ಶನಿವಾರ, ಡಿಸೆಂಬರ್ 1

ಯುದ್ಧ ಮತ್ತು ಪ್ರೀತಿಯಲ್ಲೀ........

ಬಲ್ಲಿರೇನಯ್ಯಾ........?

ಈ ನರ್ಕಾಟಕದ ಸಂಸ್ಥಾನದ ಕೊನೆಯ ಅಧಿಪತಿ ಯಾರೆಂದು ಕೇಳಿಬಲ್ಲಿರಿ............?
ರಾಡಿಯೂರಪ್ಪ ಎಂದು ಕೇಳಿ ಬಲ್ಲೆವು........

ಹಾಗೆಂದುಕೊಳ್ಳಬಹುದು......... ಹಾಗೆಂದುಕೊಳ್ಳಬಹುದು.... ಬಂತದಂತಹ ಕಾರ್ಯ..............?

ಏನೆಂದು ಹೇಳಲೀ..... ಇಲ್ಲ ಹಳಿಯಲೀ...... ನಮ್ಮ ಕರ್ಮವನ್ನೂ........ ಬಂದ ಕಾರ್ಯ ಅನೇಕವಿದೆ.... ಕೈಗೆ ಬಂದೂ...... ಬಾಯಿಗೆ ಹೋಗಿಯೂ... ಬಾಯಿಂದ ಪುತಕ್ಕೆಂದು ಉರುಳಿದ ತುತ್ತನ್ನು ಹೆಕ್ಕಬೇಕಿದೆ....... ನಮ್ಮ ನಾಟಕವನ್ನು ಬಿಟ್ಟಬಾಯಿ ಬಿಟ್ಟಂತೆ ನೋಡುತ್ತಿರುವ ಮತದಾರರನ್ನು ಓಲೈಸಬೇಕಿದೆ. ಯಾವುದೇ ಸಮಯದಲ್ಲೂ ಎದುರಾಗುವ ಚುನಾವಣೆಗೆ ಟೊಂಕ ಕಟ್ಟಬೇಕಿದೆ........ ನಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಬೇಕಿದೆ.... ವೇದೇ ಡೌಗ ಮತ್ತು ಮಕ್ಕಳು ಕಂಪೆನಿಯ ಇರುವ, ಇಲ್ಲದ ಹುಳುಕುಗಳನ್ನು ಹೆಕ್ಕಿಹೆಕ್ಕಿ ಬಿಕ್ಕಬೇಕಿದೆ..... ಪಟ್ಟಿಮಾಡುತ್ತಾ ಹೋದರೆ ಅದೇ ಆದೀತೂ............ಕಾರ್ಯಗಳು ಅನೇಕ ಇವೆ....... ಅನೇಕ ಇವೆ.....

