ಭಾನುವಾರ, ಜನವರಿ 20

ನೀನು ಮತ್ತೊಮ್ಮೆ ಬಾ ಪುಟ್ಟಾ...

ಗಗನ್ ಪುಟ್ಟಾ....,ಕಳೆದ ಹದಿಮೂರು ವರ್ಷಗಳಿಂದ ನೀನು ನಮ್ಮೊಡನಿದ್ದೆ ಮತ್ತು ಇರಲಿಲ್ಲ। ನೀನಿದ್ದಲ್ಲಿಂದ ಸುಮಾರು ಒಂಭೈನೂರು ಕಿಲೋ ಮೀಟರ್ ದೂರದಲ್ಲಿರುವ ನಾನು, ನಿನ್ನೆ ದಿನ ಶನಿವಾರ ಗಡಿಬಿಡಿಯಲ್ಲಿ ಆಫೀಸಿಗೆ ತೆರಳಲು ತಯ್ಯಾರಾಗುತ್ತಿದ್ದೆ। ಅಷ್ಟರಲ್ಲಿ ನಿನ್ನ ಮಾಮ, ನನ್ನ ಅಣ್ಣ ಫೋನು ಮಾಡಿದ್ದ। ಅವನು ಕುಶಲೋಪರಿ ವಿಚಾರಿಸಲು ನನ್ನೊಡನೆ ಮಾತಾಡುವ ಸಮಯವಲ್ಲದೆ ಇತರ ಅವೇಳೆಯಲ್ಲಿ ಪೋನು ಮಾಡಿದರೆ, ನಾನು ಒಂದು ರೀತಿಯ ದಿಗಿಲಿನಿಂದಲೇ ಕರೆಯನ್ನು ಸ್ವೀಕರಿಸುತ್ತೇನೆ. ಹಾಗೆ ಆಯಿತು ನೋಡು.


ಆದರೆ ಇಂತ ಸುದ್ದಿಯನ್ನು ನಾನು ನಿರೀಕ್ಷಿಸಿರಲಿಲ್ಲ। ನೀನು ನಮ್ಮ ಕುಟುಂಬಕ್ಕೆಲ್ಲ ಗಗ್ಗಣ್ಣ ಆಗಿದ್ದೆ. ಅದೇ ನಿನ್ನ ಮಾಮ, ರಾತ್ರಿ ಒಂದು ಗಂಟೆ ಸುಮಾರಿಗೆ ಗಗ್ಗಣ್ಣ ನಮ್ಮನ್ನು ಬಿಟ್ಟಗಲಿದ ಎಂದಾಗ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ ಪುಟ್ಟಾ.... ಗಂಟಲುಬ್ಬಿತ್ತು. ಹೌದಾ, ಏನಾಗಿತ್ತು ಅಂತ ಕೇಳಲೂ ಶಕ್ತಿಗುಂದಿತ್ತು. ನಾನು ಹುಟ್ಟಿದ ಬಳಿಕ ನಮ್ಮ ಕುಟುಂಬ ಎದುರಿಸಿದ ಮೊದಲ ಸಾವಿದು.

ಗಗ್ಗಣ್ಣಾ... ಹುಟ್ಟಿದ ಆರು ತಿಂಗಳ ಬಳಿಕ ಹೇಗಿದ್ದಿಯೋ, ಹದಿಮೂರು ವರ್ಷದ ಬಳಿಕ ನಿನ್ನೆ ನೀನು ನಮ್ಮೆಲ್ಲರನ್ನು ಬಿಟ್ಟು ಹೋದಾಗಲೂ ಹಾಗೆಯೇ ಇದ್ದೆ। ತಾತಾ... ಮಾಮ॥ ಬಿಟ್ಟರೆ ನಿಂಗೆ ಬೇರೆ ಪದಗಳು ತಿಳಿದಿರಲಿಲ್ಲ. ಬಾಯಿಗೆ ಕೊಟ್ಟ ಆಹಾರವನ್ನು ಜಗಿಯಲೂ ಗೊತ್ತಿರಲಿಲ್ಲ. ನಿನ್ನ ಹೆತ್ತವರಾದ, ನನ್ನ ಪ್ರೀತಿಯ ಸಣ್ಣಕ್ಕ ಮತ್ತು ಭಾವ, ನೀನು ನಮ್ಮೆಲ್ಲರಂತಾಗಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡಿದರು. ಯಾರೇ ಯಾವುದೇ ಮೂಲಗಳನ್ನು ಹೇಳಿದರೂ, ನಮ್ಮ ಗಗ್ಗಣ್ಣ ಸರಿಹೋದಾನೆ ಎಂಬ ಆಸೆಯಲ್ಲಿ ಊರೂರು ಅಲೆದು ಔಷಧ, ಭಸ್ಮ, ಎಣ್ಣೆ, ಲೇಪ ಎಲ್ಲವನ್ನೂ ಪ್ರಯತ್ನಿಸಿದರು. ಊಹುಂ... ನೀನು ಚೇತರಿಸಿಕೊಳ್ಳಲೇ ಇಲ್ಲ.

