ್ಕಲಿ ಮೂರ್ಖಳಾಗದಿರಲಾರೇ.... ನಾನು ಮೂರ್ಖಳಾಗದಿರಲಾರೆ.....

ಮಂಗಳವಾರ, ಮಾರ್ಚ್ 18

ಸಮಾವೇಶ ಚೆನ್ನಾಗಾಯ್ತಂತೆ

ಬೆಂಗಳೂರಿನ ಬಸವನ ಗುಡಿಯಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಸಭಾಭವನದಲ್ಲಿ ಬ್ಲಾಗೀದಾರರೆಲ್ಲರ ಭಾಗೀದಾರಿಕೆಯೊಂದಿಗೆ ಸಮಾವೇಶ ನಡೆಯಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಒಂದು ವಾರ ಇರುವಂತೆ ಸಮಾವೇಶದ ಕುರಿತ ಸಂದೇಶವು 'ನೀವು ಬನ್ನಿ ನಿಮ್ಮವರನ್ನು ಕರೆತನ್ನಿ' ಎಂಬ ಪ್ರೀತಿಯ ಆಮಂತ್ರಣ ಎಲ್ಲ ಬ್ಲಾಗುಗಳಲ್ಲಿ ಎದ್ದು ಕಾಣುತ್ತಿತ್ತು. ನನ್ನ ಏಕೈಕ ಬ್ಲಾಗ್ ಮಿತ್ರರಾಗಿರುವ ಬ್ಲಾಗ್ ಮಾರ್ಗದರ್ಶಿಯವರೂ ಈ ವಿಚಾರ ತಿಳಿಸಿದ್ದರು। ಪ್ರಣತಿಯ ಪರವಾಗಿ ಸುಶ್ರುತ ದೊಡ್ಡೇರಿಯವರ ಆಮಂತ್ರಣವೂ ನನ್ನ ಮೇಲ್ ಬಾಕ್ಸಿನೊಳಗೆ ಬಂದು ಕುಳಿತಿತ್ತು.


ಕನ್ನಡ ಬ್ಲಾಗಿಗರ ಈ ಪ್ರಥಮ ಸಮಾವೇಶದಲ್ಲಿ ಬ್ಲಾಗಣ್ಣ ಮತ್ತು ಬ್ಲಾಗಕ್ಕಗಳು ಸೇರುತ್ತಾರೆ ಎಂಬ ಸುದ್ದಿ ನಿಜಕ್ಕೂ ಖುಷಿ ಕೊಟ್ಟಿತ್ತು ಮತ್ತು ಉತ್ತಮ ಪ್ರಯತ್ನ ಎಂಬ ಮೆಚ್ಚುಗೆಯೂ ಮೂಡಿತ್ತು। ಹೋಗಿ ಎಲ್ಲರನ್ನು ಕಂಡು ಒಂದೊಂದು ಹಾಯ್, ಹಲೋಗಳನ್ನು ಉದುರಿಸಿ ಮುಗುಳ್ನಗು ವಿನಿಯೋಗಿಸಿಕೊಂಡು ಬರೋಣವಾ ಅಂತ ಒಮ್ಮೆ ಅನಿಸಿದ್ದುಂಟು। ಆದರೆ, ಅದೇಕೋ ಬೆಂಗಳೂರೆಂದರೆ ಈಚೆಗೆ ನಂಗೊಂಥರಾ। ಅದರಲ್ಲೂ ಅನ್‌ರಿಸರ್ವ್‌ಡ್ ಕಂಪಾರ್ಟ್‌ಮೆಂಟಿನ ಪಯಣ, ಅದೂ ಸಾಟರ್ಡೆ ನೈಟ್, ಹಾರಿಬಲ್ ಆಗಿರುತ್ತೆ। ಸಂಡೆಯ ರಿಟರ್ನ್ ಜರ್ನಿ ಇನ್ನೂ ಭಯಂಕರವಾಗಿರುತ್ತೆ ಎಂಬುದು ನನ್ನ ಅನುಭವ. ಇದಲ್ಲದೆ, ನಂಗೆ ಕ್ರೌಡ್ ಅಂದರೂ ಅಷ್ಟಕಷ್ಟೆ. ಮತ್ತು ಈ ವರ್ಷದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವಳಂತೆ ಅವಶ್ಯಕ, ಅನವಶ್ಯಕ ಪ್ರಯಾಣಗಳು ನನ್ನನ್ನು ತಿಂದುಬಿಟ್ಟಿವೆ. ಇದು ಆರಂಭ ತಾನೆ, ಇನ್ನೊಮ್ಮೆ ಹೋಗೋಣ ಅಂತ ನನ್ನನ್ನು ನಾನೇಸುಮ್ಮನಾಗಿಸಿಕೊಂಡೆ.


ಹೋಗದಿದ್ದರೇನಾಯಿತಂತೆ, ಇದೀಗ ಬ್ಲಾಗ್ ಸಮಾವೇಶದ ಕುರಿತ ಬ್ಲಾಗಣ್ಣ, ಬ್ಲಾಗಕ್ಕ ಮತ್ತು ಬ್ಲಾಗಂಕಲ್‌, ಬ್ಲಾಗಾಂಟಿಯರು ವರದಿಗಳನ್ನು ನೀಡಿ ಅಲ್ಲಿ ಏನೇನು ನಡೆಯಿತು ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ। ಒಂದು ಒಳ್ಳೆಯ ಕಾರ್ಯ ನಡೆದಿದ್ದು, ಮುಂದಿನ ಇಂತಹ ಕಾರ್ಯಗಳಿಗೆ ಫೌಂಡೇಶನ್ ಹಾಕಿಕೊಟ್ಟಿದೆ ಎಂಬುದು ದಿಟ.


ಸಮಾವೇಶ ಸಂಘಟಿಸಿದ, ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯರು, ಅನುಭವಿಗಳು, ಪಾಲ್ಗೊಂಡ, ಪ್ರೋತ್ಸಾಹಿಸಿದ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದೆ ದೂರದಲ್ಲಿ ಕುಳಿತು ನನ್ನಂತೆ ಆಸೆ ಪಟ್ಟ, ಎಲ್ಲರಿಗೂ ಅಭಿನಂದನೆಗಳು!!!

ಭಾನುವಾರ, ಮಾರ್ಚ್ 16

ಬೆಣ್ಣೆಕಡ್ಡಿ ಇಲ್ಲದ ಬದುಕೂ.....

ಹೇಗೆ ವಿನೋದಳ ಸ್ನೇಹ ಸಂಪಾದಿಸುವುದೂ.... ಹಗಲಿರುಳು ನನ್ನ ಊಟ, ನಿದ್ರೆ ಕೆಡಿಸಿ ಚಿಂತೆಗೆ ತಳ್ಳಿದ ವಿಚಾರವದು. ಇದಕ್ಕಾಗಿ ನಾನು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗೇ ಹೋಗಿದ್ದವು.


ಚೆಂದಗೆ ಮಿರಿಮಿರಿ ಮಿಂಚುವ ನೈಲಕ್ಸ್ ಅಂಗಿಗಳ ಒಡತಿ ಅವಳು. ಆರು ತಿಂಗಳಿಗೆ ಬೇರೆಬೇರೆ ಸ್ಲೇಟು, ಬಣ್ಣದ ಬೆಣ್ಣೆಕಡ್ಡಿ(ಬಳಪ), ಅಧುನಿಕ ವಿನ್ಯಾಸದ ಪಾಠೀಚೀಲ. ಹೀಗೆ... ನಮ್ಮೆಲ್ಲರಲ್ಲಿ ಆಸೆ ಮತ್ತು ಅಸೂಯೆ ಹುಟ್ಟಿಸುವ ವಸ್ತುಗಳು ಅವಳಬಳಿ ಇದ್ದವು. ನಂಗಾದರೋ, ನಾನು ಶಾಲೆಗೆ ಸೇರುವಾಗ ಅಕ್ಕ ಬಳಸಿ, ಉಳಿಸಿದ ಅಂಚು ಮುರಿದ ಸ್ಲೇಟು. ತೂತಾದ ಚೀಲ, ತುಂಡಾದ ಕಡ್ಡಿಗಳು. ವಾರವಿಡೀ ಒಂದೇ ಅಂಗಿ, ಅದೂ ಕೋಟನಂಗಿ. ಆದರೆ, ನಂಗೆ ಅವಳ ಸ್ನೇಹದ ಅನಿವಾರ್ಯತೆ ಉಂಟಾದದ್ದು ಅವಳ ಬಳಿ ಬಣ್ಣಬಣ್ಣದ ಇಡಿಇಡೀ ಬೆಣ್ಣೆಕಡ್ಡಿಗಳನ್ನು ಕಂಡಾಗ.


ನನಗೆ ಕಡ್ಡಿಗೆ ಬರವಿಲ್ಲದಿದ್ದರೂ, ಅವೆಲ್ಲ ಕಂತ್ರಿ ಕಡ್ಡಿಗಳು. ವಿನೋದಳ ಬಳಿ ಇದ್ದಂತಹ, ನಯವಾಗಿ ಬೆಣ್ಣೆಯಂತೆ ಜಾರುವ ಮುತ್ತಿನಂತಹ ಅಕ್ಷರ ಮೂಡಿಸುವ ಬೆಣ್ಣೆಕಡ್ಡಿಯಲ್ಲ. ಇನ್ನೂ ಕೆಲವು ಸಹಪಾಟಿಗಳಲ್ಲಿ ಬೆಣ್ಣೆಕಡ್ಡಿ ಇತ್ತಾದರೂ, ಒಂದೋ-ಎರಡೂ ಇಲ್ಲವೇ ತುಂಡುತುಂಡು. ಇವಳಂತೆ ಚೀಲಕ್ಕೆ ಕೈಹಾಕಿ ಹಿಡಿಹಿಡಿ, ಉದ್ದುದ್ದದ ಕಡ್ಡಿಗಳನ್ನು ಮೊಗೆಮೊಗೆದು ತೆಗೆವಂತಹ ಶ್ರೀಮಂತಿಕೆ ಇಲ್ಲ. ಅವಳ ಅಕ್ಕಪಕ್ಕದಲ್ಲಿ ಕುಳಿತ ಕೆಲವು ನನ್ನಂತಹ ಆಶೆ ಬುರ್ಕೆತಿಗಳಿಗೆ ಅವಳು ಒಂದೆರು ಚಿಕ್ಕ ತುಂಡು ಕಡ್ಡಿಗಳನ್ನು ದಯಪಾಲಿಸಿದ್ದಳು.