ಮುಂಜಾನೆಯ ಮೈಕೊರೆಯುವ ಚಳಿಯಲ್ಲಿ ಮಿಂದು, ಜ್ಯೋತಿಷರು ಹೇಳಿರುವ ವಿಧಾನದಲ್ಲಿ ಪೂಜಾ ವಿಧಾನಗಳನ್ನು ಸಂಪನ್ನಗೊಳಿಸಿ, ಸೂರ್ಯನಾದಿಯಾಗಿ ಮುಕ್ಕೋಟಿ ದೇವರುಗಳಲ್ಲಿ ಕೆಲವು ಪ್ರಮುಖ ದೇವರುಗಳನ್ನು ನಿರ್ದಿಷ್ಟವಾಗಿಯೂ, ಉಳಿದ ದೇವರುಗಳನ್ನು ಸಾಮೂಹಿಕವಾಗಿಯೂ ಪ್ರಾರ್ಥಿಸಿ, ಹಣೆಯಲ್ಲಿ ಜಾಗ ಇರುವಷ್ಟು ಮಟ್ಟಿಗೆ ಪ್ರಸಾದ, ಭಸ್ಮಗಳನ್ನು ಬಳಿದುಕೊಂಡದ್ದಾಯಿತು. ನಮ್ಮ ಘನತೆಗೆ ತಕ್ಕಂತೆ ಉಡುಪನ್ನು ಧರಿಸಿ ಇರುವ ಬೆಳ್ಳಿಕೂದಲನ್ನು ಒಪ್ಪವಾಗಿ ಹಿಂದಕ್ಕೆ ಬಾಚಿ ಉಪಹಾರವನ್ನು ಸೇವಿಸಿ ಸಭೆಗೆ ಬಂದು ಆಸನವನ್ನು ಅಲಂಕರಿಸಿ ಸಭೆಯತ್ತ ಒಂದು ದೃಷ್ಟಿಹರಿಸುತ್ತೇವೆ.......ಏನಿದು..... ಏನಿದು ಚೋದ್ಯ........? ಮೊನ್ನೆ ಮೊನ್ನೆ ನಾವು ಈ ನಾಡಿನ ಅಧಿಪತಿಯಾಗಿ ಅಧಿಕಾರ ಸ್ವೀಕರಿಸುವ ದಿನ ಇದ್ದ ಗೌಜಿ ಗದ್ದಲಗಳೆಲ್ಲಿ......? ಆ ಅಭಿಮಾನಿ ಸಂಕುಲವೆಲ್ಲಿ........? ಹಾರತುರಾಯಿಗಳೆಲ್ಲಿ.........? ಕೈಬೀಸುವ, ಕಾಲಿಗೆ ಬೀಳುವ, ಕೈಮುಗಿಯುವ ವಂಧಿ ಮಾಗದರೆಲ್ಲಿ.......... ಏಳೇ ದಿನ ಬಹುಪರಾಕ್ ಹೇಳಿದ ಭಟ್ಟಂಗಿಗಳೆಲ್ಲಿ......? ಆ ದಿನದ ನಮ್ಮ ಸಭೆಯ ಶೋಭೆ ಎಲ್ಲಿ......? ರಂಗು ಎಲ್ಲಿ....? ಶಿವಶಿವ ಏನು ನಿನ್ನ ಮಾಯೆ.....? ಏನು ನಿನ್ನ ಲೀಲೆ.........?

ರಾಡಿಯೂರಪ್ಪನವರೇ....... ನೀವು ಯಾರನ್ನು ಮಿತ್ರಪಕ್ಷವೆಂದು ಪರಿಗಣಿಸಿದ್ದೀರೋ ಅದರ ಮುಖಂಡರಿಗೆ ತನಗೆ, ತನ್ನ ಮಕ್ಕಳಿಗಲ್ಲದೆ ಇತರರಿಗೆ ಅಧಿಕಾರ ನೀಡಬಾರದು ಎಂಬ ಖಾಯಿಲೆ ಅಂಟಿಕೊಂಡಿರುವ ವಿಚಾರ ಆಬಾಲ ವೃದ್ದರಾದಿಯಾಗಿ ನಾಡಿಗೇ ತಿಳಿದ ವಿಚಾರ. ಇಂತಿಪ್ಪಗ, ನೀವು ಅವರನ್ನು ಹೇಗಾದರೂ ನಂಬಿದಿರಿ....? ಒಂದೊಮ್ಮೆ ಅವರು ನಿಮ್ಮ ಆಡಳಿತದ ಬಗ್ಗೆ ವಿಶ್ವಾಸ ತೋರ್ಪಡಿಸಿದ್ದರೂ ಒಂದಲ್ಲ ಒಂದು ದಿನ ಎಳೆದುರುಳಿಸುತ್ತಿದ್ದುದು ನಿಚ್ಚಳ. ಹಾಗಿದ್ದರೂ ಅವರನ್ನು ನಂಬಿ ಅವರ ತಾಳಕ್ಕೆ ತಕ್ಕಂತೆ ಇನ್ನಿಲ್ಲದ ತಾಳ್ಮೆಯಿಂದ ಕುಣಿಯುತ್ತಾ ಹೋಗಿರುವುದು ಅಧಿಕಾರಕ್ಕೇರಬೇಕೆಂಬ ಒಂದೇ ವಾಂಛೆಯೇ.....?

