ಭಾನುವಾರ, ಏಪ್ರಿಲ್ 6

ನಮ್ಮ ಪ್ರಜೆಗಳಿಗೆ ನಾವೇ ನೀರು ಕುಡಿಸಬೇಕು

ಭಳಿರೇ ಪರಾಕ್ರಮ ಕಂಠೀರವ.........!!

ಬಲ್ಲಿರೇನಯ್ಯ..........?

ಈ ದ್ರಾವಿಡ ಸಂಸ್ಥಾನಕ್ಕೆ ಯಾರೆಂದು ಕೇಳಿ ಬಲ್ಲಿರೀ.........?

ರಕುಣಾಧಿನಿ ಎಂದು ಕೇಳಿ ಬಲ್ಲೆವೂ.......

ಹಾಗೆಂದುಕೊಳ್ಳಬಹುದು... ಹಾಗೆಂದುಕೊಳ್ಳಬಹುದು।

ಇರುವಂತಹಾ ಸ್ಥಳ.......?

ಮುದಿರಾಸು ಎಂಬ ಮಹಾನರಕವೆಂದು ತಿಳಿದುಕೊಂಡಿದ್ದೇವೆ।

ಬಂದಂತಹಾ ಕಾರ್ಯ.......?

ಅನೇಕವಿದೆ....... ಅನೇಕವಿದೆ....... ಅನೇಕವಿದೆ........

ನಮ್ಮಪಟ್ಟಣದ ಉರಿಉರಿಶೆಖೆಯೊಂದಿಗೆ, ಹಗೆಕಲ್ಲು ಬೆಂಕಿಯ ದಾವಿನ ಕಾವನ್ನೂ ತಂಪಾಗಿಸಿಕೊಳ್ಳುವ ನಿಟ್ಟಿನಿಂದ ಹವಾನಿಯಂತ್ರಿತ ಕೊಠಡಿಯಲ್ಲಿ ಪವಡಿಸಿದ್ದ ನಾವುಗಳು ಮುಂಜಾನೆಯಾಗುತ್ತಲೇ ಮೈಲಾಗದಿದ್ದರೂ ದಡಬಡಿಸಿ ಎದ್ದು, ಶೌಚ, ಸ್ನಾನಾಧಿ ಕಾರ್ಯಗಳನ್ನು ಮುಗಿಸಿ, ಉಪಾಹಾರವನ್ನು ಸ್ವೀಕರಿಸಿದ್ದಾಯಿತು। ಒಡ್ಡೋಲಗಕ್ಕೆ ತೆರಳುವ ಮುನ್ನ ಶ್ವೇತ ವರ್ಣದ, ಉತ್ಕೃಷ್ಟ ಗುಣಮಟ್ಟದ ಹತ್ತಿಯ ಧೋತರವನ್ನು ಉಟ್ಟು, ಅದೇಬಣ್ಣದ ಶರಟನ್ನೂ ತೊಟ್ಟು, ಹಳದಿ ಬಣ್ಣದ ಮೇಲ್ವವಸ್ತ್ರವನ್ನು ಹೊದ್ದುಕೊಂಡಿದ್ದಾಯಿತು. ನಮ್ಮ ಟ್ರೇಡ್ ಮಾರ್ಕ್ ಆಗಿರುವಂತಹ ಅಂಗೈಯಗಲದ ಕಪ್ಪು ಕನ್ನಡಕವನ್ನು ಕಣ್ಣಿಗೆ ಅಡ್ಡವಾಗುವಂತೆ ಮೂಗಿನ ಮೇಲೆ ಏರಿಸಿಕೊಂಡು, ನಮ್ಮ ಬೋಡು ಮಂಡೆಯಲ್ಲಿ ಇಲ್ಲದ ಕೂದಲುಗಳನ್ನು ಒಪ್ಪವಾಗಿ ಬಾಚಿದ್ದಾಯಿತು. ಸೇವಕ ತಂದಿಟ್ಟ ಕಾಲಿನ ಎಕ್ಕಡವನ್ನು ಮೆಟ್ಟಿ ಸಭೆಗೆ ಆಗಮಿಸಿ ಸಿಂಹಾಸನಕ್ಕೆ ವಂದಿಸಿ, ಸಿಂಹಾಸದ ಕೈಯನ್ನು ಆಧರಿಸಿಕೊಂಡು ನಿಧಾನವಾಗಿ ಆಸೀನರಾಗಿ, ನಮ್ಮನ್ನು ಇಡೀಯಾಗಿ ಆಸನದಲ್ಲಿ ಹುದುಗಿಸಿಕೊಂಡು, ಸಭೆಯನ್ನೊಮ್ಮೆ ನೋಡುತ್ತೇವೆ........! ಇದೇನಾಶ್ಚರ್ಯ........? ಇದೇನಾಶ್ಚರ್ಯ........?