ಆ ದಿನಗಳಲ್ಲಿ ಗುಬ್ಬಿಮರಿಯಂತಿದ್ದ ನನಗೆ ಯಾವಾಗಲೂ ಫಸ್ಟ್ ಬೆಂಚೇ. ಹಿಂದಿನ ಬೆಂಚಿ ಬಳಿ ಹೋಗಿ ಅವಳ ಬಳಿ ಕುಳಿತುಕೊಳ್ಳುವಂತಿಲ್ಲ. ಆಗೆಲ್ಲ ಸಾಮಾನ್ಯಕ್ಕೆ ದೋಸ್ತಿಗಳಾಗುವುದು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವವರು. ತರಗತಿ ಆರಂಭದ ಗಂಟೆ ಹೊಡೆಯುವ ಮುನ್ನ ಅವಳ ಬೆಂಚಿನ ಬಳಿ ಸುಮ್ಮಸುಮ್ಮನೆ ಸುಳಿದಾಡಿ ನೋಡಿದೆ। ಅವಳು ಹೋಂವರ್ಕ್ ಮಾಡದೇ ಇದ್ದಾಗ, ನನ್ನ ಪುಸ್ತಕ ನೋಡಿ ಲೆಕ್ಕಮಾಡ್ತಿಯೂ ಅಂತಕೇಳಿ ನೋಡಿದೆ. ಆದರೆ ಅವಳು ಮಾಸ್ಟ್ರತಂಗಿಯಾಗಿದ್ದ ಕಸ್ತೂರಿಯ ಪುಸ್ತಕದ ಮೊರೆ ಹೋಗಿದ್ದಳು. ಒಂದೆರಡು ಬಾರಿ ಹಲ್ಲುಕಿರಿದು ಟ್ರೈಮಾಡಿದೆ. ಕರುಣೆಯಿಂದಾದರೂ ತುಂಡು ಬೆಣ್ಣೆಕಡ್ಡಿಯೊಂದನ್ನು ಕೊಡಲೀ ಅಂತ. ಅವಳು ಕ್ಯಾರೇ ಅನ್ನಲಿಲ್ಲ.


'ಛೇ..... ಬೆಣ್ಣೆ ಕಡ್ಡಿ ಇಲ್ಲದ ಬದುಕೂ ಒಂದು ಬದುಕೇ' ಎಂಬಲ್ಲಿಯವರೆಗೆ ನನ್ನನ್ನು ಬೆಣ್ಣೆಕಡ್ಡಿ ಸೆಳೆದಿತ್ತು। ಆ ಸೆಳೆತದ ತೀವ್ರತೆ ಎಷ್ಟಿತ್ತೆಂದರೆ, ನಾಚಿಕೆ, ಮಾನ, ಮರ್ಯಾದೆ, ಅಹಂ ಎಲ್ಲಬಿಟ್ಟು, ಹಲ್ಲುಗಿಂಜಿ, ವಿನೋದ; ವಿನೋದ ಒಂದು ಬೆಣ್ಣೆ ಕಡ್ಡಿ ಕೊಡೇ ಅಂತ ಒಂದು ಸರ್ತಿ ಕೇಳೇಬಿಟ್ಟೆ. ಎಲ್ಲಿ ಕೊಟ್ಲು..... ಉಮ್, ಹೋಗೋಗು ಕಡ್ಡಿ ಕೊಟ್ಟರೆ ಮನೇಲಿ ಬೈಯ್ತಾರೆ ಅಂತ ಅವಳ ಪೋಳೇ ಕಣ್ಣನ್ನು ಮತ್ತಷ್ಟು ಅಗಲವಾಗಿಸಿದ್ದಳು. ಅವಮಾನ, ನಿರಾಸೆ ಒಟ್ಟಾಗಿ ಅಪ್ಪಳಿಸಿತು. ಆದರೆ ಕೈಲಾಗದ ನಾನು ಏನೂ ಮಾಡಲು ತೋಚದೆ 'ಸಿಂಬಳ(ಗೊಣ್ಣೆ)ಸುರ್ಕೆತಿ' ಅಂತ ಅವಳನ್ನು ಮನದಲ್ಲೇ ಬಯ್ದು ನನ್ನ ಬೆಂಚಿಗೆ ಮರಳಿದೆ.


ಇಂತಹ ಅವಮಾನ(?)ವಾದರೂ ಬೆಣ್ಣೆಕಡ್ಡಿ ವ್ಯಾಮೋಹ ಮಾತ್ರ ಬಿಟ್ಟಿರಲಿಲ್ಲ। ಬೈ ಹುಕ್ ಆರ್ ಕ್ರುಕ್, ನಂಗದು ಬೇಕೇ ಆಗಿತ್ತು. ಹಾಗಾಗಿ ಒಮ್ಮೆ ಆದ ಅವಮಾನವನ್ನು ಬದಿಗೊತ್ತಿ, ಒಂದಕ್ಕೆ ಹೋಗುವಾಗ ಅವಳ ಕೈ ಹಿಡಿದುಕೊಂಡು ಹೋಗಲು ಪ್ರಯತ್ನಿಸಿದೆ. ಆಗೆಲ್ಲ ನಮ್ಮ ಶಾಲೆಯಲ್ಲಿ ಲ್ಯಾವೆಟ್ರಿ ಇರಲಿಲ್ಲ. ನಾವೆಲ್ಲ ಮೂತ್ರವಿಸರ್ಜನೆಗೆ ಒಂದೊಂದು ಪೊದೆಗಳ ಮರೆಯನ್ನು ಗೊತ್ತು ಮಾಡಿಕೊಂಡಿದ್ದೆವು. ಆಯಕಟ್ಟಿನ ನನ್ನ ಜಾಗದ ಮೇಲೆ ಎಲ್ಲರಿಗೂ ಕಣ್ಣು. ಹಾಗಾಗಿ ಈ ಮೂಲಕ ಪ್ರಭಾವ ಬೀರುವ ಹುನ್ನಾರದಲ್ಲಿ ವಿನೋದಳನ್ನು ನನ್ನ ಜಾಗಕ್ಕೆ ಆಮಂತ್ರಿಸಿದ್ದೆ. ಬಂದು ಒಂದಕ್ಕೆ ಮಾಡಿ ಹೋದಳಾದರೂ ಸ್ನೇಹದ ಹಸ್ತ ಚಾಚಲೇ ಇಲ್ಲ! ಎಲಾ ಇವ್ಳಾ ಅನಿಸಿತಾದರೂ ನಾನು ಹೆಲ್ಪ್‌ಲೆಸ್.


ಕೊನೆಗೆ ಈ ಗಿಮ್ಮಿಕ್‌ಗಳೆಲ್ಲ ಯಾಕೆ, ದುಡ್ಡುಕೊಟ್ಟು ಖರೀದಿ ಮಾಡುವ ಎಂಬುದಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆ। ಮನೆಯಲ್ಲಿ ಬಂದು ಅವ್ವನೊಡನೆ ಐವತ್ತು ಪೈಸೆಯ ಬೇಡಿಕೆ ಇಟ್ಟೆ. ನಿಂಗೆ ಪೈಸೆ ಯಾಕೆ ಅನ್ನತ್ತಾ ತಾರಾಮಾರ ಬೈಯ್ದು ಬಿಟ್ರು. ಆದರೂ ಛಲಬಿಡದ ತ್ರಿವಿಕ್ರಮಿನಿಯಂತೆ, ಸತತ ಮೂರು ದಿನಗಳ ಕಾಲ ಎಡೆಬಿಡದೆ ಅತ್ತುಕರೆದು ರಂಪ ಮಾಡಿದ್ದಕ್ಕೆ ಅವ್ವ ನನ್ನ ಬೇಡಿಕೆಯನ್ನು ಮನ್ನಿಸಲೇ ಬೇಕಾಯ್ತು. ಆದರೆ ಪಾಪ ಅವರ ಬಳಿಯಾದರೂ ದುಡ್ಡೆಲ್ಲಿಂದ? ಕೊನೆಗೆ ಯಾವುದೋ ಕಷ್ಟದ ಸಂದರ್ಭದಲ್ಲಿ, ಯಾವುದೋ ದೇವರಿಗೆ ಹರಕೆ ಅಂತ ಮಡಿವಸ್ತ್ರದಲ್ಲಿ ಕಟ್ಟಿಟ್ಟಿದ್ದ ಎಂಟಾಣೆ ನಾಣ್ಯವನ್ನು ನನ್ನ ಕೈಲಿರಿಸಿದರು.


ಗೆದ್ದೆನೆಂಬ ಸಂಭ್ರಮದಲ್ಲಿ ಬೆಳಿಗ್ಗೆ ಸರಿ ತಿಂಡಿಯನ್ನೂ ತಿನ್ನದೆ ಶಾಲೆಗೆ ಓಡಿ ವಿನೋದಳ ದಾರಿ ಕಾಯುತ್ತ ನಿಂತಿದ್ದೆ. ಅವಳು ಬರುತ್ತಲೇ ಓಡಿ ಹೋಗಿ ಎಂಟಾಣೆ ನಾಣ್ಯವನ್ನು ಅವಳ ಎದುರು ಹಿಡಿದು, ಒಂದು ಬೆಣ್ಣೆಕಡ್ಡಿ ಕೊಡೂ ಅಂತ ಧೈರ್ಯ ಮತ್ತು ಗರ್ವದಿಂದ ಕೇಳಿದೆ. ನಾಣ್ಯವನ್ನು ಎರಡೆರಡು ಬಾರಿ ಸವರಿದಳಾದರೂ, ನಾನು ಕೊಡುದಿಲ್ಲಪ್ಪ; ಮನೇಲಿ ಬೈತಾರೆ ಅಂತ ಮುಖತಿರುವಿ ನಡೆದೇ ಬಿಟ್ಟಳು.

ಹೇಗಾಗಬೇಡ ನಂಗೆ? ಕಡ್ಡಿಯ ಮೇಲಣ ವ್ಯಾಮೋಹ ಹೆಚ್ಚಿತೇ ವಿನಹ ಕಡಿಮೆಯಾಗಲಿಲ್ಲ. ಎಷ್ಟು ಯೋಚಿಸಿದರೂ ಏನು ಮಾಡುವುದೆಂಬುದೇ ತೋಚಲಿಲ್ಲ। ಹೈಸ್ಕೂಲಿಗೆ ಪೇಟೆಗೆ ಹೋಗುತ್ತಿದ್ದ ಅಣ್ಣನ ಬಳಿ ಬೆಣ್ಣೆಕಡ್ಡಿ ತಂದುಕೊಡೆಂದು ವಿನಂತಿಸಿದೆ. ಇರೋ ಕಡ್ಡಿಯಲ್ಲಿ ಬರಿ ಅಂತ ಬಯ್ದನೆ ವಿನಹ ನನ್ನ ವಿನಂತಿಯನ್ನು ಮನ್ನಿಸುವ ದಯೆ ತೋರಲಿಲ್ಲ. ಮಾತಿಗಿಂತ ಸಿಟ್ಟನ್ನೆ ಉದುರಿಸುವ ಅಪ್ಪನ ಬಳಿ ಕೇಳುವಂತೆಯೇ ಇಲ್ಲ.


