ಬುಧವಾರ, ಡಿಸೆಂಬರ್ 31

ಆಪರೇಶನ್ ಮಾಡಿದ ಮೇಲೆ ಡಾಕ್ಟರಾದೆವು

ಬಲ್ಲಿರೇನಯ್ಯಾ............?

ಭಳಿರೇ ಪರಾಕ್ರಮ ಕಂಠೀರವಾ....

ಈ ಅಖಂಡ ನರ್ಕಾಟಕ್ಕೆ ಯಾರೆಂದು ಕೇಳಿ ಬಲ್ಲಿರೀ.....?

ಶ್ರೀ.....ಶ್ರೀ.......ಶ್ರೀ.....ಶ್ರೀ....... ರಾಡಿಯೂರಪ್ಪ ಎಂದು ಕೇಳಿಬಲ್ಲೆವೂ.....

ಹಾಗೆಂದುಕೊಳ್ಳಬಹುದು..... ಹಾಗೆಂದುಕೊಳ್ಳಬಹುದು........

ಆಹಾ.... ಜಗತ್ತು ಅದೆಷ್ಟು ಸುಂದರವಾಗಿದೆ। ಚುಮುಚುಮು ಚಳಿಯ, ಇಬ್ಬನಿ ಚೆಲ್ಲುವ, ತಂಪುಗಾಳಿಯ ಈ ಉದ್ಯಾನ ನಗರಿಯ ವಾತಾವರಣವಿಂದು ಅತ್ಯಾಹ್ಲಾದಕರವಾಗಿದೆ. ಸೂರ್ಯನ ಹೊಂಗಿರಣಗಳು ಚಿತ್ತಾರಬರೆಯುತ್ತಾ ಭುವಿಯನ್ನು ಚುಂಬಿಸುತ್ತಿರುವಂತೆ, ನಿದಿರಾ ದೇವಿಯ ಮಡಿಲಲ್ಲಿ ಬೆಚ್ಚನೆಯ ಕನಸಿನಲ್ಲಿ ಓಲಾಡುತ್ತಿದ್ದ ನಾವು ಹಂಸತೂಲಿಕಾ ತಲ್ಪದಿಂದ ಎದ್ದು ನಿತ್ಯವಿಧಿಗಳನ್ನು ಪೂರೈಸಿ, ಇಷ್ಟದೈವಗಳನ್ನು ಪ್ರಾರ್ಥಿಸಿ, ಉಪಾಹಾರವನ್ನು ಸೇವಿಸಿಕೊಂಡದ್ದಾಯ್ತು. ಶ್ವೇತ ಉಡುಪನ್ನು ಧರಿಸಿ, ಹಣೆಗೆ ತಿಲಕವನ್ನಿರಿಸಿಕೊಂಡು ಒಡ್ಡೋಲಗಕ್ಕೆ ಅಣಿಯಾಗಿದ್ದೇವೆ. ಸಭೆಗೆ ಬಂದು ಸಿಂಹಾಸನವನ್ನು ವಂದಿಸಿ, ಏರಿ ಕುಳಿತು ಸಭೆಯತ್ತ ನೋಟ ಹರಿಸುತ್ತೇವೇ..... ಏನಾಶ್ಚರ್ಯ....? ಇದೇನಾಶ್ಚರ್ಯ, ಇದೇನಾಶ್ಚರ್ಯ......? ಎಷ್ಟೊಂದು ಜನ... ಎಷ್ಟೊಂದು ಜನ. ಸಭೆ ತುಂಬಿ ತುಳುಕುತ್ತಿದೆ. ಜಾಗವಿಲ್ಲದೆ ಸಭಿಕರು ಕಿಟಿಕಿ ಬಾಗಿಲುಗಳಲ್ಲಿ ಒಬ್ಬರಮೇಲೊಬ್ಬರು ಬಿದ್ದು ಇಣುಕುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ನಮ್ಮ ಸಿಬ್ಬಂದಿಗಳು ಹೆಣಗಾಡುತ್ತಿದ್ದಾರೆ. ಸಭೆಯಲ್ಲಿ ಮಂತ್ರಿ ಮಹೋದಯರು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದಾರೆ. ವಂದಿ ಮಾಗಧರಿದ್ದಾರೆ. ಮಾಗಣೆಯವರಿದ್ದಾರೆ. ಭಟ್ಟಂಗಿಗಳಿದ್ದಾರೆ. ವಾಲಗದವರಿದ್ದಾರೆ. ತುತ್ತೂರಿಯವರೂ ಆಸೀನರಾಗಿದ್ದಾರೆ, ಆಹಾ... ಸಭೆಗೆ ಏನು ಕಳೆ, ಅದೇನು ಶೋಭೆ.... ಇಂದು ನಮ್ಮ ಜನ್ಮ ಸಾರ್ಥಕವಾದಂತೆ. ಸಂತೋಷದಿಂದ ನಮಗೆ ಮಾತೇ ಹೊರಡುತ್ತಿಲ್ಲ. ಆದರೂ ನಾವು ಮಾತಾಡಬೇಕಿದೆ. ಯಾರಲ್ಲೀ.......?