ನಾನು ಊರಿಗೆ ಬರುವಾಗ ನಿನ್ನ ಅಣ್ಣ-ತಂಗಿಯರಿಗೆಲ್ಲ ಏನಾದರೂ ತಂದರೆ ನಿಂಗೂ ಒಂದು ಪಾಲಿರುತ್ತಿತ್ತು। ಆದರೆ ಉಳಿದ ಮಕ್ಕಳು ಚಿಕ್ಕಮ್ಮೂ... ಅದು ಚೆನ್ನಾಗಿಲ್ಲ, ಇದು ಚೆನ್ನಾಗಿದೆ ಎಂದೋ, ಇಲ್ಲ ಹಂಚುವಿಕೆ ಸರಿಹೋಗಿಲ್ಲ ಎಂದೋ ನಗುತ್ತಾ, ಅಳುತ್ತಾ, ಮುಷ್ಕರ ಹೂಡುತ್ತಾ, ಮುಸಿಮುಸಿ-ದಸುಮುಸು ಮಾಡುತ್ತಾ ನನ್ನ ಸುತ್ತುಮುತ್ತು ಗಿರಕಿ ಹೊಡೆಯುತ್ತಿದ್ದರೆ, ಅಥವಾ, ನನ್ನ ತಲೆಯನ್ನು ಅವರ ಸುಪರ್ದಿಗೆ ಪಡೆದು ಜಡೆಹಾಕುತ್ತಲೋ, ಸಿಂಗಾರ ಮಾಡುತ್ತಲೋ ಇದ್ದರೆ ನಿಂಗೆ ಇದು ಯಾವುದೂ ಗೊತ್ತಾಗುತ್ತಿರಲಿಲ್ಲ. ನನ್ನ ಮಡಿಲಲ್ಲಿದ್ದರೂ ನಿನ್ನ ಸ್ಪಂದನವಿರುತ್ತಿರಲಿಲ್ಲ. ನಿನ್ನ ಪಾಡಿಗೆ ನೀನು ಮಲಗಿಯೇ ಇರುತ್ತಿದ್ದೆ. ಉಳಿದ ಮಕ್ಕಳ ಕಣ್ಣಲ್ಲಿ ಕಾಣುವ ಹೊಳಪು, ಅಳು, ನಗು, ಕುಣಿತ ಕೀಟಲೆ ಯೂವುದೂ ನಿಂಗೇ ಗೊತ್ತೇ ಇರಲಿಲ್ಲ ಎಂಬ ಸಂಕಟ ನಮ್ಮೆಲ್ಲರದಾಗಿತ್ತು ಕಂದಾ...

ನೀನೂ ಸಾಕಷ್ಟು ಕಷ್ಟ ಅನುಭವಿಸಿದೆ। ಏನಾಗುತ್ತದೆ ಎಂದು ಹೇಳಲು ನಿಂಗೆ ಗೊತ್ತಾಗುತ್ತಿರಲಿಲ್ಲ. ನೀನು ಕನಿಷ್ಠಪಕ್ಷ ಮಲಗಿದಲ್ಲಿಂದ ಎದ್ದು ನಡೆದಾಡುವಂತಷ್ಟಾದರೂ ಆಗಬೇಕೆಂದು ನಾವೆಲ್ಲ, ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿದ್ದೆವು. ನಮಗೆ ಪರಸ್ಪರ ಅದೃಷ್ಟವಿರಲಿಲ್ಲ.

