ಮಂಗಳವಾರ, ಡಿಸೆಂಬರ್ 2

ಸೂಟುಗಳಿಗೆಲ್ಲ ಇಸ್ತ್ರಿ ಹಾಕುತ್ತೇವೆ...

ಭಳಿರೇ ಪರಾಕ್ರಮ ಕಂಠೀರವಾ..........!

ಬಲ್ಲಿರೇನಯ್ಯಾ.........?

ಅಖಂಡಭರತ ಖಂಡದ ಗೃಹಖಾತೆಗೆ ಸಾಮಂತರು ಯಾರೆಂದು ಕೇಳಿಬಲ್ಲಿರೀ.....?

ಶ್ರೀ.... ಶ್ರೀ......ಶ್ರೀ..... ವಶೀಲಿರಾಜ್ ಟಪೇಲ್ ಅಲ್ಲವೆಂದು ಹೇಳಬಲ್ಲೆವೂ....

ಹಾಂ.. ಇದೇನು, ನಾವೀಗ ಮಂತ್ರಿಯಲ್ಲವೇ...? ಓಹ್.....!!! ಹೌದು ಖಾಲಿ ಸಚಿವರೂ ಅಲ್ಲಾ... ಅಮ್ಮಾ... ತಾಯಿ..... ಏನು ನಿನ್ನ ಲೀಲೆ?
ಬಂದಂತಹ ಕಾರ್ಯ......?

ಎಂತಹ ಕಾರ್ಯ.....? ಕಾರ್ಯವಿಲ್ಲದ ನಾವೀಗ ಖಾಲಿಖಾಲಿ...... ! ಕಾರ್ಯವಿದ್ದಾಗಲೂ ನಾವು ಖಾಲಿಯಾಗೇ ಇದ್ದೆವೆಂಬುದು ಬೇರೆವಿಚಾರ. ಇರಲಿ ನೋಡೋಣ....

ಮುಂಜಾನೆ ಎದ್ದು ಲಘುಪಹಾರ (ಫಿಗರ್ ಮೆಂಟೇನ್ ಮಾಡಬೇಕಲ್ಲವೇ....?) ಸೇವಿಸಿ, ಸಹಾಯಕರು ನೀಟಾಗಿ ಇಸ್ತ್ರಿ ಮಾಡಿರುವ ಸೂಟು, ಅದಕ್ಕೊಪ್ಪುವ ಬೂಟು ತೊಟ್ಟು, ಬೆಳ್ಳಿಮಿಶ್ರಿತ ತಲೆಗೂದಲಿಗೆ ಜೆಲ್ಲಿ ಬಳಿದು, ನಮ್ಮ ದುಬಾರಿ ವಿದೇಶಿ ಬಾಚಣಿಗೆಯಿಂದ ಒತ್ತಿಒತ್ತಿಒತ್ತಿ ಬಾಚಿ, ಕೂದಲೊಂದೂ ಕೊಂಕದಂತೆ ಒಪ್ಪವಾಗಿಸಿ, ಮುಖಕ್ಕೆ ತೆಳುವಾದ ಪೌಡರ್ ಲೇಪನವನ್ನು ಬಳಿದು, ಸುಗಂಧ ದ್ರವ್ಯವನ್ನು ಪೂಸಿ ತಯ್ಯಾರಿ ಆಗಿಯೇನೋ ಆಯಿತು. ಆದರೆ ಈಗ ಮಾಡುವುದಾದರೂ ಏನನ್ನು....?

ಅಭ್ಯಾಸ ಬಲದಂತೆ ಒಡ್ಡೋಲಕ್ಕೆ ಬಂದಿದ್ದೂ ಆಯಿತು. ಆದರೆ ಏನಾಶ್ಚರ್ಯ.....? ಇದೇನಾಶ್ಚರ್ಯ....? ಸಭಾಂಗಣದಲ್ಲಿ ಒಂದು ನರಹುಳು ಬಿಡಿ; ನಿಜಹುಳುವು ಕಾಣುತ್ತಿಲ್ಲವಲ್ಲಾ...? ಅಮ್ಮಾ ನಿನ್ನ ಲೀಲೆಯೇ....? ಎಲ್ಲಿ...? ಎಲ್ಲಿದ್ದಾರೆ...? ವಂಧಿಮಾಗಧರೆಲ್ಲಿ...? ಭಟ್ಟಂಗಿಗಳೆಲ್ಲಿ....? ಹಾರಗಳೆಲ್ಲಿ....? ತುರಾಯಿಗಳೆಲ್ಲಿ.....?