ಈ ಬೆಣ್ಣೆಕಡ್ಡಿ ದೆಸೆಯಿಂದಾಗಿ ನನಗೆ ಆಟಪಾಠದ ಕಡೆ ಗಮನಕೇಂದ್ರೀಕರಿಸಲಾಗುತ್ತಿರಲಿಲ್ಲ. ಊಟತಿಂಡಿ ಸೇರುತ್ತಿರಲಿಲ್ಲ. ಈ ಮಧ್ಯೆ ವಿನೋದಳಂತೂ ಕಲ್ಲರ್‌ಕಲ್ಲರ್ ಕಡ್ಡಿಗಳನ್ನು ತಂದು ಪ್ರದರ್ಶನ ಮಾಡುತ್ತಿದ್ದಳು. ವಿನೋದಳಿಗೆ ನೆಲ್ಲಿಕಾಯಿ ತಂದುಕೊಟ್ಟ ಕಾತ್ಯಾಯಿನಿಗೆ ಸಹ ಒಂದು ತುಂಡು ಬೆಣ್ಣೆಕಡ್ಡಿ ಲಭಿಸಿತ್ತು. ಒಟ್ಟಿನಲ್ಲಿ ನನ್ನದು ಮಾತ್ರ ಬೆಣ್ಣೆಕಡ್ಡಿ ಇಲ್ಲದ ನಿಕೃಷ್ಟ ಬದುಕಾಗಿತ್ತು.


ಆದರೂ ಆಸೆ ಬತ್ತಲಿಲ್. ಹೇಗಾದರೂ ಮಾಡಿ ಅವಳ ಚೀಲದಿಂದ ಒಂದು ತುಂಡು ಬೆಣ್ಣೆಕಡ್ಡಿ ಕದಿಯುವುದು ಎಂಬ ಕ್ರಿಮಿನಲ್ ಸಂಚುಹೂಡಿದೆ. ಕದ್ದೇ ಗೊತ್ತಿಲ್ಲದಿದ್ದ ನನಗೆ ಕದಿಯುವುದಾದರೂ ಹೇಗೆ ಎಂಬುದೇ ತೋಚಲಿಲ್ಲ. ಒಂದೆರಡು ಬಾರಿ ಅವಳ ಬೆಂಚಿನ ಬಳಿ ಸುಳಿದೆನಾದರೂ, ಚೀಲಕ್ಕೆ ಕೈಹಾಕುವ ಧೈರ್ಯ ಬರಲಿಲ್ಲ. ಅಂತಹ ವೃತ್ತಿಪರ ಕಳ್ಳಿ ಅಲ್ಲದ ಕಾರಣ, ಹೇಗೆ ಕದಿಯುವುದೆಂಬುದೇ ದೊಡ್ಡಚಿಂತೆಯಾಯಿತು. ಕೊನೆಗೆ 'ಸಂಜೆ ಆಟಕ್ಕೆ ಬಿಟ್ಟಾಗ' ಎಂಬುದಾಗಿ ಮುಹೂರ್ತ ನಿಗದಿ ಪಡಿಸಿದೆ.ಒಂದು ದಿನ ಆಟಕ್ಕೆ ಬಿಟ್ಟಾಗ ಹೊಟ್ಟೆ ನೋವೆಂಬ ಕುಟಿಲೋಪಾಯ ಹೂಡಿ ಆಟಕ್ಕೆ ಹೋಗದೆ ತರಗತಿಯಲ್ಲೇ ಕುಳಿತಿದ್ದೆ. ಎಲ್ಲರೂ ಆಟಕ್ಕೆ ಹೋದಮೇಲೆ ಕದಿಯುವ ಲೆಕ್ಕಹಾಕಿದ್ದೆ. ಆಗಲೆ ಎದೆಬಡಿತ ಜೋರಾಗಿತ್ತು. ಅಷ್ಟರಲ್ಲಿ ಅಲ್ಲೇ ಹಾದ ಸರಳಾ ಟೀಚರ್ ಕ್ಲಾಸ್‌ರೂಮಿನೊಳಗೆ ಬಂದು, ಆಟಕ್ಕೆ ಯಾಕೆ ಹೋಗಲಿಲ್ಲ ಎಂಬುದಾಗಿ ಕೇಳಿದರು. ಹೊಟ್ಟೆ ನೋವು ಎಂಬ ಸಬೂಬು ಹೇಳಿದೆ. ಹಾಗಾದರೆ ಚೀಲ ಹಿಡ್ಕೊಂಡು ಮನೆಗೆ ಹೋಗೆಂದರು. ಥತ್ ಇವರ, ಅನ್ನುತ್ತಾ ಜೋಲುಮೋರೆಯೊಂದಿಗೆ ಮನೆಗೆ ನಡೆದೆ. ಅಲ್ಲಿಗೆ ನನ್ನ ಕಳ್ಳತನದ ಯೋಜನೆಯೂ ಮುರಿದುಬಿತ್ತು.


ಸಾಯ್ಲತ್ಲಾಗೆ, ಇವಳ ದೊಡ್ಡಸ್ತಿಕೆಯ ಬೆಣ್ಣೆಕಡ್ಡಿ ಯಾರಿಗೆ ಬೇಕು? ಸಿಂಬಳ ಸುರ್ಕೆತಿ ಅಂತ ನನ್ನನ್ನು ಸಮ್ಮನಾಗಿಸಿಕೊಂಡು, ಅವಳ ಅದೃಷ್ಟಕ್ಕೆ ಕರುಬುತ್ತಾ, ನನ್ನ ದುರಾದೃಷ್ಟಕ್ಕೆ ಮರುಗುತ್ತಾ ಕಷ್ಟಪಟ್ಟು ಕಡ್ಡಿಯಾಶೆಯನ್ನು ಹತ್ತಿಕ್ಕಿಕೊಂಡೆ.


ಅದು ಮಾವಿನಮಿಡಿ ಸೀಸನ್. ನಮ್ಮ ಮನೆಯಲ್ಲಿ ಮೂರ್ನಾಲ್ಕು ನೆಕ್ಕರೆ ಮಾವಿನ ಮರಗಳು ಇದ್ದವು. ಆಗೆಲ್ಲ ನನ್ನ ಚೀಲ ತುಂಬ ಮಾವಿನ ಮಿಡಿಗಳು. ನನ್ನ ಬೆಂಚಿನ ಗೆಳತಿಯರಿಗೆ ದಿನನಿತ್ಯ ಮಿಡಿ ಸರಬರಾಜಾಗುತ್ತಿತ್ತು. ಇಂಥಾ ಒಂದು ದಿನ ವಿನೋದ ನನ್ನಬಳಿ ಮಾವಿನಮಿಡಿ ಯಾಚಿಸಿದಳು. ಅವಳು ಕೇಳಿದ ಹೊತ್ತಿಗೆ ಅಂದಿನ ಕೋಟಾ ಮುಗಿದು, ಮಿಡಿ ಖಾಲಿಯಾಗಿತ್ತು.

ನಾಳೆ ಕೊಡ್ತೇನೆ ಅಂದೆ(ನಿಜವಾಗ್ಲೂ ಇದ್ದಿರಲಿಲ್ಲ. ಅವಳು ಕಡ್ಡಿಕೊಡದ ಸಿಟ್ಟಲ್ಲ). ಮರುದಿನ ಬೆಳಗ್ಗೆ ಮಾವಿನಮಿಡಿ ಸಮಾರಾಧನೆ ವೇಳೆ ವಿನೋದಳಿಗೂ ಕರೆದು ಕೊಟ್ಟೆ. ಇನ್ನೂ ಒಂದು ಕೊಡೆಂದಳು. ಚೀಲದಲ್ಲಿತ್ತು, ಕೊಟ್ಟೆ. ಅವಳ ಬೆಂಚಿಗೆ ತೆರಳಿದವಳು, ಚೀಲದ ಸಮೇತ ಮರಳಿ ನನ್ನಬಳಿ ಬಂದಳು. ಶಾನೀ ಎಂದು ಕರೆದವಳೇ.... ಒಂದಿಡೀ ಬೆಣ್ಣೆಕಡ್ಡಿ ಮತ್ತು ಹಿಡಿತುಂಬ ಬಣ್ಣಬಣ್ಣದ ತುಂಡುಕಡ್ಡಿಗಳನ್ನು ನನ್ನ ಪುಟ್ಟ ಬೊಗಸೆಯಲ್ಲಿಟ್ಟುಳು! ಸಾವಿರ ಬಲ್ಬುಗಳು ಏಕಕಾಲಕ್ಕೆ ಉರಿದಂತೆ, ಗೆಜ್ಜೆಗಳು ಉಲಿದಂತೆ, ಗಂಟೆಗಳು ನಲಿದಂತೆ ಭಾಸವಾಗಿ ಅನಿವರ್ಚನೀಯ ಆನಂದದಿಂದ ಮೂಖಳಾದೆ!

ಬುಧವಾರ, ಫೆಬ್ರವರಿ 27

ಅದು ಹೇಗೆ ಕಾಗೆ ಬಂದು ಮುಟ್ಟುತ್ತಿತ್ತೋ.......

ಚಿಕ್ಮಾ, ಚಿಕ್ಮಾ... ಚಿಕ್ಮಾ,... ಮಿಲನಕ್ಕನನ್ನು ಕಾಗೆ ಮುಟ್ಟಿದೆ ಅಂತ, ನನ್ನನ್ನು ದೂರದಿಂದ ಕಂಡ ಮೇಘು ಓಡೋಡಿ ಗೇಟ್ ಬಳಿ ಬಂದು ವರದಿಯೊಪ್ಪಿಸಿದಳು. ಅವಳ ಅಮಾಯಕತೆ ಕಂಡು ಸಣ್ಣ ನಗುವೊಂದು ನನ್ನೊಳಗೆ ನುಸುಳಿ ಮಾಯವಾಯಿತು. ಮಿಲನ(ನೆರೆ ಮನೆ ಹುಡುಗಿ)ಳೂ ಸೇರಿದಂತೆ ಅವರ ಗ್ಯಾಂಗೇ ಅಲ್ಲಿ ಲಗೋರಿಯಾಡುತ್ತಿತ್ತು. ಏಳ್ನೇ ಕ್ಲಾಸು ಹುಡುಗಿಯದು. ಛೇ, ಈಗಿಂದಲೇ ತಿಂಗಳು ತಿಂಗಳು ಒದ್ದಾಡಬೇಕಲ್ಲ ಎಂಬ ಸಂಕಟ ನನ್ನನ್ನು ಕಾಡಿತು.

