ಬುಧವಾರ, ಜನವರಿ 2

ಗುದ್ದುರಾಮಯ್ಯ ಪುರಾಣವು...

ಭಳಿರೇ ಪರಾಕ್ರಮ ಕಂಠೀರವ............!

ಬಲ್ಲಿರೇನಯ್ಯಾ...........?

ಚಾಮುಂಡೇಶ್ವರಿ ಸಂಸ್ಥಾನಕ್ಕೆ ಯಾರೆಂದು ಕೇಳಿ ಬಲ್ಲಿರೀ..................?

ಗುದ್ದುರಾಮ ಎಂದು ಕೇಳಿ ಬಲ್ಲೆವು.........

ಹಾಗೆಂದುಕೊಳ್ಳಬಹುದು......... ಹಾಗೆಂದುಕೊಳ್ಳಬಹುದು.........

ಇರುವಂತಹ ಸ್ಥಳ.........?

ಮಹಿಷನೂರು ಎಂದುಕೊಳ್ಳಬಹುದು......

ಬಂದಂತಹ ಕಾರ್ಯ........?

ಅನೇಕವಿದೆ....... ಅನೇಕವಿದೆ........ ಅನೇಕವಿದೆ......

ಚುಮುಚುಮು ಚಳಿ ಮೈಕೊರೆಯುತ್ತಿದ್ದರೂ ಸಕ್ಕರೆಯ ಸವಿ ನಿದ್ದೆ ಸವಿಯುವಂತಿಲ್ಲ....... ಈ ದೋಸ್ತಿಗಳ ಕಿತಾಪತಿಯಿಂದಾಗಿ ಯಾವಾಗ ಬೇಕಿದ್ದರೂ ನಿಧಾನ ಬಸೆಗೆ ಚುನಾವಣೆ ಎದುರಾಗಬಹುದು। ಮಾನಸಿಕ ನೆಮ್ಮದಿಯಿಲ್ಲ. ಹೊಸ ನೆಲೆ ಸಂತೃಪ್ತಿ ತಂದಿಕ್ಕಿಲ್ಲ. ಒಂದು ನಮೂನೆಯ ದುರ್ವಿಧಿ ನಮ್ಮನ್ನು ಮುತ್ತಿದಂತಿದೆ. ಹಿಂದ, ಮುಂದ ನೋಡದೆ 'ಆ' ಹಿಂದೆ ತೆರಳಬಾರದಿತ್ತೇ..........? ಆವರಿವರ ಗಾಳಿಗೆ ಉಬ್ಬಬಾರದಿತ್ತೇ......? ನಮ್ಮ ಎಣಿಕೆ ಯಾಕೆ ಹೀಗಾಯಿತು.....? ಎಲ್ಲಿ ತಪ್ಪಿತು ಲೆಕ್ಕಾಚಾರ...........

ಈ ಎಲ್ಲ ಚಿಂತೆಗಳ ನಡುವೆಯೂ, ನಮ್ಮ ಸ್ನಾನಾದಿ ಕಾರ್ಯಗಳನ್ನು ಪೂರೈಸಿ, ಉಪಾಹಾರವನ್ನು ಸೇವಿಸಿ ಶುಭ್ರವಾದ ಉಡುಪನ್ನು ತೊಟ್ಟು, ಹೆಗಲಿಗೊಂದು ಶಲ್ಯವನ್ನು ಏರಿಸಿ, ಕುರುಚಲು ಗಡ್ಡವನ್ನೊಮ್ಮೆ ನೀವಿ ಸಭೆಗಾಗಮಿಸಿದ್ದೇವೆ....... ಯಾರಲ್ಲೀ....

ಮಾನ್ಯ ಗುದ್ದುರಾಮರೇ............. ನಿಮಗೆ ಪ್ರಪ್ರಥಮವಾಗಿ ನಾವು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇವೆ। ತಾವೀಗ ಕೊಂಚ ಕಳೆಗುಂದಿದ್ದೀರಿ ಎಂಬುದಾಗಿ ತಮ್ಮ ರಾಡಿಕೀಯ ಜೀವನವನ್ನು ಬಲ್ಲವರು ಹೇಳುತ್ತಾರೆ...... ಅಲ್ಲದೆ ತವರು ಬಿಟ್ಟು ಹೊರ ನಡೆದ ನೀವು ಬಕರಾ..........

ಇದೇನು ಮಾತು ಆಡುತ್ತೀರಿ ಭಾಗವತರೇ.........? ನಾವು ಮೊದಲು ಹ್ಯಾಗಿದ್ದೇವೊ ಈಗಲೂ ಹಾಗೆಯೇ ಇದ್ದೇವೆ। ಕಳೆ, ಕೊಳೆ ಎಂಬುದೆಲ್ಲ ನಿಮ್ಮ ದೃಷ್ಟಿದೋಷದ ಮಾತು ಅಷ್ಟೇಯ...... ಬಕರಾ ಗಿಕಾರ ಎಂಬೆಲ್ಲ ನಿಮ್ಮ ನಕರಾಗಳ ಅಧಿಕಪ್ರಸಂಗ ಬೇಡ.....

