ಗುರುವಾರ, ಏಪ್ರಿಲ್ 9

ದಯವಿಟ್ಟು ನಮ್ಗೊಂದು ಚೆಂದದ ಹೆಸರು ಸೂಚಿಸಿ

ಯಾಕೋ ಕೆಲ್ಸ ಬೋರ್ ಹೊಡಿತಾ ಇದೆ. ಹೋಂ ಸಿಕ್ ಜೋರಾಗಿದೆ. ಏನ್ ಮಾಡೋಕು ತೋಚುತ್ತಿರಲಿಲ್ಲ. ಆರ್ಥಿಕ ಹಿಂಸರಿತದ ಈ ಸಂದರ್ಭದಲ್ಲಿ ಕೆಲ್ಸ ಬಿಡ್ಬೇಡ ಎಂಬುದೇ ಎಲ್ಲರ ಸಲಹೆ. ಹಾಗಾಗಿ, ನುಂಗಲು ಆಗದೆ ಉಗಿಯಲು ಆಗದೆ ಒದ್ದಾಡುತ್ತಲೇ ಇರುವ ಈ ಸಂದರ್ಭದಲ್ಲೀ......

ಒಮ್ಮೊಮ್ಮೆ ಅನ್ನಿಸುತ್ತಿತ್ತು. ಚುನಾವಣಾ ಕೆಲ್ಸ ಮಾಡೋಣವೇ ಅಂತ. ಸಹೋದ್ಯೋಗಿ ಭುವನ್ ಬೇರೆ 'ಈರ್ ಓಟುಗುಂತ್ಲೆಯೇ' (ಓಟಿಗೆ ನಿಲ್ಲಿ) ಅಂತ ನನ್ನನ್ನು ಕೆಣುಕುತ್ತಿದ್ದ. ಓಟಿಗೆ ನಿಲ್ಲಲು ಆಗದಿದ್ದರೂ, ವಿವಿಧ ಪಕ್ಷಗಳು ನಡೆಸುವ ಸಮಾವೇಶಗಳಲ್ಲಿ ಭಾಗವಹಿಸುವ ಕಾಯಕ ಮಾಡೋಣವೇ ಅಂತನ್ನಿಸಿದೆ. ಇಲ್ಲವಾದರೆ, ಇಂತಹ ಸಭೆ ಸಮಾರಂಭಗಳಿಗೆ ಜನಪೂರೈಸುವ 'ಸೇವೆ' ಮಾಡಿ ಒಂದು ತಲೆಗೆ ಇಷ್ಟು ಅಂತ ಫಿಕ್ಸ್ ಮಾಡಿದರೂ ಆಗಬಹುದಲ್ಲವೇ? ಅವಕಾಶ ಸಿಕ್ಕಾಗ ಧಕ್ಕಿಸಿಕೊಳ್ಳಬೇಕೆಂದು ದೊಡ್ಡವರು ಹೇಳಿದ್ದಾರೆ. ಹೇಗಿದ್ದರೂ ಇದು ಲಾಭದಾಯಕವೇ. ಅದಲ್ಲದೆ, ಎಲ್ಲಾ ಪಕ್ಷದವರೂ ಒಂದೊಂದು ಓಟಿಗೆ ಒಂದೊಂದು ಕೆಂಪು ನೋಟು, ಮೂಗುತ್ತಿ, ಸೀರೆ, ಕಿವಿಯೋಲೆ(ಒಂದು ಕಿವಿಗೆ) ಎಲ್ಲಾ ಕೊಡುತ್ತಾರೆ ಎಂಬ ರಂಗುರಂಗಿನ ಸುದ್ದಿ ಕೇಳುವಾಗಲಂತೂ 'ಹೋಗೇ ಬಿಡ್ಬೇಕತ್ತ' ಎಂಬ ತುಡಿತ ಜೋರಾಗಿತ್ತು.