ಏನ್ಮಾಡೋದು, ಸೃಷ್ಠಿ ನಿಯಮವೋ, ಪ್ರಕೃತಿ ನಿಯಮವೋ ಇಲ್ಲ, ದೈಹಿಕ ಪ್ರಕ್ರಿಯೆಯೋ ಅಂತೂ ತಪ್ಪಿಸಿಕೊಳ್ಳುವಂತಿಲ್ಲ. ಇದು ವರ ಮತ್ತು ಶಾಪ ಎರಡೂ ಹೌದು! ಹೌದಾ ಮಿಲನಾ ಅಂದೆ. ಇಶ್ಶಿ ನಂಗೆ ನಾಚಿಕೆ ಆಗ್ತದೆ ಅಂತ ಓಡಿತು. ಹಾಗೆ ನೋಡಿದರೆ, ಉಳಿದವರೆಲ್ಲರ ಕೀಟಲೆ, ತಮಾಷೆಯಿಂದಾಗಿ ಅವಳೂ ಅದನ್ನು ಬಯಸಿದಂತಿತ್ತು.

ಅವ್ವನನ್ನು ಅದ್ಯಾವ ಮಾಯದಲ್ಲಿ ಕಕ್ಕೆ ಬಂದು ಮುಟ್ಟುತ್ತಿತ್ತೋ, ಏನೇನು ಮಾಡಿದರೂ ಗೊತ್ತೇ ಆಗುತ್ತಿರಲಿಲ್ಲ. ಈ ಸತ್ತ ಕಕ್ಕೆಯೊಂದು ಅವ್ವನನ್ನು ಮುಟ್ಟಿ ಹಿಂಸೆ ಯಾಕೆ ಕೊಡುತ್ತದೆ ಎಂಬುದು ಪುಟ್ಟ ಶಾನಿಗೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಬಿಡುತ್ತಿತ್ತು. ಹಬ್ಬ-ಹರಿದಿನ, ನೆಂಟರೆಲ್ಲ ಬರುವ ದಿನ ಅಥವಾ ಬರುವ ಸೂಚನೆ ಇದ್ದರೆ ನಾನು ಅವ್ವನನ್ನು ತೋಟಕ್ಕೆಲ್ಲ ಹೋಗಬೇಡಿ ಅಂತಿದ್ದೆ. ಹಾಗೊಮ್ಮೆ ಅವರು ಹೊರಟರೂ ಕೈಯಲ್ಲಿ ಕೋಲು ಹಿಡಿದ ನಾನೂ ಅವ್ವನ ಹಿಂದೆಯೇ ನಡೆದು 'ಕಕ್ಕೆ ಮುಟ್ಟದಂತೆ' ಕಾಯುತ್ತಿದ್ದೆ.

ಇಷ್ಟೆಲ್ಲ ಮುನ್ನೆಚ್ಚರಿಕೆ ತಗೊಂಡರೂ ತೋಟವೆಲ್ಲ ಸುತ್ತಿ ಕೊಕ್ಕೋ ಕೊಯ್ದು ಬುಟ್ಟೀಲಿ ತುಂಬಿಸಿಕೊಂಡು ಬಂದು, ಗೆದ್ದೆನೆಂದು ಬೀಗುತ್ತಿರುವಾಲೇ ಅಂಗಳದಲ್ಲಿ ನಿಂತ ಅವ್ವ 'ಮುಟ್ಟಿಕ್ಕಾಗದ್' (ಮುಟ್ಟಬಾರದು) ಅಂತೇಳಿ ಕೊಟ್ಟಿಗೆ ಸೇರಿದಾಗ ಮಾತ್ರ, ಇದು ಹೇಗಾಯಿತು ಅಂತ ತಲೆ ಕೆರೆದುಕೊಂಡರೆ ಉಗುರು ಕೊಳೆಯಾಯಿತೇ ವಿನಹ ಮತ್ತೇನು ಗೊತ್ತಾಗಿಲ್ಲ. ನನ್ನ ಈ ತಪತಪನೆ ಕಂಡ ಅವ್ವನೇ, "ಅದು ಒಮ್ಮೊಮ್ಮೆ ಸಣ್ಣ ಮಕ್ಕಳಿಗೆ ಕಾಣುವುದಿಲ್ಲ" ಎಂದು ಸಮಾಧಾನಿಸುತ್ತಿದ್ದರು.

ಅದೊಂದು ಸರ್ತಿ ನಾನು ಶಾಲೆಯಿಂದ ಬರುತ್ತಿರುವಾಗ ತೀರಾ ಕೆಳ ಎತ್ತರದಲ್ಲಿ ಹಾರುತ್ತಿದ್ದ ಕಾಗೆಯ ಕಾಲು ನನ್ನ ತಲೆ-ಭುಜಕ್ಕೆ ಸೋಕಿದ್ದು, ಛೇ.....ಛೇ... ನನ್ನನ್ನೂ ಕಾಗೆ ಮಟ್ಟಿತ್ತಲ್ಲ ಎಂಬ ಸಂಕಟ ಮತ್ತು ಸಂಭ್ರಮ ಉಂಟಾಗಿತ್ತು. ಮನೆಯಲ್ಲಿ ಬಂದು ನಾನೂ ಅಂಗಳದಲ್ಲಿ ನಿಂತು, ಜಂಭದಲ್ಲಿ ಮುಟ್ಟಿಕ್ಕಾದ್ ಅಂದಾಗ ವಿಷಯ ತಿಳಿದ ದೊಡ್ಡವರೆಲ್ಲ ನನಗೆ ಅವಮಾನವಾಗುವಂತೆ ಗೊಳ್ಳನೆ ನಕ್ಕು, ಚಿಕ್ಕವರನ್ನು ಕಾಗೆ ಮುಟ್ಟಿದರೆ ಏನಾಗುವುದಿಲ್ಲ ಎಂದು ಮನೆಯೊಳಗೆ ಸೇರಿಸಿಕೊಂಡಿದ್ದರು.

ನನ್ನ ದೊಡ್ಡ ಅಕ್ಕನನ್ನು 'ಕಾಗೆಮುಟ್ಟಿ'ದಾಗಲಂತೂ ಮನೆಯಲ್ಲಿ ಭಯಂಕರ ಸಂಭ್ರಮವಿತ್ತು. ಅವಳು ಅಳುತ್ತಾ ಹಲಸಿನ ಮರದ ಬುಡದಲ್ಲಿ ಕುಳಿತಿದ್ದಳು. ನೆರೆ ಹೊರೆಯವರನ್ನೆಲ್ಲ ಕರೆದು ಶಾಸ್ತ್ರಗೀಸ್ತ್ರ ಮಾಡಿ, ಗಮ್ಮತ್ ಊಟ...ತಿಂಡಿ. ನಾಲ್ಕು ದಿವಸ ಅಸ್ಪ್ರಶ್ಯಳಾಗಿದ್ದ ಅವಳನ್ನು ವಿಶೇಷ ಸ್ನಾನ ಮಾಡಿಸಿ ಮನೆಯೊಳಗೆ ಕರೆಸಿಕೊಂಡರೂ, ಎಲ್ಲವನ್ನೂ ಅವಳು ಮುಟ್ಟುವಂತಿಲ್ಲ. ಒನಕೆ, ಪೊರಕೆ ಎಲ್ಲ ಮುಟ್ಟಬಾರದಂತೆ. ಅವಳು ರಾಜಕುಮಾರಿಯಂತೆ ಕುಳಿತು, ಅವಳಿಗಾಗೇ ಬಂಧು-ಬಳಗ, ನೆರೆಹೊರೆಯವರು ತರುತ್ತಿದ್ದ ಒಳ್ಳೊಳ್ಳೆ ತಿಂಡಿ ಮೆಲ್ಲುತ್ತಿದ್ದಳು. ಮನೆಯಲ್ಲಿ ಅವ್ವನೂ, ಮೆಂತ್ಯ, ಎಳ್ಳು, ಕೊತ್ತಂಬರಿ ಅಂತ ಏನೇನೊ ಗಮಗಮ ತಿಂಡಿಗಳನ್ನು ಮಾಡುತ್ತಿದ್ದರು. ಹೆಸರು ಅವಳದ್ದಾದರೂ, ನಮಗೂ ಪಾಲಿರುತ್ತಿತ್ತು ಅನ್ನಿ.

ಅದಾದ ಬಳಿಕ ಹೊಲೆ ಹೋಗಬೇಕು; ಪಿಲೆತೆಗೆಯಬೇಕು ಎಂದೆಲ್ಲ ಮಾತಾಡುತ್ತಿದ್ದ ದೊಡ್ಡವರು, ಒಂದು ದಿನ ಮಿನಿ ಮದುವೆಯಂತಹ ಅದೇನೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಋತುಶಾಂತಿ ಮಾಡಿ, ಹೊಲೆಪಿಲೆಯೆಲ್ಲ ತೆಗೆದಿದ್ದರು. ಆಗ ಅವಳಿಗೆ ಕಾರ್ಯಕ್ರಮಕ್ಕೆ ಬಂದವರೆಲ್ಲ ದುಡ್ಡು, ಉಡುಗೋರೆ ನೀಡಿ ಹರಸಿದ್ದರು. ಅವಳಿಗೆ ಹೊಸಾ ಡ್ರೆಸ್ ಹೊಲಿಸಿದ್ದರು. ಇದನ್ನೆಲ್ಲ ಕಂಡು ನಂಗೂ, ನನ್ನನ್ನೂ ಕಕ್ಕೆ ಮುಟ್ಟಿದರೆ ಚೆನ್ನಾಗಿತ್ತು ಅಂತ ಒಳಗೊಳಗೆ ಅನಿಸಿದ್ದು ಸುಳ್ಳಲ್ಲ.

ಅದಾದ ಒಂದುದಿನ ಕುಳಿತು ಲೆಕ್ಕ ಹಾಕಿದ್ದೆ. ದೊಡ್ಡಕ್ಕಂದಾಯಿತು. ಇನ್ನು ಅಣ್ಣನದ್ದು. ಆಮೇಲೆ ಸಣ್ಣಕ್ಕ. ಅವಳಾದ ಮೇಲೆ ಕುಂಞಕ್ಕ. ಮತ್ತೆ.... ಕೊನೇಗೆ ನಾನು. ಛೇ.. ಎಷ್ಟು ಸಮಯಕಾಯಬೇಕು ಈ ಸಂಭ್ರಮಕ್ಕೆ ಅಂತ ಕಾಯುವಿಕೆಯ ದುಃಖವೂ ಆಗಿತ್ತು. ಚಿಕ್ಕವಳಾಗಿದ್ದಕ್ಕೆ ಸಿಟ್ಟೂ ಬಂದಿತ್ತು.