ಏನು ಮಾತೂಂತ ಆಡುತ್ತೀರಿ ಭಾಗವತರೇ......? ನಿಮ್ಮ ಕಣ್ಣಿಗೆ ಮುಳ್ಳಾಣಿ ಏನಾದರೂ ಬಡಿದಿದೆಯೇ......? ಅವರು ವಿಶ್ವಾಸ ದ್ರೋಹ ಮಾಡಿದಾಗ ನಾವು ಅವರನ್ನು ಧಿಕ್ಕರಿಸಿ ಬರಲಿಲ್ಲವೇ.......? ಅವರ ಮನ ಪರಿವರ್ತನೆ ಯಾಯಿತೆಂದು ಭಾವಿಸಿದ ನಾವು, ನಮ್ಮ ಮೈತ್ರಿಯ ಮುಂದುವರಿಕೆಗೆ ಅವರಿಗೊಂದು ಅವಕಾಶ ಕೊಟ್ಟೆವು. ಆದರೆ ಅವರ ಹುಟ್ಟಾ ಚಾಳಿಯದು ಮತ್ತೆ ಮೋಸ ಮಾಡಿದರು...... ನಾವು ಇನ್ನೆಂದಿಗೂ ಅವರೊಂದಿಗೆ ಮೈತ್ರಿ ಮಾಡಲಾರೆವು........

ಮಾಜಿ ಮುಕ್‌ಮಂತ್ರಿಗಳೇ, ಮಾಜೀ ಉಪಮುಕ್‌ಮಂತ್ರಿಗಳೇ.... ವೇದೇ ಡೌಗ...

ಅಯ್ಯೊಯ್ಯೋ.... ಎಲ್ಲಿ.... ಎಲ್ಲಿದ್ದಾರೆ ಡೌಗರು...... ಎಲ್ಲಿ ಬಂದರು.... ಇಲ್ಲಿದ್ದಾರೆಯೇ... ಎಲ್ಲಿ...ಎಲ್ಲಿ....?

ಅರೆರೆರೆರೆರೆರೆರೆರೇ..... ಡೌಗರು ಎಂದಾಗ ನೀವ್ಯಾಕೆ ಬೆಚ್ಚಿಬೆಚ್ಚಿ ಎದ್ದೆದ್ದು ಬೀಳುತ್ತೀರಿ......? ಅಲ್ಲಾ ಡೌಗರು ನಿಮಗೆ ಮಾಟ ಮಾಡಿದ್ದಾರೆ ಎಂದು ಹೇಳಿದ್ದೀರಿ.... ಮಾಟ - ಮಂತ್ರ - ಮಾಯೆ ಇವೆಲ್ಲವನ್ನೂ ಒಂದು ನಾಡಿನ ಅತ್ಯುನ್ನತ ಹುದ್ದೆಯನ್ನು ಏರಿ ಅದೇ ರಭಸಕ್ಕೆ ಇಳಿದ ನೀವು ನಂಬುತ್ತೀರೋ......? ಭಾಗವತರೆ...... ಇದಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಡೌಗರ ಹೋಮ ಹವನ ಪೋಜೆ ಪುನಸ್ಕಾರಗಳು ಜಗತ್ಪ್ರಸಿದ್ಧ. ಅವುಗಳು ಪತ್ರಿಕೆಗಳ ಬಹುಭಾಗವನ್ನು ಆಕ್ರಮಿಸಿದ್ದು ನಿಮಗೆ ತಿಳಿಯದ ವಿಚಾರವೇ.....? ಹಾಗಿರುವಾಗ..... ತನ್ನ ಮಕ್ಕಳೇ ಅಧಿಕಾರದಲ್ಲಿರಬೇಕೆಂಬ ಏಕಂಶದ ಕಾರ್ಯಕ್ರಮದ ಡೌಗರು ಏನೂ ಮಾಡಿಯಾರು ಅನ್ನೋದು ನಿಮಗೆ ತಿಳಿಯದ ವಿಚಾರವೇನು......? ಯಾವುದೇ ಸ್ಥಾನ ಅಲಂಕರಿಸಿದರೇನಾಯಿತು.....? ನಮ್ಮನಮ್ಮ ಹುಟ್ಟುಗುಣಗಳು ಅಂತೆಂಬುದು ಘಟ್ಟಹತ್ತಿದರೂ ನಮ್ಮನ್ನು ಬಿಡವಂತೆ. ಬಲ್ಲವರು ಹೇಳಿದ್ದಾರೆ....