ಸ್ವಾಮಿ ರಾಡಿಯೂರಪ್ಪನವರೇ, ನಿಮಗೆ ನೆನಪಿದೆಯೋ ಗೊತ್ತಿಲ್ಲ। ಈ ಹಿಂದೆ ನಾವೊಮ್ಮೆ ಒಡ್ಡೋಲಗದಲ್ಲಿ ಭೇಟಿಯಾಗಿದ್ದೆವು. ಆಗ ತಾವು ಮಿತ್ರ ದ್ರೋಹದ ವ್ಯಾಧಿಯ ವ್ಯಸನದಿಂದ ಬಳಲಿ ಬೆಂಡಾಗಿದ್ದೀರಿ. ದೈವಾನುಗ್ರಹವಿದ್ದರೆ ಇದೇ ವೇದಿಕೆಯಲ್ಲಿ ಇನ್ನೊಮ್ಮೆ ಭೇಟಿಯಾಗೋಣ ಅಂದಿದ್ದೆವು. ಬಹುಶಃ ದೈವಾನುಗ್ರಹ ನಿಮಗೊಲಿದಿದ್ದು ಇಂದು ಕಾಲಕೂಡಿ ಬಂದಿದೆ ಎನ್ನಬಹುದೂ.... ಇದೀಗ ನಿಮ್ಮ ಸಾಮ್ರಾಜ್ಯ ಅಲ್ಲಾಡದಂತೆ ಅಡಿಗಟ್ಟಿಮಾಡಿಕೊಂಡಿದ್ದೀರಿ.....

ಭಾಗವತರೇ....... ನಾವು ತುಂಬಾ ಸಂತಸಗೊಂಡಿದ್ದೇವೆ। ನಮಗೆ ಈ ಸಂತೋಷ ನೀಡಿದ ಪ್ರಜೆಗಳಿಗೆ ನಾವು ಆಭಾರಿಗಳಾಗಿದ್ದೇವೆ. ಅವರಿಗೆ ನಾವು ಅಡ್ಡಡ್ಡ ಬಿದ್ದು ವಂದಿಸುತ್ತಿದ್ದೇವೆ. ನಮ್ಮ ವೈರಿಗಳ ತಂತ್ರಕ್ಕೆ ಪ್ರತಿತಂತ್ರ ಎಂಬಂತೆ ನಾವೂ ವ್ಯೂಹ ರಚಿಸಿದೆವು. ಈ ವ್ಯೂಹದಲ್ಲೀ......, ವಿಜಯಲಕ್ಷ್ಮಿಯನ್ನು ನಾವು ಲಕ್ಷ್ಮಿಯ ದಯೆಯಿಂದ, ಮದಿರೆಯ ಕರುಣೆಯಿಂದ, ವಸ್ತ್ರದ ಸಹಾಯದಿಂದ ವಶಪಡಿಸಿಕೊಂಡಿದ್ದೇವೆ. ರಾಡಿಕೀಯದಲ್ಲಿ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಯಶಸ್ವಿಯಾಗಿ ಮಾಡಿದ್ದೇವೆ. ಆದರೂ ಎಂಟು ಸಂಸ್ಥಾನಗಳಲ್ಲಿ ಮೂರು ನಮಗೆ ಧಕ್ಕಲಿಲ್ಲ. ಇರಲಿ ಬಿಡಿ. ನಮ್ಮ ಬಗ್ಗೆ ತುಂಬ ಹಗುರವಾಗಿ ಮಾತನಾಡಿ ಸೊನ್ನೆಸುತ್ತಿರುವ ನಮ್ಮ ವಿರೋಧಿಗಳೀಗ ಸಿಕ್ಕಸಿಕ್ಕ ವಸ್ತ್ರದಿಂದ ಮುಖಮುಚ್ಚಿಕೊಳ್ಳುತ್ತಿದ್ದಾರೆ. ಒಂದೂ ಸ್ಥಾನ ಧಕ್ಕದಿದ್ದಲ್ಲಿ ಕೆಲವರು ದಂಡ ಹಿಡಿದು ಹೊರಡುತ್ತೇವೆ ಅಂದಿದ್ದರು.... ಏನು ಮಾಡುತ್ತಾರೋ ಕಾದು ನೋಡೋಣ....