ನೀವು ನಿಮ್ಮ ಪೂರ್ವಾಶ್ರಮದಲ್ಲಿದ್ದಾಗ ವೇದೆ ಡೌಗರಿಗೆ ಅತ್ಯಂತ ಪ್ರಿಯರಾಗಿದ್ದವರು। ಒಂದು ಕಾಲದಲ್ಲಿ ಗುದ್ದುರಾಮೂ ಅನ್ನುತ್ತಾ ಅವರು ನಿಮ್ಮ ಹೆಗಲ ಮೇಲೆ ಕೈಇಟ್ಟವರು। ಡೌಗರಿಗೆ ಅವರ ಮಕ್ಕಳಿಗಿಂತ ನೀವೆ ಹೆಚ್ಚು ಎಂಬುದಾಗಿ ಎಲ್ಲರೂ ಸರಿಯಾಗೆ ತಪ್ಪು ತಿಳಿದಿದ್ದರು. ಅವರ ಪ್ರೀತಿ ನಿಜ ಅಂದುಕೊಂಡಿದ್ದರು. ಆದರೂ ಅಧಿಕಾರ ಮಾತು ಬಂದಾಗ ನಿಮ್ಮ ಮೇಲಿನ ಪ್ರೀತಿಗಿಂತ ಮಕ್ಕಳ ಮೇಲಿನ ವ್ಯಾಮೋಹವೇ ಹೆಚ್ಚಾಯಿತಾ........ ನಿಮ್ಮನ್ನು ಅವರು ತಮ್ಮ ದಾಳವಾಗಿ ಉಪಯೋಗಿಸಿಕೊಂಡರೇ..................?

ಭಾಗವತರೇ ಇದು ಲೋಕಕ್ಕೇ ಗೊತ್ತಿರುವ ವಿಚಾರ। ಹೀಗಿರುತ್ತಾ ಇದೇನಿದು ನಿಮ್ಮ ಕಿಸೆ......? ವೇದೇ ಡೌಗರ ಮಣ್ಣುಮುಕ್ಕಿಸೋ ತಂತ್ರ ಯಾರಿಗೆ ತಿಳಿದಿಲ್ಲ.......?

ಇರಲಿ, ನೀವು ಈಗ ಸೇರಿಕೊಂಡಿರುವಲ್ಲಿಯೂ ನಿಮಗೆ ಸಮಾಧಾನವಿಲ್ಲ ಎಂಬ ಮಾತುಗಳು ಕೇಳಿಬಂದಿವೆ। ಹಾಗಾಗಿ ನೀವೀಗ ಸೇರಿದ ಮನೆಯವರು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಲು ನಿಮ್ಮೊಳಗೆ ಬುಸುಗುಡುತ್ತಿರುವ ಅಸಮಾಧಾನವೇ ಕಾರಣ ಎಂದು ಹೇಳಲಾಗುತ್ತಿದೆಯಲ್ಲಾ.....

ಯಾರು ಹೇಳಿದ್ದು ನಾವು ಸಭೆಗಳಲ್ಲಿ ಭಾಗವಹಿಸುತ್ತಿಲ್ಲಾ ಅಂತಾ... ಏನೋ ಇತರೇ ಕಾರ್ಯದೊತ್ತಡದಿಂದಾಗಿ ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗವಹಿಸದಿರಬಹುದು, ಅದಕ್ಕೆ ನೀವು ವಿಶೇಷ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ ತಿಳಿಯಿತೇ......
ಗುದ್ದುರಾಮರೆ, ಮೊನ್ನೆ ಮಹಿಷನೂರಲ್ಲಿ ನಡೆದ ಸಮಾರಂಭವೊಂದರಲ್ಲಿ ಹೊಲಸು ಮಾತಾಡಿದವರ ಮುಸುಡಿಗೆ ನೀವು ಗುದ್ದಿಯೇ ಬುದ್ಧಿ ಹೇಳಿದಿರಂತೆ........ ನಿಮ್ಮ ಗುದ್ದಾಟಾದ ಚಮತ್ಕಾರದ ಬ....

ಮುಚ್ಚಿಬಾಯಿ ಭಾಗವತರೇ....... ನಿಲ್ಲಿಸಿ ನಿಮ್ಮ ವ್ಯರ್ಥ ಪ್ರಲಾಪ। ಯಾರು ಗುದ್ದಿದರು, ಯಾರಿಗೆ ಗುದ್ದಿದರು.... ಯಾವಾಗ ಗುದ್ದಿದರು..... ಇಷ್ಟಕ್ಕೂ ಮುಖಕ್ಕೇ ಗುದ್ದಲು ರಾಡಿಕೀಯ ನಾಯಕರಿಗೆ ಮುಖವೆಂಬುದೂ ಇರುತ್ತದಾ........? ಇದೆಲ್ಲ ನಿಮ್ಮ ತುತ್ತೂರಿಯವರ ಕುತಂತ್ರ ಅಷ್ಟೆ. ಬೇಕಿರುವುದನ್ನು ಊದದ ನೀವುಗಳು ಬೇಡದ್ದನ್ನು ಊದುತ್ತೀರಾ... ಆ ಸಭೆಯಲ್ಲಿ ನಾವು ಅವರ ಮೂಗು ಸವರಿ ಅವರನ್ನು ನೆಟ್ಟಗೆ ನಿಲ್ಲಿಸಿ ಬಂದಿದ್ದೆವು ಅಷ್ಟೆ......... ಇಂತಹ ಬೇಕಾಬಿಟ್ಟಿ ಮಾತುಗಳನ್ನಾಡುವ ನಿಮ್ಮ ಬಳಿ ನಾವು ಮಾತಾಡಲಿಚ್ಛಿಸುವುದಿಲ್ಲ.

ಅರ್ಥವಾಯಿತು ಗುದ್ದುರಾಮರೇ...... ನಮ್ಮ ಈ ಒಡ್ಡೋಲಗಕ್ಕೆ ಮಂಗಳ ಹಾಡುತ್ತೇವೆ।

ಎಲ್ಲರಿಗೂ ಒಳಿತಾಗಲಿ....... ಮಂಗಳಂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