ಆದರೆ, ಈಗ ಇದನ್ನೆಲ್ಲ ಬಿಟ್ಟು, ನಾವೆಲ್ಲ ಸಹೋದ್ಯೋಗಿಗಳು ಸೇರಿ ಹೊಸ ಬಿಸ್ನೆಸ್ ಶುರು ಮಾಡೋ ಐಡಿಯಾ ಹಾಕ್ಕೊಂಡಿದ್ದೇವೆ. ವರುಣ್ ಗಾಂಧಿ ಎಲ್ಲಿದ್ದರೋ? ದೇವರಂತೆ ಉದ್ಭವವಾಗಿ ಎಂತಾ ಹೇಳಿಕೆ ನೀಡಿಬಿಟ್ಟಿದ್ದಾರೆ.(ಅವರು ಇದನ್ನು ಇಲ್ಲವೇ ಇಲ್ಲ ಅನ್ನುತ್ತಿದ್ದಾರೆ. ಅವರು ಇಲ್ಲ ಅಂದರೂ ಪರ್ವಾಗಿಲ್ಲ) ನಮಗೊಂದು ಐನಾತಿ ಐಡಿಯಾಕ್ಕೆ ತಳಪಾಯ ಹಾಕಿದ್ದಾರೆ. ಅವರೀಗ ನಮ್ಮ ಪಾಲಿಗೆ ಪ್ರಾತ:ಕಾಲ ಸ್ಮರಣೀಯರು. ಯಾಕಂತೀರಾ? ಕೇಳುವಂತವರಾಗಿ.....

ವರುಣ್ ಗಾಂಧಿ ಹಿಂದೂಗಳ ವಿರುದ್ಧ ಮಾತನಾಡುವವರ ಕೈ ಕತ್ತರಿಸುತ್ತೇನೆ ಅಂದರಂತೆ. ಶುರವಿಗೆ ನಂಗೂ ಇದೆಂತಾ ಹೇಳಿಕೆ ಅಂತ ಕಿರಿಕಿರಿಯಾಗಿತ್ತು. ಆದರೆ, ಅವರು ಪಿಲಿಭಿತ್‌ನಲ್ಲಿ ಭಾಷಣ ಮಾಡಿ ಒಂದು ವಾರದ ಬಳಿಕ ಪ್ರಚಾರಕ್ಕೆ ಬಂದು, ಪ್ರಕರ ಹೊಳಪು ಕಂಡ ಈ ಹೇಳಿಕೆ, ಫಳಫಳನೆ ಹೊಳೆಯುತ್ತಾ ಎಲ್ಲೆಲ್ಲೋ ಹೋಗಿ, ಚುನಾವಣೆಗೆ ನಿಂತಿರುವ ಅವರೀಗ ಜೈಲಿನಲ್ಲಿ ಕುಳಿತುಕೊಳ್ಳುವಂತಾಗಿದೆ.

ಈ ಹುಡುಗು ಮುಂಡೇದು, ಏನೋ ಮಾತಾಡಿದೆ ಅಂತ ಸುಮ್ಮನಾಗುತ್ತಿರುವಂತೆ, ಇಲ್ಲೇ ನಮ್ಮ ಕಾಲ್ಬುಡದಲ್ಲೇ ಇನ್ನೊಬ್ಬರೂ ಕತ್ತರಿಸಲು ಮುಂದಾದಾಗ ಮಾತ್ರ ಇದೇಕೆ ಹೀಗೆ ಅನ್ನಿಸಿತ್ತು. ಅದೂ ಹಿರಿಯ ರಾಜಕಾರಣಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹಿಂದುತ್ವ ಪ್ರತಿಪಾದಿಗಳ ಕೈ ಕತ್ತರಿಸುವ ಮಾತನ್ನಾಡಿದರು. ತಗೊಳ್ಳೀ.. ಮಾರನೆ ದಿನವೇ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹಿಂದೂ ವಿರೋಧಿಗಳ ತಲೆಯನ್ನೇ ಕತ್ತರಿಸುವುದಾಗಿ ಹೇಳಿದರು. ಅವರ ಕಾಲು ಕತ್ತರಿಸವುದಾಗಿ ಇನ್ಯಾರೋ ಹೇಳಿದ್ದಾರಂತೆ, ಮಿತ್ರ ತ್ರಾಸಿ ಹೇಳ್ತಿದ್ದರು. ಇನ್ನೊಬ್ಬ ಶಾಸಕ ಸಿ.ಟಿ. ರವಿ ಅವರಂತೂ, ಹಿಂದುತ್ವದ ಪ್ರತಿಪಾದಕರ ಕೈಕತ್ತರಿಸಲು ಅವರು ಮುಂದಾಗುವ ಮುನ್ನವೇ ಅವರ ತಿಥಿ ಮಾಡಿಬಿಡ್ತೇವೆ ಎಂದು ಸಾರಿದರು.