ಅದರೆ, ರಾಡಿಯೂರರೇ....., ಆರು ತಿಂಗಳ ನಿಮ್ಮ ಈ ಹಸುಗೂಸು ಸರ್ಕಾರ ಹೆಜ್ಜೆ ಇಡುವ ದಿಸೆಯೇ ಸರಿಇಲ್ಲ ಎಂಬ ಆರೋಪಗಳಿವೆ. ರೈತರಮೇಲೆ ಗುಂಡುಹೊಡೆದಿರೆಂಬ ದೂರಿದೆ. ಈ ಉಪ್ಪುಚುನಾವಣೆಯನ್ನು ಹೇರಿ ರಾಜ್ಯದ ಬೊಕ್ಕಸಕ್ಕೆ ಭಾರವಾದಿರೆಂಬ ತಕರಾರಿದೆ.

ಸ್ವಾಮೀ ಭಾಗವತರೇ... ದೂರು, ತಕರಾರು, ಆರೋಪಗಳು ಯಾರಿಗಿಲ್ಲ? ನಮ್ಮ ಆ ಭಗವಾನ್ ಶ್ರೀರಾಮಚಂದ್ರನೂ ಇದಕ್ಕೆ ಹೊರತಾಗಿಲ್ಲ. ನಾವೇನು ಕೋವಿ ಹಿಡಿದು ರೈತರ ಮೇಲೆ ಗುಂಡು ಹಾರಿಸಿದ್ದೇವಾ...? ಇದುವರೆಗೆ ಯಾರೂ ಮಾಡದ ರೀತಿಯಲ್ಲಿ ನಾವು ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣಮಾಡಿದೆವು. ಇದನ್ನು ನೋಡಿ ನಮ್ಮ ವೈರಿಗಳ ಕಣ್ಣಿಗೆ ಮುಳ್ಳಾಣಿ ಬಡಿದಂತಾಯಿತು. ಅವರಿದನ್ನು ಸಹಿಸಿಕೊಂಡಾರಾದರೂ ಹೇಗೆ....? ಅದಕ್ಕಾಗೇ ನಮ್ಮ ಹೆಸರಿಗೆ ಮಸಿಬಳಿಯಲು ಇದು ವಿರೋಧಿಗಳು ಹೂಡಿರುವ ಷಡ್ಯಂತ್ರ. ನಮ್ಮ ರೈತರು ಪ್ರತಿಭಟನೆಯ ಹೆಸರಿನಲ್ಲಿ ಗೂಂಡಾಗಿರಿ ನಡೆಸಿಯಾರೇ....? ರಸಗೊಬ್ಬರ ಸಮಸ್ಯೆಗೆ ನಿನ್ನೆಮೊನ್ನೆ ಅಧಿಕಾರಕ್ಕೇರಿದ ಈ ಸರ್ಕಾರ ಕಾರಣವಲ್ಲ ಎಂಬುದು ಅವರಿಗೆ ಗೊತ್ತಿಲ್ಲವೇ...? ರೈತರ ಹೆಸರಿನಲ್ಲಿ ಗೂಂಡಾಗಳು, ಪೋಲಿಗಳು ಪೊಲೀಸರನ್ನು ರೊಚ್ಚಿಗೆಬ್ಬಿಸಿ ಅವರು ಗುಂಡು ಹಾರಿಸುವಂತೆ ಮಾಡಿದ್ದಾರೆಯೇ ವಿನಹ, ಸರ್ಕಾರವೇನೂ ರೈತರನ್ನು ಕೊಂದಿಲ್ಲಾ...... ಕೊಂದಿಲ್ಲಾ.... ಕೊಂದಿಲ್ಲಾ...