ಆಮೇಲಾಮೇಲೆ ಸಣ್ಣಕ್ಕನನ್ನು 'ಕಕ್ಕೆಮುಟ್ಟಿ'ದ ಮೇಲೆ, ಕಕ್ಕೆಮುಟ್ಟವ ಮರ್ಮದ ಸೂಕ್ಷ್ಮಗಳು ಸ್ವಲ್ಪಸ್ವಲ್ಪವೆ ಅರಿವಾಗ ಹತ್ತಿದ್ದವು. ಆಗೆಲ್ಲ ನಮ್ಮ ಹಳ್ಳಿಗಿನ್ನೂ, ವಿಸ್ಪರ್, ಸ್ಟೇಫ್ರೀಗಳೂ ಬಂದಿರಲಿಲ್ಲ. ಬಂದರೂ ಆದನ್ನು ಖರೀದಿಸಿ ಕೊಡುವವರೂ ಇರಲಿಲ್ಲ. ಇವರುಗಳು ಪದೇಪದೇ ಬಟ್ಟೆ ಒಗೆಯುವುದು, ಹೊಟ್ಟೆನೋವೆಂದು ಕಷಾಯ ಕುಡಿಯುವುದು ಕಂಡಾಗ 'ಮುಟ್ಟಿಕಾಗ'ದಿರುವುದೆಂದರೆ, ಕಾಗೆ ಮುಟ್ಟವುದಕ್ಕಿಂತ ಇನ್ನೇನೋ ಇದೆ ಎಂಬುದು ಅರೆಬರೆಯಾಗಿ ಗೊತ್ತಾಗಿತ್ತು.

ಮೊದಲ ಮಗಳು ದೊಡ್ಡಕ್ಕನಿಗೆ ಮಾಡಿದ ಋತುಶಾಂತಿಯ ಗೌಜಿಯೆಲ್ಲ ಸಣ್ಣಕ್ಕ, ಕುಂಞಕ್ಕಗಳಿಗೆ ಇರಲಿಲ್ಲ. ಎಲ್ಲವೂ ಶಾಸ್ತ್ರಕ್ಕೆತಕ್ಕವಾಗಿತ್ತು. ಶಾಸ್ತ್ರಕ್ಕೆತಕ್ಕವಾದರೂ ಅವರಿಗೆ ದೊರೆತ ಉಡುಗೋರೆ, ದುಡ್ಡು, exclusive ಹೊಸ ವಸ್ತ್ರಗಳನ್ನು ನೋಡಿದಾಗ ನಂಗೂ ಬೇಗ ಆಗಬೇಕು ಎಂಬ ಪ್ರಲೋಭನೆಗೆ ನಾನು ಒಳಗಾಗದೇ ಇರಲಿಲ್ಲ. ಅದು ಆದಾಗ ಅವರೆಲ್ಲ ಕಂಪಲ್ಸರಿ ಎಂಬಂತೆ ಹಲಸಿನ ಮರದ ಬುಡದಲ್ಲಿ ನಿಂತು ಅತ್ತಿದ್ದರು. ಹಾಗೆ ಅಳಲು ನಾನು ಸಹ (ಯಾರೂ ನೋಡದಿದ್ದಾಗ) practice ಮಾಡಿದ್ದೆ.

ಮತ್ತೆಮತ್ತೆ ದಿನಕಳೆದಂತೆ, ನಮ್ಮದು ಹೆಣ್ಣುಮಕ್ಕಳ ಬಾಹುಳ್ಯವಿರುವ ಮನೆಯಾದ ಕಾರಣ ವಿಷಯಗಳು ಚೆನ್ನಾಗಿ ಅರಿವಾಗತೊಡಗಿ, ಉಡುಗೋರೆಯ ಜಾಗದಲ್ಲಿ ಒಂಥರಾ ಧಾವಂತದ ಭಯ ಆವರಿಸಿತ್ತು. ಆರು ವರ್ಷದಿಂದ ಕಾದದ್ದು 16ನೇ ವರ್ಷಕ್ಕೆ ಬಂದಾಗ ಮಾತ್ರ ನಾನು ಯಾರಿಗೂ ಹೇಳಲೇ ಇಲ್ಲ!

ಒಂದು ದಿನ ಮಳೆಗಾಲದಂದು ಕಾಲೇಜು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಗಾಳಿಮಳೆಗೆ ಸಿಲುಕಿದ್ದೆ. (ಹತ್ತು ಕಿ.ಮೀ ದಾರಿಯದು. ನಡೆದೇ ಕ್ರಮಿಸಬೇಕು) ಏನೂ ಮಾಡಲು ತೋಚದ ನಾನು ಗಾಳಿಗೆ ಕೊಡೆ ಆಧರಿಸಿಕೊಳ್ಳಲಾಗದಿದ್ದರೂ ಸಪೂರದ ಗದ್ದೆ ಬದುವಿನ ಮೇಲೆ ಹರಸಾಹಸದಿಂದ ನಡೆದು ಹೋಗುತ್ತಿದ್ದೆ. ಎದುರಿನಿಂದ ಯಾರೋ ಬಂದರು. ಅವರಿಗೆ ಸೈಡ್ ಕೊಡಲೆಂದು ಸರಿದು ನಿಂತು ಕೊಡೆ ತಿರುಗಿಸಿದ್ದೆ. ಅಷ್ಟೆ. ಗಾಳಿಯ ವಿರುದ್ಧ ದಿಕ್ಕಿಗೆ ಕೊಡೆ ಹಿಡಿದಾಗ ಕೊಡೆಯೊಳಗೆ ಗಾಳಿತುಂಬಿ ಏನಾಗುತ್ತಿದೆ ಎಂದು ಗೊತ್ತಾಗುವಾಗ ನಾನು ಇಡಿಯಾಗಿ ಸುಮಾರು ಐದಾರಡಿ ಕೆಳಗೆ ಬಿದ್ದಿದ್ದೆ. ಸರಿಯಾಗಿ ತಾಳೆ ಮರದ ಬುಡಕ್ಕೇ ಎಸೆದಂತೆ ಬಿದ್ದಿದ್ದೆ. ಚಪ್ಪಲಿ ಇಲ್ಲದ ಬರಿಗಾಲು. ಬಿದ್ದ ರಭಸಕ್ಕೆ ತಾಳೆ ಮರದ ಬುಡದಲ್ಲಿದ್ದ ಗರಗಸದಂತಹ ಅಲುಗು ಅಂಗಾಲಿಗೆ ತಗುಲಿ ಅಂಗಾಲನ್ನು ಮಧ್ಯಕ್ಕೆ ಅಡ್ಡಕ್ಕೆ ಸೀಳಿ ಮಾಂಸ ಹೊರಗೆ ಬಂದಿತ್ತು. ಅಲ್ಲಿಂದ ಮತ್ತೆ ನಮ್ಮ ಮನೆಗೆ ಸುಮಾರು ಮೂರೂವರೆ ಕಿ.ಮಿ ದೂರ. ಅದು ಹ್ಯಾಗೆ ಕುಂಟುತ್ತಾ ಬಂದೆನೋ.... ಅಬ್ಬಾ... ಆ ಸನ್ನಿವೇಶವನ್ನು ನೆನಪಿಸಿಕೊಳ್ಳಲೂ ಭಯವಾಗುತ್ತೆ.


ನಾನು ನಡೆದ ದಾರಿಯುದ್ದಕ್ಕೂ ರಕ್ತ ಚೆಲ್ಲಿತ್ತು. ಟೈಲರ್ ಕೆಲಸ ಕಲಿಯಲು ಪೇಟೆಗೆ ಹೋಗುತ್ತಿದ್ದ, ನಮ್ಮೂರ ಕೇಶವ ಮತ್ತು ನವೀನ ಹಿಂದಿನಿಂದ ಬರುತ್ತಿದ್ದರು. ದಾರಿಯುದ್ದಕ್ಕೂ, ಚೆಲ್ಲಿದ್ದ ನೆತ್ತರು ಕಂಡು ಓಡೋಡಿ ಬಂದ ಅವರು ನನ್ನುನ್ನು ಕಂಡು, ಛೇ... ಪಾಪಾ, ಶಾನಿ, ಅನ್ನುತ್ತಾ ಅವರ ಕೈಯಲ್ಲಿದ್ದ ಬಟ್ಟೆ ತುಂಡನ್ನು ಕಾಲಿಗೆ ಬಿಗಿಯಾಗಿ ಕಟ್ಟಿ ನಡೆಯಲನುಕೂಲ ಮಾಡಿಕೊಟ್ಟಿದ್ದರು. ಒಬ್ಬ ನನ್ನೊಡನೆ ನಿಂತರೆ ಇನ್ನೊಬ್ಬ ಓಡಿ ಹೋಗಿ ಮನೆಗೆ ಸುದ್ದಿ ಮುಟ್ಟಿಸಿದ.


ಹೀಗೆ ಕೊಯ್ದು ಹೋದ ಕಾಲಿನಿಂದಾಗಿ ನಡೆದಾಡಲಾಗದೆ ಕುಳಿತಲ್ಲೇ ನಾನಾಗಿದ್ದಾಗ, ಒಂದು ದಿನ ಅದಾಗಿತ್ತು. ಹೇಳದಿರುವುದು ಮಹಾಪಾಪ, ಶಾಸ್ತ್ರಗಳನ್ನು ಮಾಡದಿದ್ದರೆ ಕಣ್ಣು ಕುರುಡಾಗುತ್ತದೆ ಎಂದೆಲ್ಲ ಕೇಳಿದ್ದ ನನಗೆ ಒಳಗೆ ಭಯವಿದ್ದರೂ, ಮೇಲಿನ ಭಂಡತನ ಯಾರಿಗೂ ಹೇಳಲೇ ಬೇಡ ಅಂದಿತ್ತು. ಹೇಳಿದರೋ, ಅಪ್ಪ ಊರೆಲ್ಲ ಟಾಂ ಟಾಂ ಮಾಡುತ್ತಾರೆ. ನೆರೆ ಹೊರೆಯವರೆಲ್ಲ ಬಂದು ಕೀಟಲೆ ಮಾಡುತ್ತಾರೆ. ಈ ಕಾಲು ಬೇರೆ ನೋವು!