ಈ ಕತ್ತರಿಸುವ ಸೋಂಕು ಆಂಧ್ರಕ್ಕೂ ವ್ಯಾಪಿಸಿ ಅಲ್ಲಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಅಲ್ಪಸಂಖ್ಯಾತರ ವಿರುದ್ಧ ಬೆರಳೆತ್ತಿದವರ ಕೈ ಕತ್ತರಿಸುವುದಾಗಿ ಧಿಗಿಣ ಹೊಡೆದಿದ್ದಾರೆ. ಬಿಹಾರದಲ್ಲಿ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ವರುಣ್ ಮೇಲೆ ರೋಲರ್ ಹರಿಸಿ ಪುಡಿಗಟ್ಟವುದಾಗಿ ತೊಡೆ ತಟ್ಟಿದರು. ಇಷ್ಟೆಲ್ಲ ಕತ್ತರಿಸುವ, ಕೊಚ್ಚುವ, ಈ ಮೂಲಕ ಚುಚ್ಚುವ ಸುದ್ದಿಗಳಲ್ಲಿ ನಾಡಿಗೆ ನಾಡೇ ಮುಳುಗಿ ಹೋಗಿದ್ದಾಗ ನಮ್ಮ ಮಾಜಿ ಡಿಸಿಎಮ್ಮು, ಸಿದ್ರಾಮಣ್ಣ ನಾನು ಹಿಂದುತ್ವ ವಿರೋಧಿಸುತ್ತೇನೆ, ಬನ್ನಿ ನನ್ನ ತಲೆ ಕತ್ತರಿಸಿ ಎಂಬುದಾಗಿ (ತಲೆ 'ದಂಡ'ದ)ಆಹ್ವಾನ ನೀಡಿದ್ದಾರೆ...ಇವಿಷ್ಟು ಸ್ಥೂಲವಾಗಿ ಕತ್ತರಿಸು, ಪ್ರತಿಯಾಗಿ ಕತ್ತರಿಸು, ಕತ್ತರಿಸಿಕೊಳ್ಳಲು ಮುಂದಾಗು- ಮುಂತಾದ ಸುದ್ದಿಗಳಾದರೆ, 'ಬ್ರೇಕಿಂಗ್ ನ್ಯೂಸ್' ಕಣ್ಣಿಗೆ-ಕಿವಿಗೆ ಬೀಳದಿರುವ ಇನ್ನೆಷ್ಟು 'ಕತ್ತರಿಸು' ಭರವಸೆಗಳು ಈ ಅಖಂಡ ಭರತ ಖಂಡದಲ್ಲಿ ಹೊರಬಿದ್ದಿರಲಿಕ್ಕಿಲ್ಲ, ನೀವೇ ಹೇಳಿ?
ಹಾಗಾಗಿ ನಮ್ಮನ್ನು ಪ್ರತಿನಿಧಿಸಲು, ಆಳಲು ಹೊರಟಿರುವ ಜನನಾಯಕರು ಪಕ್ಷಬೇಧ ಮರೆತು ಕತ್ತರಿಸಲು ಹೊರಟಿರುವಾಗ; ಈ 'ಕತ್ತರಿಸುವುದರಲ್ಲೂ' ಏನೋ ಇದೆ ಎಂದು ನಮಗನಿಸದೆ ಇರಲಿಲ್ಲ. (ಆಗೋದೆಲ್ಲ ಒಳ್ಳೇದಕ್ಕಂತೆ, ಬಲ್ಲವರು ಹೇಳಿದ್ದಾರೆ) ಹಾಗಾಗಿ ನಮ್ಮ ಎಂದಿನ 'ಟೀ ಅಧಿವೇಶನ'ದಲ್ಲಿ ನಾವೆಲ್ಲ ಸಹೋದ್ಯೋಗಿಗಳು ಈ ವಿಷಯವನ್ನು ಚರ್ಚಿಸಿಯೇ ಚರ್ಚಿಸಿದೆವು. ಛಕ್ಕನೆ ಹೊಳೆದಿದೆ ನೋಡಿ ಐಡಿಯಾ!