ಇನ್ನುಳಿದಂತೆ ಉಪ್ಪುಚುನಾವಣೆಯನ್ನು ಪ್ರಸ್ತಾಪಿಸಿದ್ದೀರಿ ನೀವು. ಬೆಳಗಾತ ಎದ್ದರೆ, ನಮ್ಮ ವಿರೋಧಿಗಳು ಉತ್ತಮ ಆಡಳಿತ ನೀಡಲು ನಮಗೆ ಸಹಕಾರ ನೀಡುವುದರ ಬದಲಿಗೆ ನಮ್ಮನ್ನು ದುರ್ಬಲಗೊಳಿಸುವತ್ತಲೇ ಆಲೋಚಿಸಿದ್ದರು. ಹಾಗಾಗಿ ನಮ್ಮ ಯಾವ ಅಭಿವೃದ್ಧಿಯತ್ತಲೂ ಗಮನ ಹರಿಸಲಾಗುತ್ತಿರಲಿಲ್ಲ. ಪುಣ್ಯ. ಆ ಶ್ರೀಲಕ್ಷ್ಮಿಯ ದಯೆಯಲ್ಲಿ ನಮ್ಮ ಮಂತ್ರಿಮಂಡಲದಲ್ಲಿ ಗಟ್ಟಿಮುಟ್ಟಾದ ಮಂತ್ರಿಗಳಿದ್ದಾರೆ. ಐದು ವರ್ಷದಲ್ಲಿ ಇನ್ನಷ್ಟು ಉತ್ತಮ ಅಭಿವೃದ್ಧಿ ಸಾಧಿಸಿಕೊಳ್ಳಬೇಕೆಂಬ ಹುರುಪು-ಹುಮ್ಮಸ್ಸಿದೆ ಅವರಲ್ಲಿ. ಅವರ ಯೋಜನೆಯ ಪ್ರಕಾರ ನಾವು ಆಪರೇಶನ್ ಮಾಡಿದೆವು. ನಮ್ಮ ರಕುಣಾರಕ ರೆಡ್ಡಿಯಂತಹ ಯುವನಾಯಕರು ಅದಿರು ಸಾಗಿಸುವಂದದಿ ನಾಯಕರನ್ನು ಲೋಡುಗಟ್ಟಲೆ ತಂದು ನಮ್ಮ ಪಕ್ಷದಲ್ಲಿ ಸುರಿದರು. ಅವರು ನಮ್ಮ ನೀತಿ-ನಿಯಮ, ಸಿದ್ಧಾಂತಗಳನ್ನು ಒಪ್ಪಿಕೊಂಡರು. ತತ್ಪರಿಣಾಮ ಅವರಿದ್ದ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ನಮ್ಮ ಪಕ್ಷದಿಂದ ಮತ್ತೆ ಚುನಾವಣೆಗೆ ಇಳಿಸಿದೆವು. ಮತದಾರ ಕೈ ಬಿಡಲಿಲ್ಲ. ಮತದಾರರಿಗೂ ಸ್ಥಿರಸರ್ಕಾರ ಬೇಡವೇ...? ಅಲ್ಪಮತೀಯರಾಗಿದ್ದ ನಮ್ಮನ್ನು ಬಹು ಮತೀಯರಾಗಿಸಿದ್ದಾನೆ. ಮತ್ತೆ ಬೊಕ್ಕಸಕ್ಕೆ ಭಾರ ಅನ್ನುತೀರೀ!! ರಾಡಿಕೀಯ ಅಂದಾಗ ಇದೆಲ್ಲ ಸಹಜವಲ್ಲವೇ...? ಕಾದು ನೋಡುತ್ತಿರಿ. ನಾವು ಬೊಕ್ಕಸವನ್ನು ಎಕ್ಕಸಕ್ಕ ತುಂಬಿಸುತ್ತೇವೆ....