ಉಡುಗೋರೆ, ಹಣ, ಹೊಸ ಬಟ್ಟೆಗಳ ಆಸೆಯ ಜಾಗಕ್ಕೆ ನಾಚಿಕೆ ಕುಳಿತಿತ್ತು. ಹಾಗಾಗಿ ಹಲಸಿನ ಮರದ ಬುಡದಲ್ಲಿ ನಿಂತು ಅಳಲು ಮಾಡಿದ್ದ ಪ್ರಾಕ್ಟೀಸ್ ಉಪಯೋಗಕ್ಕೆ ಬರಲೇಯಿಲ್ಲ. ಹಲವು ತಿಂಗಳ ಬಳಿಕ ಅದೊಂದು ದಿನ ಉಡುಪಿನ ಮೇಲಿನ ಕಲೆ ಕಂಡ ಅವ್ವ ಹೌದಾ? ಯಾವಾಗ? ಅಂತ ಕೇಳಿದ್ದರು. ನಿನ್ಯಾಕೆ ಹೇಳಿಲ್ಲ ಅನ್ನುತ್ತಾ ಅವರೇ ಅತ್ತು ಬಿಟ್ರು!

ಗುರುವಾರ, ಫೆಬ್ರವರಿ 14

ಪ್ರೀತಿಗೆ ವಾಸ್ತುವೇ ಸರಿ ಇಲ್ವಂತೆ!

ಗೆಳತೀ... ಇದೇ ದಿನ ನಾನು ಮತ್ತು ನೀನು ಅಯೋಧ್ಯೆಯ ಮೂಲೆ ಟೇಬಲ್ಲಿನಲ್ಲಿ ಕುಳಿತು ಪೆಕರು ಪೆಕರಾಗಿ ನಕ್ಕಿದ್ದೆವು। (ಕಾರಣವೇ ಗೊತ್ತಿಲ್ಲದ ಪರಿಚಯದ ಮಾಣಿಯೂ ಬಂದು ನಕ್ಕಿದ್ದ) ಹೌದು. ನಾನು ನಕ್ಕಿದ್ದು, ಅತ್ತಿದ್ದು ಮತ್ತೆ ನಕ್ಕಿದ್ದು, ನನ್ನ ಜೀವನದ ವರದಿಯನ್ನು ಕರಡು ತಿದ್ದದೆ, ಎಡಿಟ್ ಮಾಡದೆ ಪ್ರಕಟಿಸಿದ್ದು ನಿನ್ನೆದುರು ಮಾತ್ರ. ಎಂಥ ಕರ್ಮವೋ, ಇಲ್ಲ ಸುಯೋಗವೋ ಹೊಸಹೊಸ ಆವೃತ್ತಿಗಳು ಸೇರುತ್ತಾ. ಕಳಚುತ್ತಾ ಹೋಗುತ್ತಲೇ ಇರುತ್ತವೆ. ಆದರೆ ನಿನ್ನ-ನನ್ನ ಸ್ನೇಹ ಮಾತ್ರ ಎಡಿಟೋರಿಯಲ್‌ನಂತೆ ಶಾಶ್ವತ.

ಅಂದ ಹಾಗೆ ಯಾಕೆ ನಕ್ಕಿದ್ದೆವು ಆ ದಿನ। ನನ್ನ ನೆನಪು ಸರಿ ಇದ್ದರೆ ಕೆಂಪಂಗಿಯ ಜೋಡಿಯೊಂದು ನಮ್ಮ ಪಕ್ಕದ ಟೇಬಲ್ ಬಳಿ ಕುಳಿತು ಜ್ಯೂಸ್ ಗ್ಲಾಸ್ ಎದುರಿದ್ದರೂ, ಮರೆತಂತೆ ಕಣ್ಣೊಳಗೆ ಕಣ್ಣಿಟ್ಟು ಮಂಗ-ಳೂರನ್ನೇ ಮರೆತಂತೆ ಕುಳಿತಿತ್ತು.

ನಾನಂದೆ ನಿಂಗೆ। ನೀನೂ ಇದ್ಯಾ ದಂಡ-ಪಿಂಡ, ತಲೆಯ ಮೇಲೆ ಬೆಳ್ಳಿ ಗೆರೆಗಳು ಮರೆಮಾಚುವಂತೆ ಬಾಚಿದರೂ ಇಣುಕುತ್ತಿವೆ; ಆದರೂ ಇನ್ನೂ ಒಬ್ಬನ ಕಣ್ಣೊಳಗೆ ಕಣ್ಣಿಟ್ಟು ನೋಡಲಾಗಿಲ್ಲ ಅಂತ ಪ್ರೀತಿಯ ಬಯ್ಗಳು ಎಸೆದೆ. ನಿನ್ನ ಮೇಲೆ ಹೂವು ಚೆಲ್ಲಿದಂತೆ ಭಾಸವಾಯಿತೋ ಗೊತ್ತಿಲ್ಲ. ಪ್ಹೋ.....ಪ್ಹೋ....ಹ್ಫೋ... ಹೋ.... ಅಂತ ಒಂದು ಸೆಕುಂಡು ಕತ್ತುಮುರಕೊಂಡಂತೆ ನಕ್ಕ ನೀನು, ಅದು ಬಾಲ ನರೆ ಅನ್ನದೆ, "ವಯಸ್ಸಿನ ಸಂಕೇತ ಅಲ್ಲ ಕಣೇ, ಪ್ರೌಢತೆಯ ಸಂಕೇತ" ಅನ್ನುತ್ತಾ ನನ್ನ ತಲೆ ಬುರುಡೆ ಸರ್ವೆ ಮಾಡಿದ್ದೆ. ನೀ ಏನು ದೊಡ್ಡ ಸುಭಗೆತಿಯಾ? ನಿಂಗೇನು ದಾಢಿ ಅಂತ ಸದರೀ ಪ್ರಶ್ನೆಯನ್ನು ನನಗೇ ತಿರುಗೆಸೆದೆ. ಅದೇ ಟೇಬಲ್ಲಿನ ಮೇಲೆಯೇ ಒಂದು ಹನಿಯುದುರಿಸಿದೆ. ನನ್ನ ನೆನಪಿಗೆ ಚ್ಯುತಿ ಇಲ್ಲದಿದ್ದರೆ ಅದು ಹೀಗಿತ್ತು,

ಕಣ್ಣೊಳಗೆ ಕಣ್ಣಿಟ್ಟು
ನೋಡಬೇಕೆಂದೇ ಇದ್ದೆ,
ಅದರೆ....
ಕನ್ನಡಕ ಅಡ್ಡ ಬಂತು!

ಪ್ರೀತಿ ಮಾಡಿ ಕೈ ಸುಟ್ಟುಕೊಂಡ, ಅಲ್ಲಲ್ಲ... ಹೃದಯ ಸುಟ್ಟುಕೊಂಡ ನಮ್ಮ ಇನ್ನೊಬ್ಬ ಗೆಳತಿಗೆ ನಾವಿಬ್ಬರು ಅಲ್ಲಿಂದಲೇ ತಾನೆ ಮೊಬೈಲಾಯಿಸಿದ್ದು. ಮತ್ತೆಮತ್ತೆ ಆಕೆಗಾದ ಮೋಸಕ್ಕೆ ಒಂದು ಕ್ಷಣ ಪುರುಷ ಹೃದಯಗಳನ್ನೆಲ್ಲ ಒಂದೇ ತಕ್ಕಡಿಗೆ ಹಾಕಿ ತೂಗಿದ್ದು...
ಒಳಗಿನ ಧಗೆ ಕೊತಕೊತ ಕುದಿಯುತ್ತಿದ್ದರೂ, ಹಾಸ್ಯ ಚಟಾಕಿ ಹಾರಿಸಿ ಮುಖದಲ್ಲಿ ನಗೆ ತುಳುಕಿಸುವ ಅದ್ಭುತ ಶಕ್ತಿಯಿದ್ದ ಅವಳೇ ಅಂದಿದ್ದಳಲ್ವೇ.... ಹೋಗ್ಲಿ ಬಿಡ್ರೇ.... ಪ್ರೀತಿಗೆ ಸಂಬಂಧಿಸಿದಂತೆ ನನ್ನ ವಾಸ್ತು ಸರಿ ಇಲ್ಲ ಅಂತ।

ಹೌದಾ...? ಪ್ರೀತಿಗೂ ವಾಸ್ತು ಸರಿ ಇರಬೇಕಾ...?

ಇವತ್ತು ಪ್ರೇಮಿಗಳ ದಿನವಂತೆ। ಪ್ರೀತಿಯ ಆಚರಣೆಯಂತೆ। ಇಲ್ಲೂ ನನ್ನದೊಂದು ಭಂಡ ಅಥವಾ ಬಂಡಾಯದ ಪ್ರಶ್ನೆ. ಪ್ರೀತಿ ಅಂದರೆ ಅದು ಗಂಡು-ಹೆಣ್ಣಿನ ನಡುವಿನ ಪ್ರೀತಿಯ ಆಚರಣೆ ಮಾತ್ರ ಯಾಕಾಗಬೇಕು? ನನ್ನ ನಿನ್ನ ನಡುವಿನ ಸ್ನೇಹ ಮೊಳೆಸಿರುವ, ವಿನಾಕಾರಣ, ಸಿಹಿಸಿಹಿ ಪ್ರೀತಿಯ ಆಚರಣೆಗೆ ಯೋಗ್ಯತೆ ಇಲ್ವೇನೆ? ಏನಂತಿ?

ಛುಪ್....! ಹಿಂದೆ...., ರೋಮ್ ದೇಶದಲ್ಲಿ...., ವ್ಯಾಲಂಟೈನ್ ಎಂಬ ಕ್ರೈಸ್ತ ಪಾದ್ರಿ...... ಎಂಬೋ ಕಥೆ ಎಲ್ಲ ಹೇಳ್ಬೇಡ.... ನಾನೂ ಅದನ್ನು ಓದಿರುವೆ।

ಭಾನುವಾರ, ಜನವರಿ 20

ನೀನು ಮತ್ತೊಮ್ಮೆ ಬಾ ಪುಟ್ಟಾ...