ಹೇಗಿದ್ದರೂ ಒಂದಲ್ಲ ಒಂದು ಪಕ್ಷ; ಆಯ್ತು ದೊರೆಯೇ... ನೀವು ಹೇಳಿದಂಗೆ ಇರಲಿ, ಚೌಚೌ ಪಕ್ಷ ಅಧಿಕಾರಕ್ಕೆ ಬರುವುದು ಗ್ಯಾರಂಟಿ ತಾನೆ? ಹೀಗಿರುವಾಗ,ಚುನಾವಣೆಗೆ ಮುನ್ನ ನೀಡಿದ ಭರವಸೆಯನ್ನು ಈಡೇರಿಸಲೇ ಬೇಕು. ಅದವರ ಕರ್ತವ್ಯ. ಹಾಗಾಗಿ ಅವರೆಲ್ಲ ಕತ್ತರಿಸುವುದು ಖಂಡಿತ. ಇದು ಲಾಜಿಕ್ಕು. ಆಗ ಒಮ್ಮೆಗೆ ಕತ್ತಿ, ಮಚ್ಚುಗಳಿಗೆ ಬೇಡಿಕೆ ಬರಬಹುದು. ಈ ಹಿನ್ನೆಲೆಯಲ್ಲಿ ನಾವು 'ಕತ್ತಿ/ಮಚ್ಚು ಅಥವಾ ದೊಡ್ಡ ಕತ್ತರಿ' ಉತ್ಪಾದನೆಯ ಹೊಸ ಉದ್ಯಮ ಆರಂಭಿಸುವ ಕುರಿತು ಗಂಭೀರ ಆಲೋಚನೆ ಮಾಡಿ ಇದೀಗಾಗಲೇ ಆರ್ ಆಂಡ್ ಡಿ ಕಾರ್ಯ ಆರಂಭಿಸಿದ್ದೇವೆ. ಕೈ, ಕಾಲು, ತಲೆ ಇಲ್ಲವೇ ಸೊಂಟ ಯಾವುದನ್ನೂ ಬೇಕಿದ್ದರೂ ಕತ್ತರಿಸಲು ಅನುಕೂಲವಾದ ಹತ್ಯಾರುಗಳ ಪ್ರೊಡಕ್ಷನ್‌ಗೆ ನಾವು ಇಳಿಯಲಿದ್ದೇವೆ. ಯಾವ ಪಕ್ಷದವರು ಯಾವುದರಲ್ಲಿ, (ಅಂದರೆ ಕತ್ತಿಯಲ್ಲೋ, ಇಲ್ಲ ಮಚ್ಚಿನಲ್ಲೋ) ಹೆಚ್ಚು ಕತ್ತರಿಸಲು ಇಷ್ಟಪಡುತ್ತಾರೆ ಎಂಬ ರಹಸ್ಯ ಸರ್ವೇಕ್ಷಣೆಯೂ ನಡೆಯುತ್ತಿದೆ.