ರಾಡಿಯೂರಪ್ಪರೇ..... ನಿಮ್ಮಮುಂದೆ ಈಗ ಅನೇಕ ಸವಾಲುಗಳು ಬೆಟ್ಟದಂತೆ ನಿಂತಿವೆ. ಆದರೂ, ಡೌಗ ಮತ್ತು ಅವರ ಕಂಪೆನಿಯ ವಿರುದ್ಧ ಬಾಯಿಗೆ ಬಂದಂತೆ ಬಯ್ದು, ಯಾತ್ರೆ ಹೊರಟು, ಬೀದಿಯಲ್ಲಿ ಮಲಗಿ ಏನೆಲ್ಲಾ ಮಾಡಿದ್ದೀರಿ..... ಈ ನರ್ಕಾಟಕ ಈ ಹಿಂದೆ ಕಂಡು ಕೇಳರಿಯದ ನಾಟಕವನ್ನು ದಾಖಲಿಸಿತು. ಆಮೇಲೆ ಅವರು ನಿಮಗೆ ಸಹಕಾರದ ಮಾತನ್ನು ಹೇಳುತ್ತಲೇ ಪ್ರಿಯಕರನೊಂದಿಗೆ ರಾಜಿಯಾದ ಪ್ರೇಯಸಿಯಂತೆ ಎಲ್ಲವನ್ನೂ ಮರೆತು ಓಡಿ ಬಂದಿರಿ. ಇದೀಗ ಅವರು ಮಾತು ತಪ್ಪುತ್ತಲೇ ಮತ್ತೆ ಅವರನ್ನು ಹಳಿಯಲು, ತೊಳೆಯಲು ಆರಂಭಿಸಿರುವಿರಿ.... ಇದನ್ನೆಲ್ಲ ನೋಡಿದ ಜನತೆ ನಿಮ್ಮ ಮೇಲೆ ಇರಿಸಿದ್ದ ವಿಶ್ವಾಸವನ್ನೂ ಕಳೆದುಕೊಳ್ಳುವುದಿಲ್ಲವೇ....? ನಿಮ್ಮ ಹೋರಾಟದ ವಿಧಾನ, ಬಳಸುವ ಶಬ್ದಗಳು, ನಿಮ್ಮ ಮೇಲೆ ಅನುಕಂಪ ಹುಟ್ಟಿಸುವುದಕ್ಕಿಂತಲೂ ರೇಜಿಗೆ ಹುಟ್ಟಿಸುತ್ತವೆ....