ಅಂದಹಾಗೆ ಡಾಕ್ಟರ್ ರಾಡಿಯೂರರೇ..... ನೀವು ಡಾಕ್ಟರರಾದಾಗ ಅದಕ್ಕೂ ಸಾಕಷ್ಟು ಟೀಕೆಗಳು ವ್ಯಕ್ತವಾದವು। ಇದಕ್ಕೆ ಪ್ರತಿಯೆಂಬಂತೆ ತಮ್ಮ ಸಚಿವ ಮಾರಚಂದ್ರ ಎಂಬವರೊಬ್ಬರು ಅಪೂರ್ವವಾದ ಆರ್ಥಿಕ ವಿಶ್ಲೇಷಣೆಯನ್ನೂ ಮಾಡಿದರು. ಅದು ಒತ್ತಟ್ಟಿಗಿರಲಿ. ಆದರೆ ನೀವು ಆಪರೇಶನ್ ಮಾಡಿದ ಬಳಿಕ ಡಾಕ್ಟರರಾದಿರಿ... ಅಂದರೆ, ನಿಮ್ಮ ಆಪರೇಶನ್ ನೈಪುಣ್ಯದಿಂದಾಗಿ ಡಾಕ್ಟರ್ ಪದವಿ ಗಿಟ್ಟಿಸಿಕೊಂಡಿರೋ....?

ವೋಯ್ ಭಾಗವತರೇ....., ಅರಶಿನ ಖಾಯಿಲೆ ಬಂದವರಿಗೆ ಲೋಕವೆಲ್ಲ ಹಳದಿಯಾಗಿ ಕಾಣುತ್ತದೆ ಎಂಬ ಗಾದೆ ಮಾತೊಂದಿದೆ. ಹಾಗೆಯೇ ಟೀಕೆಯೇ ನಮ್ಮಗುರಿ ಎಂದಿರುವವರು ಇನ್ನೇನು ಹೇಳಲು ಸಾಧ್ಯ? ಅವರವರ ಸಂಸ್ಕೃತಿಗೆ ತಕ್ಕಂತೆ ಮಾತಾಡಿಕೊಂಡು ಚಪಲ ತೀರಿಸಿಕೊಂಡರು. ಸಮಾಧಾನ ಪಟ್ಟುಕೊಳ್ಳಲಿ ಬಿಡಿ. ಆದರೆ ನಿಜವನ್ನು ಅರಿತುಕೊಂಡದ್ದು ನಮ್ಮೋರ್ವ ಸಚಿವರು! ನಾವ್ಯಾಕೆ ಡಾಕ್ಟರಾಗಲು ಸೂಕ್ತ ಎಂದು ಅವರು ವಿವರಿಸಿದ್ದಾರೆ. ನಮ್ಮ ನೀತಿ ಸಿದ್ಧಾಂತವೇ ಹಾಗೇ. ಪಾಸಾದ ಮೇಲೆ ಪರೀಕ್ಷೆ ಬರೆಯುವುದು. ಈಗ ನೋಡಿ, ನಾವೀಗ ಅಧಿಕಾರ ಪಡೆದಬಳಿಕ ಬಹುಮತಕ್ಕಾಗಿ ಚುನಾವಣೆ ಎದುರಿಸಲಿಲ್ಲವೇ? ಅಂತೆಯೇ ಆಪರೇಶನ್ ಮಾಡಿದ ಮೇಲೆ ಡಾಕ್ಟರಾದೆವು. ಸರ್ಕಾರಕ್ಕಾರು ತಿಂಗಳಾದಮೇಲೆ ನಮ್ಮ ಪಕ್ಷದ್ದೇ ಬಹುಮತ ಮಾಡಿಕೊಂಡಿದ್ದೇವೆ. ಹಾಗಂತ ಕಷ್ಟಕಾಲದಲ್ಲಿ ಸಹಾಯ ಮಾಡಿದ ಆಪತ್ಭಾಂದವರನ್ನೇನೂ ನಾವು ಕೈಬಿಡಲಾರೆವು... ಇನ್ನು ನಮ್ಮದೇನಿದ್ದರೂ ಒಂದೇ ಮಂತ್ರ; ಒಂದೇ ಗುರಿ ಅದು ಅಭಿವೃದ್ಧಿ.... ಅಭಿವೃದ್ಧಿ.... ಅಭಿವೃದ್ಧಿ....