ನಿನ್ನ ಅಗಲಿಕೆ, ಆ ಖಾಲಿತನ ತುಂಬುವುದಿಲ್ಲವೆಂಬುದು ಕಟು ವಾಸ್ತವ ಗಗ್ಗಣ್ಣಾ। ನಿನ್ನಂತೆಯೇ ಅಮಾಯಕಳು ನಿನ್ನ ಹೆತ್ತಮ್ಮ. ನಿನ್ನನ್ನು ಜತನದಿಂದ ಕಾಪಾಡಿಕೊಂಡಂತೆ, ಒಂದು ಕಾಲದಲ್ಲಿ ನನ್ನನ್ನೂ ಕಾಯ್ದವಳು. ಹೆತ್ತ ಹೊಟ್ಟೆಯ ಸಂಕಟ ಎದುರಿಸುವ ಶಕ್ತಿ ಅವಳಿಗೆ ಲಭಿಸಲಿ. ಮತ್ತು,

ಜನ್ಮ, ಋಣಾನುಬಂಧ ಎಂಬುದೆಲ್ಲ ನಿಜವಾಗಿದ್ದರೆ, ನೀನು ಮತ್ತೊಮ್ಮೆ ಬಾ... ಅದ್ಯಾವ ಜನ್ಮದಲ್ಲಿ ಏನು ತಪ್ಪಾಗಿತ್ತೋ, ಈ ಜನ್ಮದ ನಿನ್ನ ಬದುಕು ಬದುಕೇ ಅಲ್ಲ. ನೀನು ಹೋದಲ್ಲಿ ನಿನ್ನ ಆತ್ಮ ಶಾಂತಿಯಿಂದಿರಲಿ....

ಬುಧವಾರ, ಜನವರಿ 2

ಗುದ್ದುರಾಮಯ್ಯ ಪುರಾಣವು...

ಭಳಿರೇ ಪರಾಕ್ರಮ ಕಂಠೀರವ............!

ಬಲ್ಲಿರೇನಯ್ಯಾ...........?

ಚಾಮುಂಡೇಶ್ವರಿ ಸಂಸ್ಥಾನಕ್ಕೆ ಯಾರೆಂದು ಕೇಳಿ ಬಲ್ಲಿರೀ..................?

ಗುದ್ದುರಾಮ ಎಂದು ಕೇಳಿ ಬಲ್ಲೆವು.........

ಹಾಗೆಂದುಕೊಳ್ಳಬಹುದು......... ಹಾಗೆಂದುಕೊಳ್ಳಬಹುದು.........

ಇರುವಂತಹ ಸ್ಥಳ.........?

ಮಹಿಷನೂರು ಎಂದುಕೊಳ್ಳಬಹುದು......

ಬಂದಂತಹ ಕಾರ್ಯ........?

ಅನೇಕವಿದೆ....... ಅನೇಕವಿದೆ........ ಅನೇಕವಿದೆ......

ಚುಮುಚುಮು ಚಳಿ ಮೈಕೊರೆಯುತ್ತಿದ್ದರೂ ಸಕ್ಕರೆಯ ಸವಿ ನಿದ್ದೆ ಸವಿಯುವಂತಿಲ್ಲ....... ಈ ದೋಸ್ತಿಗಳ ಕಿತಾಪತಿಯಿಂದಾಗಿ ಯಾವಾಗ ಬೇಕಿದ್ದರೂ ನಿಧಾನ ಬಸೆಗೆ ಚುನಾವಣೆ ಎದುರಾಗಬಹುದು। ಮಾನಸಿಕ ನೆಮ್ಮದಿಯಿಲ್ಲ. ಹೊಸ ನೆಲೆ ಸಂತೃಪ್ತಿ ತಂದಿಕ್ಕಿಲ್ಲ. ಒಂದು ನಮೂನೆಯ ದುರ್ವಿಧಿ ನಮ್ಮನ್ನು ಮುತ್ತಿದಂತಿದೆ. ಹಿಂದ, ಮುಂದ ನೋಡದೆ 'ಆ' ಹಿಂದೆ ತೆರಳಬಾರದಿತ್ತೇ..........? ಆವರಿವರ ಗಾಳಿಗೆ ಉಬ್ಬಬಾರದಿತ್ತೇ......? ನಮ್ಮ ಎಣಿಕೆ ಯಾಕೆ ಹೀಗಾಯಿತು.....? ಎಲ್ಲಿ ತಪ್ಪಿತು ಲೆಕ್ಕಾಚಾರ...........

ಈ ಎಲ್ಲ ಚಿಂತೆಗಳ ನಡುವೆಯೂ, ನಮ್ಮ ಸ್ನಾನಾದಿ ಕಾರ್ಯಗಳನ್ನು ಪೂರೈಸಿ, ಉಪಾಹಾರವನ್ನು ಸೇವಿಸಿ ಶುಭ್ರವಾದ ಉಡುಪನ್ನು ತೊಟ್ಟು, ಹೆಗಲಿಗೊಂದು ಶಲ್ಯವನ್ನು ಏರಿಸಿ, ಕುರುಚಲು ಗಡ್ಡವನ್ನೊಮ್ಮೆ ನೀವಿ ಸಭೆಗಾಗಮಿಸಿದ್ದೇವೆ....... ಯಾರಲ್ಲೀ....