ಆಡಳಿತದುದ್ದಕ್ಕೂ ಅಸಾಮರ್ಥ್ಯ ತೋರಿರುವುದನ್ನು ಮೆಲುಕು ಹಾಕಲೇ, ನಮ್ಮ ದುರ್ಬಲತೆಯಿಂದ ಅಮಾಯಕರು ಉಗ್ರರ ಆರ್ಭಟಕ್ಕೆ ಬಲಿಯಾಗಿರುವ ಸಂಖ್ಯೆಯನ್ನು ಲೆಕ್ಕಹಾಕಲೇ, ಏನು ಮಾಡಲೀ....?

ಓಹ್ ಅದ್ಯಾರಲ್ಲೀ.....? ಯಾರೂ ಇಲ್ಲದಿದ್ದರೂ ಭಾಗವತರು ಮಾತ್ರ ತಪ್ಪುವುದಿಲ್ಲವಲ್ಲಾ.....ನಿಮಗಿನ್ನೂ ಇಲ್ಲಿ ಕೆಲಸವೇನು....? ನಿಮ್ಮ ಬಳಿ ಮಾತನಾಡಲು ನಮಗಿಚ್ಚೆಯಿಲ್ಲ.

ಅದು ಸರಿ, ವಶೀಲಿಬಾಜಿ ಟಪೇಲರೇ ಒಬ್ಬರೇ ಗೊಣಗುಟ್ಟುವ ಬದಲು ನಮ್ಮಬಳಿ ಮಾತನಾಡಬಹುದಲ್ಲವೇ....?

ಅದೂ ಸರಿ ಎನ್ನಿ ಭಾಗವತರೇ..... ಅದೇನು ನಿಮ್ಮ ವರಾತ? ಕೇಳುವಂತವರಾಗಿ...?

ಟಪೇಲರೇ.... ಈ ಹಿಂದೆ ಆತಂಕವಾದಿಗಳು ಭಯವನ್ನು ಉತ್ಪಾದಿಸಿದ್ದ ವೇಳೆಗೆ ನೀವು ಸ್ಥಾನ ಕಳಕೊಳ್ಳುವ ಆತಂಕವೆದುರಿಸಿದ್ದೀರಿ. ಭಯದ ಉತ್ಪಾದನೆಯನ್ನು ನಿಗ್ರಹಿಸುವುದು ನಿಮ್ಮಿಂದಾಗದ ಮಾತೆಂದು ಈ ನೆಲದ ಚಳ್ಳೆಪಿಳ್ಳೆಗಳೂ ಮಾತಾಡಲಾರಂಭಿಸಿವೆ. ನಿಗ್ರಹ ದೂರದ ಮಾತು; ಅದನ್ನು ಖಂಡಿಸಲೂ ನೀವು ಮೀನಮೇಷ ಎಣಿಸಿದ್ದವರು. ಬಾಯಿಗೆ ಬಂತಂತೆ ಹೇಳಿಕೆ ನೀಡಿ ಛೀ.. ಥೂ ಎಂದು ಉಗಿಸಿಕೊಂಡವರು... ಇದಾದ ಬಳಿಕ ನಿಮ್ಮ ಸ್ಥಾನಕ್ಕೆ ಕುತ್ತಿದೆಯಾ ಎಂಬುದಾಗಿ ಡಂಗೂರದವರು ಕೇಳಿರುವ ಪ್ರಶ್ನೆಗೆ, "ನಮ್ಮ ಆಶ್ರಯದಾತೆ ಅಮ್ಮನ ಆಶೀರ್ವಾದ ಇರುವ ತನಕ ನಮಗೇನೂ ಭಯವಿಲ್ಲ" ಎಂದಿದ್ದೀರಿ. ಆಗ ಕೂದಲೆಳೆಯಲ್ಲಿ ಬಚಾವಾದ ನೀವು ಗಡದ್ದು ನಿದ್ದೆಗೆ ಜಾರಿದವರು, ಮತ್ತೆ ಎಚ್ಚರವಾದದ್ದು ಮೊನ್ನೆ ಹಂತಕರು ಎಕೆ47 ರೈಫಲಿನಲ್ಲಿ ಹಾರಿಸಿದ ಗುಂಡಿನ ಸದ್ದು ಕೇಳಿದ ಯಾರೋ ನಿಮ್ಮನ್ನು ಅಲ್ಲಾಡಿಸಿ ಅಲ್ಲಾಡಿಸಿ ಎಬ್ಬಿಸಿದಾಗಲಂತೆ ಹೌದಾ....?