ನಿಮಗೇನು ಗೊತ್ತು ರಾಜಕೀಯ ಭಾಗವತರೇ.....? ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬ ಗಾದೆಯ ಮಾತೊಂದಿದೆ. ನಮ್ಮ ವಿಚಾರದಲ್ಲಿ, ನಮ್ಮ ರಾಜಕೀಯ ಯುದ್ಧದಲ್ಲಿ ಈ ಮಾತು ನೂರಕ್ಕೆ ನೂರರಷ್ಟು ಸರಿ ಹೊಂದುತ್ತದೆ. ನಾವು ಏಳೇ ದಿನ ಸಿಂಹಾಸನದಲ್ಲಿ ಇದ್ದರೇನಾಯಿತಂತೆ....? ಎಷ್ಟೊಂದು ದಾಖಲೆಗಳನ್ನು ಬರೆದಿಲ್ಲ... ಹ್ಞಾಂ..... ನಮ್ಮ ದಕ್ಷಿಣದಲ್ಲಿ ನಮ್ಮ ಪಾಳಯ ಅಧಿಕಾರ ಹಿಡಿದದ್ದು, ನಮ್ಮ ಪಾಳಯದ ಮೊದಲ ಮುಕ್‌ಮಾಂತ್ರಿ ಆದದ್ದು, ಏಳೇ ದಿನ ಇದ್ದದ್ದು, ಇತರ ಯಾವುದೇ ಪಾಳಯಕ್ಕಿಂತ ಹೆಚ್ಚು ಅದ್ಧೂರಿಯಾಗಿ ಧಾಂ ಧೂಂ ಆಗಿ ಪಟ್ಟಾಭಿಷೇಕ ಮಾಡಿದ್ದು..... ಭಾಗವತರೇ ನಮಗೇನು ಅಧಿಕಾರದ ಅಸೆ ಇಲ್ಲ. ಹಾಗಿರುತ್ತದ್ದರೆ ಆ ಡೌಗರು ನಮ್ಮ ಮುಂದೆ ಹಿಡಿದಿದ್ದ ಶರಾಬತ್ತನ್ನು ಕಣ್ಮುಚ್ಚಿ ಕುಡಿಯುತ್ತಿದ್ದೆವು. ಆದರೆ ಆ ಶರಾಬತ್ತಿನ ಸ(ಸಾ)ವಿಗಿಂತ ನಮಗೆ ಆತ್ಮಗೌರವ, ಪ್ರಜೆಗಳ ಮೇಲಿನ ನಿಷ್ಠೆ ಹೆಚ್ಚೆಂದು ಕಂಡಿದ್ದರಿಂದ ಏಳೇದಿನಗಳಲ್ಲಿ ಎಲ್ಲವನ್ನೂ ಬಿಟ್ಟು ಬಂದೆವು.... ಭಾಗವತರೇ ನೋಡುತ್ತಾ ಇರಿ..... ನಾವು ಮತ್ತೆ ಪ್ರಜೆಗಳ ಬಳಿ ಹೋಗುತ್ತೇವೆ. ಅವರ ಆಶೀರ್ವಾದ ಪಡೆಯುತ್ತೇವೆ. ಮತ್ತೊಮ್ಮೆ ಅದ್ದೂರಿಯ ಒಡ್ಡೋಲಗ ಮಾಡೋಣವಂತೆ. ಈಗ ನಾವು ಹೊರಡುತ್ತೇವೆ. ಹಲವಾರು ಯಾತ್ರೆಗಳನ್ನು ಮಾಡಿ ಗಮಾರ ಮತ್ತು ಡೌಗರನ್ನು ಎಲ್ಲೆಲ್ಲೆ ಸಾಧ್ಯವೋ ಅಲ್ಲೆಲ್ಲ ಬಯ್ಯಬೇಕಿದೆ.....

ಆಸನದಲ್ಲಿ ಕುಳಿತು ಚಡಪಡಿಸುವ ನಿಮ್ಮ ಅವಸರ ನಮಗೆ ಅರ್ಥವಾಗುತ್ತದೆ. ನಮ್ಮ ಪ್ರಶ್ನೆಗೆ ಮಂಗಳ ಹಾಡುತ್ತೇವೆ. ನಿಮ್ಮ ಅವಸರ ಅರ್ಥವಾಗುವಂತದ್ದು ಅಂತ ಈಗಾಗಲೇ ಹೇಳಿದ್ದೇವೆ. ಮತ್ತೊಮ್ಮೆ ಭೇಟಿಯಾಗೋಣ...
ಎಲ್ಲರಿಗೂ ಮಂಗಳವಾಗಲೀ........
ಸರ್ವೇಜನೋ ಸುಖಿನೋಭವಂತು.........