ಮಾನ್ಯ ಗುದ್ದುರಾಮರೇ............. ನಿಮಗೆ ಪ್ರಪ್ರಥಮವಾಗಿ ನಾವು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇವೆ। ತಾವೀಗ ಕೊಂಚ ಕಳೆಗುಂದಿದ್ದೀರಿ ಎಂಬುದಾಗಿ ತಮ್ಮ ರಾಡಿಕೀಯ ಜೀವನವನ್ನು ಬಲ್ಲವರು ಹೇಳುತ್ತಾರೆ...... ಅಲ್ಲದೆ ತವರು ಬಿಟ್ಟು ಹೊರ ನಡೆದ ನೀವು ಬಕರಾ..........

ಇದೇನು ಮಾತು ಆಡುತ್ತೀರಿ ಭಾಗವತರೇ.........? ನಾವು ಮೊದಲು ಹ್ಯಾಗಿದ್ದೇವೊ ಈಗಲೂ ಹಾಗೆಯೇ ಇದ್ದೇವೆ। ಕಳೆ, ಕೊಳೆ ಎಂಬುದೆಲ್ಲ ನಿಮ್ಮ ದೃಷ್ಟಿದೋಷದ ಮಾತು ಅಷ್ಟೇಯ...... ಬಕರಾ ಗಿಕಾರ ಎಂಬೆಲ್ಲ ನಿಮ್ಮ ನಕರಾಗಳ ಅಧಿಕಪ್ರಸಂಗ ಬೇಡ.....

ನೀವು ನಿಮ್ಮ ಪೂರ್ವಾಶ್ರಮದಲ್ಲಿದ್ದಾಗ ವೇದೆ ಡೌಗರಿಗೆ ಅತ್ಯಂತ ಪ್ರಿಯರಾಗಿದ್ದವರು। ಒಂದು ಕಾಲದಲ್ಲಿ ಗುದ್ದುರಾಮೂ ಅನ್ನುತ್ತಾ ಅವರು ನಿಮ್ಮ ಹೆಗಲ ಮೇಲೆ ಕೈಇಟ್ಟವರು। ಡೌಗರಿಗೆ ಅವರ ಮಕ್ಕಳಿಗಿಂತ ನೀವೆ ಹೆಚ್ಚು ಎಂಬುದಾಗಿ ಎಲ್ಲರೂ ಸರಿಯಾಗೆ ತಪ್ಪು ತಿಳಿದಿದ್ದರು. ಅವರ ಪ್ರೀತಿ ನಿಜ ಅಂದುಕೊಂಡಿದ್ದರು. ಆದರೂ ಅಧಿಕಾರ ಮಾತು ಬಂದಾಗ ನಿಮ್ಮ ಮೇಲಿನ ಪ್ರೀತಿಗಿಂತ ಮಕ್ಕಳ ಮೇಲಿನ ವ್ಯಾಮೋಹವೇ ಹೆಚ್ಚಾಯಿತಾ........ ನಿಮ್ಮನ್ನು ಅವರು ತಮ್ಮ ದಾಳವಾಗಿ ಉಪಯೋಗಿಸಿಕೊಂಡರೇ..................?

ಭಾಗವತರೇ ಇದು ಲೋಕಕ್ಕೇ ಗೊತ್ತಿರುವ ವಿಚಾರ। ಹೀಗಿರುತ್ತಾ ಇದೇನಿದು ನಿಮ್ಮ ಕಿಸೆ......? ವೇದೇ ಡೌಗರ ಮಣ್ಣುಮುಕ್ಕಿಸೋ ತಂತ್ರ ಯಾರಿಗೆ ತಿಳಿದಿಲ್ಲ.......?

ಇರಲಿ, ನೀವು ಈಗ ಸೇರಿಕೊಂಡಿರುವಲ್ಲಿಯೂ ನಿಮಗೆ ಸಮಾಧಾನವಿಲ್ಲ ಎಂಬ ಮಾತುಗಳು ಕೇಳಿಬಂದಿವೆ। ಹಾಗಾಗಿ ನೀವೀಗ ಸೇರಿದ ಮನೆಯವರು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ನಿಮ್ಮೊಳಗೆ ಬುಸುಗುಡುತ್ತಿರುವ ಅಸಮಾಧಾನವೇ ಕಾರಣ ಎಂದು ಹೇಳಲಾಗುತ್ತಿದೆಯಲ್ಲಾ.....