ಗಗನ್ ಪುಟ್ಟಾ....,ಕಳೆದ ಹದಿಮೂರು ವರ್ಷಗಳಿಂದ ನೀನು ನಮ್ಮೊಡನಿದ್ದೆ ಮತ್ತು ಇರಲಿಲ್ಲ। ನೀನಿದ್ದಲ್ಲಿಂದ ಸುಮಾರು ಒಂಭೈನೂರು ಕಿಲೋ ಮೀಟರ್ ದೂರದಲ್ಲಿರುವ ನಾನು, ನಿನ್ನೆ ದಿನ ಶನಿವಾರ ಗಡಿಬಿಡಿಯಲ್ಲಿ ಆಫೀಸಿಗೆ ತೆರಳಲು ತಯ್ಯಾರಾಗುತ್ತಿದ್ದೆ। ಅಷ್ಟರಲ್ಲಿ ನಿನ್ನ ಮಾಮ, ನನ್ನ ಅಣ್ಣ ಫೋನು ಮಾಡಿದ್ದ। ಅವನು ಕುಶಲೋಪರಿ ವಿಚಾರಿಸಲು ನನ್ನೊಡನೆ ಮಾತಾಡುವ ಸಮಯವಲ್ಲದೆ ಇತರ ಅವೇಳೆಯಲ್ಲಿ ಪೋನು ಮಾಡಿದರೆ, ನಾನು ಒಂದು ರೀತಿಯ ದಿಗಿಲಿನಿಂದಲೇ ಕರೆಯನ್ನು ಸ್ವೀಕರಿಸುತ್ತೇನೆ. ಹಾಗೆ ಆಯಿತು ನೋಡು.


ಆದರೆ ಇಂತ ಸುದ್ದಿಯನ್ನು ನಾನು ನಿರೀಕ್ಷಿಸಿರಲಿಲ್ಲ। ನೀನು ನಮ್ಮ ಕುಟುಂಬಕ್ಕೆಲ್ಲ ಗಗ್ಗಣ್ಣ ಆಗಿದ್ದೆ. ಅದೇ ನಿನ್ನ ಮಾಮ, ರಾತ್ರಿ ಒಂದು ಗಂಟೆ ಸುಮಾರಿಗೆ ಗಗ್ಗಣ್ಣ ನಮ್ಮನ್ನು ಬಿಟ್ಟಗಲಿದ ಎಂದಾಗ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ ಪುಟ್ಟಾ.... ಗಂಟಲುಬ್ಬಿತ್ತು. ಹೌದಾ, ಏನಾಗಿತ್ತು ಅಂತ ಕೇಳಲೂ ಶಕ್ತಿಗುಂದಿತ್ತು. ನಾನು ಹುಟ್ಟಿದ ಬಳಿಕ ನಮ್ಮ ಕುಟುಂಬ ಎದುರಿಸಿದ ಮೊದಲ ಸಾವಿದು.

ಗಗ್ಗಣ್ಣಾ... ಹುಟ್ಟಿದ ಆರು ತಿಂಗಳ ಬಳಿಕ ಹೇಗಿದ್ದಿಯೋ, ಹದಿಮೂರು ವರ್ಷದ ಬಳಿಕ ನಿನ್ನೆ ನೀನು ನಮ್ಮೆಲ್ಲರನ್ನು ಬಿಟ್ಟು ಹೋದಾಗಲೂ ಹಾಗೆಯೇ ಇದ್ದೆ। ತಾತಾ... ಮಾಮ॥ ಬಿಟ್ಟರೆ ನಿಂಗೆ ಬೇರೆ ಪದಗಳು ತಿಳಿದಿರಲಿಲ್ಲ. ಬಾಯಿಗೆ ಕೊಟ್ಟ ಆಹಾರವನ್ನು ಜಗಿಯಲೂ ಗೊತ್ತಿರಲಿಲ್ಲ. ನಿನ್ನ ಹೆತ್ತವರಾದ, ನನ್ನ ಪ್ರೀತಿಯ ಸಣ್ಣಕ್ಕ ಮತ್ತು ಭಾವ, ನೀನು ನಮ್ಮೆಲ್ಲರಂತಾಗಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡಿದರು. ಯಾರೇ ಯಾವುದೇ ಮೂಲಗಳನ್ನು ಹೇಳಿದರೂ, ನಮ್ಮ ಗಗ್ಗಣ್ಣ ಸರಿಹೋದಾನೆ ಎಂಬ ಆಸೆಯಲ್ಲಿ ಊರೂರು ಅಲೆದು ಔಷಧ, ಭಸ್ಮ, ಎಣ್ಣೆ, ಲೇಪ ಎಲ್ಲವನ್ನೂ ಪ್ರಯತ್ನಿಸಿದರು. ಊಹುಂ... ನೀನು ಚೇತರಿಸಿಕೊಳ್ಳಲೇ ಇಲ್ಲ.

ನಾನು ಊರಿಗೆ ಬರುವಾಗ ನಿನ್ನ ಅಣ್ಣ-ತಂಗಿಯರಿಗೆಲ್ಲ ಏನಾದರೂ ತಂದರೆ ನಿಂಗೂ ಒಂದು ಪಾಲಿರುತ್ತಿತ್ತು। ಆದರೆ ಉಳಿದ ಮಕ್ಕಳು ಚಿಕ್ಕಮ್ಮೂ... ಅದು ಚೆನ್ನಾಗಿಲ್ಲ, ಇದು ಚೆನ್ನಾಗಿದೆ ಎಂದೋ, ಇಲ್ಲ ಹಂಚುವಿಕೆ ಸರಿಹೋಗಿಲ್ಲ ಎಂದೋ ನಗುತ್ತಾ, ಅಳುತ್ತಾ, ಮುಷ್ಕರ ಹೂಡುತ್ತಾ, ಮುಸಿಮುಸಿ-ದಸುಮುಸು ಮಾಡುತ್ತಾ ನನ್ನ ಸುತ್ತುಮುತ್ತು ಗಿರಕಿ ಹೊಡೆಯುತ್ತಿದ್ದರೆ, ಅಥವಾ, ನನ್ನ ತಲೆಯನ್ನು ಅವರ ಸುಪರ್ದಿಗೆ ಪಡೆದು ಜಡೆಹಾಕುತ್ತಲೋ, ಸಿಂಗಾರ ಮಾಡುತ್ತಲೋ ಇದ್ದರೆ ನಿಂಗೆ ಇದು ಯಾವುದೂ ಗೊತ್ತಾಗುತ್ತಿರಲಿಲ್ಲ. ನನ್ನ ಮಡಿಲಲ್ಲಿದ್ದರೂ ನಿನ್ನ ಸ್ಪಂದನವಿರುತ್ತಿರಲಿಲ್ಲ. ನಿನ್ನ ಪಾಡಿಗೆ ನೀನು ಮಲಗಿಯೇ ಇರುತ್ತಿದ್ದೆ. ಉಳಿದ ಮಕ್ಕಳ ಕಣ್ಣಲ್ಲಿ ಕಾಣುವ ಹೊಳಪು, ಅಳು, ನಗು, ಕುಣಿತ ಕೀಟಲೆ ಯೂವುದೂ ನಿಂಗೇ ಗೊತ್ತೇ ಇರಲಿಲ್ಲ ಎಂಬ ಸಂಕಟ ನಮ್ಮೆಲ್ಲರದಾಗಿತ್ತು ಕಂದಾ...

ನೀನೂ ಸಾಕಷ್ಟು ಕಷ್ಟ ಅನುಭವಿಸಿದೆ। ಏನಾಗುತ್ತದೆ ಎಂದು ಹೇಳಲು ನಿಂಗೆ ಗೊತ್ತಾಗುತ್ತಿರಲಿಲ್ಲ. ನೀನು ಕನಿಷ್ಠಪಕ್ಷ ಮಲಗಿದಲ್ಲಿಂದ ಎದ್ದು ನಡೆದಾಡುವಂತಷ್ಟಾದರೂ ಆಗಬೇಕೆಂದು ನಾವೆಲ್ಲ, ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿದ್ದೆವು. ನಮಗೆ ಪರಸ್ಪರ ಅದೃಷ್ಟವಿರಲಿಲ್ಲ.

ನಿನ್ನ ಅಗಲಿಕೆ, ಆ ಖಾಲಿತನ ತುಂಬುವುದಿಲ್ಲವೆಂಬುದು ಕಟು ವಾಸ್ತವ ಗಗ್ಗಣ್ಣಾ। ನಿನ್ನಂತೆಯೇ ಅಮಾಯಕಳು ನಿನ್ನ ಹೆತ್ತಮ್ಮ. ನಿನ್ನನ್ನು ಜತನದಿಂದ ಕಾಪಾಡಿಕೊಂಡಂತೆ, ಒಂದು ಕಾಲದಲ್ಲಿ ನನ್ನನ್ನೂ ಕಾಯ್ದವಳು. ಹೆತ್ತ ಹೊಟ್ಟೆಯ ಸಂಕಟ ಎದುರಿಸುವ ಶಕ್ತಿ ಅವಳಿಗೆ ಲಭಿಸಲಿ. ಮತ್ತು,

ಜನ್ಮ, ಋಣಾನುಬಂಧ ಎಂಬುದೆಲ್ಲ ನಿಜವಾಗಿದ್ದರೆ, ನೀನು ಮತ್ತೊಮ್ಮೆ ಬಾ... ಅದ್ಯಾವ ಜನ್ಮದಲ್ಲಿ ಏನು ತಪ್ಪಾಗಿತ್ತೋ, ಈ ಜನ್ಮದ ನಿನ್ನ ಬದುಕು ಬದುಕೇ ಅಲ್ಲ. ನೀನು ಹೋದಲ್ಲಿ ನಿನ್ನ ಆತ್ಮ ಶಾಂತಿಯಿಂದಿರಲಿ....

ಬುಧವಾರ, ಜನವರಿ 2

ಗುದ್ದುರಾಮಯ್ಯ ಪುರಾಣವು...

ಭಳಿರೇ ಪರಾಕ್ರಮ ಕಂಠೀರವ............!

ಬಲ್ಲಿರೇನಯ್ಯಾ...........?

ಚಾಮುಂಡೇಶ್ವರಿ ಸಂಸ್ಥಾನಕ್ಕೆ ಯಾರೆಂದು ಕೇಳಿ ಬಲ್ಲಿರೀ..................?

ಗುದ್ದುರಾಮ ಎಂದು ಕೇಳಿ ಬಲ್ಲೆವು.........

ಹಾಗೆಂದುಕೊಳ್ಳಬಹುದು......... ಹಾಗೆಂದುಕೊಳ್ಳಬಹುದು.........

ಇರುವಂತಹ ಸ್ಥಳ.........?

ಮಹಿಷನೂರು ಎಂದುಕೊಳ್ಳಬಹುದು......

ಬಂದಂತಹ ಕಾರ್ಯ........?

ಅನೇಕವಿದೆ....... ಅನೇಕವಿದೆ........ ಅನೇಕವಿದೆ......