ಇದೇನು ಭಾಗವತರೇ....? ನಿಮಗೆ ಬಾಯಿತೆರೆಯಲು ಬಿಟ್ಟಿದ್ದೇ, ಎತ್ತು ಮೂತ್ರಮಾಡಿದಂತೆ ಊದ್ದಕ್ಕೆ ವಟಗುಟ್ಟುತ್ತಿದ್ದೀರೀ.....? ಹೇಳುವವರ ನಾಲಿಗೆ ಇಳಿದು ಹೋಗಲಿ... ನೋಡಿದವರ ಕಣ್ಣು ಕುರುಡಾಗಲಿ. ನಾವು ಕಳೆದ ನಾಲ್ಕೂವರೆ ವರ್ಷದಿಂದ ನಮ್ಮ ಕರ್ತವ್ಯವನ್ನು ಸೂಕ್ತವಾಗಿಯೇ ಪಾಲಿಸಿಕೊಂಡು ಬಂದಿದ್ದೇವೆ. ನಮ್ಮ ಪ್ಯಾಂಟು, ಇಲ್ಲವೇ ಕೋಟಿನ ಇಸ್ತ್ರಿಯ ಒಂದು ಗೀರೂ ಈ ನಮ್ಮ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕೊಂಕಿದ್ದು ಏನಾದರೂ ಕಂಡಿದ್ದರೆ ಹೇಳಿ.....! ಯಾರು ಹೇಳಿದ್ದು ಕಳೆದ ಸಾರಿಯ ಭಯದ ಉತ್ಪಾದನೆಯ ವೇಳೆಗೆ ನಾವೇನು ಮಾಡಿಲ್ಲವೆಂದು? ನಾವು ಒಂದೇ ದಿನದಲ್ಲಿ ನಾಲ್ಕು ಬಾರಿ ಉಡುಪು ಬದಲಿಸಿ ಪ್ರಜೆಗಳ ಮುಂದೆ ಕಾಣಿಸಿಕೊಂಡಿಲ್ಲವೇ?

ಇರಲಿ ವಶೀಲಿಬಾಜಿಯವರೇ..... ನೀವಾಗೆ ಪಡೆದಿರುವ ವಿಶ್ರಾಂತಿ ಕಾಲದಲ್ಲಿ ಏನು ಮಾಡಬೇಕೆಂದಿರುವಿರಿ.....?