ಹಾಗೇ ಆಗಲಿ ಸಾಮ್ರಾಟರೇ..... ಯಾರ ಅಭಿವೃದ್ಧಿಯಾಗುತ್ತದೆ ಎಂದು ಕಾದು ನೋಡೋಣವಂತೆ।

ನಿಮ್ಮ ಸುಭದ್ರ(?!) ಸರ್ಕಾರಕ್ಕೆ ಶುಭವನ್ನು ಕೋರುತ್ತಾ, ನಾಡಿನೆಲ್ಲ ಜನತೆಗೆ ಹೊಸವರ್ಷದ ಶುಭಾಶಯಗಳನ್ನು ಹೇಳುತ್ತಾ.... ಮುಂದಿನ ವರ್ಷದಲ್ಲಿ ಸರ್ವರಿಗೂ ಶಾಂತಿ, ನೆಮ್ಮದಿ ಆರೋಗ್ಯವನ್ನು ಬಯಸುತ್ತಾ ನಮ್ಮ ಈ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ।

ಸರ್ವೇಜನ ಸುಖಿನೋಭವಂತು.... ಮಂಗಳಂ!

4 ಕಾಮೆಂಟ್‌ಗಳು:

  1. ಶಾನಿ ಭಾಗವತರೆ,
    ನಿಮ್ಮ ದೊಡ್ಡಾಟ ಕೇಳಿ, ಹುಚ್ಚೆದ್ದು ಕುಣಿಯುವಷ್ಟು ಸಂತೋಷವಾಯಿತು.
    ಇಂತಹ ದೊಡ್ಡಾಟವನ್ನು ನಿಮ್ಮ ಗುರುಗಳೆಂದು ನೀವು ಕರೆಯುತ್ತಿರುವ ಅಸತ್ಯ ಅನ್ವೇಷಿಗಳೂ ಕುಣಿದಿಲ್ಲ. 'ಶಿಷ್ಯಾದಿಚ್ಛೇತ್ ಪರಾಜಯಮ್'ಎಂದು ಅವರೂ ಖುಶಿ
    ಪಡುತ್ತಾರೆ, ಬಿಡಿ!
    ಒಂದೊಂದು ಪದ, ಒಂದೊಂದು lineಉ, ಒಂದೊಂದು para ಎಲ್ಲವೂ
    wonderful!
    ಹೊಸ ವರ್ಷ ನಿಮಗೆ ಹರ್ಷದಾಯಕವಾಗಲಿ, ನಿಮ್ಮ ಲೇಖನಗಳ ಮೂಲಕ ನಮಗೂ ಹರ್ಷದಾಯಕವಾಗಲಿ.

    ಪ್ರತ್ಯುತ್ತರಅಳಿಸಿ
  2. wow... eshtu chennagi sarkarada vishleshane maadiddeeri... adu saha ellu yava pakshagala melu raaga-dwesha illada haage..

    balaha chennagide ee baraha

    Madhu.

    ಪ್ರತ್ಯುತ್ತರಅಳಿಸಿ
  3. Suunath Sir,
    Guruvannu meerisodu unte? Ella nimmantha doddavara Ashirvaadada Fala. Nimma prothsaha uttejanakaari. Thumba thumba thankds

    ಪ್ರತ್ಯುತ್ತರಅಳಿಸಿ