ಥ್ಯಾಂಕ್ಸ್ ಟು ವರುಣ್, ಥ್ಯಾಂಕ್ಸ್ ಟು ಬ್ರೇಕಿಂಗ್ ನ್ಯೂಸ್(ಇಲ್ಲವಾದರೆ ಇಷ್ಟು ದೊಟ್ಟ ಮಟ್ಟದ ಆಲೋಚನೆಗೆ ಸ್ಫೂರ್ತಿ ಎಲ್ಲಿರುತ್ತಿತ್ತು), ಥ್ಯಾಂಕ್ಸ್ ಟು ಅಭಿವ್ಯಕ್ತಿ ಸ್ವಾಂತಂತ್ರ್ಯ(ಸಂವಿಧಾನದ ವಿಧಿ 19(1)(ಎ)). ನಾವು ರಾಷ್ಟ್ರವ್ಯಾಪಿ 'ಕತ್ತಿ/ಮಚ್ಚು ಅಥವಾ ದೊಡ್ಡ ಕತ್ತರಿ' ಪೂರೈಸುವಂತಹ ಬಿಸ್ನೆಸ್ಸನ್ನು ದೊಡ್ಡ ಮಟ್ಟದಲ್ಲಿ ನಮ್ಮ ಊರಿನಿಂದಲೇ ಆರಂಭಿಸುತ್ತಿದ್ದೇವೆ. ಇದೀಗಾಗಲೇ ಒಂದಷ್ಟು ಎಂಬಿಎ ಆಗಿರುವ ಅಭ್ಯರ್ಥಿಗಳನ್ನು ಮಾರ್ಕೆಟಿಂಗ್‌ಗೆ ಬಿಟ್ಟಿದ್ದೇವೆ. ಕತ್ತಿ ತಯಾರಿಕಾ ವಿಶೇಷ ಯಂತ್ರ ಜಪಾನಿಂದ ಬರಲಿದೆ. ವಿಶೇಷ ತಜ್ಞರೂ ಅಲ್ಲಿಂದಲೇ ಯಂತ್ರದೊಟ್ಟಿಗೆ ಆಗಮಿಸಲಿದ್ದಾರೆ. ಲೇಡಿ ಸಿಇಓ, ಎಚ್ಆರ್ ನೇಮಕವಾಗಿ ಸ್ಕ್ರೂಟಿನಿ ನಡೆಯುತ್ತಿದೆ. ಕೆಲವೇ ಹುದ್ದೆಗಳು ಬಾಕಿ ಇವೆ. ಸ್ಥಳೀಯರಿಗೆ ಆದ್ಯತೆ. ಆಸಕ್ತರು (ಕತ್ತರಿಸುವ ಅನುಭವ ಇದ್ದರೆ ಹೆಚ್ಚಿನ ಪ್ರಾಶಸ್ತ್ಯ) ಸಿ.ವಿ. ಫಾರ್ವರ್ಡ್ ಮಾಡಬಹುದು. ನಮಗೆ ನಿಧಾನಕ್ಕೆ ಎಕ್ಸ್‌ಪೋರ್ಟ್ ಆಲೋಚನೆಯೂ ಇದೆ. ದಯವಿಟ್ಟು ನಮ್ಮ ಸಂಸ್ಥೆಗೊಂದು ಚೆಂದದ ಹೆಸರು ಸೂಚಿಸಿ. ಹೆಸರಲ್ಲಿ ವರುಣ್, ಬ್ರೇಕಿಂಗ್ ಎಂಬೆಲ್ಲ ಶಬ್ದಗಳಿದ್ದರೆ ನಮ್ಮ ಋಣತೀರೀತು.

ಈ ನಮ್ಮ ವೆಂಚರ್‌ಗೆ ನಾವು ನಮ್ಮ ಸಂಬಳದಿಂದಲೇ ಬಂಡವಾಳ ತೊಡಗಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಸೋ, ಸ್ಯಾಲರಿ ಕ್ರೆಡಿಟ್ ಆಗಿದ್ಯೇ ಅಂತಾ ನೆಟ್ ಬ್ಯಾಂಕಿಂಗ್‌ನಲ್ಲಿ ಚೆಕ್ ಮಾಡ್ತಾ ಇದ್ದೆವು. ಕಾಕತಾಳಿಯವೋ ಗೊತ್ತಿಲ್ಲ. ಅಲ್ಲೂ ಕತ್ತರಿಸುವ ಸುದ್ದಿ. ಕತ್ತರಿಸುವ ಸುದ್ದಿಗಳನ್ನು ನೋಡುತ್ತಲೇ ವೇತನ ಜಮಾ ಮಾಡ್ತಿದ್ದರೋ? ವೃತ್ತಿ ತೆರಿಗೆ ಕಟ್!