ಚುಮುಚುಮು ಚಳಿ ಮೈಕೊರೆಯುತ್ತಿದ್ದರೂ ಸಕ್ಕರೆಯ ಸವಿ ನಿದ್ದೆ ಸವಿಯುವಂತಿಲ್ಲ....... ಈ ದೋಸ್ತಿಗಳ ಕಿತಾಪತಿಯಿಂದಾಗಿ ಯಾವಾಗ ಬೇಕಿದ್ದರೂ ನಿಧಾನ ಬಸೆಗೆ ಚುನಾವಣೆ ಎದುರಾಗಬಹುದು। ಮಾನಸಿಕ ನೆಮ್ಮದಿಯಿಲ್ಲ. ಹೊಸ ನೆಲೆ ಸಂತೃಪ್ತಿ ತಂದಿಕ್ಕಿಲ್ಲ. ಒಂದು ನಮೂನೆಯ ದುರ್ವಿಧಿ ನಮ್ಮನ್ನು ಮುತ್ತಿದಂತಿದೆ. ಹಿಂದ, ಮುಂದ ನೋಡದೆ 'ಆ' ಹಿಂದೆ ತೆರಳಬಾರದಿತ್ತೇ..........? ಆವರಿವರ ಗಾಳಿಗೆ ಉಬ್ಬಬಾರದಿತ್ತೇ......? ನಮ್ಮ ಎಣಿಕೆ ಯಾಕೆ ಹೀಗಾಯಿತು.....? ಎಲ್ಲಿ ತಪ್ಪಿತು ಲೆಕ್ಕಾಚಾರ...........

ಈ ಎಲ್ಲ ಚಿಂತೆಗಳ ನಡುವೆಯೂ, ನಮ್ಮ ಸ್ನಾನಾದಿ ಕಾರ್ಯಗಳನ್ನು ಪೂರೈಸಿ, ಉಪಾಹಾರವನ್ನು ಸೇವಿಸಿ ಶುಭ್ರವಾದ ಉಡುಪನ್ನು ತೊಟ್ಟು, ಹೆಗಲಿಗೊಂದು ಶಲ್ಯವನ್ನು ಏರಿಸಿ, ಕುರುಚಲು ಗಡ್ಡವನ್ನೊಮ್ಮೆ ನೀವಿ ಸಭೆಗಾಗಮಿಸಿದ್ದೇವೆ....... ಯಾರಲ್ಲೀ....

ಮಾನ್ಯ ಗುದ್ದುರಾಮರೇ............. ನಿಮಗೆ ಪ್ರಪ್ರಥಮವಾಗಿ ನಾವು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇವೆ। ತಾವೀಗ ಕೊಂಚ ಕಳೆಗುಂದಿದ್ದೀರಿ ಎಂಬುದಾಗಿ ತಮ್ಮ ರಾಡಿಕೀಯ ಜೀವನವನ್ನು ಬಲ್ಲವರು ಹೇಳುತ್ತಾರೆ...... ಅಲ್ಲದೆ ತವರು ಬಿಟ್ಟು ಹೊರ ನಡೆದ ನೀವು ಬಕರಾ..........

ಇದೇನು ಮಾತು ಆಡುತ್ತೀರಿ ಭಾಗವತರೇ.........? ನಾವು ಮೊದಲು ಹ್ಯಾಗಿದ್ದೇವೊ ಈಗಲೂ ಹಾಗೆಯೇ ಇದ್ದೇವೆ। ಕಳೆ, ಕೊಳೆ ಎಂಬುದೆಲ್ಲ ನಿಮ್ಮ ದೃಷ್ಟಿದೋಷದ ಮಾತು ಅಷ್ಟೇಯ...... ಬಕರಾ ಗಿಕಾರ ಎಂಬೆಲ್ಲ ನಿಮ್ಮ ನಕರಾಗಳ ಅಧಿಕಪ್ರಸಂಗ ಬೇಡ.....

ನೀವು ನಿಮ್ಮ ಪೂರ್ವಾಶ್ರಮದಲ್ಲಿದ್ದಾಗ ವೇದೆ ಡೌಗರಿಗೆ ಅತ್ಯಂತ ಪ್ರಿಯರಾಗಿದ್ದವರು। ಒಂದು ಕಾಲದಲ್ಲಿ ಗುದ್ದುರಾಮೂ ಅನ್ನುತ್ತಾ ಅವರು ನಿಮ್ಮ ಹೆಗಲ ಮೇಲೆ ಕೈಇಟ್ಟವರು। ಡೌಗರಿಗೆ ಅವರ ಮಕ್ಕಳಿಗಿಂತ ನೀವೆ ಹೆಚ್ಚು ಎಂಬುದಾಗಿ ಎಲ್ಲರೂ ಸರಿಯಾಗೆ ತಪ್ಪು ತಿಳಿದಿದ್ದರು. ಅವರ ಪ್ರೀತಿ ನಿಜ ಅಂದುಕೊಂಡಿದ್ದರು. ಆದರೂ ಅಧಿಕಾರ ಮಾತು ಬಂದಾಗ ನಿಮ್ಮ ಮೇಲಿನ ಪ್ರೀತಿಗಿಂತ ಮಕ್ಕಳ ಮೇಲಿನ ವ್ಯಾಮೋಹವೇ ಹೆಚ್ಚಾಯಿತಾ........ ನಿಮ್ಮನ್ನು ಅವರು ತಮ್ಮ ದಾಳವಾಗಿ ಉಪಯೋಗಿಸಿಕೊಂಡರೇ..................?

ಭಾಗವತರೇ ಇದು ಲೋಕಕ್ಕೇ ಗೊತ್ತಿರುವ ವಿಚಾರ। ಹೀಗಿರುತ್ತಾ ಇದೇನಿದು ನಿಮ್ಮ ಕಿಸೆ......? ವೇದೇ ಡೌಗರ ಮಣ್ಣುಮುಕ್ಕಿಸೋ ತಂತ್ರ ಯಾರಿಗೆ ತಿಳಿದಿಲ್ಲ.......?

ಇರಲಿ, ನೀವು ಈಗ ಸೇರಿಕೊಂಡಿರುವಲ್ಲಿಯೂ ನಿಮಗೆ ಸಮಾಧಾನವಿಲ್ಲ ಎಂಬ ಮಾತುಗಳು ಕೇಳಿಬಂದಿವೆ। ಹಾಗಾಗಿ ನೀವೀಗ ಸೇರಿದ ಮನೆಯವರು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ನಿಮ್ಮೊಳಗೆ ಬುಸುಗುಡುತ್ತಿರುವ ಅಸಮಾಧಾನವೇ ಕಾರಣ ಎಂದು ಹೇಳಲಾಗುತ್ತಿದೆಯಲ್ಲಾ.....

ಯಾರು ಹೇಳಿದ್ದು ನಾವು ಸಭೆಗಳಲ್ಲಿ ಭಾಗವಹಿಸುತ್ತಿಲ್ಲಾ ಅಂತಾ... ಏನೋ ಇತರೇ ಕಾರ್ಯದೊತ್ತಡದಿಂದಾಗಿ ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಬಹುದು, ಅದಕ್ಕೆ ನೀವು ವಿಶೇಷ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ ತಿಳಿಯಿತೇ......
ಗುದ್ದುರಾಮರೆ, ಮೊನ್ನೆ ಮಹಿಷನೂರಲ್ಲಿ ನಡೆದ ಸಮಾರಂಭವೊಂದರಲ್ಲಿ ಹೊಲಸು ಮಾತಾಡಿದವರ ಮುಸುಡಿಗೆ ನೀವು ಗುದ್ದಿಯೇ ಬುದ್ಧಿ ಹೇಳಿದಿರಂತೆ........ ನಿಮ್ಮ ಗುದ್ದಾಟಾದ ಚಮತ್ಕಾರದ ಬ....

ಮುಚ್ಚಿಬಾಯಿ ಭಾಗವತರೇ....... ನಿಲ್ಲಿಸಿ ನಿಮ್ಮ ವ್ಯರ್ಥ ಪ್ರಲಾಪ। ಯಾರು ಗುದ್ದಿದರು, ಯಾರಿಗೆ ಗುದ್ದಿದರು.... ಯಾವಾಗ ಗುದ್ದಿದರು..... ಇಷ್ಟಕ್ಕೂ ಮುಖಕ್ಕೇ ಗುದ್ದಲು ರಾಡಿಕೀಯ ನಾಯಕರಿಗೆ ಮುಖವೆಂಬುದೂ ಇರುತ್ತದಾ........? ಇದೆಲ್ಲ ನಿಮ್ಮ ತುತ್ತೂರಿಯವರ ಕುತಂತ್ರ ಅಷ್ಟೆ. ಬೇಕಿರುವುದನ್ನು ಊದದ ನೀವುಗಳು ಬೇಡದ್ದನ್ನು ಊದುತ್ತೀರಾ... ಆ ಸಭೆಯಲ್ಲಿ ನಾವು ಅವರ ಮೂಗು ಸವರಿ ಅವರನ್ನು ನೆಟ್ಟಗೆ ನಿಲ್ಲಿಸಿ ಬಂದಿದ್ದೆವು ಅಷ್ಟೆ......... ಇಂತಹ ಬೇಕಾಬಿಟ್ಟಿ ಮಾತುಗಳನ್ನಾಡುವ ನಿಮ್ಮ ಬಳಿ ನಾವು ಮಾತಾಡಲಿಚ್ಛಿಸುವುದಿಲ್ಲ.

ಅರ್ಥವಾಯಿತು ಗುದ್ದುರಾಮರೇ...... ನಮ್ಮ ಈ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ।

ಎಲ್ಲರಿಗೂ ಒಳಿತಾಗಲಿ....... ಮಂಗಳಂ

ಮಂಗಳವಾರ, ಜನವರಿ 1

ನಡೆ ಮನವೆ......

ನಾನು ತುಂಬ ಇಷ್ಟಪಟ್ಟ ಹೊಸ ವರ್ಷದ ಸಂದೇಶ. ನಿಮ್ಮೊಡನೆ ಹಂಚಿಕೊಳ್ಳುವ ಇಚ್ಛೆ.
ನಡೆ ಮನವೆ ನಾಳೆಗಳಿಗೆ
ಸಿಹಿ ನೆನಪ ಬುತ್ತಿ ಜೊತೆಗೆ,
ಎಡವಿ ಬಿದ್ದ
ಕ್ಷಣವ ಕೊಡವಿ,
ಅಡೆತಡೆಗಳ ಎಲ್ಲ ಕೆಡವಿ,
ಕಟ್ಟುವ ಸವಿ ಸುಂದರ ಕನಸುಗಳ,
ಕಾಯುವ ನನಸಾಗುವ
ಆ ಕ್ಷಣಗಳ..
ಹೊಸ ವರ್ಷ
ತರಲಿ ಹರುಷ
ಪ್ರತಿ ನಿಮಿಷ