ಸಭೆ ಎಂದಿಗಿಂತಲೂ ಇಂದು ತುಂಬಿ ತುಳುಕುತ್ತಿದೆ। ವಂದಿಮಾಗಧರಿದ್ದಾರೆ. ಮಾಗಣೆಯವರೂ ಬಂದಿದ್ದಾರೆ. ಮಂತ್ರಿಮಹೋದಯರು ಎದುರಿನ ಸಾಲಿನಲ್ಲಿ ರಾರಾಜಿಸುತ್ತಿದ್ದಾರೆ. ಯುವರಾಜರಾದ ರಕಟಕ ಮದನಕರೂ ತಮ್ಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತುತ್ತೂರಿಯವರ ಪಡೆಯೇ ಬೀಡುಬಿಟ್ಟಿದ್ದು, ನಾವು ಬಾಯಿಬಿಡುವುದನ್ನೇ ಅವಸರದಿಂದ ಕಾಯುತ್ತಿರುವಂತಿದೆ.... ಆದರೂ ಯಾಕೋ ಎಲ್ಲರ ಮುಖದಲ್ಲಿ ಒಂದು ನಮೂಊಊಊಊನೆಯ ಅಸಮಾಧಾನ ಮಡುಗಟ್ಟಿದಂತಿದೆಯಲ್ಲಾ......? ಇರಲಿ ನೋಡೋಣ. ಸಭೆ ಆರಂಭಿಸೋಣವಂತೆ..... ಯಾರಲ್ಲೀ.......?

ಸ್ವಾಮೀ ರಕುಣಾ ಧಿನಿಯವರೇ........ ನಿಗಿಗುಟ್ಟುತ್ತಿದ್ದ ಹಗೆಕಲ್ಲು ಎಂಬ ಕೆಂಡಕ್ಕೆ ನೀವು, ಈ ಮಾಸದ ಆದಿಯ ದಿನದಂದು ಮೇಲ್ಸೇತುವೆಯೊಂದರ ಉದ್ಘಾಟನೆ ಮಾಡುತ್ತಾ 'ಲೂಸುಲೂಸಾಗಿ' ಮಾತಾಡಿ ಪೆಟ್ರೋಲು ಸುರಿದಿರಂತೆ। ಏನೇ ಆದರೂ ಹಗೆಕಲ್ಲನ್ನು ಹೊಡಿಯದೆ 'ಬಿಡಮಾಟೇ.....' ಅನ್ನುತ್ತಾ ಅತ್ತ ನಿಮ್ಮ ನೆರೆಯ ಸಾಮ್ರಾಜ್ಯದ ನರ್ಕಾಟಕದವರನ್ನು ರೊಚ್ಚಿಗೆಬ್ಬಿಸಿದ್ದೀರಂತೆ.... ನರ್ಕಾಟಕದವರು ಬೆನ್ನುಮೂಳೆ ಮುರಿದರೂ ಬಿಡೆ ಎನ್ನುತ್ತಾ ಪಂಥಾಹ್ವಾನವನ್ನೇ ನೀಡಿದಿರಂತೆ.......

ಅರೇ... ಇದೇನಿದು ಭಾಗವತರೇ.... ನಮ್ಮ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಚಾರಕ್ಕೆ ನಾವಲ್ಲದೇ ಇನ್ಯಾರು ಮಾತನಾಡಲಾಗುತ್ತದೆ। ಈ ಸಂಸ್ಥಾನದ ಅಧಿಪತಿಯಾಗಿದ್ದುಕೊಂಡು ನಮ್ಮ ಪ್ರಜೆಗಳ ಹಿತಕಾಯುವುದು ನಮ್ಮ ಕರ್ತವ್ಯವಲ್ಲವೇ......? ನಮ್ಮ ಪ್ರಜೆಗಳಿಗೆ ನಾವು ನೀರುಕುಡಿಸದೇ ಇನ್ಯಾರು ನೀರು ಕುಡಿಸಲು ಸಾಧ್ಯ.....?