ಯಾರು ಹೇಳಿದ್ದು ನಾವು ಸಭೆಗಳಲ್ಲಿ ಭಾಗವಹಿಸುತ್ತಿಲ್ಲಾ ಅಂತಾ... ಏನೋ ಇತರೇ ಕಾರ್ಯದೊತ್ತಡದಿಂದಾಗಿ ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಬಹುದು, ಅದಕ್ಕೆ ನೀವು ವಿಶೇಷ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ ತಿಳಿಯಿತೇ......
ಗುದ್ದುರಾಮರೆ, ಮೊನ್ನೆ ಮಹಿಷನೂರಲ್ಲಿ ನಡೆದ ಸಮಾರಂಭವೊಂದರಲ್ಲಿ ಹೊಲಸು ಮಾತಾಡಿದವರ ಮುಸುಡಿಗೆ ನೀವು ಗುದ್ದಿಯೇ ಬುದ್ಧಿ ಹೇಳಿದಿರಂತೆ........ ನಿಮ್ಮ ಗುದ್ದಾಟಾದ ಚಮತ್ಕಾರದ ಬ....

ಮುಚ್ಚಿಬಾಯಿ ಭಾಗವತರೇ....... ನಿಲ್ಲಿಸಿ ನಿಮ್ಮ ವ್ಯರ್ಥ ಪ್ರಲಾಪ। ಯಾರು ಗುದ್ದಿದರು, ಯಾರಿಗೆ ಗುದ್ದಿದರು.... ಯಾವಾಗ ಗುದ್ದಿದರು..... ಇಷ್ಟಕ್ಕೂ ಮುಖಕ್ಕೇ ಗುದ್ದಲು ರಾಡಿಕೀಯ ನಾಯಕರಿಗೆ ಮುಖವೆಂಬುದೂ ಇರುತ್ತದಾ........? ಇದೆಲ್ಲ ನಿಮ್ಮ ತುತ್ತೂರಿಯವರ ಕುತಂತ್ರ ಅಷ್ಟೆ. ಬೇಕಿರುವುದನ್ನು ಊದದ ನೀವುಗಳು ಬೇಡದ್ದನ್ನು ಊದುತ್ತೀರಾ... ಆ ಸಭೆಯಲ್ಲಿ ನಾವು ಅವರ ಮೂಗು ಸವರಿ ಅವರನ್ನು ನೆಟ್ಟಗೆ ನಿಲ್ಲಿಸಿ ಬಂದಿದ್ದೆವು ಅಷ್ಟೆ......... ಇಂತಹ ಬೇಕಾಬಿಟ್ಟಿ ಮಾತುಗಳನ್ನಾಡುವ ನಿಮ್ಮ ಬಳಿ ನಾವು ಮಾತಾಡಲಿಚ್ಛಿಸುವುದಿಲ್ಲ.

ಅರ್ಥವಾಯಿತು ಗುದ್ದುರಾಮರೇ...... ನಮ್ಮ ಈ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ।

ಎಲ್ಲರಿಗೂ ಒಳಿತಾಗಲಿ....... ಮಂಗಳಂ

ಮಂಗಳವಾರ, ಜನವರಿ 1

ನಡೆ ಮನವೆ......

ನಾನು ತುಂಬ ಇಷ್ಟಪಟ್ಟ ಹೊಸ ವರ್ಷದ ಸಂದೇಶ. ನಿಮ್ಮೊಡನೆ ಹಂಚಿಕೊಳ್ಳುವ ಇಚ್ಛೆ.
ನಡೆ ಮನವೆ ನಾಳೆಗಳಿಗೆ
ಸಿಹಿ ನೆನಪ ಬುತ್ತಿ ಜೊತೆಗೆ,
ಎಡವಿ ಬಿದ್ದ
ಕ್ಷಣವ ಕೊಡವಿ,
ಅಡೆತಡೆಗಳ ಎಲ್ಲ ಕೆಡವಿ,
ಕಟ್ಟುವ ಸವಿ ಸುಂದರ ಕನಸುಗಳ,
ಕಾಯುವ ನನಸಾಗುವ
ಆ ಕ್ಷಣಗಳ..
ಹೊಸ ವರ್ಷ
ತರಲಿ ಹರುಷ
ಪ್ರತಿ ನಿಮಿಷ