ನಿಮ್ಮ ಅಧಿಕಪ್ರಸಂಗಕ್ಕೆ ಒಂದಿಷ್ಟು ವಿಶ್ರಾಂತಿ ಇರಬೇಕಿತ್ತು ಭಾಗವತರೇ....? ಮಾಡುವುದೇನು ನಿಮ್ಮ ಕರ್ಮ...? ನಾವು ನಮ್ಮ ಹಳೆಯ ಕೋಟು ಸೂಟುಗಳನ್ನೆಲ್ಲ ಕಪಾಟಿನಿಂದ ಈಚೆ ತೆಗೆದು - ಚೆನ್ನಾಗಿ ಒಗೆದು, ಬಿಸಿಲಲ್ಲಿ ಒಣಗಿಸಿ ಬಳಿಕ ಇಸ್ತ್ರಿ ಮಾಡುತ್ತೇವೆ. ನಮ್ಮ ಅಷ್ಟೂ ಕೋಟು ಸೂಟುಗಳನ್ನು ಒಗೆದು, ಒಣಗಿಸುವ ವೇಳೆಗೆ ಮುಂದಿನ ಚುನಾವಣೆ ಬರುತ್ತದೆ. ಮತ್ತೆ ಚುನಾವಣೆಯಲ್ಲಿ ಗೆದ್ದೋ, ಇಲ್ಲವೇ ಸೋತೋ, ಅಧಿಕಾರ ಸಿಕ್ಕರೆ ಮೆದ್ದು, ಮತ್ತೆ ಎಂದಿನಂತೆ ಮುಂದುವರಿಯುತ್ತೇವೆ....

ಸರಿ ಟಪೇಲರೇ... ನಿಮ್ಮ ಈ ಆಪರೇಶನ್‌ಗೆ ಯಾರನ್ನಾದರೂ ಸೇರಿಸಿಕೊಳ್ಳುವಿರೋ...?

ಯಾರು ಸಿಗುತ್ತಾರೆ ಇಂಥಾ ಅಧಿಕಾರವಿಲ್ಲದ ಸಮಯದಲ್ಲೀ... ಪೆದ್ದರಂತೆ ಪ್ರಶ್ನೆ ಕೇಳುತ್ತೀರಲ್ಲ ನೀವು...? ಆದರೂ ರಾರಾ ಟಪೇಲರು ಮತ್ತು ಲವೀಸ್‌ರಾವ್ ಮುಖ್‌ದೇಶರವರು ಮತ್ತು ಇನ್ನೂ ನಮ್ಮ ಸಾಲಿಗೆ ಸೇರಲಿರುವ ಇತರ ಸಾಮಂತರು ಬರುತ್ತಾರೋ ಕೇಳಿನೋಡಬೇಕು!

ಆಗಲಿ ಟಪೇಲರೇ... ಆ 'ತಾಯಿ' ನಿಮ್ಮನ್ನು ಮತ್ತೆ ಹರಸುತ್ತಾರೋ ಕಾದು ನೋಡೋಣವಂತೆ... ಈಗ ಈ ಒಡ್ಡೋಲಗಗಕ್ಕೆ ಮಂಗಳ ಹಾಡೋಣ.

ಸರ್ವೇಜನ ಸುಖಿನೋಭವಂತು...... ಮಂಗಳಂ

1 ಕಾಮೆಂಟ್‌:

  1. ಶಾನಿಯವರೆ,

    ಠಫೋಲ್ಲರು ಒಂದು ಮಾತು ನಿಮ್ಮಲ್ಲಿ ಹೇಳಲೇ ಇಲ್ಲ...
    ಎಲ್ರೂ ಅವ್ರು ಗೃಹ ಸಚಿವರಾಗಿದ್ರು ಅಂತಾನೇ ತಿಳ್ಕೊಂಡಿದ್ದಾರೆ... ಆದ್ರೆ, ನಾನು ಗೃಹ ಸಚಿವ ಆಗಿರಲೇ ಇಲ್ಲ ಅಂತ ಠಪಾಲ್ಲರು ವಾದಿಸ್ತಾ ಇದ್ದಾರೆ ಈಗ...! ನಾನು ಮೊದ್ಲಿಂದ್ಲೂ ಆರಾಮವಾಗಿ ಓಡಾಡುತ್ತಾ ಕಾಲಯಾಪನೆ ಮಾಡ್ತಾ ಇದ್ದೆ, ನಂಗೆ ಗೃಹ ಸಚಿವರಾಗಿ ಕೆಲಸ ಮಾಡೋಕ್ಕೆ ಟೈಮಾದ್ರೂ ಎಲ್ಲಿರ್ತಿತ್ತು ಅಂತ ಪ್ರಶ್ನಿಸ್ತಾ ಇದ್ದಾರೆ.

    ಪ್ರತ್ಯುತ್ತರಅಳಿಸಿ