ಸ್ವಾಮಿ.... ದ್ರಾವಿಡ ಸಂಸ್ಥಾನದ ಅಧಿಪತಿಗಳೇ.... ನಿಮ್ಮ ಪ್ರಜೆಗಳಿಗೆ ನೀವು ನೀರುಕುಡಿಸಬೇಕಿರುವುದು ಉಚಿತವೇ ಆಗಿದ್ದರೂ, ಒಬ್ಬ ಆಸ್ಥಾನಪತಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅಂತಹ ಪ್ರಚೋನಾಕಾರಿಯಾದಂತಹ ಮಾತುಗಳನ್ನಾಡುವುದು ಸಾಧುವೇ.....?

ಭಾಗವತರೇ......, ಒಂದು ಸಂಸ್ಥಾನದ ಅಧಿಪತಿಯಾಗಿರುವ ನಾವು, ನಮ್ಮ ಜನತೆಗಾಗಿ.... ಅವರ ಹಿತರಕ್ಷಣೆಗಾಗಿ..... ಅವರ ಹಿತರಕ್ಷಣೆಯ ಅವಕಾಶಕ್ಕೆ ಅಗತ್ಯವಿರುವ ವೋಟುಗಳಿಗಾಗಿ ಏನೂ ಮಾಡಲು ಸಿದ್ಧ, ಮತ್ತು ಎಂತಹ ಮಾತುಗಳನ್ನು ಹೇಳಲೂ, ಯಾರನ್ನು ಬೇಕಿದ್ದರೂ ಪ್ರಚೋದಿಸಲು ಸಿದ್ಧರಾಗಿರಬೇಕಾಗುತ್ತದೆ। ಇದನ್ನು ಸರಿಯೋ ತಪ್ಪೂ ಎಂದು ಅಳೆಯುವ, ಅಧಿಕ ಪ್ರಸಂಗಿತನದ ಮಾತುಗಳು ನಿಮಗೆ ಬೇಡ.

ಕರಿಯ ಚಾಳೀಸಿನ ಒಡೆಯರೇ...... ನಿಮ್ಮ ಸಾಮ್ರಾಜ್ಯದ ರಾಜಧಾನಿ ಹಾಗೂ ನಿಮ್ಮ ನೆರೆಯ ಸಾಮ್ರಾಜ್ಯದ ರಾಜಧಾನಿಗಳಲ್ಲಿ ಉಗ್ರರೂಪ ತಾಳಿದ, ಕಿಚ್ಚುಹತ್ತಿಕೊಳ್ಳಲು ಇಂಧನ ಸುರಿದಂತೆ ನೀವು ಆಡಿದ ಮಾತುಗಳಿಗೆ, ನಿಮ್ಮ ವಿರೋಧಿ ಲಯಜಲಿತಾ ತಾಯಿ, ನೀವು ನಿಮ್ಮ ಪ್ರಜೆಗಳ ರಕ್ಷಣೆಗೆ ಬದ್ಧರಾಗಿಲ್ಲ ಎಂದು ನಿಮ್ಮನ್ನು ಕೆರಳಸಿದ್ದು ಕಾರಣವ.....

ಮುಚ್ಚಿಬಾಯಿ ಭಾಗವತರೇ..... ನಮ್ಮ ಪ್ರಜೆಗಳ ಹಿತಕಾಯಲು ನಮಗೆ ಗೊತ್ತಿಲ್ಲವೇ.....? ಇಷ್ಟು ವಯಸ್ಸಿನ, ಇಷ್ಟೊಂದು ಸುದೀರ್ಘ ರಾಜ್ಯಾಡಳಿತದ ಅನುಭವ ಇರುವ ನಾವು ಆಯಮ್ಮನಿಂದ ಏನನ್ನೂ ಕಲಿಯಬೇಕಾಗಿಲ್ಲ.... ಇಂತಹ ಪ್ರಶ್ನೆಗಳನ್ನು ಎಸೆದರೆ ನಿಮ್ಮ ಗತಿ ನೆಟ್ಟಗಿರದೂ..... ಜಾಗ್ರತೆ!

ಸಮಾಧಾನ...... ಸಮಾಧಾನ...... ಉದ್ವೇಗಗೊಳ್ಳದಿರಿ..... ಪ್ರಜೆಗಳಿಗೆ ನೀರುಕುಡಿಸಲು ಕಂಕಣತೊಟ್ಟಿದ್ದ ತಾವುಗಳು, ನಿಮ್ಮ ನೆರೆರಾಜ್ಯದವರನ್ನು ಭಾಷಾ'ಕುರುಡರು' ಎಂದೆಲ್ಲ ಹೇಳುತ್ತಾ ಮತ್ತಷ್ಟು ತೈಲ ಸುರಿದವರು.... ನಿಮ್ಮ ದರ್ಬಾರಿನಲ್ಲಿ ನೆರೆರಾಜ್ಯದವರ ವಿರುದ್ಧ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದವರು, ಒಂದು ಹಂತದಲ್ಲಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ವಿರೋಧಿಗಳೆಲ್ಲ ಒಂದಾಗಲು ಕಾರಣವಾದ ಭಾಷಾಕುರುಡರಿಗೆ ವಂದನೆಗಳನ್ನೂ ಸಲ್ಲಿಸಿದ್ದ ನೀವು, ಇದ್ದಕ್ಕಿದ್ದಂತೆ ನಿಮ್ಮ ನೀರು ಕುಡಿಸುವ ಯೋಜನೆಯನ್ನು ತಡೆಹಿಡಿಯಲು ಕಾರಣವೇನು? ನರ್ಕಾಟಕದಲ್ಲಿ ಶಾಂತಿ ಕೆಡುತ್ತದೆಂಬ ವಿಚಾರ ನಿಮಗೆ ಮೊದಲೇ ಹೊಳೆಯಲಿಲ್ಲವೇ.....? ದೆಹಲಿ ಸಾಮ್ರಾಜ್ಯದಿಂದ ಅಖಂಡ ಭರತ ಖಂಡವನ್ನು ಆಳುತ್ತಿರುವ ನಿಮ್ಮ ಮೈತ್ರಿಕೂಟದ ಕಾಂಗೊರಸಿನ ಒತ್ತಡ ಕಾರಣವೇ? ನಿಸೋಯಾ ಮೇಡಮ್ಮರ ತಂತ್ರವೇ....ಇಲ್ಲ ಛೂ ಮಂತ್ರವೇ?

ಛೇ...... ಛೇ...... ಛೇ.....ಛೇ..... ಛೇ.... ಎಲ್ಲಿಂದೆಲ್ಲಿ ತಳುಕು ಹಾಕುತ್ತೀರಿ ನೀವು? ನಮಗೂ ಕೆಲವೊಮ್ಮ ಪ್ರಜ್ಞೆ ಎಂಬುದು ಇರುತ್ತದೆ। ನಮ್ಮ ಸಾಮ್ರಾಜ್ಯದ ಹಾಗೂ ನೆರೆಯ ಸಾಮ್ರಾಜ್ಯದ ಪ್ರಜೆಗಳು ಪರಸ್ಪರ ದ್ವೇಷ ಕಾರಿಕೊಳ್ಳುವುದನ್ನು ತಡೆಯಲು, ಇಂತಹ ಕ್ರಮಕ್ಕೆ ಮುಂದಾಗುವಂತೆ ನಮ್ಮ ಅಂತಪ್ರಜ್ಞೆ ನಮಗೆ ಕರೆ ನೀಡಿತು; ವಿನಹ ಗೋವರ್ಧನ ಗಿರಿಧಾರಿಯ ವಶೀಲಿ-ಭಾಜಿ ಅಥವಾ ಅಧಿಪತಿಗಳಿಲ್ಲದ ನೆರೆ ರಾಜ್ಯದ ಚುನಾವಣೆ ಇದ್ಯಾವುದೂ ಕಾರಣವಲ್ಲ.... ಭಾಗವತರೇ... ಸಾಕು ನಿಲ್ಲಿಸಿ ನಿಮ್ಮ ವ್ಯರ್ಥ ಪ್ರಲಾಪ.......

ರಕುಣಾ ಧಿನಿಯವರೇ.... ಅರ್ಥವಾಯಿತು..... ಅರ್ಥವಾಯಿತು.... ಸಭೆಗೆ ಮಂಗಳ ಹಾಡೋಣವಂತೆ.ಎರಡೂ ಸಾಮ್ರಾಜ್ಯಕ್ಕೂ ಒಳಿತಾಗಲೀ..... ಸರ್ವರೂ ನೀರು ಕುಡಿದು ಸುಃಖವಾಗಿರಲಿ.... ಮಂಗಳಂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